ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ಮನೆಯ ಬೆಡ್‌ರೂಮ್‌ನಲ್ಲಿ ಅವರ ಆಪ್ತ ಗೆಳೆಯ ವೈಶಾಕ್ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಏಳು ತಿಂಗಳ ಹಿಂದಿನ ವಿವಾದವೊಂದಕ್ಕೆ ಸಂಬಂಧಿಸಿದ ಈ ಘಟನೆಯು, ತೀವ್ರ ಮಾನಸಿಕ ಖಿನ್ನತೆಯಿಂದ ನಡೆದಿದೆ ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಚಿತ್ರರಂಗ ಹಾಗೂ ವಿವಾದಗಳಿಗೆ ಹಳೇ ನಂಟು. ಆದರೆ ನಟಿಯೊಬ್ಬರ ವೈಯಕ್ತಿಕ ಜೀವನದಲ್ಲಿ ಕಳೆದ ಏಳು ತಿಂಗಳಿಂದ ನಡೆಯುತ್ತಿರುವ ಘಟನೆಗಳು ಮಾತ್ರ ಸಿನಿಮೀಯ ಕಥೆಯನ್ನೂ ಮೀರಿಸುವಂತಿವೆ. ಹೌದು, ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ಮನೆಯ ಬೆಡ್‌ರೂಮ್‌ನಲ್ಲಿ ಅವರ ಆಪ್ತ ಗೆಳೆಯ ವೈಶಾಕ್ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಿನ್ನೆ ಬೆಳಕಿಗೆ ಬಂದಿದೆ. ತೀವ್ರ ಮಾನಸಿಕ ಖಿನ್ನತೆಯಿಂದ (Depression) ವೈಶಾಕ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಸಾವಿಗೂ ಮುನ್ನ ನಟಿಗೆ ಮೆಸೇಜ್ ಕೂಡ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಳು ತಿಂಗಳ ಹಿಂದಿನ ಆ ಕಾಂಟ್ರವರ್ಸಿ ಏನು?

ಈ ಕಥೆಯ ಹಿನ್ನೆಲೆ ನೋಡುವುದಾದರೆ, ಸುಮಾರು 7 ತಿಂಗಳ ಹಿಂದೆ ನಟಿ ಕೃಷಿ ತಾಪಂಡ ಮತ್ತು ಉದ್ಯಮಿಯೊಬ್ಬರ ನಡುವಿನ ಕಿತ್ತಾಟ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಉದ್ಯಮಿ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಕೃಷಿ ದೂರು ನೀಡಿದ್ದರು. ಆಗ ಇಬ್ಬರ ವೈಯಕ್ತಿಕ ವಿಚಾರಗಳು ಸಾರ್ವಜನಿಕವಾಗಿ ಚರ್ಚೆಯಾಗಿದ್ದವು. ಆ ಸಮಯದಲ್ಲಿ ಉದ್ಯಮಿ ಕೂಡ ಮಾಧ್ಯಮಗಳ ಮುಂದೆ ಬಂದು ಕೃಷಿ ತಾಪಂಡ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಲ್ಲದೆ, ಆಕೆಗೆ ಮತ್ತೊಬ್ಬ ಗೆಳೆಯನಿದ್ದಾನೆ ಎಂದು ಬಹಿರಂಗಪಡಿಸಿದ್ದನು. ಆ ಉದ್ಯಮಿ ಉಲ್ಲೇಖಿಸಿದ್ದ ಆ ಮತ್ತೊಬ್ಬ ಗೆಳೆಯನೇ ಈ ವೈಶಾಕ್!

ಕ್ರಿಕೆಟ್ ಲೀಗ್‌ನಿಂದ ಶುರುವಾದ ಸ್ನೇಹ, ಜೈಲು ವಾಸ!

ಯಾವುದೋ ಒಂದು ಕ್ರಿಕೆಟ್ ಲೀಗ್‌ನ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ತಾಪಂಡ ಹಾಗೂ ಆ ಉದ್ಯಮಿಯ ಪರಿಚಯವಾಗಿತ್ತು. ಅದು ಮುಂದೆ ಪ್ರೀತಿ, ಲಿವ್-ಇನ್ ರಿಲೇಷನ್‌ಶಿಪ್ ಹಾಗೂ ಮದುವೆಯ ಆಲೋಚನೆಯವರೆಗೂ ಹೋಗಿತ್ತು. ಉದ್ಯಮಿ ನಟಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದ ಎನ್ನಲಾಗಿದೆ. ಆದರೆ, ಇಬ್ಬರ ಮಧ್ಯೆ ಬಿರುಕು ಮೂಡಲು ಕಾರಣವಾಗಿದ್ದೇ ವೈಶಾಕ್ ಎನ್ನಲಾಗಿದೆ. ಉದ್ಯಮಿಯನ್ನು ದೂರವಿಟ್ಟು ವೈಶಾಕ್ ಬೆನ್ನೇರಿದ ಕೃಷಿಗೆ ಉದ್ಯಮಿಯಿಂದ ಟಾರ್ಚರ್ ಶುರುವಾಗಿತ್ತು. ಈ ಜಗಳ ತಾರಕಕ್ಕೇರಿ ಉದ್ಯಮಿ ಕೂಡ ದೂರು ನೀಡಿದ್ದರಿಂದ ವೈಶಾಕ್ ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದಿದ್ದನು.

ಮನೆಯಲ್ಲಿ ಯಾರೂ ಇಲ್ಲದಾಗ ದುರಂತ ಅಂತ್ಯ

ಜೈಲಿನಿಂದ ಬಂದ ಬಳಿಕ ಎಲ್ಲವೂ ಶಾಂತವಾಗಿದೆ ಅಂದುಕೊಳ್ಳುವಷ್ಟರಲ್ಲಿ ಈ ದುರಂತ ಸಂಭವಿಸಿದೆ. ಕೃಷಿ ತಾಪಂಡ ಅವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ವೈಶಾಕ್ ಅವರ ಬೆಡ್‌ರೂಮ್‌ನಲ್ಲೇ ನೇಣಿಗೆ ಶರಣಾಗಿದ್ದಾನೆ. ಈಗಾಗಲೇ ಮದುವೆಯಾಗಿ ಹೆಂಡತಿ, ಮಗನಿದ್ದರೂ ವೈಶಾಕ್ ನಟಿಯ ಒಡನಾಟ ಬೆಳೆಸಿದ್ದರು ಎನ್ನಲಾಗಿದೆ. ಸದ್ಯಕ್ಕೆ ತೀವ್ರ ಖಿನ್ನತೆಯೇ ಈ ಸಾವಿಗೆ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಒಂದಲ್ಲ ಒಂದು ಆಘಾತ ಎದುರಿಸುತ್ತಿರುವ ನಟಿ ಕೃಷಿ ತಾಪಂಡ ಜೀವನ ಸದ್ಯ ತೀವ್ರ ಆತಂಕ ಹಾಗೂ ವಿಚಿತ್ರ ತಿರುವುಗಳ ಮಧ್ಯೆ ಸಿಲುಕಿಕೊಂಡಿದೆ.