ಭಾರತ-ಪಾಕ್ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಳವಾಗಿದೆ. ಪ್ರಯಾಣಿಕರು ನಿರ್ಗಮನಕ್ಕೆ ಎರಡು ಗಂಟೆ ಮೊದಲು ವಿಮಾನ ನಿಲ್ದಾಣ ತಲುಪಲು, ಸಂದರ್ಶಕರ ಪಾಸ್‌ಗಳನ್ನು ನಿರ್ಬಂಧಿಸಲಾಗಿದೆ ಹಾಗೂ ಸ್ವಾಗತ/ವಿದಾಯಕ್ಕೆ ಬರುವವರ ಸಂಖ್ಯೆ ಕಡಿಮೆ ಮಾಡಲು ವಿಮಾನ ನಿಲ್ದಾಣದ ನಿರ್ದೇಶಕರು ಮನವಿ ಮಾಡಿದ್ದಾರೆ. ನಗರದ ಪ್ರಮುಖ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ ನಡೆಯುತ್ತಿದೆ.

ಕಲಬುರಗಿ (ಮೇ.10): ಭಾರತ ಮತ್ತು ಪಾಕ್‌ ನಡುವೆ ಯುದ್ಧದ ಕಾರ್ಮೋಡ ಹಿನ್ನೆಲೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಎಲ್ಲಾ ಆಗಮನ ಮತ್ತು ನಿರ್ಗಮನ ಕಾರ್ಯಾಚರಣೆಗಳು ಎಂದಿನಂತೆ ಮುಂದುವರೆದಿವೆ. ಆದರೂ ಭದ್ರತೆ ಕ್ರಮಗಳನ್ನು ಎಂದಿನಂದಕ್ಕಿಂತ ಹೆಚ್ಚು ಮಾಡಲಾಗಿದೆ. ಸದ್ಯ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ, ಭದ್ರತಾ ತಪಾಸಣೆಗಳು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಹಾಗಾಗಿ ನಿಗಧಿತ ಸಮಯಕ್ಕೆ ಪ್ರಯಾಣಿಕರು ಆಗಮಿಸಲು ಹಾಗೂ ಸಹಕರಿಸಲು ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕರಾದ ಮಹೇಶ್ ಅವರು ಮನವಿ ಮಾಡಿಕೊಂಡಿದ್ದಾರೆ. 

ಪ್ರಯಾಣಿಕರ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಕೊನೆಯ ಕ್ಷಣದ ಅನಾನುಕೂಲತೆಯನ್ನು ತಪ್ಪಿಸಲು ಪ್ರಯಾಣಿಕರು ನಿರ್ಗಮನಕ್ಕೆ ಕನಿಷ್ಠ ಎರಡು ಗಂಟೆಗಳ ಮೊದಲು ವಿಮಾನ ನಿಲ್ದಾಣವನ್ನು ತಲುಪಲು ಮನವಿ ಮಾಡಿಕೊಂಡಿದ್ದಾರೆ. ಇದಲ್ಲದೆ, ಈ ಸಂದರ್ಭದಲ್ಲಿ ಭದ್ರತೆಯ ದೃಷ್ಟಿಯಿಂದ ಯಾವುದೇ ಸಂದರ್ಶಕರ ಪಾಸ್‌ಗಳನ್ನು ನೀಡಲಾಗುವುದಿಲ್ಲ ಮತ್ತು ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಲು/ಬಿಡಲು ಅತಿಥಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯಾಣಿಕರನ್ನು ವಿನಂತಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರ ಸಹಕಾರ ಮತ್ತು ತಿಳುವಳಿಕೆಯನ್ನು ನಾವು ಪ್ರಶಂಸಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಕಲಬುರಗಿ ನಗರ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಬಸ್ಟ್ಯಾಂಡ್, ರೈಲ್ವೆ ಸ್ಟೇಷನ್ ಸೇರಿದಂತೆ ಜನಬೀಡ ಪ್ರದೇಶಗಳಲ್ಲಿ ತೀವ್ರ ತಪಾಸಣೆ ಮಾಡಲಾಗುತ್ತಿದೆ. ರಸ್ತೆ ಬದಿ ಬಿದ್ದಿರುವ ಅನಾಮೇಧಯ ವಸ್ತುಗಳು, ಬೈಕ್‌ಗಳನ್ನೂ ಸಹ ತಪಾಸಣೆ ಮಾಡ್ತಿರೋ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಗಳು, ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಬಿಗಿ ಭದ್ರತೆ ವಹಿಸಲಾಗಿದೆ.