ಕನ್ನಡದಲ್ಲಿ ವಲವಾರ ಎನ್ನುವ ಸಿನಿಮಾ ಬಂದಿದ್ದು, ಪ್ರೇಕ್ಷಕರು ಈ ಸಿನಿಮಾದತ್ತ ಮುಖ ಮಾಡಬೇಕಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ವೀರಕಪುತ್ರ ಶ್ರೀನಿವಾಸ್‌ ಅವರು ಫೇಸ್‌ಬುಕ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎಂಬ ಆರೋಪ ಯಾವಾಗಲೂ ಕೇಳಿ ಬರುತ್ತದೆ. ಆದರೆ ಒಳ್ಳೆಯ ಸಿನಿಮಾ ಬಂದರೂ ಕೂಡ ನೋಡದೆ, ಒಟಿಟಿಯಲ್ಲಿ ಬಂದ್ಮೇಲೆ ನೋಡೋಣ ಎಂದುಕೊಳ್ಳುವವರೂ ಇದ್ದಾರೆ. ಈಗ ವಲವಾರ ಎನ್ನುವ ಸಿನಿಮಾ ಬಂದಿದ್ದು, ವೀರಕಪುತ್ರ ಶ್ರೀನಿವಾಸ್‌ ಅವರು ಸಿನಿಮಾ ನೋಡಿ ಎಂದು ವಿಭಿನ್ನ ಸ್ಟೈಲ್‌ನಲ್ಲಿ ಹೇಳಿದ್ದಾರೆ.

ಸುತನ್‌ ಗೌಡ ಅವರ ಸಿನಿಮಾ ಇದಾಗಿದೆ. ಗೌರ ಎನ್ನುವ ಆಕಳು, ಅಪ್ಪ-ಮಕ್ಕಳ ನಡುವಿನ ಸುತ್ತವೇ ಸಿನಿಮಾ ಸಾಗುವುದು.

ವೀರಕಪುತ್ರ ಶ್ರೀನಿವಾಸ್‌ ಏನಂದ್ರು?

ಯಾವ ನಾಯಿಗೆ ಬೇಕೋ ನಿನ್ನ ಟಿಕೆಟ್...

ಈ ಸಿನಿಮಾವನ್ನು ಗೆಲ್ಲಿಸಿಕೊಳ್ಳದಿದ್ದ ಮೇಲೆ, ಉತ್ತಮ ಸಿನಿಮಾಗಳು ಬರುತ್ತಿಲ್ಲ ಎಂದು ಆರೋಪಿಸುವ ಹಕ್ಕು ನಮಗಿಲ್ಲ. ಇದು ಸಿನಿಮಾವಲ್ಲ; 70-90 ರ ನಡುವಿನಲ್ಲಿ ಹಳ್ಳಿಯಲ್ಲಿ ಹುಟ್ಟಿದ ಪ್ರತಿ ಬಡವನ ಕತೆ! ಇಲ್ಲಿ ನಿಮ್ಮ ಅಮ್ಮ ನಿಮಗೆ ಹೊಸ ರೂಪದಲ್ಲಿ ಸಿಗುತ್ತಾರೆ. ನೀವಾಕೆಯನ್ನು ಅಪ್ಪಿ ಅಳುವಿರಿ. ನಿಮ್ಮ ಬಾಲ್ಯ ನಿಮಗೆ ಟನ್‌ಗಟ್ಟಲೆ ವಾಪಸ್ ಸಿಗುತ್ತದೆ. ನೀವದನ್ನು ಅಪ್ಪಿ ನಗುವಿರಿ. ಆ ಊರು, ಆ ಕೆರೆ, ಆ ಹಸು, ಆ ಹೊಲ, ಆ ಕೋಳಿ, ಅದೊಂದು ಪೊದೆ... ಎಲ್ಲವೂ ನಮ್ಮದೇ! ಒಂದು ಫೀಲ್ ಗುಡ್ ಮೂವಿ.

ಇವತ್ತು ಸಂಜೆ 6.45ಕ್ಕೆ ವೇಗ ಸಿಟಿ ಮಾಲ್‌ನಲ್ಲಿ ಸಿನಿಮಾವನ್ನು ನಾನು ಮತ್ತೊಮ್ಮೆ ನಿಮ್ಮ ಜೊತೆ ನೋಡಬೇಕೆನಿಸಿದೆ. ಬರ್ತೀರಾ ಪ್ಲೀಸ್...? ಟಿಕೆಟ್ ನಾನೇ ಕೊಡಿಸುವೆ ಅಥವಾ ಸಂಪತ್ತಿಗೆ ಸವಾಲ್ ಸಿನಿಮಾದ ಡಾ.ರಾಜ್ ಅವರ ಸ್ಟೈಲಿನಲ್ಲಿ ಯಾವ ನಾಯಿಗೇ ಬೇಕೋ ನಿನ್ನ ಟಿಕೆಟ್! ಯಾವ ನಾಯಿಗೆ ಬೇಕೋ... ಅಂತ ಬೈದಾದರೂ ಬಂದು ನಿಮ್ಮದೇ ಹಣದಲ್ಲಿ ಸಿನಿಮಾ ನೋಡಿ. ಒಟ್ಟಿನಲ್ಲಿ ನೋಡಿ! ಏಕೆಂದರೆ ಇದು ಕನ್ನಡಕ್ಕಾಗಿ ಮಾತ್ರವಲ್ಲ; ನಮಗಾಗಿಯೂ ಹೌದು.

