27 ವರ್ಷಗಳಿಂದ ನಾಪತ್ತೆಯಾಗಿದ್ದ ಗಂಗರಾಜ್ ಯಾದವ್, ಮಹಾಕುಂಭಮೇಳದಲ್ಲಿ ಅಘೋರಿಯಾಗಿ ಪತ್ತೆಯಾಗಿದ್ದಾರೆ. ಪತ್ನಿ ಧನ್ವಾದೇವಿ, ಸಂಬಂಧಿಕರು ಅವರನ್ನು ಗುರುತಿಸಿದರೂ, ಅಘೋರಿ ತನ್ನ ಹಳೆಯ ಗುರುತನ್ನು ನಿರಾಕರಿಸಿದ್ದಾರೆ. ಡಿಎನ್ಎ ಪರೀಕ್ಷೆಗೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಮಹಾಕುಂಭ ಮೇಳ (Mahakumbh Mela) ದಲ್ಲಿ ಒಂದ್ಕಡೆ ಕಾಲ್ತುಳಿತಕ್ಕೆ 30 ಮಂದಿ ಬಲಿಯಾಗಿರುವ ನೋವಿದ್ರೆ ಇನ್ನೊಂದು ಕಡೆ ಅನೇಕ ಅಪರೂಪದ ಘಟನೆಗಳಿಗೆ ಕುಂಭ ಮೇಳ ಸಾಕ್ಷ್ಯವಾಗ್ತಿದೆ. ಕುಂಭ ಮೇಳ ಕೆಲವರನ್ನು ಪ್ರಸಿದ್ಧಿಗೊಳಿಸಿದೆ, ಮತ್ತೆ ಕೆಲವರಿಗೆ ಹಣ ತಂದುಕೊಟ್ಟಿದೆ. ಈಗ 27 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಕುಟುಂಬಕ್ಕೆ ಸಿಕ್ಕಿದ್ದಾನೆ. ಮಹಾ ಕುಂಭ ಮೇಳದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಪತ್ತೆ ಮಾಡಿದ್ದಾಳೆ. ಅಘೋರಿ (Aghori) ಯಾಗಿದ್ದ ಪತಿಯನ್ನು ಗುರುತಿಸಿದ್ದಾಳೆ.
ಜಾರ್ಖಂಡದ ಮಹಿಳೆಗೆ ಆಕೆಯ ಪತಿ ಸಿಕ್ಕಿದ್ದಾನೆ. 1998ರಲ್ಲಿ ಗಂಗರಾಜ್ ಯಾದವ್ ಎನ್ನುವ ವ್ಯಕ್ತಿ ಮನೆ ಬಿಟ್ಟಿದ್ದ. ತನ್ನ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಬಿಟ್ಟು ಹೋಗಿದ್ದ. ಈಗ ಗಂಗರಾಜ್ ಅಘೋರಿ ಬಾಬಾ ಆಗಿದ್ದಾರೆ. ಜನರು ಅವರನ್ನು ಬಾಬಾ ರಾಜಕುಮಾರ್ ಎಂದು ಕರೆಯುತ್ತಾರೆ. ಈಗ ಗಂಗರಾಜ್ ವಯಸ್ಸು 65 ವರ್ಷ. ಪಾಟ್ನಾಗೆ ಬಂದಿದ್ದ ಗಂಗರಾಜ್ ಮತ್ತೆ ಮನೆಗೆ ವಾಪಸ್ ಆಗಿರಲಿಲ್ಲ. ನಾಪತ್ತೆಯಾಗಿದ್ದ ಗಂಗರಾಜ್ ನನ್ನು ಕುಟುಂಬಸ್ಥರು ಹುಡುಕಿದ್ದರು. ಆದ್ರೆ ಗಂಗರಾಜ್ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಗಂಗರಾಜ್ ಪತ್ನಿ ಧನ್ವಾ ದೇವಿ ಒಂಟಿಯಾಗಿ ತನ್ನಿಬ್ಬರು ಮಕ್ಕಳಾದ ಕಮಲೇಶ್ ಮತ್ತು ವಿಮಲೇಶ್ ನನ್ನು ಬೆಳೆಸಿದ್ದಳು.
ಮಹಾಕುಂಭ ಮೇಳದ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾಯ್ತು; ಅವಘಡಕ್ಕೆ ಇದೇ ಕಾರಣ..?!
ಗಂಗರಾಜ್ ಸಿಕ್ಕಿದ್ದು ಹೇಗೆ? : ಮಹಾ ಕುಂಭ ಮೇಳಕ್ಕೆ ಹೋಗಿದ್ದ ಗಂಗರಾಜ್ ಸಂಬಂಧಿಕರು ಅಘೋರಿ ವೇಷದಲ್ಲಿದ್ದ ಗಂಗರಾಜ್ ಅವರನ್ನು ಗುರುತಿಸಿದ್ದಾರೆ. ಫೋಟೋ ಕ್ಲಿಕ್ಕಿಸಿ ಅದನ್ನು ಗಂಗರಾಜ್ ಸಹೋದರನಿಗೆ ಕಳುಹಿಸಿದ್ದಾರೆ. ಫೋಟೋ ನೋಡಿ ದಂಗಾದ ಸಹೋದರ ಮುರಳಿ ಯಾದವ್, ನಾವು ನಮ್ಮ ಸಹೋದರನ ಹುಡುಕಾಟದ ಆಸೆ ಬಿಟ್ಟಿದ್ವಿ, ಅವರು ಎಲ್ಲಿದ್ದಾರೆ ಎಂಬುದು ನಮಗೆ ಗೊತ್ತಿರಲಿಲ್ಲ. ಫೋಟೋ ನೋಡಿದ ತಕ್ಷಣ ಧನ್ವಾ ದೇವಿ ಹಾಗೂ ಇಬ್ಬರು ಮಕ್ಕಳ ಜೊತೆ ಮಹಾ ಕುಂಭ ಮೇಳಕ್ಕೆ ತೆರಳಿದ್ವಿ ಎಂದಿದ್ದಾರೆ.
