ನಟಿ ರಮ್ಯಾ ಸಿನಿಮಾದಲ್ಲಿನ ಅನ್ಯಾಯ ಬಗ್ಗೆ ಮಾತನಾಡುತ್ತಲೇ ತಮ್ಮ ಮದುವೆ ಮತ್ತು ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ನಟಿ ರಮ್ಯಾ ಅವರು ಸದ್ಯ ನಟ ಕಮಲ ಹಾಸನ್ ಪರವಾಗಿ ಬ್ಯಾಟಿಂಗ್ ಬೀಸಿ ಸುದ್ದಿಯಲ್ಲಿದ್ದಾರೆ. ತಮಿಳಿನಿಂದ ಕನ್ನಡ ಹುಟ್ಟಿತು ಎಂದು ನಟ ಕಮಲ್ ಹಾಸನ್ ಅವರು ನೀಡಿರುವ ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಅವರ ಪರವಾಗಿ ಮಾತನಾಡಿರೋ ರಮ್ಯಾ, ಕಮಲ್ ಹಾಸನ್ ಅವರು ಅನುಚಿತವಾಗಿ ಮಾತನಾಡಿರೋದು ನಿಜವೇ. ಆದರೆ, ಚಿತ್ರವನ್ನ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅನಿಸುವುದಿಲ್ಲವೇ? ಹಿಂದಿ ಹೇರಿಕೆಯ ವಿರುದ್ಧ ನಾವು ಒಂದಾಗಬೇಕು. ಅದಕ್ಕಾಗಿ ನಾವು ಮೊದಲು ಪರಸ್ಪರ ಗೌರವಿಸುವುದನ್ನು ಕಲಿಯಬೇಕು ಎಂದು ತಿಳಿಸುವ ಮೂಲಕ ಒಂದಷ್ಟು ಮಂದಿಯ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅವರು, ದ್ರಾವಿಡ ಭಾಷೆಗಳ ಚಾರ್ಟ್ ಅನ್ನೂ ಪೋಸ್ಟ್ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಎಲ್ಲವೂ ದ್ರಾವಿಡ ಭಾಷೆಗಳ ಒಂದೇ ಕೊಂಡಿಯಡಿಯಲ್ಲಿ ಬರುತ್ತವೆ. ಆದರೆ, ನಮ್ಮಲ್ಲಿನ ಕೆಲವು ಸಾಮಾನ್ಯತೆ ಮತ್ತು ಹಂಚಿಕೆಯಾಗಿರುವ ಭಾಷಾ ವಂಶಾವಳಿ ಬೇರೆ ಇರಬಹುದು. ಅವರೆಡೂ ಶ್ರೇಷ್ಠವಲ್ಲ. ಸಂಸ್ಕೃತ ಎಲ್ಲಾ ಭಾಷೆಗಳ ತಾಯಿ ಎಂದು ಭಾವಿಸುವವರಿಗೆ ನೀವು ಕೂಡ ತಪ್ಪಾಗಿ ಕಾಣಿಸುತ್ತಿದ್ದೀರಿ. ಏಕೆಂದರೆ ಸಂಸ್ಕೃತ ಇಂಡೋ – ಆರ್ಯನ್ ಭಾಷೆ. ನಾವು ದ್ರಾವೀಡರು, ಎರಡೂ ಪರಸ್ಪರ ಭಿನ್ನ ಎಂದು ಹೇಳಿದ್ದಾರೆ.
ರಮ್ಯಾ ಅವರ ಈ ಹೇಳಿಕೆ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ, ನಟಿ, ಶುಭ್ರ ಅಯ್ಯಪ್ಪ ಅವರ ಇನ್ಸ್ಟಾಗ್ರಾಮ್ಗೆ ನೀಡಿರುವ ಸಂದರ್ಶನದಲ್ಲಿ, ಮದುವೆ, ಮಕ್ಕಳು, ಚಿತ್ರರಂಗದಲ್ಲಿನ ಅಸಮಾಧಾನದ ಕುರಿತು ಮಾತನಾಡಿದ್ದಾರೆ. ಅದರ ವಿಡಿಯೋ ಇದೀಗ ವೈರಲ್ ಆಗಿದೆ. ಬಾಲ್ಯದ ತುಂಬಾ ನೋವಿನ ಸಂಗತಿಯ ಬಗ್ಗೆ ಕೇಳಿದಾಗ ನಟಿ ರಮ್ಯಾ, ನನ್ನ ಬಾಲ್ಯ ಬೇರೆಯವರಿಗಿಂತ ಭಿನ್ನವಾಗಿತ್ತು. ನಾನು ನಾಲ್ಕನೇ ವಯಸ್ಸಿನಲ್ಲಿ ಇರುವಾಗಲೇ ನಾನೊಬ್ಬಳೇ ಬಾಲಕಿ ತಂದೆಯಿಲ್ಲದೇ ಇದ್ದವಳು. ನನಗೆ ಸರ್ನೇಮ್ ಕೂಡ ಇರಲಿಲ್ಲ. ನನ್ನ ಹೆಸರು ದಿವ್ಯಾ ಸ್ಪಂದನ ಎಂದು ಇಟ್ಟಿದ್ದರು. ಇದೇ ಕಾರಣಕ್ಕೆ ನಾನು ಸ್ಪಂದನ ಅನ್ನೇ ಫ್ಯಾಮಿಲಿ ಹೆಸರು, ಸರ್ನೇಮ್ ಎಂದು ಹೇಳುತ್ತಿದ್ದೆ ಎಂದು ಬೇಸರದಿಂದ ನುಡಿದಿದ್ದಾರೆ.