ಬರ್ತೀರಾ?

ನನ್ನ ಮಕ್ಕಳಿಗೆ ಈ ಸಿನಿಮಾ ಇಷ್ಟವಾಗಲಿಲ್ಲ.

ಈ ವಲವಾರ ಸಿನಿಮಾವನ್ನು ನಾನು ನನ್ನ ಮಕ್ಕಳ ಜೊತೆ ನೋಡ್ದೆ. ನಾನಿಲ್ಲಿ ಕಣ್ತುಂಬಿಕೊಂಡು ಕೂತಿದ್ರೆ, ನನ್ನ ಮಕ್ಕಳು ನಗ್ತಿದ್ರು. ಈ ಸಿನಿಮಾ ಅವರಿಗೆ ಕನೆಕ್ಟ್ ಆಗಲೇ ಇಲ್ಲ. ಕೊನೆಗೆ, ಅದ್ಯಾಕಪ್ಪ... ನೂರೈವತ್ತು ರೂಪಾಯಿಗೆ ಇಷ್ಟು ಪಡ್ತಾವ್ರೆ ಅಂತ ಕೇಳಿದ್ರು. ಆಗಲೇ ನಾನು ಈ ಸಿನಿಮಾದ ಮಹತ್ವವನ್ನು ಅರಿತಿದ್ದು. ನಮ್ಮ ಮಕ್ಕಳಿಗೆ ನಮ್ಮ ಕಷ್ಟಗಳೇ ಗೊತ್ತಿಲ್ಲ. ಅವರಿಗೆ ನಮ್ಮ ಬದುಕುಗಳ ಪರಿಚಯವಿಲ್ಲ. ಅವರಿಗೆ ಎಲ್ಲವೂ ಸಲೀಸಾಗಿ ಸಿಗ್ತಿರೋ ಕಾರಣ ನಮ್ಮ ಬಾಲ್ಯ, ಬವಣೆ, ಪ್ರೀತಿ, ನಂಬಿಕೆ, ಕಣ್ಣೀರು ದೊಡ್ಡದೆನಿಸುತ್ತಿಲ್ಲ! ಅವತ್ತು ರಾತ್ರಿ ಮಕ್ಕಳಿಗೆ ನಾವು ನಮ್ಮ ಬಾಲ್ಯವನ್ನು, ನಾವು ಐದು ಪೈಸೆಗೆ ಪಡ್ತಿದ್ದ ಕಷ್ಟವನ್ನು, ನಮ್ಮ ಅಮ್ಮ ಹರಕಲು ಸೀರೆ ಉಟ್ಟು ನಮ್ಮನ್ನು ಪೊರೆದ ಕತೆಯನ್ನು ಹೇಳಿದೆ. ಅಲ್ಲಿಂದಾಚೆಗೆ ಅವರು ನಗಲಿಲ್ಲ, ಮೌನವಾದರು! ನಮ್ಮ ಮಕ್ಕಳಿಗೆ ಎಲ್ಲವೂ ಸುಲಭಕ್ಕೆ ಸಿಗುತ್ತಿರುವಾಗ ಅವರ ಆದ್ಯತೆಗಳು ಬದಲಾಗಿವೆ. ಬೇರುಗಳು ಸಡಿಲಗೊಂಡಿವೆ. ಆ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ಈ ಸಿನಿಮಾ ಮಾಡಬಲ್ಲದು.

ಅದನ್ನೂ ಬಿಡಿ; ಇಲ್ಲಿಯ ಪ್ರತಿ ದೃಶ್ಯವೂ ಒಂದು ಕಾವ್ಯದ ರೀತಿ ಕಟ್ಟಿಕೊಡಲಾಗಿದೆ. ಇದನ್ನು ನೋಡುವುದು ಸಿನಿಮಾದವರಿಗೆ ಮಾಡುವ ಉಪಕಾರವಲ್ಲ.

ನಮ್ಮ ಸಮಯಕ್ಕೆ ನಾವು ಕೊಟ್ಟು ಕೊಳ್ಳುವ ಗೌರವ.

ನಮ್ಮ ಭಾವುಕತೆಗೆ ನಾವು ಮಾಡುವ ಹೂಡಿಕೆ.

ನಮ್ಮ ಬಾಲ್ಯಕ್ಕೆ ನಾವು ವಾಪಸ್ಸಾಗುವ ಅವಕಾಶ.

ನಮ್ಮ ಅಮ್ಮನನ್ನು ಮತ್ತೆ ಅಪ್ಪುವಂತೆ ಮಾಡುವ ಜಾದೂ!

ಇಂದು ಸಂಜೆ ಬನ್ನೇರುಘಟ್ಟ ರಸ್ತೆಯಲ್ಲಿರುವ ವೇಗ ಸಿಟಿಗೆ 6.45ಕ್ಕೆಲ್ಲಾ ಬಂದುಬಿಡಿ. ಸಿನಿಮಾ ಏಳಕ್ಕೆ ಸರಿಯಾಗಿ ಶುರುವಾಗುತ್ತದೆ.