ಕುಟುಂಬಸ್ಥರನ್ನು ನೋಡಿ ಅಘೋರಿ ನೀಡಿದ ಪ್ರತಿಕ್ರಿಯೆ ಏನು? : ಪತ್ನಿ, ಸಹೋದರ ಹಾಗೂ ಇಬ್ಬರು ಮಕ್ಕಳು ಮುಂದೆ ಬಂದ್ರೂ ಅಘೋರಿ ಅವರನ್ನು ಗುರುತಿಸಿಲ್ಲ. ತಮ್ಮ ಹಳೆಯ ಗುರುತನ್ನು ಅವರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಗಂಗರಾಜ್ ಎಂಬುದನ್ನು ಬಾಬಾ ರಾಜಕುಮಾರ್ ಒಪ್ಪಿಕೊಂಡಿಲ್ಲ. ನಾನು ವಾರಣಾಸಿಯ ಸಾಧು, ಗಂಗರಾಜ್ ಯಾರೆಂಬುದು ನನಗೆ ತಿಳಿದಿಲ್ಲ ಎಂದು ರಾಜಕುಮಾರ್ ಹೇಳಿದ್ದಾರೆ. ಅವರ ಜೊತೆಗಿದ್ದ ಸಾದ್ವಿ ಕೂಡ ಇದನ್ನು ಸಮರ್ಥಿಸಿಕೊಂಡಿದ್ದಾರೆ.
72 ಗಂಟೆಗಳಲ್ಲಿ ಅಯೋಧ್ಯೆ ತಲುಪಿದ 50 ಲಕ್ಷಕ್ಕೂ ಹೆಚ್ಚು ಭಕ್ತರು
ಮನೆಯವರ ವಾದ ಏನು? : ಆದ್ರೆ ಮನೆಯವರು ರಾಜಕುಮಾರೇ ಗಂಗರಾಜ್ ಎನ್ನುತ್ತಿದ್ದಾರೆ. ಅವರ ದೇಹದ ಮೇಲಿರುವ ಕೆಲವು ಗುರುತು, ಚಿಹ್ನೆಗಳ ಆಧಾರದ ಮೇಲೆ ಅವರನ್ನು ಗಂಗರಾಜ್ ಎನ್ನಲಾಗ್ತಿದೆ. ಕುಂಭ ಮೇಳ ಪೊಲೀಸರ ಸಹಾಯವನ್ನು ಕುಟುಂಬಸ್ಥರು ಕೇಳಿದ್ದಾರೆ. ಡಿಎನ್ ಎ ಪರೀಕ್ಷೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ರಾಜಕುಮಾರನ ಅಸಲಿ ಗುರುತು ಪತ್ತೆಗೆ ಕುಟುಂಬಸ್ಥರು ಬೇಡಿಕೆ ಇಟ್ಟಿದ್ದಾರೆ.
ಕುಂಭ ಮೇಳ ಮುಗಿಯುವವರೆಗೆ ನಾವು ಕಾಯ್ತೇವೆ. ಅಗತ್ಯವೆನ್ನಿಸಿದ್ರೆ ಡಿಎನ್ ಎ ಪರೀಕ್ಷೆ ಮಾಡಿಸ್ತೇವೆ. ಒಂದ್ವೇಳೆ ನಮ್ಮ ನಂಬಿಕೆ ಸುಳ್ಳಾಗಿದ್ದರೆ ನಾವು ಬಾಬಾ ರಾಜಕುಮಾರ್ ಮುಂದೆ ಕ್ಷಮೆ ಕೇಳ್ತೇವೆ ಎಂದು ಗಂಗರಾಜ್ ಸಹೋದರ ಮುರಳಿ ಯಾದವ್ ಹೇಳಿದ್ದಾರೆ. ಕುಂಭ ಮೇಳದಿಂದ ಕುಟುಂಬದ ಕೆಲವರು ಮನೆಗೆ ವಾಪಸ್ ಆದ್ರೆ ಮತ್ತೆ ಕೆಲವರು ಅಲ್ಲಿಯೇ ತಂಗಿದ್ದಾರೆ. ಬಾಬಾ ರಾಜಕುಮಾರ್ ಮೇಲೆ ಅವರು ಕಣ್ಣಿಟ್ಟಿದ್ದಾರೆ. ಗಂಗರಾಜ್ ಮನೆ ಬಿಡುವ ವೇಳೆ ಮನೆ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಪತ್ನಿ ಜೀವನ ನಡೆಸಲು ಸಾಕಷ್ಟು ಕಷ್ಟಪಟ್ಟಿದ್ದರು.
