ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಸತತ 5ನೇ ಬಾರಿಗೆ ಡೈಮಂಡ್ ಲೀಗ್ ಫೈನಲ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಮತ್ತೊಂದೆಡೆ, ಶ್ರೀಲಂಕಾದ ರುಮೇಶ್ ಪತಿರಗೆ 92 ಮೀಟರ್‌ಗಿಂತ ಹೆಚ್ಚು ದೂರ ಎಸೆದು ಹೊಸ ಸಾಧನೆ ಮಾಡಿದ್ದು, ಫೈನಲ್ಸ್‌ನಲ್ಲಿ ಅಗ್ರಸ್ಥಾನಿಯಾಗಿ ಪ್ರವೇಶಿಸಿದ್ದಾರೆ.

ನವದೆಹಲಿ: ಭಾರತದ ತಾರಾ ಜಾವೆಲಿನ್‌ ಎಸೆತಗಾರ, ಒಲಿಂಪಿಕ್ಸ್‌ ಹಾಗೂ ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ ಅವರು ಡೈಮಂಡ್‌ ಲೀಗ್ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ಸೆ.4, 5ರಂದು ನಡೆಯಲಿರುವ ಕೂಟದಲ್ಲಿ ಅವರು ಸ್ಪರ್ಧಿಸಲಿದ್ದಾರೆ.

ಡೈಮಂಡ್‌ ಲೀಗ್‌ ಎಂಬುದು ವಾರ್ಷಿಕ 14 ಚರಣಗಳನ್ನೊಗೊಂಡ ಪ್ರತಿಷ್ಠಿತ ಕ್ರೀಡಾಕೂಟ. ಈ ವರ್ಷ 13 ಚರಣ ಪೈಕಿ 5ರಲ್ಲಿ ಜಾವೆಲಿನ್‌ ಸ್ಪರ್ಧೆಯಿತ್ತು. ಇದರಲ್ಲಿ ಕೇವಲ 2ರಲ್ಲಿ(ದೋಹಾ, ಲಾಸೆನ್‌) ಮಾತ್ರ ನೀರಜ್‌ ಸ್ಪರ್ಧಿಸಿದ್ದು, ಆದರೂ 6ನೇ ಸ್ಥಾನಿಯಾಗಿ ಫೈನಲ್‌ಗೇರಿದ್ದಾರೆ. ಅವರಿಗೆ ಇದು ಸತತ 5ನೇ ಡೈಮಂಡ್‌ ಲೀಗ್ ಫೈನಲ್ಸ್‌. 2022ರಲ್ಲಿ ಚಾಂಪಿಯನ್‌ ಆಗಿದ್ದ ಅವರು ಕಳೆದ 3 ಅವೃತ್ತಿಗಳಲ್ಲೂ 2ನೇ ಸ್ಥಾನ ಪಡೆದುಕೊಂಡಿದ್ದಾರೆ.

ಶ್ರೀಲಂಕಾದ ರುಮೇಶ್‌ ಪತಿರಗೆ ಅಗ್ರಸ್ಥಾನಿಯಾಗಿ ಫೈನಲ್‌ಗೇರಿದ್ದಾರೆ. ಅವರು 5 ಕೂಟಗಳ ಪೈಕಿ 4ರಲ್ಲಿ ಗೆದ್ದು, ಮತ್ತೊಂದರಲ್ಲಿ 2ನೇ ಸ್ಥಾನಿಯಾಗಿದ್ದರು. ಗ್ರೆನಡಾದ ಆ್ಯಂಡರ್ಸನ್‌ ಪೀಟರ್ಸ್‌, ಹಾಲಿ ವಿಶ್ವ ಚಾಂಪಿಯನ್‌ ಕೆಶೋರ್ನ್‌ ವಾಲ್ಕೋಟ್‌ ಕೂಡಾ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಜಾವೆಲಿನ್‌ನಲ್ಲಿ 2ನೇ ಬಾರಿ 92 ಮೀ. ಗಡಿ ದಾಟಿದ ಶ್ರೀಲಂಕಾದ ರುಮೇಶ್‌ ಪತಿರಗೆ!

