ಗೋಲ್ಮನ್ ಸ್ಟಾರ್ ಗಣೇಶ್ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಒಂದು ಬಹಿರಂಗ ಪತ್ರವನ್ನು ಗಣೇಶ್ ಬರೆದಿದ್ದಾರೆ. ಆ ಮೂಲಕ ಅಕ್ಕರೆಯ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.
ನಟ ಗೋಲ್ಮನ್ ಸ್ಟಾರ್ ಗಣೇಶ್ (Golden Star Ganesh) ರಾಜ್ಯಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಬಣ್ಣದ ಲೋಕಕ್ಕೆ ಕಾಲಿಟ್ಟು ಹಲವು ವರ್ಷಗಳೇ ಕಳೆದಿದೆ. ಪ್ರತಿ ವರ್ಷ ಅವರ ಹುಟ್ಟುಹಬ್ಬವನ್ನು ಜುಲೈ 2 ರಂದು ಜನರು ಅಭಿಮಾನದಿಂದ ಆಚರಿಸುತ್ತಾರೆ. ಆದ್ರೆ, ಈ ಬಾರಿಯ ಜನ್ಮದಿನದ ಬಗ್ಗೆ ಗಣೇಶ್ ತಮ್ಮ ಅಭಿಮಾನಿಗಳಿಗೆ ಒಂದು ಭಾವನಾತ್ಮಕ ಪತ್ರ ಸಂದೇಶ ಕೊಟ್ಟಿದ್ದಾರೆ.
ಹೌದು....ಜುಲೈ 2ರಂದು 'ಗೋಲ್ಡನ್ ಸ್ಟಾರ್' ಗಣೇಶ್ ಅವರ ಹುಟ್ಟು ಹಬ್ಬ. ಕೋವಿಡ್ ಮತ್ತಿತರ ಕಾರಣಗಳಿಂದಾಗಿ ಕಳೆದ ಎರಡು ವರ್ಷಗಳಿಂದ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಹೀಗಾಗಿ ಈ ಬಾರಿಯೂ ಅಂದು ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ತಮ್ಮ ಫ್ಯಾನ್ಸ್ಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಭಟ್ರು-ಗಣಿ ಕಾಂಬಿನೇಷನ್ನ ಬಹುನಿರೀಕ್ಷಿತ 'ಗಾಳಿಪಟ 2' ಸಿನಿಮಾ ಆಗಸ್ಟ್ನಲ್ಲಿ ಬಿಡುಗಡೆ!
ಗಣೇಶ್ ಅಭಿಮಾನಿಗಳಿಗೊಂದು ಪತ್ರ
ಅಕ್ಕರೆಯ ಅಭಿಮಾನಿ ಬಂಧುಗಳಿಗೆ. ಎಲ್ಲರೂ ಆರೋಗ್ಯವಾಗಿದ್ದೀರಿ ಎಂದು ಭಾವಿಸುತ್ತೇನೆ. ನನ್ನ ಕಲಾ ಬದುಕಿನ ಆರಂಭದ ದಿನಗಳಿಂದ ಶುರುವಾಗಿ ಇಲ್ಲಿಯ ತನಕ ನನ್ನ ಈ ಬಣ್ಣದ ಹಾದಿಯ ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಹೆಜ್ಜೆ ಹಾಕಿ, ನನ್ನ ಯಶಸ್ಸನ್ನು ನಿಮ್ಮದೇ ಯಶಸ್ಸು ಎನ್ನುವಂತೆ ಸಂಭ್ರಮಿಸಿ ನೀವೆಲ್ಲರೂ ಖುಷಿಪಟ್ಟಿದ್ದೀರಿ, ಪುತೀ ವರ್ಷವೂ ನನ್ನ ಹುಟ್ಟಿದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ನನ್ನ ಮನೆಯ ಬಳಿ ಬಂದು ಅತೀವ ಅಭಿಮಾನದಿಂದ ನನ್ನನ್ನು ಆಲಂಗಿಸಿ ಹರಸಿದ್ದೀರಿ, ನನ್ನೆಡೆಗಿನ ನಿಮ್ಮ ಈ ನಿಷ್ಕಲ್ಮಶ ಪ್ರೀತಿಭರಿತ ಅಭಿಮಾನಕ್ಕೆ ನಾನು ಸದಾ ಋಣಿ’ . ನನ್ನ ಹುಟ್ಟುಹಬ್ಬದ ನೆಪದಲ್ಲಾದರೂ ನಾನು ನಿಮ್ಮನ್ನೆಲ್ಲಾ ವೈಯಕ್ತಿಕವಾಗಿ ಭೇಟಿ ಮಾಡಿ, ನಿಮ್ಮೆಲ್ಲರ ಪ್ರೀತಿಯನ್ನು ಆಸ್ವಾದಿಸುತ್ತಾ ನಿಮ್ಮೊಡನೆಯೇ ಸಂಭ್ರಮಿಸಿ, ನಿಮ್ಮ ಅಭಿಮಾನದ ಸವಿಯನ್ನು ಇಡೀ ದಿನ ಖುಷಿಯಿಂದ ಸವಿಯುವ ಹಂಬಲ ನನಗೂ ಇದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಸಹ ಸಮಯ ಅದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ.
ಕೆಲ ಅನಿವಾರ್ಯ ಕಾರಣಗಳಿಂದಾಗಿ ನಾನು ನನ್ನ ಹುಟ್ಟಿದ ದಿನದಂದು ಅಂದರೆ ಜುಲೈ 2ರಂದು ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ ಎಂದಿರುವ ಗಣೇಶ್, ನೀವೆಲ್ಲರೂ ಅಭಿಮಾನದಿಂದ ಪ್ರತಿ ಬಾರಿ ನನಗಾಗಿ ತರುವ ಹಾರ, ತುರಾಯಿ, ಕೇಕ್ ಇತ್ಯಾದಿಗಳ ಬದಲಿಗೆ ಅಗತ್ಯವಿರುವ ಕಡೆ ನಿಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ನಿಮ್ಮೆಲ್ಲರ ಅಕ್ಕರೆಯ ಹಾರೈಕೆಗಳನ್ನು ನನಗೆ ತಲುಪಿಸಿಬಿಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
