ಸ್ತ್ರೀಪರ ಕಾನೂನುಗಳ ದುರುಪಯೋಗ, ಅತುಲ್ ಪ್ರಕರಣದಲ್ಲಿ #justiceforAtul ಅಭಿಯಾನ, ಪುರುಷರ ಮೇಲಿನ ದೌರ್ಜನ್ಯ ಪ್ರತಿಭಟನೆ ನಡುವೆಯೇ, ಒಂದು ತಿಂಗಳ ದಾಂಪತ್ಯಕ್ಕೆ 40 ಲಕ್ಷ ಪರಿಹಾರ ಬೇಡಿಕೆಯೊಡ್ಡಿದ ಮಹಿಳೆಯೊಬ್ಬಳ ಕೇಸ್​ನ ಕೋರ್ಟ್​ ಪ್ರಕ್ರಿಯೆ ವಿಡಿಯೋ ವೈರಲ್​ ಆಗುತ್ತಿದೆ. 

ಬಹುತೇಕ ಕಾನೂನು, ನಿಯಮಗಳು ಹೆಣ್ಣುಮಕ್ಕಳ ಪರವಾಗಿಯೇ ಇದೆ, ಹೆಣ್ಣುಮಕ್ಕಳ ರಕ್ಷಣೆಗೆಂದು ಜಾರಿಗೆ ತಂದಿರುವ ಕಾನೂನುಗಳ ದುರುಪಯೋಗ ಆಗುತ್ತಿದೆ, ತಮ್ಮನ್ನು ರಕ್ಷಿಸಬೇಕಾಗಿರುವ ಕಾನೂನನ್ನೇ ಗಂಡನ ಮನೆಯವರ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ... ಇತ್ಯಾದಿ ಗಂಭೀರ ಆರೋಪಗಳು ಇಂದು, ನಿನ್ನೆಯದ್ದಲ್ಲ. ಎಷ್ಟೋ ಕಡೆಗಳಲ್ಲಿ ವರದಕ್ಷಿಣೆ ಕಿರುಕುಳ, ಹೆಣ್ಣಿನ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಚಿತ್ರಹಿಂಸೆ, ಗಂಡನ ಮನೆಯಲ್ಲಿ ಆಕೆ ಅನುಭವಿಸುತ್ತಿರುವ ಹೇಳಿಕೊಳ್ಳಲಾಗದ ಸಂಕಷ್ಟ... ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಹೆಣ್ಣಿನ ಮಾನ, ಪ್ರಾಣ ಕಾಪಾಡಲು ಸರ್ಕಾರಗಳು ಜಾರಿಗೊಳಿಸಿರುವ ಹಲವು ಕಾನೂನುಗಳೇ ಈಗ ಗಂಡಿಗೆ ಯಮಪಾಶವಾಗುತ್ತಿವೆ. ಕಾನೂನು ಕುಣಿಕೆಯಲ್ಲಿ ತಮ್ಮದಲ್ಲದ ತಪ್ಪಿಗೂ ಗಂಡು ಹಾಗೂ ಆತನ ಮನೆಯವರು ಬಲಿಯಾಗುವ ಘಟನೆಗಳು ನಡೆಯುತ್ತಲೇ ಇವೆ.

