ಕಿರುತೆರೆಯಿಂದ ಬೆಳ್ಳಿತೆರೆಗೆ ಯಶಸ್ವಿಯಾಗಿ ಹೆಜ್ಜೆ ಇಟ್ಟಿರುವ ನಟಿ ಸಂಪದ ಹುಲಿವನ, ಅವಕಾಶಗಳಿಗಾಗಿ ಆತುರಪಡುವ ಬದಲು ಉತ್ತಮ ಕಥೆ ಮತ್ತು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಕಿರುತೆರೆಯಿಂದ ಬೆಳ್ಳಿತೆರೆಗೆ ಯಶಸ್ವಿಯಾಗಿ ಹೆಜ್ಜೆ ಇಟ್ಟಿರುವ ನಟಿ ಸಂಪದ ಹುಲಿವನ, ಅವಕಾಶಗಳಿಗಾಗಿ ಆತುರಪಡುವ ಬದಲು ಉತ್ತಮ ಕಥೆ ಮತ್ತು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. 'ರೈಡರ್' ಮತ್ತು 'ಎಕ್ಕ' ಚಿತ್ರದ ಬಳಿಕ ಇದೀಗ ಅವರು ನಿರ್ದೇಶಕ ಗುರುದತ್ ಗಾಣಿಗ ಅವರ 'ಕರಾವಳಿ' ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ ಈ ಚಿತ್ರವು ಜುಲೈ 24ರಂದು ಬಿಡುಗಡೆಯಾಗಲಿದೆ.

ಇತ್ತೀಚಿನ ದಿನಗಳಲ್ಲಿ ಹಲವು ಯುವ ನಟಿಯರು ವಿವಿಧ ಭಾಷೆಗಳಲ್ಲಿ ನಿರಂತರವಾಗಿ ಸಿನಿಮಾಗಳನ್ನು ಮಾಡುತ್ತಿರುವಾಗ, ಸಂಪದ ಮಾತ್ರ ಸಿನಿಮಾಗಳ ಸಂಖ್ಯೆಯ ಹಿಂದೆ ಓಡುವ ಮನಸ್ಥಿತಿಯಲ್ಲಿಲ್ಲ. "ನನಗೆ ಯಾವ ಚಿತ್ರರಂಗವೂ ವಿಭಿನ್ನವಾಗಿ ಕಾಣುವುದಿಲ್ಲ. ಎಲ್ಲೆಡೆ ಶ್ರಮ ಒಂದೇ. ಬದಲಾಗುವುದು ಭಾಷೆ ಮತ್ತು ಅಲ್ಲಿನ ಜನರು ಮಾತ್ರ. ಕೆಲವು ಕಡೆ ಹೆಚ್ಚು ಆರಾಮದಾಯಕವಾಗಿ ಅನಿಸಬಹುದು, ಆದರೆ ಕೆಲಸದ ಶ್ರಮ ಮಾತ್ರ ಎಲ್ಲೆಡೆ ಒಂದೇ," ಎಂದು ಅವರು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ನಾನು ಎಷ್ಟು ಸಿನಿಮಾಗಳನ್ನು ಮಾಡುತ್ತಿದ್ದೇನೆ ಎನ್ನುವುದು ನನ್ನ ಗುರಿಯಲ್ಲ. ನನ್ನ ವೃತ್ತಿಜೀವನ ಇನ್ನಷ್ಟೇ ಆರಂಭವಾಗಿದೆ. ಬೇರೆ ಬೇರೆ ಚಿತ್ರರಂಗಗಳಲ್ಲಿ ಅವಕಾಶಗಳನ್ನು ಅರಿಯುವ ಪ್ರಯತ್ನದಲ್ಲಿದ್ದೇನೆ. ನನಗೆ ನಿಜವಾಗಿಯೂ ನಂಬಿಕೆ ಬರುವ ಕಥೆ ಮತ್ತು ಪಾತ್ರಗಳಿರುವ ಸಿನಿಮಾಗಳಲ್ಲಷ್ಟೇ ನಟಿಸಲು ಇಷ್ಟಪಡುತ್ತೇನೆ. ಕಥೆಯ ಮೇಲೆ ನಂಬಿಕೆ ಇದ್ದರೆ ಅದರ ಫಲಿತಾಂಶ ತೆರೆ ಮೇಲೂ ಕಾಣಿಸುತ್ತದೆ," ಎಂದರು.

