ಶಿವರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ಎ ಫಾರ್‌ ಆನಂದ್‌’ ಸಿನಿಮಾ ಈಗಾಗಲೇ ಕುತೂಹಲ ಮೂಡಿಸಿದೆ. ‘ಘೋಸ್ಟ್‌’ ಬಳಿಕ ನಿರ್ದೇಶಕ ಶ್ರೀನಿ ಮತ್ತು ಶಿವಣ್ಣ ಮತ್ತೊಮ್ಮೆ ಒಂದಾಗುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ಎ ಫಾರ್‌ ಆನಂದ್‌’ ಸಿನಿಮಾ ಈಗಾಗಲೇ ಕುತೂಹಲ ಮೂಡಿಸಿದೆ. ‘ಘೋಸ್ಟ್‌’ ಬಳಿಕ ನಿರ್ದೇಶಕ ಶ್ರೀನಿ ಮತ್ತು ಶಿವಣ್ಣ ಮತ್ತೊಮ್ಮೆ ಒಂದಾಗುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದರ ನಡುವೆ ಸಿನಿಮಾಗೆ ಬಾಲಿವುಡ್‌ನ ಖ್ಯಾತ ನಟಿ ಮಾಧುರಿ ದೀಕ್ಷಿತ್‌ ಎಂಟ್ರಿಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.

ಮೂಲಗಳ ಪ್ರಕಾರ, ನಿರ್ದೇಶಕ ಶ್ರೀನಿ ಅವರು ಸಿನಿಮಾದ ಪ್ರಮುಖ ಪಾತ್ರವೊಂದಕ್ಕಾಗಿ ಮಾಧುರಿ ದೀಕ್ಷಿತ್‌ ಅವರನ್ನು ಸಂಪರ್ಕಿಸಿದ್ದು, ಈ ಕುರಿತು ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಸದ್ಯ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದರೆ ಮಾತುಕತೆ ಫಲ ನೀಡಿದರೆ, ಇದೇ ಮೊದಲ ಬಾರಿಗೆ ಮಾಧುರಿ ದೀಕ್ಷಿತ್‌ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶಿವಣ್ಣ ಜೊತೆ ಮೊದಲ ಬಾರಿಗೆ ಮಾಧುರಿ ದೀಕ್ಷಿತ್‌!

‘ಎ ಫಾರ್‌ ಆನಂದ್‌’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಮತ್ತು ಮಾಧುರಿ ದೀಕ್ಷಿತ್‌ ಒಟ್ಟಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕರೆ, ಇದು ಸಿನಿಪ್ರೇಕ್ಷಕರಿಗೆ ವಿಶೇಷ ಕಾಂಬಿನೇಷನ್‌ ಆಗಲಿದೆ. ದಶಕಗಳಿಂದ ಬಾಲಿವುಡ್‌ನಲ್ಲಿ ತಮ್ಮದೇ ಆದ ಜನಪ್ರಿಯತೆ ಉಳಿಸಿಕೊಂಡಿರುವ ಮಾಧುರಿ ದೀಕ್ಷಿತ್‌, ದಕ್ಷಿಣ ಭಾರತದ ಹಲವು ನಿರ್ದೇಶಕರಿಂದ ಸಿನಿಮಾಗಳ ಆಫರ್‌ಗಳನ್ನು ಪಡೆದಿದ್ದಾರೆ. ಆದರೆ ಇದುವರೆಗೆ ದಕ್ಷಿಣ ಭಾರತದಲ್ಲಿ ಅವರ ಯಾವುದೇ ಸಿನಿಮಾ ಪ್ರಮುಖ ಪಾತ್ರದಲ್ಲಿ ತೆರೆಗೆ ಬಂದಿಲ್ಲ. ಹೀಗಾಗಿ ಶ್ರೀನಿ ಅವರ ಪ್ರಯತ್ನ ಯಶಸ್ವಿಯಾದರೆ, ಮಾಧುರಿ ದೀಕ್ಷಿತ್‌ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ಮತ್ತೊಂದು ವಿಶೇಷ ದಾಖಲೆಯಾಗಲಿದೆ.

