ಕರ್ನಾಟಕ ಲೋಕಸೇವಾ ಆಯೋಗದ (KPSC) 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಬೃಹತ್ ಅಕ್ರಮ ನಡೆದಿದೆ. ಆರಂಭದಲ್ಲಿ ಕೋಟಿಗಟ್ಟಲೆ ಬೆಲೆಗೆ ಮಾರಾಟಕ್ಕಿಟ್ಟಿದ್ದ ಹುದ್ದೆಗಳನ್ನು, ನಂತರ ಲಕ್ಷಗಳಿಗೆ ಇಳಿಸಿ ಮಾರಾಟ ಮಾಡಲಾಗಿದೆ. ಈ ಮೋಸದ ಜಾಲಕ್ಕೆ ಬಿದ್ದ ಅಭ್ಯರ್ಥಿಗಳು ತಮ್ಮ ಆಸ್ತಿ-ಪಾಸ್ತಿ ಮಾರಿ ಹಣ ಕಳೆದುಕೊಂಡಿದ್ದಾರೆ.

ಬೆಂಗಳೂರು (ಸೆ.01): ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ನಡೆಯಬೇಕಿದ್ದ ಪಶುವೈದ್ಯಾಧಿಕಾರಿಗಳ 400 ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಕೋಟ್ಯಂತರ ರೂ.ಗಳ ಅಕ್ರಮದ ಕರಾಳ ಮುಖಗಳು ಒಂದೊಂದಾಗಿ ಹೊರಬರುತ್ತಿವೆ. ಸರ್ಕಾರಿ ಹುದ್ದೆಗಳನ್ನು ಯಾವುದೋ ಸೀಸನ್ ಆಫರ್ ಅಥವಾ ಬ್ರಾಂಡ್‌ ಸೇಲ್‌ನಂತೆ ಮಾರಾಟ ಮಾಡಲಾಗಿದೆ ಎಂಬ ಸ್ಪೋಟಕ ಮಾಹಿತಿಯನ್ನು 'ಸುವರ್ಣ ಎಕ್ಸ್‌ಕ್ಲೂಸಿವ್ ರಿಪೋರ್ಟ್' ಹೊರಹಾಕಿದೆ.

ಕೋಟಿಗೆ ಶುರುವಾದ ಡೀಲ್ ಕೊನೆಗೆ ಲಕ್ಷಕ್ಕೆ ಇಳಿಕೆ!

  • ಪಶುವೈದ್ಯಾಧಿಕಾರಿ ಹುದ್ದೆಗಳ ಮಾರಾಟಕ್ಕೆ ಮಧ್ಯವರ್ತಿಗಳು ಆರಂಭದಲ್ಲಿ ಭಾರೀ ದೊಡ್ಡ ಮೊತ್ತವನ್ನು ಬೇಡಿಕೆ ಇಟ್ಟಿದ್ದರು.
  • ಜುಲೈ ತಿಂಗಳಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ಅಧಿಸೂಚನೆ (Notification) ಹೊರಡಿಸಲಾಗಿತ್ತು.
  • ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಒಂದೊಂದು ಹುದ್ದೆಗೆ ರೂ. 1 ಕೋಟಿ 10 ಲಕ್ಷ ರೂಪಾಯಿಗಳ ಆಫರ್ ನೀಡಲಾಗಿತ್ತು.
  • ಆದರೆ, ನಿರೀಕ್ಷಿತ ಮಟ್ಟದಲ್ಲಿ ಶ್ರೀಮಂತ ಅಥವಾ ದುಬಾರಿ ಹಣ ನೀಡುವ ಅಭ್ಯರ್ಥಿಗಳು ಸಿಗದೇ ಇದ್ದುದರಿಂದ, ಕ್ರಮೇಣ ಬೆಲೆ ಇಳಿಯುತ್ತಾ ಸಾಗಿತು.
  • ಆರಂಭದ 1.10 ಕೋಟಿ ರೂ. ಇದ್ದ ಡೀಲ್ ಬಳಿಕ 90 ಲಕ್ಷ, 80 ಲಕ್ಷಕ್ಕೆ ಇಳಿದು, ಕೊನೆಗೆ ಕೇವಲ 40 ಲಕ್ಷ ರೂಪಾಯಿಗಳಿಗೆ ಹುದ್ದೆಗಳನ್ನು ಮಾರಾಟ ಮಾಡಲಾಗಿದೆ!