'ಕಿರುತೆರೆ ನನಗೆ ಸ್ಥಿರತೆ ನೀಡಿತು, ಸಿನಿಮಾ ಹೊಸ ಸಾಧ್ಯತೆಗಳನ್ನು ತೆರೆದಿತು'

ಕಿರುತೆರೆಯಿಂದ ಸಿನಿಮಾಗೆ ಬಂದ ತಮ್ಮ ಪಯಣದ ಬಗ್ಗೆ ಮಾತನಾಡಿದ ಸಂಪದ, "ಧಾರಾವಾಹಿಗಳಲ್ಲಿ ಅವಕಾಶಗಳು ಸುಲಭವಾಗಿ ಸಿಗುತ್ತವೆ, ಏಕೆಂದರೆ ಅಲ್ಲಿ ಒಂದು ನಿಗದಿತ ಕ್ರಮ ಇರುತ್ತದೆ. ಆದರೆ ಸಿನಿಮಾ ಬೇರೆ. ಇಲ್ಲಿ ಕಲೆಯ ಜೊತೆಗೆ ವ್ಯವಹಾರವೂ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಪಡೆಯುವುದು ಸ್ವಲ್ಪ ಸವಾಲಿನ ಕೆಲಸ. ಆದರೆ ನಾನು ಎಂದಿಗೂ ಕಿರುತೆರೆಯ ಆರಾಮದಾಯಕ ವಲಯದಲ್ಲೇ ಉಳಿಯಲು ಬಯಸಲಿಲ್ಲ. ಕಿರುತೆರೆಯನ್ನು ನಾನು ಸಿನಿಮಾಗೆ ಹೋಗುವ ಮೆಟ್ಟಿಲಾಗಿ ನೋಡಿದ್ದೆ. ದೊಡ್ಡ ಪರದೆಯಲ್ಲಿ ನನ್ನನ್ನು ನೋಡಬೇಕೆಂಬ ಕನಸು ನನ್ನದಾಗಿತ್ತು," ಎಂದು ಹೇಳಿದರು.

'ಕರಾವಳಿ' ಕಥೆ ಮತ್ತು ಸಂಸ್ಕೃತಿ ನನ್ನನ್ನು ಸೆಳೆಯಿತು

'ಕರಾವಳಿ' ಚಿತ್ರದ ಬಗ್ಗೆ ಮಾತನಾಡಿದ ಸಂಪದ, ನಿರ್ದೇಶಕ ಗುರುದತ್ ಗಾಣಿಗ ಅವರ ಪರಿಚಯ ನಾಲ್ಕು ವರ್ಷಗಳ ಹಿಂದಿನದು ಎಂದು ತಿಳಿಸಿದ್ದಾರೆ. "ನಾವು ಈ ಹಿಂದೆ ಮತ್ತೊಂದು ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಸುಮಾರು ಒಂದೂವರೆ ವರ್ಷದ ಬಳಿಕ ಅವರು 'ಕರಾವಳಿ' ಚಿತ್ರದ ಬಗ್ಗೆ ಕರೆ ಮಾಡಿದರು. ಆಗಾಗಲೇ ಚಿತ್ರದ ಮೊದಲ ಟೀಸರ್ ನೋಡಿದ್ದೆ. ಅದು ಹೊಸತನ ಮತ್ತು ವಿಭಿನ್ನತೆಯಿಂದ ಕೂಡಿದೆ ಎಂದು ಅನಿಸಿತ್ತು. ಕಥೆ ಕೇಳಿದ ಬಳಿಕ ನನ್ನನ್ನು ಸೆಳೆದದ್ದು ಕೇವಲ ಕಥೆಯಲ್ಲ, ಅದರಲ್ಲಿರುವ ಕರಾವಳಿ ಸಂಸ್ಕೃತಿಯ ಚಿತ್ರಣ. ಸಿನಿಮಾಗಳಲ್ಲಿ ಅಪರೂಪವಾಗಿ ಕಾಣುವ ಒಂದು ಲೋಕವನ್ನು ಈ ಚಿತ್ರ ತೆರೆದಿಟ್ಟಿದೆ," ಎಂದು ಅವರು ಹೇಳಿದರು.

