Darshan ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಮೀನು ಅರ್ಜಿಗೆ ವಿಧಿಸಿದ್ದ ಒಂದು ವರ್ಷದ ಗಡುವು ಕಡಿಮೆ ಮಾಡುವಂತೆ ಮನವಿ ಸಲ್ಲಿಸಿದ್ದು, ಇದೇ ವೇಳೆ ಹಿರಿಯ ವಕೀಲ ಹಶ್ಮತ್ ಪಾಷಾ ದರ್ಶನ್ ಪರ ವಕಾಲತ್ತು ವಹಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತು ಜೈಲಿನಲ್ಲಿರುವ ದರ್ಶನ್ ಕಾನೂನು ಕುಣಿಕೆಯಿಂದ ಪಾರಾಗೋದಕ್ಕೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಸೆಷೆನ್ಸ್ ಕೋರ್ಟ್ನಲ್ಲಿ ತನ್ನ ಪರ ವಾದಿಸೋ ವಕೀಲರ ಬದಲಾವಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಬೇಲ್ಗಾಗಿ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ದಾಸನ ಕಾನೂನು ಹೋರಾಟದ ಅಪ್ಡೇಟ್ ಇಲ್ಲಿದೆ ನೋಡಿ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಪಾಲಾಗಿರುವ ದರ್ಶನ್ ಆ್ಯಂಡ್ ಗ್ಯಾಂಗ್ಗೆ ಕಾನೂನು ಹೋರಾಟ ದಿನದಿಂದ ದಿನಕ್ಕೆ ಜಟಿಲವಾಗ್ತಿದೆ.
ಇದೀಗ ನಟ ದರ್ಶನ್ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಮಾರ್ಪಾಡು ಕೋರಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಮೇ 15ರಂದು ಸುಪ್ರೀಂ ಕೋರ್ಟ್, ದರ್ಶನ್ಗೆ ಒಂದು ವರ್ಷದ ಬಳಿಕ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಆದರೆ, ಈ ಒಂದು ವರ್ಷದ ಗಡುವು ತೀರಾ ಹೆಚ್ಚಾಯಿತು, ಇದನ್ನ ಕಡಿಮೆ ಮಾಡಬೇಕು ಅಂತ ದರ್ಶನ್ ತಮ್ಮ ಹೊಸ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಒಂದು ವರ್ಷದಲ್ಲಿ 60 ಸಾಕ್ಷಿಗಳ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಟ್ರಯಲ್ ಕೋರ್ಟ್ಗೆ ಸೂಚನೆ ನೀಡಿತ್ತು.
ಆದರೆ ದರ್ಶನ್ ಸಲ್ಲಿಸಿರುವ ನೂತನ ಅರ್ಜಿಯಲ್ಲಿ, ಈ ಸಾಕ್ಷಿಗಳ ಸಂಖ್ಯೆಯನ್ನ ಕೂಡ ಕಡಿಮೆ ಮಾಡುವಂತೆ ಕೋರಿದ್ದಾರೆ. ಸದ್ಯ ದರ್ಶನ್ ಸಲ್ಲಿಸಿರುವ ಈ ಅರ್ಜಿ ವಿಚಾರಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಅತ್ತ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದರೆ, ಇತ್ತ 59ನೇ ಸೆಷನ್ಸ್ ಕೋರ್ಟ್ನಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ. ಈ ಪ್ರಕರಣದಲ್ಲಿ ದರ್ಶನ್ ಪರ ವಕೀಲರಾಗಿದ್ದ ಸುನಿಲ್ ಕುಮಾರ್ ಅವರು ಅಧಿಕೃತವಾಗಿ ಹಿಂದೆ ಸರಿದಿದ್ದಾರೆ.
ಈ ಹಿಂದೆ ಕೋರ್ಟ್ ಮುಂದೆಯೇ ಪ್ರಕರಣದಿಂದ ಹಿಂದೆ ಸರಿಯುವ ಇಂಗಿತ ವ್ಯಕ್ತಪಡಿಸಿದ್ದ ಸುನಿಲ್ ಕುಮಾರ್, ಈಗ ಟ್ರಯಲ್ನಿಂದಲೂ ನಿವೃತ್ತಿ ಹೊಂದುತ್ತಿರುವುದಾಗಿ ಸೆಷನ್ಸ್ ಕೋರ್ಟ್ಗೆ ಮೆಮೋ ಸಲ್ಲಿಕೆ ಮಾಡಿದ್ದಾರೆ. ಇನ್ನು ಸುನಿಲ್ ಕುಮಾರ್ ಹಿಂದೆ ಸರಿಯುತ್ತಿದ್ದಂತೆ, ದರ್ಶನ್ ಪರವಾಗಿ ವಕಾಲತ್ತು ವಹಿಸಲು ಕಣಕ್ಕಿಳಿದಿರುವುದು ಹಿರಿಯ ವಕೀಲ ಹಶ್ಮತ್ ಪಾಷಾ! ಹಶ್ಮತ್ ಪಾಷಾ ಅವರು ನಿಮ್ಮ ಪರವಾಗಿ ವಕಾಲತ್ ಹಾಕಿದ್ದಾರೆ ಅಂತ ಕೋರ್ಟ್ ದರ್ಶನ್ ಗಮನಕ್ಕೆ ತಂದಾಗ, ದರ್ಶನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿಕ್ರಯಿಸಿ, " ನಾನು ಕುಟುಂಬಸ್ಥರ ಬಳಿ ಮಾತನಾಡಿ ಹೇಳ್ತೀನಿ" ಅಂದಿದ್ದಾರೆ.
ತರಹೇವಾರಿ ಕಸರತ್ತು
ಇನ್ನು ಹಳೆಯ ವಕೀಲರ ಬಳಿ ಇರುವ ಕೇಸ್ನ ಎಲ್ಲಾ ದಾಖಲೆಗಳನ್ನ ನೂತನ ವಕೀಲರಿಗೆ ಹಸ್ತಾಂತರಿಸುವಂತೆ ಕೋರ್ಟ್ ಸೂಚಿಸಿದಾಗ, ಈಗಾಗಲೇ ಆ ದಾಖಲೆಗಳನ್ನ ದರ್ಶನ್ ಕುಟುಂಬಸ್ಥರಿಗೆ ನೀಡಿರುವುದಾಗಿ ಜೂನಿಯರ್ ವಕೀಲರು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ, ಜೈಲಿನಿಂದ ಹೊರಬರಲು ದರ್ಶನ್ ಆ್ಯಂಡ್ ಟೀಮ್ ತರಹೇವಾರಿ ಕಸರತ್ತು ನಡೆಸ್ತಾ ಇದೆ. ಹಿರಿಯ ವಕೀಲ ಹಶ್ಮತ್ ಪಾಷಾ ಎಂಟ್ರಿ ಮತ್ತು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿರುವ ಪರಿಷ್ಕೃತ ಅರ್ಜಿ ದರ್ಶನ್ ಪಾಲಿಗೆ ಶ್ರೀರಕ್ಷೆಯಾಗುತ್ತಾ ಅಥವಾ ಕಾನೂನಿನ ಹಾದಿ ಮತ್ತಷ್ಟು ಕಠಿಣವಾಗುತ್ತಾ ಅನ್ನೋದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ.