ಜ್ಯುರಿಚ್‌: ಜ್ಯುರಿಚ್‌ ಡೈಮಂಡ್‌ ಲೀಗ್‌ ಕೂಟದಲ್ಲಿ ಶ್ರೀಲಂಕಾದ ಜಾವೆಲಿನ್‌ ಎಸೆತಗಾರ ರುಮೇಶ್‌ ಪತಿರಗೆ 92.07 ಮೀ. ದೂರಕ್ಕೆ ಎಸೆದು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಇದು ಅವರ 2ನೇ 92+ ಮೀಟರ್‌ ಎಸೆತವಾಗಿದ್ದು, ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ಜೂನ್‌ನಲ್ಲಿ ಅವರು ರೋಮ್‌ ಡೈಮಂಡ್‌ ಲೀಗ್‌ನಲ್ಲಿ 92.62 ಮೀ. ದೂರ ದಾಖಲಿಸಿದ್ದರು.

ಪತಿರಗೆ ಹೊರತಾಗಿ ಜೆಕ್‌ ಗಣರಾಜ್ಯದ ಜ್ಯಾನ್‌ ಜೆಲೆಜ್ನಿ, ಜರ್ಮನಿಯ ಜೊಹಾನ್ನಸ್‌ ವೆಟೆರ್‌ ಹಾಗೂ ಫಿನ್ಲೆಂಡ್‌ನ ಆಕಿ ಪಾರ್ವಿಯಾನೆನ್‌ 2 ಅಥವಾ ಅದಕ್ಕಿಂತ ಹೆಚ್ಚು ಬಾರಿ 92+ ಮೀ. ದೂರಕ್ಕೆ ಜಾವೆಲಿನ್‌ ಎಸೆದಿದ್ದಾರೆ.

ಇಂದಿನಿಂದ ಬೆಂಗ್ಳೂರಲ್ಲಿ ಜೆ30 ಜೂ. ವಿಶ್ವ ಟೆನಿಸ್‌

ಬೆಂಗಳೂರು: ಕೆಎಸ್‌ಎಲ್‌ಟಿಎ ವಿಶ್ವ ಟೆನಿಸ್‌ ಟೂರ್‌ ಜೂನಿಯರ್‌ ಜೆ30 ಟೂರ್ನಿ ಶನಿವಾರ ನಗರದ ಎಸ್‌.ಎಂ.ಕೃಷ್ಣ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. ರಾಜ್ಯ ಟೆನಿಸ್‌ ಸಂಸ್ಥೆ ಆಯೋಜಿಸುವ ಈ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಶನಿವಾರ, ಭಾನುವಾರ(ಆ.29, 30) ನಡೆಯಲಿದ್ದು, ಮುಖ್ಯ ಸುತ್ತಿನ ಪಂದ್ಯಗಳು ಆ.31ರಿಂದ ನಡೆಯಲಿದೆ.

ಒಟ್ಟು 24 ಮಂದಿ ಮುಖ್ಯ ಸುತ್ತಿಗೆ ನೇರ ಅರ್ಹತೆ ಪಡೆದಿದ್ದಾರೆ. ನಾಲ್ವರು ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದರೆ, ಉಳಿದ ನಾಲ್ವರು ಅರ್ಹತಾ ಸುತ್ತಿನಲ್ಲಿ ಗೆದ್ದು ಮುಖ್ಯ ಸುತ್ತಿಗೇರಲಿದ್ದಾರೆ. ರಾಜ್ಯದ ಯುವ ಟೆನಿಸಿಗರಾದ ಸತೀಶ್‌ ಜೀವಿತ್‌, ಅರ್ಜುನ್‌ ಸೂರಿ, ವೀಣಾ ಶಿವರಾಮನ್‌ ಹಾಗೂ ಆವ್ನಿ ಅರ್ಹತಾ ಸುತ್ತಿನಲ್ಲಿ ಆಡಲಿದ್ದಾರೆ.