Asianet Suvarna News Asianet Suvarna News

ಲೋಕಸಭಾ ಚುನಾವಣೆ ಸಮೀಪಿಸಿದ್ರೂ ಕೈ ನಾಯಕರು ಸೈಲೆಂಟ್! ಬಣ ರಾಜಕೀಯಕ್ಕೆ ಬೇಸತ್ತು ಹೋದ ಕೈ ಕಾರ್ಯಕರ್ತರು!

ರಾಯಚೂರು ಲೋಕಸಭಾ ಕ್ಷೇತ್ರದ ವಿಚಾರಕ್ಕೆ ಬರುವುದಾದ್ರೆ ರಾಯಚೂರು- ಯಾದಗಿರಿ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಕಾಂಗ್ರೆಸ್ ಹೈಕಮಾಂಡ್ ಗೆ ದೊಡ್ಡ ತಲೆನೋವು ಆಗಿದೆ. ಇದಕ್ಕೆ ಕಾರಣವೇ ರಾಯಚೂರು ಕಾಂಗ್ರೆಸ್ ನಲ್ಲಿ ಇರುವ ಬಣ ರಾಜಕೀಯ. ರಾಯಚೂರು ಜಿಲ್ಲೆಯಲ್ಲಿ ಶಾಸಕರ ಒಂದು ತಂಡವಿದ್ರೆ, ಸಚಿವರ ಮತ್ತೊಂದು ತಂಡವೇ ಇದೆ.

Loksabha election 2024 Big fight between Congress and BJP in Raichur Lok Sabha constituency rav
Author
First Published Mar 9, 2024, 11:12 PM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಮಾ.9): ದೇಶಾದ್ಯಂತ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ‌ಲೋಕಸಭಾ ಚುನಾವಣೆಗಾಗಿ ಭರ್ಜರಿ ತಯಾರಿ ನಡೆಸಿದೆ. ರಾಜ್ಯದಲ್ಲಿಯೂ ಸಹ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿ ಇಂದು ಮನೆ ಮಾತು ಆಗಿದೆ. ಇದರ ಲಾಭ ಪಡೆಯಲು ಸಿಎಂ ಮತ್ತು ಡಿಸಿಎಂ ಡಿಕೆಶಿ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ 20ಕ್ಕೂ ಅಧಿಕ ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡು ಲೋಕ ಸಮರಕ್ಕೆ  ಸಿದ್ದರಾಗಿದ್ದಾರೆ. ಇದರ ಭಾಗವಾಗಿ 28 ಲೋಕಸಭಾ ಕ್ಷೇತ್ರಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಯಾ  ಲೋಕಸಭಾ ಕ್ಷೇತ್ರದ ಜವಾಬ್ದಾರಿ ನೀಡಿದ್ದಾರೆ.

 ಆದ್ರೆ ಬಿಸಲುನಾಡು ರಾಯಚೂರು ಲೋಕಸಭಾ ಕ್ಷೇತ್ರದ ಉಸ್ತುವಾರಿ ಮಾತ್ರ ಜಿಲ್ಲೆ ಉಸ್ತುವಾರಿ ಸಚಿವರಿಗೆ ನೀಡದೇ ಕೊಡಗು ಜಿಲ್ಲೆ ಉಸ್ತುವಾರಿ ಸಚಿವರಾದ ಎನ್‌ಎಸ್ ಬೋಸರಾಜು ಅವರಿಗೆ‌ ಚುನಾವಣೆ ಉಸ್ತುವಾರಿ ನೀಡಿದೆ. ಇದು ಸ್ಥಳೀಯ ಶಾಸಕರ ಬಣ ರಾಜಕೀಯಕ್ಕೆ ಕಾರಣವಾಗಿದೆ. ಮೊದಲಿನಿಂದಲೂ ರಾಯಚೂರಿನ ಕಾಂಗ್ರೆಸ್ ನಾಯಕರ ಬಣ ರಾಜಕೀಯ ಹೈಕಮಾಂಡ್ ಗೆ ದೊಡ್ಡ ತಲೆನೋವು ಆಗಿದೆ. ಇದರ ನಡುವೆ ಲೋಕಸಭೆ ಚುನಾವಣೆ ಬಂದಿದ್ದು, ಯಾವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ.

