ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ 'ಕರಾವಳಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಸೆನ್ಸಾರ್ ಮಂಡಳಿಯ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣಗೊಂಡು ಯು/ಎ (U/A) ಪ್ರಮಾಣಪತ್ರ ಪಡೆದಿದೆ.
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ 'ಕರಾವಳಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಸೆನ್ಸಾರ್ ಮಂಡಳಿಯ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣಗೊಂಡು ಯು/ಎ (U/A) ಪ್ರಮಾಣಪತ್ರ ಪಡೆದಿದೆ. ಜುಲೈ 24ರಂದು ರಾಜ್ಯಾದ್ಯಂತ ತೆರೆಗೆ ಬರಲಿರುವ ಈ ಚಿತ್ರದ ಕುರಿತು ಚಿತ್ರತಂಡ ಅಧಿಕೃತವಾಗಿ ಸಂತಸದ ಸುದ್ದಿ ಹಂಚಿಕೊಂಡಿದೆ. ನಟ ರಾಜ್ ಬಿ. ಶೆಟ್ಟಿ ಸೇರಿದಂತೆ ಚಿತ್ರತಂಡದ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ, "Cleared. Certified. Ready. 'ಕರಾವಳಿ'ಗೆ ಯು/ಎ ಪ್ರಮಾಣಪತ್ರ ಲಭಿಸಿದೆ.
ಜುಲೈ 24ರಂದು ಚಿತ್ರಮಂದಿರಗಳಲ್ಲಿ ಭೇಟಿಯಾಗೋಣ" ಎಂದು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಪೋಸ್ಟರ್ನಲ್ಲಿ ನಾಯಕ ಪ್ರಜ್ವಲ್ ದೇವರಾಜ್ ಕೋಣದ ಮೇಲಿರುವ ದೃಶ್ಯ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಬಿಡುಗಡೆಯಾದ ಟೀಸರ್ ಹಾಗೂ ಪ್ರಚಾರ ಸಾಮಗ್ರಿಗಳು, ಕರಾವಳಿ ಭಾಗದ ಸಂಸ್ಕೃತಿ ಮತ್ತು ಕಂಬಳದ ವೈಭವವನ್ನು ಈ ಸಿನಿಮಾ ಅದ್ಭುತವಾಗಿ ತೆರೆಗೆ ತರುತ್ತದೆ ಎಂಬ ಸುಳಿವು ನೀಡಿವೆ. ನಿರ್ದೇಶಕ ಗುರುದತ್ ಗಾಣಿಗ ಅವರ ಮಾತಿನಂತೆ, ಚಿತ್ರದ ಚಿತ್ರೀಕರಣದಲ್ಲಿ ಸುಮಾರು 380 ಕೋಣಗಳನ್ನು ಬಳಸಲಾಗಿದೆ. ಈ ಅಂಶವೇ ಚಿತ್ರದ ನಿರ್ಮಾಣದ ಭವ್ಯತೆಯನ್ನು ತೋರಿಸುತ್ತದೆ.
ಚಿತ್ರದ ಮತ್ತೊಂದು ವಿಶೇಷವೆಂದರೆ, ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಕಟಪಾಡಿ ಕಂಬಳದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ದೊರೆತಿರುವುದು. ಪೀಳಿಗೆಯಿಂದ ಒಂದೇ ಕುಟುಂಬ ನಡೆಸಿಕೊಂಡು ಬರುತ್ತಿರುವ ಈ ಐತಿಹಾಸಿಕ ಕಂಬಳದ ನೈಜ ಸೊಗಡನ್ನು ಪ್ರೇಕ್ಷಕರಿಗೆ ಪರಿಚಯಿಸುವ ಪ್ರಯತ್ನ ಚಿತ್ರತಂಡ ಮಾಡಿದೆ. ಸಂಗೀತದ ವಿಚಾರದಲ್ಲೂ ಚಿತ್ರ ವಿಶೇಷತೆ ಹೊಂದಿದೆ. ಕನ್ನಡದ ಖ್ಯಾತ ಗಾಯಕಿ, ನಟಿ ಹಾಗೂ ನಿರ್ದೇಶಕಿ ಜಯಶ್ರೀ ಅವರು ಚಿತ್ರದ ಒಂದು ಹಾಡಿಗೆ ಧ್ವನಿ ನೀಡಿದ್ದಾರೆ. ಅವರ ಕಂಠದಲ್ಲಿ ಮೂಡಿಬಂದಿರುವ ಆ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಸಂಗೀತಪ್ರಿಯರಲ್ಲಿ ಈಗಾಗಲೇ ನಿರೀಕ್ಷೆ ಮೂಡಿಸಿದೆ.
ಪ್ರಮುಖ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ
ಮನುಷ್ಯ ಮತ್ತು ಪ್ರಾಣಿಯ ನಡುವಿನ ಸಂಘರ್ಷವನ್ನು ಗ್ರಾಮೀಣ ಬದುಕಿನ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿದ್ದು, ಅವರ ಜೋಡಿಯಾಗಿ ಸಂಪದಾ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಕಾಣಿಸಿಕೊಂಡಿದ್ದು, ಸುಷ್ಮಿತಾ ಭಟ್, ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ತಾರಾಬಳಗದಲ್ಲಿದ್ದಾರೆ. ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕೆ ಮತ್ತಷ್ಟು ಮೆರಗು ನೀಡಿದೆ.
ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಗಾಣಿಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ಮಾಣದಲ್ಲಿ ವಿಕೆ ಫಿಲ್ಮ್ಸ್ ಸಹಭಾಗಿತ್ವ ವಹಿಸಿದ್ದು, ದಕ್ಷಿಣ ಭಾರತದ ಪ್ರಮುಖ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ಅರ್ಪಿಸುವುದರ ಜೊತೆಗೆ ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ. ಕರಾವಳಿಯ ಸಂಸ್ಕೃತಿ, ಕಂಬಳದ ವೈಭವ ಮತ್ತು ಭಾವನಾತ್ಮಕ ಕಥೆಯನ್ನು ಬೆಳ್ಳಿತೆರೆಗೆ ತರುತ್ತಿರುವ 'ಕರಾವಳಿ', ಜುಲೈ 24ರಂದು ಪ್ರೇಕ್ಷಕರ ಮುಂದೆ ಯಾವ ರೀತಿಯ ಅನುಭವ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.