Add Asianetnews Kannada as a Preferred SourcegooglePreferred

ಇದೀಗ ಬೆಂಗಳೂರಿನ ಟೆಕ್ಕಿ ಅತುಲ್​ ಅವರ ಸಾವಿನ ಬೆನ್ನಲ್ಲೇ #justiceforAtul ಟ್ರೆಂಡ್ ಆಗಿರೋ ಬೆನ್ನಲ್ಲೇ ಪುರುಷರ ದನಿ ಜೋರಾಗಿ ಕೇಳಿಬರುತ್ತಿದೆ. ಅತುಲ್​ಗೆ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಕೂಗು ಹೆಚ್ಚಾಗುತ್ತಿದ್ದಂತೆಯೇ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ. ಮೀಡಿಯಾ ಅಟೆನ್ಷನ್​, ಜನರ ಪ್ರತಿಭಟನೆ ಎಲ್ಲಕ್ಕೂ ಮುಖ್ಯವಾಗಿ ಅತುಲ್​ ಬರೆದಿಟ್ಟಿರುವ ಸುದೀರ್ಘ ಪತ್ರ, ವಿಡಿಯೋ ರೆಕಾರ್ಡಿಂಗ್​ ಇವೆಲ್ಲವುಗಳಿಂದ ಈ ಕೇಸು ಇಷ್ಟು ಜನಪ್ರಿಯತೆ ಪಡೆಯಿತು ಎನ್ನುವುದೇನೂ ಸುಳ್ಳಲ್ಲ. ಇಲ್ಲದಿದ್ದರೆ ಅತುಲ್​ ಸಾವು ಕೂಡ ಎಲ್ಲೋ ಒಂದೆರಡು ಕಡೆ ಸುದ್ದಿಯಾಗಿ ಮುಗಿದು ಹೋಗುವ ಕಥೆಯಾಗಿತ್ತು. ಆರೋಪಿಗಳು ಕೂಡ ನುಸುಳಿಸಿಕೊಂಡು, ಜಾಮೀನು ಪಡೆದುಕೊಂಡು ನೆಮ್ಮದಿಯಾಗಿ ಇರುತ್ತಿದ್ದರು ಎನ್ನುವ ಮಾತು ಕೂಡ ಸುಳ್ಳಲ್ಲ. ಅತುಲ್​ ಒಂದು ಉದಾಹರಣೆ ಮಾತ್ರ. ಇವರಂತೆಯೇ ಹೆಣ್ಣು ಹಾಗೂ ಹೆಣ್ಣಿನ ಮನೆಯ ದೌರ್ಜನ್ಯಕ್ಕೆ ಒಳಗಾಗಿ ನೋವು ಅನುಭವಿಸುತ್ತಿರುವ ಅದೆಷ್ಟೋ ಗಂಡಸರು ಇದ್ದಾರೆ. ಆದರೆ ಅವರ ಕೇಸುಗಳು ಅತುಲ್​ ಕೇಸ್​ ಆದಂತೆ ಪ್ರತಿಭಟನೆಯ ಹಂತಕ್ಕೆ ಹೋಗದ ಕಾರಣ, ಇನ್ನೂ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಲೇ ಇದೆ.

ನ್ಯಾಯ ಕೇಳಿದ್ರೆ ನ್ಯಾಯಾಧೀಶೆ ನಕ್ಕರು, ಲಂಚದ ಬೇಡಿಕೆ ಇಟ್ಟರು: ಸಾವಿಗೂ ಮುನ್ನದ ಪತ್ರದಲ್ಲಿ ಟೆಕ್ಕಿ ಹೇಳಿದ್ದೇನು?

ಅದೇ ರೀತಿ, ಇದೀಗ ಇನ್ನೊಂದು ಕೋರ್ಟ್​ ಕೇಸ್​ ವೈರಲ್​ ಆಗಿದೆ. ಈಗ ಕೋರ್ಟ್​ ಪ್ರೊಸೀಡಿಂಗ್ಸ್​ಗಳನ್ನು ನೇರ ಪ್ರಸಾರದಲ್ಲಿ ನೋಡಬಹುದಾಗಿರುವ ಹಿನ್ನೆಲೆಯಲ್ಲಿ, ಈ ಕೇಸಿನ ವಿಡಿಯೋ ಕೂಡ ವೈರಲ್​ ಆಗಿದೆ. ಇದು ಎಲ್ಲಿಯ ವಿಡಿಯೋ ಎನ್ನುವುದು ಸ್ಪಷ್ಟವಾಗಿ ನಮೂದಾಗಿಲ್ಲ. ಆದರೆ ಎಂಜಿನಿಯರ್​ ಒಬ್ಬರು ತಮ್ಮ ನೋವನ್ನು ತೋಡಿಕೊಂಡಿರುವುದನ್ನು ಹಾಗೂ ಅವರ ಪರವಾಗಿ ವಾದಿಸುತ್ತಿರುವ ವಕೀಲರ ವಾದದಿಂದ ಈ ಕೇಸ್​ ಅನ್ನು ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ.

