'ಕೇನ್ಸ್ನಲ್ಲಿ ಕರ್ನಾಟಕದ ಕಥೆಯನ್ನು ಹೇಳಲು ಸಿಕ್ಕ ಅವಕಾಶ ನನ್ನ ಪಾಲಿಗೆ ಅವಿಸ್ಮರಣೀಯ. ಸೆಪ್ಟೆಂಬರ್ 21 ಪ್ರತಿಯೊಬ್ಬ ಆರೈಕೆದಾರನ ಮೌನ ನೋವಿಗೆ ಧ್ವನಿ. ಪ್ರಾದೇಶಿಕ ಕಥೆಗಳು ಸಾರ್ವತ್ರಿಕವಾಗಬಲ್ಲವು ಎಂಬುದಕ್ಕೆ ಇದು ಸಾಕ್ಷಿ. ಈ ವೇದಿಕೆ ಕರ್ನಾಟಕದ ಯುವ ಚಲನಚಿತ್ರ ನಿರ್ದೇಶಕರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ.' ಎಂದಿದ್ದಾರೆ.
ಸ್ಯಾಂಡಲ್ವುಡ್ಗೆ ಗೌರವ
ನಟಿ ಪ್ರಿಯಾಂಕಾ ಉಪೇಂದ್ರ ನಟನೆಯ 'ಸೆಪ್ಟೆಂಬರ್ 21' ಚಿತ್ರದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ (Karen Kshithi Suvarna) ಅವರಿಗೆ '79ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಷಣಕ್ಕೆ ಆಹ್ವಾನ್ ಬಂದಿದೆ. ಜೊತೆಗೆ ಅಲ್ಲಿ 'ಸೆಪ್ಟೆಂಬರ್ 21' ಚಿತ್ರದ ಪ್ರೀಮಿಯರ್ ಶೋ ಕೂಡ ಆಯೋಜನೆ ಆಗಿದೆ. ಇವೆರಡೂ ಸುದ್ದಿ ಕನ್ನಡ ನಾಡು, ಕನ್ನಡ ಚಿತ್ರರಂಗ ಹಾಗೂ ಸ್ಯಾಂಡಲ್ವುಡ್ ಸಿನಿಪ್ರೇಕ್ಷಕರಿಗೆ ಸಂತೋಷದ ಸಮಾಚಾರ ಎನಿಸಿದೆ.
ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವವೆಂದು ಪರಿಗಣಿಸಲಾಗಿರುವ ಕೇನ್ಸ್ ಚಲನಚಿತ್ರೋತ್ಸವದಲ್ಲಿ (Cannes Film Festival)ನಲ್ಲಿ 22 ವರ್ಷದ ಯುವ ಚಲನಚಿತ್ರ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರು 79ನೇ ಕೇನ್ಸ್ ಚಲನಚಿತ್ರೋತ್ಸವದ ಸೈಡ್ಲೈನ್ನಲ್ಲಿ ನಡೆಯುವ ವರ್ಲ್ಡ್ ವುಮನ್ ಕೇನ್ಸ್ ಅಜೆಂಡಾ 2026 ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನ್ನಾಡಲಿದ್ದಾರೆ. ಅವರೊಂದಿಗೆ ಇನ್ನೂ ಹಲವು ಭಾಷಣಕಾರರು ಮಾತನ್ನಾಡಲಿದ್ದು, ಆ ಲಿಸ್ಟ್ ಹೀಗಿದೆ..
ಇತರ ಭಾಷಣಕಾರರು: ಕರೆನ್ ಅವರು ಫೋರ್ಬ್ಸ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಮೋಯಿರಾ ಫೋರ್ಬ್ಸ್, ಎಮ್ಮಿ ವಿಜೇತ ನಟಿ ಶೋಹ್ರೆ ಅಗ್ದಾಶ್ಲೂ, ನಟಿ ಟಮೆರಾ ಮೌರಿ ಮತ್ತು USC ಅನೆನ್ಬರ್ಗ್ ಇನ್ಕ್ಲೂಷನ್ ಇನಿಶಿಯೇಟಿವ್ನ ಸಂಸ್ಥಾಪಕಿ ಸ್ಟೇಸಿ ಸ್ಮಿತ್ ಇವರೆಲ್ಲರೂ ಸಹ ಅಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಕೇನ್ಸ್ನ ಹೋಟೆಲ್ 'ಸ್ಪ್ಲೆಂಡಿಡ್'ನಲ್ಲಿ ನಡೆಯಲಿರುವ ಶೃಂಗಸಭೆ
ಕಾರ್ಯಕ್ರಮದ ವಿವರ: ಮೇ 12–13, 2026 ರಂದು ಕೇನ್ಸ್ನ ಹೋಟೆಲ್ 'ಸ್ಪ್ಲೆಂಡಿಡ್'ನಲ್ಲಿ ನಡೆಯಲಿರುವ ಈ ಶೃಂಗಸಭೆಯಲ್ಲಿ ಕರೆನ್ ಅವರು ಸಿನಿಮಾ, AI ಮತ್ತು ಸಾಮಾಜಿಕ ಕ್ರಿಯಾಶೀಲತೆ ಕುರಿತು ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು 10 ಲಕ್ಷಕ್ಕೂ ಹೆಚ್ಚು ವೀಕ್ಷಕರಿಗೆ ತಲುಪುವಂತೆ ಜಾಗತಿಕವಾಗಿ ಮರು-ಪ್ರಸಾರವಾಗಲಿದೆ.
