ದಕ್ಷಿಣ ಭಾರತದ ಗಾನಕೋಗಿಲೆ, ಪದ್ಮಭೂಷಣ್ ಎಸ್. ಜಾನಕಿ ಅವರ ನಿಧನದಿಂದ ಇಡೀ ಭಾರತೀಯ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿದೆ. ಈ ಸಂದರ್ಭದಲ್ಲಿ ಹಿರಿಯ ನಟ ಶ್ರೀನಾಥ್ ಭಾವುಕವಾಗಿ ಜಾನಕಿ ಅಮ್ಮನನ್ನು ಸ್ಮರಿಸಿದ್ದಾರೆ.
ದಕ್ಷಿಣ ಭಾರತದ ಗಾನಕೋಗಿಲೆ, ಪದ್ಮಭೂಷಣ್ ಎಸ್. ಜಾನಕಿ ಅವರ ನಿಧನದಿಂದ ಇಡೀ ಭಾರತೀಯ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿದೆ. 88ನೇ ವಯಸ್ಸಿನಲ್ಲಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದ ಜಾನಕಿ ಅಮ್ಮನ ಅಗಲಿಕೆಗೆ ಸಿನಿಮಾ ಗಣ್ಯರು, ಕಲಾವಿದರು ಮತ್ತು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ನಟ ಶ್ರೀನಾಥ್ ಭಾವುಕವಾಗಿ ಜಾನಕಿ ಅಮ್ಮನನ್ನು ಸ್ಮರಿಸಿದ್ದಾರೆ. "ನಮ್ಮ ಚಿತ್ರರಂಗಕ್ಕೆ ತಾಯಿಯ ಸ್ಥಾನ ಇದ್ದರೆ ಅದು ಜಾನಕಿ ಅಮ್ಮನವರಿಗೆ. ನಾನು ಎಲ್ಲೇ ಭೇಟಿಯಾದರೂ ಅವರು ತುಂಬಾ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅವರ ಪ್ರೀತಿ, ಸರಳತೆ ಮತ್ತು ಸ್ನೇಹವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ," ಎಂದು ಕಣ್ಣೀರಿಟ್ಟರು.
ಇನ್ನೂ ಮಾತನಾಡಿದ ಅವರು, 'ಆಕಾಶ ದೀಪವು ನೀನು... ಸೇರಿದಂತೆ ಅವರ ಹಾಡುಗಳನ್ನು ಕೇಳಿದಾಗ ಮನಸ್ಸು ಭಾವುಕವಾಗುತ್ತದೆ. ಆ ಹಾಡುಗಳ ಜೊತೆಗೆ ಜಾನಕಿ ಅಮ್ಮನವರೇ ಕಣ್ಮುಂದೆ ಬರುತ್ತಾರೆ. ಜನರು ನಮ್ಮನ್ನು ಇಷ್ಟಪಟ್ಟರು, ಪ್ರೀತಿಸಿದರು ಎಂದರೆ ಅದರಲ್ಲಿ ದೊಡ್ಡ ಪಾಲು ಅವರ ಧ್ವನಿಯದ್ದು. ನನ್ನ ಸಿನಿಮಾದ ಹಾಡುಗಳನ್ನು ನಾನು ಕೇಳಿದಾಗ ನನ್ನ ಮುಖಕ್ಕಿಂತ ಮೊದಲು ನೆನಪಾಗುವುದು ಜಾನಕಿ ಅಮ್ಮನವರ ಅಮೃತಮಯ ಕಂಠವೇ' ಎಂದು ಹೇಳಿದರು.
ಆತ್ಮಕ್ಕೆ ಶಾಂತಿ ಸಿಗಲಿ
ಜಾನಕಿ ಅಮ್ಮನ ಅಗಲಿಕೆ ನೋವು ವ್ಯಕ್ತಪಡಿಸಿದ ಶ್ರೀನಾಥ್, "ಅಮ್ಮನನ್ನು ಈ ರೀತಿಯಾಗಿ ಬೀಳ್ಕೊಡಬೇಕಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ತಮ್ಮ ಅಮರ ಗಾನದಿಂದ ಎಂದೆಂದಿಗೂ ನಮ್ಮ ಹೃದಯಗಳಲ್ಲಿ ಜೀವಂತವಾಗಿರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ," ಎಂದು ಕೈಮುಗಿದು ಅಂತಿಮ ನಮನ ಸಲ್ಲಿಸಿದರು.
ಸುಮಾರು ಆರು ದಶಕಗಳ ಸಂಗೀತ ಪಯಣದಲ್ಲಿ ಎಸ್. ಜಾನಕಿ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಸಂಗೀತ ಲೋಕದಲ್ಲಿ ಅಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಅವರ ಧ್ವನಿ ಮುಂದಿನ ಹಲವು ತಲೆಮಾರುಗಳಿಗೂ ಸ್ಫೂರ್ತಿಯಾಗಿ ಉಳಿಯಲಿದೆ.