'ಆಫರ್ ಕ್ಲೋಸರ್ ಸೂನ್' ಶೈಲಿಯಲ್ಲಿ ಬಿಕರಿಯಾದ ಹುದ್ದೆಗಳು:

ಖಾಸಗಿ ಕಂಪನಿಗಳ 'ಸೀಸನ್ ಸೇಲ್' ಅಥವಾ 'ಆಫರ್ ಕ್ಲೋಸರ್ ಸೂನ್' (Offer closer soon) ಎನ್ನುವ ರೀತಿಯಲ್ಲಿ ಕೊನೆಯ ತನಕವೂ ಹುದ್ದೆಗಳನ್ನು ಮಾರಾಟ ಮಾಡಲಾಗಿದೆ. ಜನವರಿ 9 ರಂದು ನಡೆಯಲಿದ್ದ ಪರೀಕ್ಷೆಗಾಗಿ ಡಿಸೆಂಬರ್ 25 ರವರೆಗೂ ಡೀಲ್‌ಗಳು ಕುದುರುತ್ತಲೇ ಇದ್ದವು. ಉದಾಹರಣೆಗೆ, ಡಿಸೆಂಬರ್ 20 ರಂದೇ ಮೊಹಮ್ಮದ್ ಸುಹೇಲ್ ಬಂಡೇಕೋಳ್ ಎಂಬಾತನಿಗೆ ಕೇವಲ 40 ಲಕ್ಷ ರೂಪಾಯಿಗಳಿಗೆ ಪಶುವೈದ್ಯಾಧಿಕಾರಿ ಹುದ್ದೆಯನ್ನು ಮಾರಾಟ ಮಾಡಿರುವುದು ತನಿಖೆಯಿಂದ ಬಯಲಾಗಿದೆ. ಈ ರೀತಿ ಬಟ್ಟು 21 ಅಭ್ಯರ್ಥಿಗಳ ಜೊತೆ ಬಲ್ಲ ಮೂಲಗಳಿಂದ ಡೀಲ್ ಕುದುರಿಸಿರೋದು ಪತ್ತೆಯಾಗಿದೆ.

ಆಸ್ತಿ-ಪಾಸ್ತಿ, ಆಭರಣ ಮಾರಾಟ ಮಾಡಿ ಹಣ ನೀಡಿದ್ದ ಅಭ್ಯರ್ಥಿಗಳು:

ಸರ್ಕಾರಿ ಹುದ್ದೆಯ ಮೋಹಕ್ಕೆ ಬಿದ್ದ ಕೆಲವು ಅಭ್ಯರ್ಥಿಗಳು, ಹುದ್ದೆಯನ್ನು ಗಿಳಿಸಿಕೊಳ್ಳಲು ತಮ್ಮ ಕೈಯಲ್ಲಿದ್ದ ಸರ್ವಸ್ವವನ್ನೂ ಧಾರೆ ಎರೆದಿದ್ದಾರೆ. ತಮ್ಮ ಸ್ವಂತ ಜಮೀನುಗಳನ್ನು ಮಾರಾಟ ಮಾಡಿ, ಮನೆಯಲ್ಲಿದ್ದ ಬಂಗಾರ (ಆಭರಣಗಳನ್ನು) ಅಡವಿಟ್ಟು ಹಾಗೂ ತಂದೆ-ತಾಯಿ ತಮ್ಮ ಜೀವನದುದ್ದಕ್ಕೂ ಕೂಡಿಟ್ಟಿದ್ದ ಕಷ್ಟದ ಹಣವನ್ನು ನೀಡಿ ಮೋಸ ಹೋಗಿದ್ದಾರೆ.

ಮಧ್ಯವರ್ತಿಗಳು ಆರಂಭದಲ್ಲಿ ಕೇವಲ ಮುಂಗಡ ಹಣವಾಗಿ (Advance) 20 ಲಕ್ಷ ರೂ.ಗಳನ್ನು ಪಡೆದುಕೊಂಡು ಉಳಿದ ಹಣಕ್ಕೆ ವಂಚಿಸಿದ್ದಾರೆ. ಒಟ್ಟಾರೆ, ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಈ ಬೃಹತ್ ದಂಧೆಯು ರಾಜ್ಯದ ಯುವಜನತೆಯನ್ನು ಬೆಚ್ಚಿಬೀಳಿಸುವಂತೆ ಮಾಡಿದ್ದು, ಸಿಐಡಿ ತನಿಖೆಯಿಂದ ಇನ್ನಷ್ಟು ರೋಚಕ ಸತ್ಯಗಳು ಹೊರಬರುವ ನಿರೀಕ್ಷೆಯಿದೆ.