ಇದೇ ವೇಳೆ, ಸಿನಿಮಾದ ವಿಷಯದಲ್ಲಿ ಅಸಮಾಧಾನ ಹೊರಹಾಕಿರುವ ನಟಿ, ನಾಯಕಿ ಪ್ರಧಾನ ಚಿತ್ರಗಳು ಕಡಿಮೆಯಾಗಿವೆ. ಮಹಿಳೆಯರು ಎಂದರೆ ವೀಕ್ ಎಂದು ತೋರಿಸುವುದೇ ಹೆಚ್ಚಾಗುತ್ತಿದೆ. ಸ್ತ್ರೀ ಪ್ರಧಾನ ಅಥವಾ ಅವರ ರೋಲ್ ಮುಖ್ಯವಾಗಿರುವ ಸ್ಟೋರಿಗಳನ್ನು ಬರೆಯುತ್ತಿಲ್ಲ. ಹೆಣ್ಣುಮಕ್ಕಳು ಸ್ಟ್ರಾಂಗ್ ಎನ್ನುವುದನ್ನು ತೋರಿಸುತ್ತಿಲ್ಲ. ಬರೀ ಅವರು ವೀಕ್ ಎನ್ನುವುದನ್ನೇ ಹೈಲೈಟ್ ಮಾಡುತ್ತಾರೆ. ಇದು ನನಗೆ ತುಂಬಾ ಕಿರಿಕಿರಿ ಎನ್ನಿಸುತ್ತದೆ ಎಂದಿದ್ದಾರೆ. ಇದೇ ವೇಳೆ, ಗಾಸಿಪ್ಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನಟಿ ರಮ್ಯಾ, ನನಗೆ ಗೊತ್ತಿಲ್ಲದೇ ಅದೆಷ್ಟು ಮದ್ವೆಯಾಗಿದ್ಯೋ, ಮಕ್ಕಳಾಗಿವ್ಯೋ ಗೊತ್ತಿಲ್ಲ. ವಿದೇಶಗಳಲ್ಲಿಯೂ ಮಕ್ಕಳು ಇದ್ದಾರೆ ಎನ್ನುತ್ತಲೇ ಇಂಥ ಗಾಳಿಸುದ್ದಿಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಹೆಣ್ಣುಮಕ್ಕಳಿಗೆ ಒಂದು ವಯಸ್ಸು ದಾಟಿದ ಮೇಲೆ ಸಮಾಜ ಅವರನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಒಹ್ ಇವಳಿಗೆ ಮದುವೆಯಾಗಿರಬೇಕು, ಮಕ್ಕಳು ಆಗಿರಬೇಕು ಎಂದು ತಾವೇ ಕಲ್ಪನೆ ಮಾಡಿಕೊಂಡು ನನಗೆ ಎಷ್ಟೋ ಮದುವೆ ಮಾಡಿಸಿದ್ದಾರೆ, ಮಕ್ಕಳನ್ನೂ ಮಾಡಿಸಿಬಿಟ್ಟಿದ್ದಾರೆ ಎಂದು ನೋವಿನಿಂದ ನುಡಿದಿದ್ದಾರೆ ನಟಿ.
ಇತ್ತೀಚಿಗೆ ನಟಿ, ಕಾಶ್ಮೀರದ ಈಗಿನ ಸ್ಥಿತಿ ಹೇಗಿದೆ ಎಂದು ತಿಳಿಯುವ ಉದ್ದೇಶದಿಂದ ನಟಿ ರಮ್ಯಾ ಲೇಹ್ಗೆ ಭೇಟಿ ನೀಡಿದ್ದರು. ಲೇಹ್ ಪ್ರವಾಸದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಲೇಹ್ನ ಸುಂದರ ಪ್ರದೇಶಗಳಿಗೆ ನಟಿ ರಮ್ಯಾ ಭೇಟಿ ಕೊಟ್ಟಿದ್ದು, ಎಲ್ಲವೂ ಮೊದಲಿನಂತಾಗಿದೆ ಎಂದು ರಮ್ಯಾ ಪೋಸ್ಟ್ ಮಾಡಿದ್ದರು. 2005ರಲ್ಲಿ ತೆರೆಗೆ ಬಂದ ‘ಅಮೃತಧಾರೆ’ ಶೂಟಿಂಗ್ ಸಲುವಾಗಿ ಅಂದು ರಮ್ಯಾ ಲೇಹ್ಗೆ ಹೋಗಿದ್ದರು. ಆ ಬಳಿಕ 20 ವರ್ಷಗಳ ಬಳಿಕ ಲೇಹ್ಗೆ ಭೇಟಿ ಕೊಟ್ಟು ಅದರ ಬಗ್ಗೆ ವಿವರಣೆ ನೀಡಿದ್ದರು. ಲಡಾಖ್ ಟಿಬೇಟಿಯನ್ ಹಾಗೂ ಕಾಶ್ಮೀರಿ ಖಾದ್ಯಗಳನ್ನು ರಮ್ಯಾ ಸವಿದು, ಅಲ್ಲಿನ ಸುಂದರ ಪರ್ವತಗಳ ಫೋಟೋ ಶೇರ್ ಮಾಡಿದ್ದರು.
