* ಸಾವಿನಲ್ಲೂ ಹಲವರ ಜೀವ ಬೆಳಗಿದ ಸಂಚಾರಿ ವಿಜಯ್‌* ಕಾನೂನುಬದ್ಧವಾಗಿ ಅಂಗಾಂಗ ತೆಗೆದು ಬೇರೆಯವರಿಗೆ ಕಸಿ* ಅಂಧರ ಬಾಳಿಗೆ ಬೆಳಕಾದ ವಿಜಯ್ ಕಣ್ಣುಗಳು* ಕಿಡ್ನಿ ಕಸಿಯೂ ಯಶಸ್ವಿ

ಬೆಂಗಳೂರು(ಜೂ.15): ನಟ ಸಂಚಾರಿ ವಿಜಯ್‌ ಅವರು ಸಾವಿನ ನಡುವೆಯೂ ಜೀವನ ಸಾರ್ಥಕತೆ ಮರೆದಿದ್ದು, ಹಲವರ ಜೀವನಕ್ಕೆ ಬೆಳಕಾಗಿದ್ದಾರೆ. ಸಂಚಾರಿ ವಿಜಯ್‌ರವರ ಯಕೃತ್‌ 1, ಕಿಡ್ನಿ 2, ಎರಡು ಕಣ್ಣು 2, ಶ್ವಾಸಕೋಶ ಹಾಗೂ ಹೃದಯ ಕವಾಟುಗಳನ್ನು ಕುಟುಂಬ ಸದಸ್ಯರು ದಾನ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಸೋಮವಾರ ರಾತ್ರಿ 9.30 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ಸುಮಾರಿನವರೆಗೆ ವೈದ್ಯರು ಸಂಚಾರಿ ವಿಜಯ್‌ ಅವರ ಅಂಗಾಂಗಗಳನ್ನು ಬೇರ್ಪಡಿಸಲಾಗಿದ್ದು. ಬಳಿಕ ಅಂಗಾಂಗ ಕಸಿಗಾಗಿ ಜೀವನ್ಮರಣ ನಡುವೆ ಹೋರಾಟ ಮಾಡುತ್ತಿರುವ ಅದೇ ರಕ್ತದ ಗುಂಪಿನ ವ್ಯಕ್ತಿಗಳಿಗೆ ಕಸಿ ಮಾಡಲು ಕಳುಹಿಸಲಾಗಿತ್ತು. 

"

ಅಂಗಾಂಗ ದಾನ ಆರಂಭ, ಸಂದೇಶ ಕೊಟ್ಟು ಪಯಣ ಮುಗಿಸಲಿರುವ ಸಂಚಾರಿ

ಕಿಡ್ನಿ ಟ್ರ್ಯಾನ್ಸ್ ಪ್ಲಾಂಟೇಷನ್ ಸಕ್ಸಸ್ 

ಸಂಚಾರಿ ವಿಜಯ್‌ರವರ ಕಿಡ್ನಿಯನ್ನು ಮಹಿಳೆಯೊಬ್ಬರಿಗೆ ಟ್ರ್ಯಾನ್ಸ್ ಪ್ಲಾಂಟೇಷನ್ ಮಾಡಲಾಗಿದ್ದು, ಈ ಪ್ರಕ್ರಿಯೆ ಯಶಸ್ವಿಯಾಗಿದೆ. ಲಗ್ಗೆರೆ ಮೂಲದ 36 ವರ್ಷದ ಮಹಿಳೆಗೆ ಕಿಡ್ನಿ ದಾನ ಮಾಡಲಾಗಿತ್ತು. ಬ್ಲಡ್ ಗ್ರೂಪ್ , ಡಿ ಎನ್ ಎ , ಕಿಡ್ನಿ ಸೈಜ್ ಎಲ್ಲವೂ ಮಹಿಳೆಗೆ ಮ್ಯಾಚ್ ಆಗಿತ್ತು. ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಡೆದ ಕಿಡ್ನಿ ಟ್ರ್ಯಾನ್ಸ್ ಪ್ಲಾಂಟೇಷನ್ ಯಶಸ್ವಿಯಾಗಿದೆ ಎಂಬುವುದು ಖುಷಿಯ ವಿಚಾರ. ಈವರೆಗೂ ಡಯಾಲಿಸಿಸ್‌ನಲ್ಲಿದ್ದ ಮಹಿಳೆ ಇನ್ಮುಂದೆ ಇದಿಲ್ಲದೇ ಬದುಕಬಬಹುದಾಗಿದೆ. 