ಈ ಕೇಸ್​ನಲ್ಲಿ, ಒಂದೇ ತಿಂಗಳು ಪತ್ನಿ ಪತಿಯ ಜೊತೆ ಇದ್ದಾಳೆ. ಆ ಬಳಿಕ ಪತಿಯನ್ನು ಬಿಟ್ಟು ಹೋಗಿ 15 ವರ್ಷಗಳೇ ಆಗಿವೆ. ಅಂದಿನಿಂದಲೂ ಪರಿಹಾರಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. 15 ಲಕ್ಷ ರೂಪಾಯಿ ಕೊಡಲು ಪತಿ ಒಪ್ಪಿಕೊಂಡಿದ್ದಾನೆ. ಆದರೆ ಆಕೆಯ ಡಿಮಾಂಡ್​ 40 ಲಕ್ಷ ರೂಪಾಯಿ. ಹಾಗೂ ಹೀಗೂ ಮಾಡಿ ಪತಿ 30 ಲಕ್ಷ ರೂಪಾಯಿ ಕೊಡಲು ಒಪ್ಪಿಕೊಂಡರೂ ಆಕೆ ಸುತರಾಂ ಒಪ್ಪುತ್ತಿಲ್ಲ. 40 ಲಕ್ಷವೇ ಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ನಾನು 15 ಲಕ್ಷ ಕೊಡಬಹುದು. ಇದಕ್ಕಿಂತ ಹೆಚ್ಚು ದುಡ್ಡು ಕೊಡಬೇಕು ಎಂದರೆ ಸಾಲ ಮಾಡಬೇಕು ಎಂದು ಪತಿ, ನ್ಯಾಯಾಧೀಶರ ಮುಂದೆ ನೋವು ತೋಡಿಕೊಂಡಿದ್ದಾನೆ. ಆದರೂ 30 ಲಕ್ಷ ಕೊಡಲು ಒಪ್ಪಿಕೊಂಡೆ. ಅದಕ್ಕೆ ಆಕೆಯ ತವರಿನವರು ಒಪ್ಪುತ್ತಿಲ್ಲ. ಅವಳು ಒಂದೇ ತಿಂಗಳು ಜೊತೆಗಿದ್ದಳು, ನನಗೆ ಇಷ್ಟು ಹಣ ಕೊಡಲು ಆಗುತ್ತಿಲ್ಲ ಎಂದಿದ್ದಾನೆ. ಕೊನೆಗೆ ನ್ಯಾಯಾಧೀಶರು ವಕೀಲರಲ್ಲಿ ಎರಡೂ ಕಡೆಯವರು ಕೂತು ಸೆಟಲ್​ಮೆಂಟ್​ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಇದಕ್ಕೆ ಥರಹೇವಾರಿ ಕಮೆಂಟ್​ ಸುರಿಮಳೆಯಾಗುತ್ತಿದೆ. ನಾನೇನಾದರು ನ್ಯಾಯಾಧೀಶನ ಸ್ಥಾನದಲ್ಲಿ ಇದ್ದಿದ್ದರೆ, ಒಂದು ಕಾಸು ಕೂಡ ಪರಿಹಾರ ಕೊಡಬೇಡ ಎಂದು ಆದೇಶಿಸುತ್ತಿದ್ದೆ ಎಂದು ಕೆಲವರು ಬರೆದುಕೊಂಡಿದ್ದರೆ, ಅತುಲ್​ ಕೇಸ್​ ಬಗ್ಗೆ ಮಾತನಾಡಿರುವ ಕೆಲವರು, ನ್ಯಾಯಾಧೀಶರು ಹೇಗೆ ಲಂಚ ಕೇಳುವ ಪ್ರಸಂಗದ ಬಗ್ಗೆ ಚರ್ಚೆ ಮಾಡಿದ್ದಾರೆ. ಒಟ್ಟಿನಲ್ಲಿ ಪರಿಹಾರ ಎನ್ನುವುದು ಹೆಣ್ಣುಮಕ್ಕಳಿಗೆ ವ್ಯವಹಾರ ಆಗಿದೆ ಎಂಬುದಾಗಿ ಹಲವರು ಹೇಳುತ್ತಿದ್ದಾರೆ! 

ರಣಬೀರ್ ಜೊತೆಗಿನ ಆ ಘಟನೆಯಿಂದ ಬದುಕೇ ನರಕವಾಯ್ತು: ಎಲ್ಲವನ್ನೂ ಬಹಿರಂಗಗೊಳಿಸಿದ ನಟಿ ಮಹಿರಾ ಖಾನ್