ಪಶುವೈದ್ಯೆಯಾಗಿ ಸಂಪದ; ಕಥೆಗೆ ಭಾವನಾತ್ಮಕ ಸ್ಪರ್ಶ

ಕರಾವಳಿ ಭಾಗದ ಸಂಸ್ಕೃತಿ ಮತ್ತು ಕಂಬಳ ಕ್ರೀಡೆಯ ಸುತ್ತ ಸಾಗುವ ಈ ಚಿತ್ರದಲ್ಲಿ ಸಂಪದ ಹುಲಿವನ ಪಶುವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. "ನನ್ನ ಪಾತ್ರ ಸಂಘರ್ಷದ ನಡುವೆ ಸಹಾನುಭೂತಿ ಮತ್ತು ಪ್ರೀತಿಯೊಂದಿಗೆ ಪ್ರವೇಶಿಸುತ್ತದೆ. ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಸಂಬಂಧವನ್ನು ಚಿತ್ರವು ಬಹಳ ವಿಭಿನ್ನವಾಗಿ ಕಟ್ಟಿಕೊಟ್ಟಿದೆ. ಎಲ್ಲ ಗದ್ದಲದ ಮಧ್ಯೆ ನನ್ನ ಪಾತ್ರ ಶಾಂತಿ ಮತ್ತು ಪ್ರೀತಿಯ ಪ್ರತೀಕವಾಗಿರುತ್ತದೆ. ಜೊತೆಗೆ ಆ ಪಾತ್ರಕ್ಕೂ ತನ್ನದೇ ಆದ ಹಿನ್ನಲೆ ಮತ್ತು ಭಾವನಾತ್ಮಕ ಪಯಣವಿದೆ. ಹೀಗಾಗಿ ಇದು ಕೇವಲ ನಾಯಕಿಯ ಪಾತ್ರವಾಗಿಯೇ ಉಳಿದಿಲ್ಲ," ಎಂದು ಸಂಪದ ವಿವರಿಸಿದರು.

ಕಂಬಳ ಸಂಸ್ಕೃತಿಯನ್ನು ಹತ್ತಿರದಿಂದ ಅರಿಯುವ ಅವಕಾಶ

ಈ ಪಾತ್ರಕ್ಕಾಗಿ ಪ್ರಾಣಿಗಳೊಂದಿಗೆ ಹೆಚ್ಚು ಸಮಯ ಕಳೆಯಬೇಕಾಯಿತು ಎಂದು ಹೇಳಿದ ಅವರು, "ಪ್ರಾಣಿಗಳ ಸ್ವಭಾವವನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿತ್ತು. ಅವು ಹೇಗೆ ವರ್ತಿಸುತ್ತವೆಯೋ ಅದಕ್ಕೆ ಅನುಗುಣವಾಗಿ ನಾವು ಕೆಲಸ ಮಾಡಬೇಕಾಗುತ್ತದೆ. ಚಿತ್ರೀಕರಣದಲ್ಲಿ ಎಮ್ಮೆ, ಮೇಕೆ, ಕರುಗಳು ಹಾಗೂ ಆಮೆಗಳೊಂದಿಗೂ ಕೆಲಸ ಮಾಡಿದ್ದೇವೆ. ಪ್ರತಿಯೊಂದು ಪ್ರಾಣಿಯ ವರ್ತನೆ ವಿಭಿನ್ನವಾಗಿರುತ್ತದೆ," ಎಂದರು. 'ಕರಾವಳಿ' ಚಿತ್ರದ ಮೂಲಕ ಕಂಬಳ ಸಂಸ್ಕೃತಿಯನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದು ವಿಶೇಷ ಅನುಭವ ಎಂದು ಸಂಪದ ಹೇಳಿದರು.

"ಕಂಬಳದ ಎಮ್ಮೆಗಳೊಂದಿಗೆ ಜನರು ಎಷ್ಟೊಂದು ಭಾವನಾತ್ಮಕ ನಂಟು ಹೊಂದಿದ್ದಾರೆ ಎಂಬುದನ್ನು ನಾನು ಈ ಚಿತ್ರದ ಮೂಲಕ ಅರಿತುಕೊಂಡೆ. ಕೆಲವು ಎಮ್ಮೆಗಳು ಶ್ರೀಮಂತ ಕುಟುಂಬಗಳಿಗೆ ಸೇರಿದ್ದರೆ, ಇನ್ನೂ ಕೆಲವು ರೈತರದ್ದು. ಆದರೆ ಎಲ್ಲರೂ ಅವುಗಳನ್ನು ಅಪಾರ ಕಾಳಜಿ ಮತ್ತು ಗೌರವದಿಂದ ನೋಡಿಕೊಳ್ಳುತ್ತಾರೆ. ಪ್ರತಿಯೊಂದು ಕಂಬಳ ಸ್ಪರ್ಧೆಯ ಹಿಂದೆ ಹೆಮ್ಮೆ, ಸ್ಪರ್ಧಾತ್ಮಕ ಮನೋಭಾವ ಮತ್ತು ಭಾವನೆಗಳು ಅಡಗಿವೆ. ಅದನ್ನು ಹತ್ತಿರದಿಂದ ನೋಡುವುದು ನಿಜಕ್ಕೂ ಅದ್ಭುತ ಅನುಭವವಾಗಿತ್ತು," ಎಂದು ಸಂಪದ ಹುಲಿವನ ಹೇಳಿದ್ದಾರೆ.