ಮಕ್ಕಳಿಲ್ಲದೆ ಕೊರಗುತ್ತಿರುವ ದಂಪತಿ ದೇವರ ಮೊರೆ ಹೋಗುವುದು ಸಾಮಾನ್ಯ. ನಟ ಶೈನ್ ಶೆಟ್ಟಿ ಅವರು  ಸಂತಾನ ಭಾಗ್ಯ ಕರುಣಿಸುವ  ನಾಗ ದೇವಸ್ಥಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಲ್ಲಿ ಹರಕೆ ಹೊತ್ತು ಪೂಜೆ ಸಲ್ಲಿಸಿದರೆ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಇಂದು ಎಷ್ಟೋ ದಂಪತಿ ಮಕ್ಕಳಿಲ್ಲದೇ ಕೊರಗುತ್ತಿದ್ದಾರೆ. ಮಕ್ಕಳಾಗದೇ ಇರುವುದಕ್ಕೆ ಹಲವಾರು ಕಾರಣಗಳು ಇರಬಹುದು. ಫಲವತ್ತತೆಯ ಕೊರತೆ, ವಿಪರೀತ ಟೆನ್ಷನ್​ನಿಂದ ಸಮಸ್ಯೆ, ಮಕ್ಕಳಾಗುವುದನ್ನು ಮುಂದೂಡಲು ತೆಗೆದುಕೊಳ್ಳುವ ಔಷಧಗಳು, ಕೆಲವೊಮ್ಮೆ ಆನುವಂಶಿಯತೆ... ಹೀಗೆ ಹೇಳುತ್ತಾ ಹೋದರೆ ದೊಡ್ಡ ಲಿಸ್ಟೇ ಇದೆ. ಕೆಲವರು ಉದ್ದೇಶಪೂರ್ವಕವಾಗಿ ತಮಗೆ ಮಕ್ಕಳು ಬೇಡ ಎನ್ನುವವರು ಇದ್ದರೆ, ಬಹುತೇಕ ಮಂದಿ ಮಕ್ಕಳಿಗಾಗಿ ಹಂಬಲಿಸುವವರು ಇದ್ದಾರೆ. ಅದರಲ್ಲಿಯೂ ತಾಯ್ತನ ಎನ್ನುವುದು ಬಹುತೇಕ ಎಲ್ಲ ಮಹಿಳೆಯರ ಹಂಬಲವೂ ಆಗಿರುತ್ತದೆ.

Add Asianetnews Kannada as a Preferred SourcegooglePreferred

ಮಕ್ಕಳಾಗದೇ ಇರುವುದಕ್ಕೆ ಪುರುಷರೂ ಕೂಡ ಹಲವು ಸಂದರ್ಭಗಳಲ್ಲಿ ಕಾರಣವಾಗಿದ್ದರೂ, ಮಕ್ಕಳಾಗದೇ ಹೋದರೆ, ಹೆಣ್ಣನ್ನೇ ದೂಷಿಸುವ ದೊಡ್ಡ ವರ್ಗವೂ ಇದೆ. ಆಕೆಗೆ ಒಂದಿಷ್ಟು ಅದೂ ಇದೂ ಎನ್ನುವ ಹಣೆಪಟ್ಟಿ ಬೇರೆ. ಎಷ್ಟೋ ಮನೆಗಳಲ್ಲಿ ಮಕ್ಕಳು ಆಗಿಲ್ಲ ಎನ್ನುವ ಕಾರಣಕ್ಕೆ ಅದು ಯಾರ ದೋಷ ಎನ್ನುವುದನ್ನೂ ನೋಡದೇ ಗಂಡಿಗೆ ಮತ್ತೊಂದು ಮದುವೆ ಮಾಡಿಸುವುದು ಇದೆ. ಒಟ್ಟಿನಲ್ಲಿ ಎಲ್ಲದಕ್ಕೂ ತಪ್ಪಿತಸ್ಥರು ಹೆಣ್ಣು ಎನ್ನುವ ಮನೋಭಾವ. ಇಂಥವರಿಗೆ ಎಷ್ಟೇ ಬುದ್ಧಿ ಹೇಳಿದರೂ, ಎಷ್ಟೇ ಶಿಕ್ಷಣ ನೀಡಿದರೂ ಅದು ನಿಷ್ಪ್ರಯೋಜಕವೇ. ಅದರಲ್ಲಿಯೂ ಖುದ್ದು ಹೆಣ್ಣೇ ಮತ್ತೊಂದು ಹೆಣ್ಣಿನ ಮೇಲೆ ಈ ರೀತಿಯ ಪಟ್ಟ ಕಟ್ಟುವುದು ಕೂಡ ಅಷ್ಟೇ ವಿಚಿತ್ರವಾಗಿದೆ.

