Puneeth Rajkumar ಸಮಾಧಿ ಬಳಿ 'ಬನಾರಸ್' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್
ಜಯತೀರ್ಥ ನಿರ್ದೇಶನದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಸೋನಾಲ್ ಮೊಂತೆರೋ ನಟಿಸಿರುವ ಬನಾರಸ್ ಚಿತ್ರದ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಮಾಧಿಯ ಮುಂದೆ ಬಿಡುಗಡೆ ಮಾಡಲಾಗಿದೆ.
ಜಯತೀರ್ಥ (Jayatheertha) ನಿರ್ದೇಶನದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಪುತ್ರ ಝೈದ್ ಖಾನ್ (Zaid Khan) ಸೋನಾಲ್ ಮೊಂತೆರೋ (Sonal Monteiro) ನಾಯಕ, ನಾಯಕಿಯಾಗಿ ನಟಿಸಿರುವ 'ಬನಾರಸ್' (Banaras) ಚಿತ್ರದ ಫಸ್ಟ್ ಲುಕ್ (First Look) ಹಾಗೂ ಮೋಷನ್ ಪೋಸ್ಟರ್ (Motion Poster) ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಸಮಾಧಿಯ ಮುಂದೆ ಬಿಡುಗಡೆ ಮಾಡಲಾಗಿದೆ. ಜಮೀರ್ ಪುತ್ರ ಝೈದ್ ಖಾನ್ ಬನಾರಸ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದು, ಅಪ್ಪು ಸಮಾಧಿಗೆ ಹೂವಿನ ಹಾರ ಹಾಕಿ, ಪೋಟೋಗೆ ಪೂಜೆ ಸಲ್ಲಿಸಿ ಸಿನಿಮಾದ ಪೋಸ್ಟರ್ನ ಲಾಂಚ್ ಮಾಡಿದ್ದಾರೆ. ಇದಕ್ಕೂ ಮುನ್ನ ಚಿತ್ರತಂಡ ಡಾ.ರಾಜಕುಮಾರ್, ಪಾರ್ವತಮ್ಮ ರಾಜ್ಕುಮಾರ್ ಹಾಗೂ ಅಂಬರೀಶ್ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿದ್ದರು.
ಜಮೀರ್ ಅಹಮದ್ ಪುತ್ರ ಜಾಯೇದ್ ನಟನೆಯ ಚಿತ್ರ ಸದ್ಯದಲ್ಲೇ ತೆರೆಗೆ
ವಿಶೇಷವಾಗಿ ಕಂಠೀರವ ಸ್ಟುಡಿಯೋದಿಂದ ಹಿಡಿದು ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಸಮಾಧಿಗೂ ಪೂಜೆ ಸಲ್ಲಿಸಿ, ಲಕ್ಷ್ಮೀ ಪೂಜೆ ಮಾಡಿ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 'ಬನಾರಸ್' ಸಿನಿಮಾದ ಪೋಸ್ಟರ್ ಲಾಂಚ್ ಅನ್ನು ಪುನೀತ್ ರಾಜ್ಕುಮಾರ್ ಮಾಡಬೇಕಿತ್ತು. ಆದರೆ ಅಪ್ಪು ಆಗಲಿಕೆ ಕಾರಣದಿಂದ ಇದು ಸಾಧ್ಯವಾಗಿಲ್ಲ. ಇದೀಗ ಅಪ್ಪು ಅಗಲಿಕೆಯ ನಂತರ ಸಮಾಧಿ ಬಳಿ ಪೋಸ್ಟರ್ ಲಾಂಚ್ ಮಾಡಲಾಗಿದೆ. ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಸಂಸ್ಥೆಯ ಕಡೆಯಿಂದ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಈ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಫಸ್ಟ್ ಲುಕ್ ಗೆ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ನಿರೀಕ್ಷೆಗೂ ಮೀರಿ ಸಿನಿರಸಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪೋಸ್ಟರ್ ಲಾಂಚ್ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕ ಜಯತೀರ್ಥ, ನಿರ್ದೇಶಕ ಎ ಹರ್ಷ, ಹಾಸ್ಯ ನಟ ಸುಜಯ್ ಶಾಸ್ತ್ರಿ ಭಾಗಿಯಾಗಿದ್ದರು.
ಇಡೀ ಚಿತ್ರ ಮೂಡಿ ಬಂದಿರುವ ಅದ್ಧೂರಿತನ ಮತ್ತು ವಿಭಿನ್ನ ಕಥೆಯ ಸುಳಿವನ್ನು ಈ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ನಲ್ಲಿ ಕಾಣಬಹುದಾಗಿದೆ. 'ಬೆಲ್ ಬಾಟಂ' (Bell Bottom) ಸಿನಿಮಾ ಮೂಲಕ ದೊಡ್ಡ ಗೆಲುವು ಪಡೆದ ನಿರ್ದೇಶಕ ಜಯತೀರ್ಥ ಅವರು 'ಬನಾರಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರತಿಷ್ಠಿತ ಲಹರಿ ಮ್ಯೂಸಿಕ್ (Lahari Music), ಟಿ-ಸಿರೀಸ್ (T-Series) ಸಂಸ್ಥೆಗಳು ಜಂಟಿಯಾಗಿ ಚಿತ್ರದ ಆಡಿಯೋ ಹಕ್ಕುಗಳನ್ನು ದಾಖಲೆ ಮೊತ್ತಕ್ಕೆ ಖರೀದಿ ಮಾಡಿವೆ. ಹಲವಾರು ಅದ್ಭುತಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಈ ಚಿತ್ರದ 90ರಷ್ಟು ಚಿತ್ರೀಕರಣವನ್ನು ಬನಾರಸ್ನ ಮನಮೋಹಕ ಪರಿಸರದಲ್ಲಿ ನಡೆಸಲಾಗಿದ್ದು, 84 ಘಾಟ್ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ.
ಭಗವಾನ್ ಶ್ರೀಕೃಷ್ಣ ಪರಮಾತ್ಮ ಚಿತ್ರಕ್ಕೆ ಸೋನಾಲ್ ನಾಯಕಿ!
'ಬನಾರಸ್' ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಕ್ಯಾಮೆರಾ ಕೈಚಳಕ, ಎ. ವಿಜಯ್, ಡಿಫ್ರೆಂಟ್ ಡ್ಯಾನಿ ಸಾಹಸ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಎ.ಹರ್ಷ ನೃತ್ಯ ನಿರ್ದೇಶನವಿದೆ. ಎನ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹಾಕಿ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಸಪ್ನ ರಾಜ್, ಬರ್ಕತ್ ಅಲಿ ಸೇರಿದಂತೆ ಹಲವು ಕಲಾವಿದರ ತಾರಾಬಳಗವಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ 'ಬನಾರಸ್' ಚಿತ್ರ ತೆರೆಕಾಣಲಿದೆ.