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಬೋಸರಾಜು

 ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಭಾವ: 

ರಾಯಚೂರು ಲೋಕಸಭಾ ಕ್ಷೇತ್ರವೂ(Raichur loksabha constituency) 8 ವಿಧಾನಸಭಾ ಕ್ಷೇತ್ರ ಹೊಂದಿದೆ. ಈ 8 ವಿಧಾನಸಭಾ ಕ್ಷೇತ್ರದ ಪೈಕಿ 2023ರ ವಿಧಾನಸಭಾ ಚುನಾವಣೆಯಲ್ಲಿ 5 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನುಳಿದ ಮೂರು ಕ್ಷೇತ್ರದಲ್ಲಿ 2 ಕಡೆ ಬಿಜೆಪಿ ಗೆದ್ದರೆ, ಇನ್ನೊಂದು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಆ ಕ್ಷೇತ್ರಗಳನ್ನ ನೋಡುವುದಾದ್ರೆ ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾದಗಿರಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಯಾದಗಿರಿ, ಶಹಾಪೂರ, ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾದಗಿರಿಯಲ್ಲಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಅವರನ್ನ ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಚೆನ್ನರೆಡ್ಡಿ ತುನ್ನೂರು ಗೆಲುವು ಸಾಧಿಸಿದ್ದಾರೆ. ಶಹಾಪೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಗೆದ್ದ ಶರಣಬಸಪ್ಪ ದರ್ಶನಾಪುರ ಸಚಿವರಾಗಿದ್ದಾರೆ. ಇನ್ನೂ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ‌ನಿಂದ ಗೆದ್ದ ರಾಜಾ ವೆಂಕಟಪ್ಪ ‌ನಾಯಕ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಸುರಪುರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುವುದು ಬಾಕಿ ಇದೆ. ಇತ್ತ ರಾಯಚೂರು ಜಿಲ್ಲೆಯಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಐದು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಆ ಐದು ವಿಧಾನಸಭಾ ಕ್ಷೇತ್ರದಲ್ಲಿ ರಾಯಚೂರು ಗ್ರಾಮೀಣ ಮತ್ತು ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರು ಇದ್ದಾರೆ. ಇನ್ನುಳಿದ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ರೆ, ಮತ್ತೊಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಹೀಗಾಗಿ ರಾಯಚೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಬಿಗ್ ಫೈಟ್ ಆಗುವ ಸಾಧ್ಯತೆ ಇದೆ. 

ಹೈಕಮಾಂಡ್ ಗೆ ತಲೆನೋವಾದ ರಾಯಚೂರು ‌ಲೋಕಸಭಾ ಕ್ಷೇತ್ರ

ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಸಕತ್ ತಾಲೀಮು ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಮೊದಲ ಹಂತದಲ್ಲಿ ರಾಜ್ಯದ 7 ಲೋಕಸಭಾ ಕ್ಷೇತ್ರಗಳಾದ  ವಿಜಯಪುರ, ಹಾವೇರಿ, ಶಿವಮೊಗ್ಗ, ಹಾಸನ್, ತುಮಕೂರು, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಸೇರಿ 7 ಕ್ಷೇತ್ರಗಳ ಅಭ್ಯರ್ಥಿಗಳ ಟಿಕೆಟ್ ಫೈನಲ್ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಇನ್ನುಳಿದ 21 ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿಯಿದೆ. ಇನ್ನು ರಾಯಚೂರು ಲೋಕಸಭಾ ಕ್ಷೇತ್ರದ ವಿಚಾರಕ್ಕೆ ಬರುವುದಾದ್ರೆ ರಾಯಚೂರು- ಯಾದಗಿರಿ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಕಾಂಗ್ರೆಸ್ ಹೈಕಮಾಂಡ್ ಗೆ ದೊಡ್ಡ ತಲೆನೋವು ಆಗಿದೆ. ಇದಕ್ಕೆ ಕಾರಣವೇ ರಾಯಚೂರು ಕಾಂಗ್ರೆಸ್ ನಲ್ಲಿ ಇರುವ ಬಣ ರಾಜಕೀಯ. ರಾಯಚೂರು ಜಿಲ್ಲೆಯಲ್ಲಿ ಶಾಸಕರ ಒಂದು ತಂಡವಿದ್ರೆ, ಸಚಿವರ ಮತ್ತೊಂದು ತಂಡವೇ ಇದೆ. ಈ ಬಣ ರಾಜಕೀಯದಿಂದ ನಿಜವಾದ ಕಾಂಗ್ರೆಸ್ ಕಾರ್ಯಕರ್ತರು ಬೇಸತ್ತು ಹೋಗಿದ್ದಾರೆ.

ಹಾಲಿ ಶಾಸಕರಿಗೆ ಕಣಕ್ಕೆ ಇಳಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ

ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಅಭ್ಯರ್ಥಿಗಳ ಟಿಕೆಟ್ ಫೈನಲ್ ಮಾಡುತ್ತಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಕೇವಲ 7 ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಇನ್ನುಳಿದ 21 ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ಕಾಂಗ್ರೆಸ್ ಹೈಕಮಾಂಡ್ ತಾಲೀಮು ಶುರು ಮಾಡಿದೆ. ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಮೂವರು ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. 

 ಮೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು: 

1) ಕುಮಾರ್ ನಾಯಕ- ನಿವೃತ್ತ ಐಎಎಸ್ ಅಧಿಕಾರಿ
2) ರವಿ ಪಾಟೀಲ್- ಸಚಿವ ಸತೀಶ್ ಜಾರಕಿಹೊಳಿ ಅಳಿಯ
3) ದೇವಣ್ಣ ನಾಯಕ ಖರ್ಗೆ ಆಪ್ತ- ಹಿರಿಯ ವಕೀಲ

ಈ ಮೂವರು ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕುಮಾರ್ ‌ನಾಯಕ ನಿವೃತ್ತ ಐಎಎಸ್‌ ಅಧಿಕಾರಿ, ಇವರು ರಾಯಚೂರು ಜಿಲ್ಲೆಯಲ್ಲಿ ತಮ್ಮ ‌ಅಧಿಕಾರದ ಅವಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಇಡೀ ಜಿಲ್ಲೆಯಾದ್ಯಂತ ಚಿರಪರಿಚಿತ ಇರುವ ಅಧಿಕಾರಿ ಎನ್ನಿಸಿಕೊಂಡಿದ್ದಾರೆ. ಇನ್ನೂ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ  ರವಿಪಾಟೀಲ್, ಇವರು ಸಚಿವ ಸತೀಶ್ ಜಾರಕಿಹೊಳಿಯವರ ಪತ್ನಿಯ ತಮ್ಮ. ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಹುಟ್ಟಿ ಬೆಳೆದವರು. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ‌ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದಾರೆ. ಸಚಿವ ಎನ್.ಎಸ್. ಬೋಸರಾಜು ‌ಬಣದಲ್ಲಿ ಗುರುತಿಸಿಕೊಂಡ ನಾಯಕರು ಆಗಿದ್ದಾರೆ. ಇನ್ನು ಮತ್ತೊಬ್ಬರು ಹಿರಿಯ ವಕೀಲರು ದೇವಣ್ಣ ನಾಯಕ ಇವರು ಸುಪ್ರೀಂ ಕೋರ್ಟ್ ವಕೀಲರು, ಧರಂಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಿಂದಲೂ ‌ಕಾಂಗ್ರೆಸ್ ನಲ್ಲಿ ಇದ್ದವರು. ಈಗ ಲೋಕಸಭಾ ಚುನಾವಣೆ ‌ಸ್ಪರ್ಧೆಗೆ ಚಿಂತನೆ ‌ಮಾಡಿ ನನಗೆ ರಾಯಚೂರು ಲೋಕಸಭಾ ಟಿಕೆಟ್ ‌ನೀಡಬೇಕೆಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಮೂವರಲ್ಲಿ ಯಾವ ಆಕಾಂಕ್ಷಿಗೆ ಟಿಕೆಟ್ ನೀಡಬೇಕು ಎಂಬ ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ.

Loksabha Elections 2024: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು!

 ಇದರ ನಡುವೆ ‌ಕಾಂಗ್ರೆಸ್ ಹೈಕಮಾಂಡ್ ಮತ್ತೊಂದು ಚಿಂತನೆ ‌ನಡೆಸಿ ಹಾಲಿ ಶಾಸಕ ಬಸನಗೌಡ ದದ್ದಲ್ ಗೆ ಕರೆದು ‌ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುತ್ತೇವೆ ಚುನಾವಣೆ ಸ್ಪರ್ಧೆ ಮಾಡಿ ಎಂದು ಹೇಳಿದ್ರು. ಆದ್ರೆ ಎರಡು ಬಾರಿ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಗೆದ್ದ ಬಸನಗೌಡ ದದ್ದಲ್  ಲೋಕಸಭಾ ಚುನಾವಣೆ ಸ್ಪರ್ಧೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ‌ಕಾಂಗ್ರೆಸ್ ಹೈಕಮಾಂಡ್ ಗೆ ರಾಯಚೂರು ‌ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ನೀಡಬೇಕು ಎಂಬ ಗೊಂದಲ ಶುರುವಾಗಿದೆ. ಇತ್ತ ಕ್ಷೇತ್ರದಲ್ಲಿಯೂ ಸಹ ಯಾರಿಗೆ ಕಾಂಗ್ರೆಸ್ ಟಿಕೆಟ್ ಸಿಗಬಹುದು ಎಂಬ ಲೆಕ್ಕಾಚಾರ ಜೋರಾಗಿ ನಡೆದಿದೆ.
 

Follow Us:
Download App:
  • android
  • ios