ರಾಜ್ಯದ 108 ಮತ್ತು 104 ತುರ್ತು ಸೇವಾ ಕಮಾಂಡ್ ಕೇಂದ್ರವು ಕೆಎಸ್‌ಡಿಸಿ ಕೇಂದ್ರದಲ್ಲಿನ ವಿದ್ಯುತ್ ನಿರ್ವಹಣಾ ಕಾರ್ಯಕ್ಕಾಗಿ ಜೂ. 25 ರಿಂದ 26ರ ರಾತ್ರಿ 9 ಗಂಟೆಯವರೆಗೆ ಸ್ಥಗಿತಗೊಳ್ಳಲಿದೆ. ಈ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆರೋಗ್ಯ ಇಲಾಖೆಯು ಪರ್ಯಾಯ ವ್ಯವಸ್ಥೆ ಮಾಡಿದೆ.

ಬೆಂಗಳೂರು (ಜೂ.26): ರಾಜ್ಯದಲ್ಲಿ 108 ಹಾಗೂ 104 ತುರ್ತು ಪ್ರತಿಕ್ರಿಯೆ ಸೇವೆಗೆ ಸ್ಥಾಪಿಸಿರುವ ಸರ್ಕಾರಿ ಸ್ವಾಮ್ಯದ ಕಮಾಂಡ್‌ ಮತ್ತು ಕಂಟ್ರೋಲ್‌ ಕೇಂದ್ರವು ಜೂ.25 ರಂದು ರಾತ್ರಿ 9 ಗಂಟೆಯಿಂದ ಜೂ.26 ರಂದು ರಾತ್ರಿ 9 ಗಂಟೆವರೆಗೆ ಸ್ಥಗಿತಗೊಳ್ಳಲಿದ್ದು, 108 ಆ್ಯಂಬುಲೆನ್ಸ್‌ಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. 

ಆ್ಯಂಬುಲೆನ್ಸ್‌ ಕಮಾಂಡ್‌, ಕಂಟ್ರೋಲ್‌ ರೂಂ ಸ್ಥಗಿತಕ್ಕೆ ಕಾರಣವೇನು?

ಸರ್ಕಾರಿ ಸ್ವಾಮ್ಯದ ಕಮಾಂಡ್‌ ಮತ್ತು ಕಂಟ್ರೋಲ್‌ ಕೇಂದ್ರವನ್ನು ತಿರುವನಂತಪುರಂನ ಸಿಡ್ಯಾಕ್‌ ಅಭಿವೃದ್ಧಿಪಡಿಸಿರುವ 112 ಎನ್‌ಜಿ-ಇಆರ್‌ಎಸ್‌ಎಸ್‌ ತಂತ್ರಜ್ಞಾನ ಬಳಸಿ ಸ್ಥಾಪಿಸಲಾಗಿದೆ. ಇದರ ಸರ್ವರ್‌ಗಳನ್ನು ಕರ್ನಾಟಕ ರಾಜ್ಯ ಡೇಟಾ ಸೆಂಟರ್‌ನಲ್ಲಿ (ಕೆಎಸ್‌ಡಿಸಿ) ಹೋಸ್ಟ್‌ ಮಾಡಲಾಗಿದೆ. ಈ ಕೆಎಸ್‌ಡಿಸಿ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯಕ್ಕಾಗಿ ಡೇಟಾ ಸೆಂಟರ್‌ನ ಸಂಪೂರ್ಣ ವಿದ್ಯುತ್‌ನ್ನು ಜೂ.26ರ ರಾತ್ರಿ 9 ಗಂಟೆವರೆಗೆ ಸ್ಥಗಿತಗೊಳಿಸಲಾಗುತ್ತಿದೆ.

ಈ ಅವಧಿಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಂಡಿದ್ದು, ಎಂದಿನಂತೆ 108 ಸಂಖ್ಯೆಗೆ ಕರೆ ಮಾಡಿ ತುರ್ತು ಆ್ಯಂಬುಲೆನ್ಸ್‌ ಸೇವೆ ಪಡೆಯಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

- 108 ತುರ್ತು ಆ್ಯಂಬುಲೆನ್ಸ್‌ ಸೇವೆ ಅಬಾಧಿತ

- ಪರ್‍ಯಾಯ ವ್ಯವಸ್ಥೆ ಮಾಡಿದ್ದೇವೆ: ಆರೋಗ್ಯ ಇಲಾಖೆ

108 ಉಚಿತ ತುರ್ತು ಆ್ಯಂಬುಲೆನ್ಸ್‌ ಸೇವೆಗೆ ಬರುವ ಎಲ್ಲ ಕರೆಗಳನ್ನೂ 108 ಕಮಾಂಡ್‌ ಮತ್ತು ಕಂಟ್ರೋಲ್‌ ರೂಂ ಮೂಲಕ ಸ್ವೀಕರಿಸಿ ನಿರ್ವಹಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.