ಅವನಲ್ಲ ನಾವು ಎನ್ನುತ್ತಿವೆ ಅವರ ಅಂಗಾಗಗಳು

ಈ ಬಗ್ಗೆ ಮಾತನಾಡಿರುವ ಎಂಎಸ್.ರಾಮಯ್ಯ ಆಸ್ಪತ್ರೆ ಡಾ.ಗುರುದೇವ್ 'ಸಂಚಾರಿ ವಿಜಯ್ ಕಿಡ್ನಿ ಟ್ರಾನ್ಸ್ಪ್ಲಾಂಟ್ ಮಾಡಲಾಗಿದೆ. ಸಂಚಾರಿ ವಿಜಯ್ ಮರಣ ಅಘಾತವಾಗಿದೆ., ಆದರೆ ಈ ನೋವಿನಲ್ಲೂ ಕುಟುಂಬಸ್ಥರು ಅಂಗಾಗ ದಾನ ಮಾಡಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಈಗ ಅವನಲ್ಲ ನಾವು ಎನ್ನುತ್ತಿವೆ ಅವರ ಅಂಗಾಗಗಳು. ಐದು ಜೀವಗಳು ಉಳಿಯಲು ಸಹಾಯ ಆಗಿದೆ ಎಂದಿದ್ದಾರೆ.

ದುರಂತ ಅಂತ್ಯ: ಕಳದ ವರ್ಷ ಇದೇ ದಿನ ಸುಶಾಂತ್, ಇಂದು ಸಂಚಾರಿ ವಿಜಯ್

ಇಬ್ಬರ ಬಾಳಿನಲ್ಲಿ ಬೆಳಕಾದ ವಿಜಯ್ ಕಣ್ಣುಗಳು

ಇನ್ನು ಸಂಚಾರಿ ವಿಜಯ್ ಕಣ್ಣುಗಳು ಇಬ್ಬರ ಬಾಳಿನಲ್ಲಿ ಬೆಳಕಾಗಿವೆ. ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರಿಗೆ ಕಣ್ಣು ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ. ಒಬ್ಬರಿಗೆ ಈಗಾಗಲೇ ಕಣ್ಣು ಜೋಡಣೆಯಾಗಿದ್ದು, ಮತ್ತೊಬ್ಬರ ಸರ್ಜರಿ ಆರಂಭವಾಗಿದೆ. ದೃಷ್ಟಿ ಇಲ್ಲದ ಇಬ್ಬರಿಗೆ ಒಂದೊಂದು ಕಣ್ಣು ಅಳವಡಿಸಲಾಗಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೀವನ ಸಾರ್ಥಕತೆ ಸಂಸ್ಥೆಯ ಡಾ.ನೌಷಾದ್‌ ಪಾಷ, ಸಂಚಾರಿ ವಿಜಯ್‌ ಅವರ ಕುಟುಂಬ ಸದಸ್ಯರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಫಾರಂ 10 ಹಾಗೂ ಫಾರಂ 8ರಲ್ಲಿ ಸಹಿ ಪಡೆದು ಕಾನೂನಾತ್ಮಕವಾಗಿ ಅಂಗಾಂಗ ಬೇರ್ಪಡಿಸಿ ಸಂಸ್ಥೆಯಲ್ಲಿ ನೋಂದಣಿ ಮಾಡಿ ಕಾಯುತ್ತಿದ್ದವರಿಗಾಗಿ ಕಳುಹಿಸಲಾಗಿದೆ. ಮಂಗಳವಾರ ಬೆಳಗ್ಗೆ ಆಸ್ಪತ್ರೆ ಪ್ರಕ್ರಿಯೆ ಮುಗಿದ ಬಳಿಕ ಅಪಘಾತ ನಡೆದ ಠಾಣೆಯಲ್ಲಿ ಮಾಹಿತಿ ನೀಡಿ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.

 ಸ್ವಗ್ರಾಮ ಪಂಚನಹಳ್ಳಿಯಲ್ಲಿ ಸಂಚಾರಿ ವಿಜಯ್‌ ಅಂತ್ಯಕ್ರಿಯೆ

ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ ನಟ ಸಂಚಾರಿ ವಿಜಯ್‌ (37) ಅವರ ಅಂತ್ಯಕ್ರಿಯೆ ಸ್ವಗ್ರಾಮ ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ಮಂಗಳವಾರ ನಡೆಯಲಿದೆ.

ಆಸ್ಪತ್ರೆ ಹಾಗೂ ಪೊಲೀಸರ ಅಂತಿಮ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಪಾರ್ಥಿವ ಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು. ಬಳಿಕ ಸರ್ಕಾರವು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಿದ್ದು, ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಅಂತಿಮ ದರ್ಶನಕ್ಕೆ ಇಡಲಾಗುವುದು. ಬಳಿಕ ಚಿಕ್ಕಮಗಳೂರಿಗೆ ತೆಗೆದುಕೊಂಡು ಹೋಗಲಾಗುವುದು ಎಂದು ಸಂಚಾರಿ ವಿಜಯ್‌ ಅವರ ಆಪ್ತರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯ್‌ ಸ್ನೇಹಿತ ಹಾಗೂ ನಿರ್ದೇಶನ ಮಂಸೋರೆ, ಸಂಚಾರಿ ವಿಜಯ್‌ ಅವರ ಅಂತ್ಯಕ್ರಿಯೆಯನ್ನು ಕಡೂರಿನ ಪಂಚನಹಳ್ಳಿಯಲ್ಲಿ ನಡೆಸಲಾಗುವುದು. ಬೆಳಗ್ಗೆ 10 ಗಂಟೆ ಮೇಲೆ ಅಂತ್ಯಕ್ರಿಯೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.