ದುರಂತ ಅಂತ್ಯ: ಕಳದ ವರ್ಷ ಇದೇ ದಿನ ಸುಶಾಂತ್, ಇಂದು ಸಂಚಾರಿ ವಿಜಯ್
ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯಗೊಂಡಿದೆ. ವೈದ್ಯರು ಸುಧಾರಿಸಿಕೊಳ್ಳುವುದು ಕಷ್ಟವೆಂದು ಹೇಳುತ್ತಿದ್ದಾರೆ. ಕಳೆದ ವರ್ಷ ಇದೇ ದಿನ ಭಾರತ ಚಿತ್ರರಂಗದ ಭರವಸೆಯ ನಟ ಸುಶಾಂತ್ ಸಿಂಗ್ ಅವರನ್ನು ಕಳೆದುಕೊಂಡಿತ್ತು.
ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ಸಂಚಾರಿ ವಿಜಯ್ ರಸ್ತೆ ಅಪಘಾತದಿಂದ ಮೆದುಳಿಗೆ ಗಂಭೀರ ಗಾಯವಾಗಿದೆ. ಇದರಿಂದ ವಿಜಯ್ ಮೆದುಳು ನಿಷ್ಕ್ರಿಯವಾಗಿದೆ, ಯಾವುದೇ ಚಿಕಿತ್ಸೆಗೂ ಸ್ಪಂದಿಸದ ಕಾರಣ ಕುಟುಂಬಸ್ಥರು ವಿಜಯ್ರ ಅಂಗಾಂಗವನ್ನು ದಾನ ಮಾಡುವುದಕ್ಕೆ ನಿರ್ಧರಿಸಿದ್ದಾರೆ.
ನಟ ಸಂಚಾರಿ ವಿಜಯ್ ಮೆದುಳು ಬಹುತೇಕ ನಿಷ್ಕ್ರಿಯ: ಅಂಗಾಂಗ ದಾನಕ್ಕೆ ಕುಟುಂಬದ ನಿರ್ಧಾರ?
ಒಂದು ದಿನವೂ ಒಬ್ಬರಿಗೆ ಕೆಟ್ಟದ್ದು ಬಯಸಿದ ವ್ಯಕ್ತಿ ಇವರಲ್ಲ, ಯಾರೇ ಕಷ್ಟ ಎಂದು ಬಂದರೂ, ತಮ್ಮ ಕೈಲಾಗಷ್ಟು ಸಹಾಯ ಮಾಡುತ್ತಿದ್ದರು ವಿಜಯ್. ಇಲ್ಲವಾದರೆ ಬೇರೊಬ್ಬ ವ್ಯಕ್ತಿ ಬಳಿ ಸಹಾಯ ಬೇಡಿ, ಸಹಾಯ ಮಾಡುವಂಥ ವಿಶೇಷ ಗುಣ ವಿಜಯ್ಗಿತ್ತು. ಅದರಲ್ಲೂ ಕೊರೋನಾ ಲಾಕ್ಡೌನ್ ಸಮಯದಲ್ಲಿ ವಾರಿಯರ್ ಆಗಿ ಕೆಲಸ ಮಾಡಿ, ಅದೆಷ್ಟೋ ಮಂದಿ ಮನೆ ಬಾಗಿಲಿಗೆ ಹೋಗಿ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಇಂತಹ ಕಲಾವಿದ ಸ್ಥಿತಿ ಕಂಡು ಚಿತ್ರರಂಗ ಕಂಬನಿ ಮಿಡಿದಿದೆ.
ಕಳೆದ ವರ್ಷ ಇದೇ ದಿನ (ಜೂನ್ 14)ರಂದು ಬಾಲಿವುಡ್ ಅದ್ಭುತ ಕಲಾವಿದ ಸುಶಾಂತ್ ಸಿಂಗ್ ಕೊನೆ ಉಸಿರೆಳೆದರು. ಸುಶಾಂತ್ ಸಾವಿನ ಸುತ್ತ ನಾನಾ ರೀತಿಯ ಹೂಹಾಪೋಹಗಳು ಕೇಳಿ ಬಂದಿತ್ತು, ಸುಶಾಂತ್ ಜೀವನಧಾರಿತ ಸಿನಿಮಾ ಕೂಡ ಬಿಡುಗಡೆ ಆಗಿದೆ. ಒಂದೇ ದಿನಾಂಕ ಒಂದು ವರ್ಷದ ಅಂತರಲ್ಲಿ ಇಬ್ಬರೂ ಭಾರತೀಯ ಚಿತ್ರರಂಗದ ಅದ್ಭುತ ಕಲಾವಿದರನ್ನು ದೇಶ ಕಳೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಫೋಟೋಗಳನ್ನು ಅಭಿಮಾನಿಗಳು ವೈರಲ್ ಮಾಡುವ ಮೂಲಕ ಕಂಬನಿ ಮಿಡಿದಿದ್ದಾರೆ.