ಶುಶ್ರೂಶ ಕೋ ಆಪರೇಟಿವ್ ಸೊಸೈಟಿ ಹಾಗೂ ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ
ವರದಿ: ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು(ಅ.12): ಜನರಿಗೆ ಸಾಲು ಸಾಲು ಉಂಡೆ ನಾಮ ಇಡೋ ಕೋ-ಆಪರೇಟಿವ್ ಬ್ಯಾಂಕ್ಗಳ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ತಿದೆ. ಆ ಸಾಲಿಗೆ ಇನ್ನೊಂದು ಫ್ರಾಡ್ ಬ್ಯಾಂಕ್ ಸೇರಿಕೊಂಡಿದೆ. ಸಿಸಿಬಿ ಪೊಲೀಸರು ಫ್ರಾಡ್ ಬ್ಯಾಂಕ್ ಮೇಲೆ ಇಂದು(ಬುಧವಾರ) ದಾಳಿ ನಡೆಸಿದ್ದಾರೆ.
ರಾಘವೇಂದ್ರ ಕೋ-ಆಪರೇಟಿವ್, ವಸಿಷ್ಠ ಕೋ-ಆಪರೇಟಿವ್ ಹೀಗೆ ಹತ್ತು ಹಲವು ಕೋ-ಆಪರೇಟಿವ್ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಸಾಲು ಸಾಲು ನಾಮವನ್ನಿಟ್ಟು ಇದೀಗ ಕೈಕಟ್ಟಿ ಕುಳಿತಿದ್ದಾರೆ. ಇಂತಹ ಫೋರ್ಟ್ವೆಂಟಿ ಬ್ಯಾಂಕ್ಗಳ ಲಿಸ್ಟ್ಗೆ ಇದೀಗ ಮತ್ತೊಂದು ವಂಚನೆಯ ಬ್ಯಾಂಕ್ ಸೇರ್ಕೊಂಡಿದೆ. ಅದುವೇ ಶುಶೃತಿ ಕೋ-ಆಪರೇಟಿವ್ ಬ್ಯಾಂಕ್. 1998 ರಲ್ಲೇ ಸ್ಥಾಪನೆಯಾಗಿದ್ದ ಶುಶೃತಿ ಬ್ಯಾಂಕ್ ಮೊದ ಮೊದಲು ಒಳ್ಳೆಯ ಸೇವೆಯನ್ನ ಜನರಿಗೆ ಕೊಡ್ತಿತ್ತು. ಇತ್ತೀಚಿಗೆ ಈ ಬ್ಯಾಂಕ್ನ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಕ್ರಿಮಿನಲ್ ಐಡಿಯಾವನ್ನ ಮಾಡೋಕೆ ಶುರುಮಾಡಿದ್ದ. ಸಿಕ್ಕ ಸಿಕ್ಕವರ ಹೆಸರಿಗೆ ಕೋಟಿ ಕೋಟಿ ಸಾಲವನ್ನ ನೀಡುವಂತಹ ಕೆಲಸವನ್ನ ಮಾಡಿದ್ದ. ಇದೇ ಕಾರಣಕ್ಕೆ ಬ್ಯಾಂಕ್ ದಿವಾಳಿ ಎದ್ದು ವಂಚನೆಗೊಳಗಾದ ಗ್ರಾಹಕರೇ ರಾಜಗೋಪಾಲನಗರ, ಸಂಜಯ್ ನಗರ,ವಿಲ್ಸನ್ ಗಾರ್ಡನ್, ಹಲಸೂರು ಗೇಟ್ ಠಾಣೆಯಲ್ಲಿ ದೂರನ್ನ ನೀಡಿದ್ದರು. ಆದ್ರೆ, ಇತ್ತೀಚಿಗೆ ಈ ಎಲ್ಲಾ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಇಂದು ಸಿಸಿಬಿ ಒಟ್ಟು 14 ಕಡೆಯಲ್ಲಿರೋ ಬ್ಯಾಂಕ್ ನ ಕಚೇರಿ ಹಾಗೂ ಕೆಲ ವ್ಯಕ್ತಿಗಳ ಮನೆಮೇಲೆ ದಾಳಿ ನಡೆಸಿದೆ.
CCB Raid: ಗಾಂಧಿನಗರದ ಲೈವ್ ಬ್ಯಾಂಡ್ ದಾಳಿ, ಸಿಕ್ಕವರು ಮುಖ ಮುಚ್ಚಿಕೊಂಡರು!
11 ಆರೋಪಿಗಳು 100 ಕೋಟಿ ಗೋಲ್ಮಾಲ್: ಅಧ್ಯಕ್ಷ ಶ್ರೀನಿವಾಸ ಮಾಸ್ಟರ್ ಮೈಂಡ್..!
ಈ ಶುಶೃತಿ ಬ್ಯಾಂಕ್ ನ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಈ ಎಲ್ಲಾ ವಂಚನೆಗೂ ಮಾಸ್ಟರ್ ಮೈಂಡ್. ತನಗೆ ಪರಿಚಿತವಾದ ವ್ಯಕ್ತಿಗಳಾದ ವೇಣು,ಸುರೇಶ,ಮಂಜುನಾಥ್ ಸೇರಿದಂತೆ ಒಟ್ಟು 11 ಮಂದಿಗೆ ಒಟ್ಟು 100 ಕೋಟಿಯಷ್ಟು ಸಾಲವನ್ನ ಕೊಡಿಸಿದ್ದಾನೆ. ಯಾವಾಗ ಸಾಲ ಮರುಪಾವತಿಯಾಗಿಲ್ವೋ ಆಗ್ಲೇ ಬ್ಯಾಂಕ್ನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟ ಠೇವಣಿದಾರರು ಬಡ್ಡಿ ಹಣ ಸಿಗದೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಯಾವಾಗ ಕೇಸು ಸಿಸಿಬಿ ತೆಕ್ಕೆಗೋಯ್ತೋ ಆಗ್ಲೇ 11 ಆರೋಪಿಗಳು ಜೈಲೂಟಕ್ಕೆ ಸಿದ್ಧರಾದ್ರು. ಇದೀಗ ಸಿಸಿಬಿ ದಾಳಿಯಲ್ಲೂ ಕೋಟಿ ಕೋಟಿ ಹಣ ಫ್ರೀಜ್ ಆಗಿದೆ.
ಶುಶೃತಿ ಬ್ಯಾಂಕ್ ಮುಳುಗೋಕೆ ಕಾರಣೀಕರ್ತನಾದ ಶ್ರೀನಿವಾಸ ಮೂರ್ತಿಯನ್ನ ಇದೀಗ ಸಿಸಿಬಿ ಗ್ರಿಲ್ ನಡೆಸ್ತಿದೆ. 100 ಕೋಟಿಯ ವಂಚನೆ 1000 ಕೋಟಿಗೂ ಹೋಗುವ ಸಾಧ್ಯತೆ ಸದ್ಯದ ಮಟ್ಟಿಗೆ ಎದ್ದುಕಾಣ್ತಿದೆ.