‘ಎ ಫಾರ್‌ ಆನಂದ್‌’ ಟೈಟಲ್‌ಗಿದೆ ಶಿವಣ್ಣನ ಜೊತೆ ಭಾವನಾತ್ಮಕ ನಂಟು

ಈ ಸಿನಿಮಾದ ಶೀರ್ಷಿಕೆ ಕೂಡ ಶಿವರಾಜ್‌ಕುಮಾರ್‌ ಅಭಿಮಾನಿಗಳಿಗೆ ವಿಶೇಷ. ‘ಆನಂದ್‌’ ಎಂಬುದು ಶಿವಣ್ಣ ಅವರ ಸಿನಿಪಯಣದ ಆರಂಭದ ಸಿನಿಮಾದ ಹೆಸರು. ಇದೀಗ ಅದೇ ಹೆಸರನ್ನು ಮತ್ತೆ ಬಳಸಿಕೊಂಡು ಹೊಸ ಕಥೆಯೊಂದಿಗೆ ಶ್ರೀನಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಅಂದಹಾಗೆ, ‘ಘೋಸ್ಟ್‌’ ಸಿನಿಮಾದ ಯಶಸ್ಸಿನ ಬಳಿಕ ಶ್ರೀನಿ ಮತ್ತು ಶಿವರಾಜ್‌ಕುಮಾರ್‌ ಮತ್ತೆ ಒಂದಾಗಿರುವುದರಿಂದ ಈ ಚಿತ್ರಕ್ಕೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.

ಗುರು-ಶಿಷ್ಯರ ಸಂಬಂಧದ ಸುತ್ತ ಕಥೆ!

ಈ ಹಿಂದೆ ಸಿನಿಮಾದ ಬಗ್ಗೆ ಮಾತನಾಡಿದ್ದ ನಿರ್ದೇಶಕ ಶ್ರೀನಿ, ‘ಎ ಫಾರ್‌ ಆನಂದ್‌’ ಗುರು-ಶಿಷ್ಯರ ನಡುವಿನ ಬಾಂಧವ್ಯವನ್ನು ಸಂಭ್ರಮಿಸುವ ಕಥೆ ಎಂದು ಹೇಳಿಕೊಂಡಿದ್ದರು. ಶಿವರಾಜ್‌ಕುಮಾರ್‌ ಅವರಲ್ಲಿರುವ ಆತ್ಮೀಯತೆ ಮತ್ತು ಸಹಜವಾದ ಸ್ಕ್ರೀನ್‌ ಪ್ರೆಸೆನ್ಸ್‌ ಈ ಪಾತ್ರಕ್ಕೆ ಸೂಕ್ತವಾಗಿರುವುದರಿಂದ ಅವರನ್ನು ಆನಂದ್‌ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಶ್ರೀನಿ ತಿಳಿಸಿದ್ದರು. ಚಿತ್ರದ ಉಳಿದ ತಾರಾಗಣದ ಬಗ್ಗೆ ಚಿತ್ರತಂಡ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ಮಾಧುರಿ ದೀಕ್ಷಿತ್‌ ಅವರ ಎಂಟ್ರಿ ಕುರಿತ ಸುದ್ದಿ ನಿಜವಾಗುತ್ತದೆಯೇ ಎಂಬ ಕುತೂಹಲವೂ ಹೆಚ್ಚಾಗಿದೆ.

ಶಿವಣ್ಣ ಬರ್ತ್‌ಡೇಗೆ ಸಿಕ್ಕಿತ್ತು ವಿಶೇಷ ಝಲಕ್‌ ಗೀತಾ ಶಿವರಾಜ್‌ಕುಮಾರ್‌ ನಿರ್ಮಾಣದ ಗೀತಾ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ‘ಎ ಫಾರ್‌ ಆನಂದ್‌’ ಸಿನಿಮಾ ನಿರ್ಮಾಣವಾಗುತ್ತಿದೆ. ಶಿವರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಕಳೆದ ತಿಂಗಳು ಸಿನಿಮಾದ ಪ್ರಮೋಷನಲ್‌ ಝಲಕ್‌ವೊಂದನ್ನು ಚಿತ್ರತಂಡ ಅನಾವರಣಗೊಳಿಸಿತ್ತು. ಸದ್ಯ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲು ಸಿದ್ಧತೆ ನಡೆಯುತ್ತಿದೆ. ಇದರ ನಡುವೆ ಮಾಧುರಿ ದೀಕ್ಷಿತ್‌ ಅವರ ಹೆಸರು ಕೇಳಿಬಂದಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮಾಧುರಿ ದೀಕ್ಷಿತ್‌ ನಿಜವಾಗಿಯೂ ‘ಎ ಫಾರ್‌ ಆನಂದ್‌’ ಮೂಲಕ ಕನ್ನಡಕ್ಕೆ ಬರುತ್ತಾರಾ? ಶಿವಣ್ಣ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಾರಾ? ಈ ಪ್ರಶ್ನೆಗಳಿಗೆ ಅಧಿಕೃತ ಘೋಷಣೆ ಬರುವವರೆಗೂ ಕಾಯಬೇಕಿದೆ.