ಮಕ್ಕಳಿಗಾಗಿ ದೇವರ ಮೊರೆ

ಎಲ್ಲಾ ಪರೀಕ್ಷೆ ನಡೆದ ಮೇಲೂ ಮಕ್ಕಳಾಗದೇ ಹೋದರೆ ಕೊನೆಯ ಹಂತವಾಗಿ ದೇವರ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಕೆಲವು ಬಾರಿ ವೈದ್ಯರೇ ದೇವರ ಮೇಲೆ ಭಾರ ಹಾಕುವುದು ಇದೆ. ದೇವರ ಬಗ್ಗೆ ನಂಬಿಕೆ ಏನೇ ಇದ್ದರೂ, ಒಂದು ಶಕ್ತಿ ಇರುವುದಂತೂ ಸತ್ಯ. ಪೂಜೆ, ಪುನಸ್ಕಾರ, ದೇಗುಲ ದರ್ಶನ, ಹರಕೆ ಇವುಗಳಲ್ಲಿ ನಂಬಿಕೆ ಇಲ್ಲ ಎಂದವರು ಕೂಡ ಸಮಯ ಬಂದಾಗ ಮೊರೆ ಹೋಗುವುದು ದೇವರನ್ನೇ ಅಂದ ಮೇಲೆ ಅದ್ಯಾವುದೋ ಶಕ್ತಿ ಕೈಹಿಡಿಯುವುದಂತೂ ಗ್ಯಾರೆಂಟಿ ಅಂತಾಯ್ತು. ಎಷ್ಟೋ ಬಾರಿ, ಈ ಶ್ರದ್ಧೆ, ನಂಬಿಕೆಗಳೇ ಫಲ ಕೊಡುವುದು ಉಂಟು.

ಕೇರಳದ ದೇವಸ್ಥಾನ

ಇದೀಗ ಮಕ್ಕಳಾಗದೇ ಇರುವವರಿಗಾಗಿಯೇ ಇರುವ ವಿಶೇಷ ದೇಗುಲದ ಬಗ್ಗೆ ನಟ ಶೈನ್​ ಶೆಟ್ಟಿ ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಪರಿಚಯ ಮಾಡಿಸಿದ್ದಾರೆ. ಫಲವತ್ತೆತೆಯ ಕೊರತೆಯಿಂದಾಗಿ ಮಕ್ಕಳಾಗದೇ ಇದ್ದರೆ ಈ ದೇಗುಲಕ್ಕೆ ಬಂದು ಹರಕೆ ಕೊಡಿ ಎಂದು ನಟ ಹೇಳಿದ್ದಾರೆ. ಇದು ಇರುವುದು ಕೇರಳದ ಅರಣ್ಯ ಪ್ರದೇಶದ ಮಧ್ಯೆ. ಹೆಸರು ಮನ್ನಾರಶಾಲಾ. ನಾಗ ದೇವಸ್ಥಾನ. ಕೊಚ್ಚಿಯಿಂದ ಎರಡೂವರೆ ಗಂಟೆ ಅಂತರದಲ್ಲಿ ಇದೆ ಈ ದೇಗುಲ ಎಂದು ಅವರು ತಿಳಿಸಿದ್ದಾರೆ. ಇಲ್ಲಿ ಒಂದು ಸೇವೆ ನೀಡಬೇಕು. ಬಳಿಕ ಮಕ್ಕಳಾದ ಮೇಲೆ ಆ ಮಗುವನ್ನು ಐದು ಬಾರಿ ಕರೆದುಕೊಂಡು ಬರಬೇಕು ಎಂದಿದ್ದಾರೆ ನಟ. ಫಲವತ್ತತೆ ಮಾತ್ರವಲ್ಲದೇ, ಸರ್ಪದೋಷ ಸೇರಿದಂತೆ ಹಲವು ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಸಿಗುವುದಾಗಿ ತಿಳಿಸಿದ್ದಾರೆ.