ಸೆಪ್ಟೆಂಬರ್ 21 ಚಿತ್ರದ ಬಗ್ಗೆ: ಕರೆನ್ ನಿರ್ದೇಶನದ ಚೊಚ್ಚಲ ಹಿಂದಿ-ಕನ್ನಡ ಚಿತ್ರ 'ಸೆಪ್ಟೆಂಬರ್ 21' ಇದೇ ಮೇ 16, 2026 ರಂದು ಸಂಜೆ 5:45ಕ್ಕೆ ಪಾಲೈಸ್ ಥಿಯೇಟರ್, 'ಕೇನ್ಸ್ನಲ್ಲಿ ಮಾರ್ಷೆಡು ಫಿಲ್ಮ್ ವಿಭಾಗದಲ್ಲಿ ವಿಶ್ವ ಪ್ರೀಮಿಯರ್ ಕಾಣಲಿದೆ. ಆಲ್ಜೈಮರ್ ಕಾಯಿಲೆ ಮತ್ತು ಆರೈಕೆದಾರರ ಅಗೋಚರ ಹೋರಾಟದ ಕುರಿತಾದ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಪ್ರವೀಣ್ ಸಿಂಗ್ ಸಿಸೋಡಿಯಾ, ಝರೀನಾ ವಹಾಬ್, ಅಜಿತ್ ಶಿಧಾಯೆ, ಅಮಿತ್ ಬೆಹ್ಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ARDSI – ಆಲ್ಜೈಮರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಅನುಮೋದಿತ ಈ ಚಿತ್ರವು ಈ ಹಿಂದೆ ಗೋವಾದ 56ನೇ IFFIಯಲ್ಲಿ ‘ವರ್ಕ್-ಇನ್-ಪ್ರೋಗ್ರೆಸ್’ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು. ಇದೀಗ, ಮೇ 22, 2026 ರಂದು ಭಾರತದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕರೆನ್ ಕ್ಷಿತಿ ಸುವರ್ಣ ಪ್ರತಿಕ್ರಿಯೆ:
ಈ ಬಗ್ಗೆ ನಿರ್ದೇಶಕಿ ಕರೆನ್ 'ಕೇನ್ಸ್ನಲ್ಲಿ ಕರ್ನಾಟಕದ ಕಥೆಯನ್ನು ಹೇಳಲು ಸಿಕ್ಕ ಅವಕಾಶ ನನ್ನ ಪಾಲಿಗೆ ಅವಿಸ್ಮರಣೀಯ. ಸೆಪ್ಟೆಂಬರ್ 21 ಪ್ರತಿಯೊಬ್ಬ ಆರೈಕೆದಾರನ ಮೌನ ನೋವಿಗೆ ಧ್ವನಿ. ಪ್ರಾದೇಶಿಕ ಕಥೆಗಳು ಸಾರ್ವತ್ರಿಕವಾಗಬಲ್ಲವು ಎಂಬುದಕ್ಕೆ ಇದು ಸಾಕ್ಷಿ. ಈ ವೇದಿಕೆ ಕರ್ನಾಟಕದ ಯುವ ಚಲನಚಿತ್ರ ನಿರ್ದೇಶಕರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ.' ಎಂದಿದ್ದಾರೆ.
ಅಂದಹಾಗೆ, ವಿಸಿಕಾ ಫಿಲ್ಮ್ಸ್, FMD ಪ್ರೊಡಕ್ಷನ್ಸ್, ಹಮಾರಾಮೂವಿ ನಿರ್ಮಾಣದಲ್ಲಿ ಫಿಲ್ಮ್ಸ್ಮ್ಯಾಕ್ಸ್ ಸಹಯೋಗದೊಂದಿಗೆ 'ಸೆಪ್ಟೆಂಬರ್ 21' ಸಿನಿಮಾ ಮೂಡಿಬಂದಿದೆ. ವಿನಯ್ ಚಂದ್ರಾ ಸಂಗೀತ, ರಾಜಶೇಖರ್ ಬರವಣಿಗೆ ಈ ಚಿತ್ರಕ್ಕಿದೆ. ಇದೀಗ, ಕನ್ನಡ ಚಿತ್ರ 'ಸೆಪಟ್ಎಂಬರ್ 21'ರ ಪ್ರೀಮಿಯರ್ ಶೋ ಹಾಗೂ 'ಕೇನ್ಸ್'ನಲ್ಲಿ ನಿರ್ದೇಶಕಿಗೆ ಭಾಷಣ ಮಾಡುವ ಭಾಗ್ಯ ಸಿಕ್ಕಿರುವ ಸಂತೋಷದ ಸುದ್ದಿ ಈ ಚಿತ್ರತಂಡದಿಂದ ಹೊರಬಿದ್ದಿದೆ. ಸ್ಯಾಂಡಲ್ವುಡ್ ಸಂತೋಷಕ್ಕೆ ಹೊಸದೊಂದು ಸುದ್ದಿ ಈ ಮೂಲಕ ಸೇರಿದಂತಾಗಿದೆ.


