Asianet Suvarna News Asianet Suvarna News

ಅವಳೇಕೆ ಎಲ್ಲವನ್ನೂ ಮರೆತಂತೆ ನಟಿಸುತ್ತಿದ್ದಾಳೆ?

ದಿನ ಬೆಳಗಾದರೆ ಅಮ್ಮನ ಬಳಿ ರಂಪ ಮಾಡುತ್ತಿದ್ದವಳು, ಅಣ್ಣನ ಬಳಿ ಸದಾ ಕಾಲು ಕೆರೆದು ಜಗಳಕ್ಕಿಳಿದು ಜಗಳಗಂಟಿ ಎಂಬ ಟ್ಯಾಗ್‌ಲೈನ್‌ ಪಡೆದು ಮನೆ ತುಂಬಾ ಓಡಾಡುತ್ತಿದ್ದವಳು ಈಗ ಯಾಕೆ ಹೀಗಾಗಿದ್ದಾಳೆ? ಮದುವೆ ಎಂಬ ಮೂರಕ್ಷರದ ಬಂಧ ಆಕೆಯನ್ನು ಇಷ್ಟರ ಮಟ್ಟಿಗೆ ಬಂಧಿಸಿದೆಯಾ?

Sainanda vivekananda college puttur write about transformation from teenager to womanhood
Author
Bangalore, First Published Oct 17, 2019, 9:49 AM IST

ಚಿಟ್ಟೆಯಂತೆ ಬಾನಂಗಳಕ್ಕೆ ಹಾರಲು ಬಯಸುತ್ತಿದ್ದ ಅವಳು, ಯಾರ ಹಂಗಿಲ್ಲದೇ ಸ್ವಚ್ಫಂದವಾಗಿ ಕನಸನ್ನು ಈಡೇರಿಸಿಕೊಳ್ಳಬೇಕೆಂಬ ಅಭಿಲಾಷೆ ಹೊಂದಿದ್ದ ಅವಳು, ಇಂದೇಕೆ ಎಲ್ಲವನ್ನೂ ಮರೆತಂತೆ ನಟಿಸುತ್ತಿದ್ದಾಳೆ. ಮದುವೆ ಎಂಬ ಮೂರಕ್ಷರದ ಬಂಧ ಆಕೆಯನ್ನು ಇಷ್ಟರ ಮಟ್ಟಿಗೆ ಬಂಧಿಸಿದೆಯಾ. ದಿನ ಬೆಳಗಾದರೆ ಅಮ್ಮನ ಬಳಿ ರಂಪ ಮಾಡುತ್ತಿದ್ದ ಅವಳು. ಅಣ್ಣನ ಬಳಿ ಸದಾ ಕಾಲು ಕೆರೆದು ಜಗಳಕ್ಕಿಳಿದು ಜಗಳಗಂಟಿ ಎಂಬ ಟ್ಯಾಗ್‌ಲೈನ್‌ ಪಡೆದು ಮನೆ ತುಂಬಾ ಓಡಾಡುತ್ತಿದ್ದವಳು. ಅಮ್ಮನ ಬದುಕಿನ ನಿರಾಳತೆಯನ್ನು ಕಂಡು ರೇಗಾಡುತ್ತಿದ್ದವಳು. ಮರು ಮಾತನಾಡದೇ, ಇಂದೇಕೆ ಅಮ್ಮನ ಬದುಕನ್ನೇ ಪರಿಪಾಲಿಸುತ್ತಿದ್ದಾಳೆ.

ದೇವರಿಗೊಂದು ಪತ್ರ!

ಮದುವೆ ಎಂಬ ಬಂಧ ಅವಳ ಬದುಕಿಗೆ ಒಂದಷ್ಟುತಿರುವು ನೀಡಿದ್ದು ನಿಜ. ಆದರೆ ತನ್ನ ವ್ಯಕ್ತಿತ್ವವನ್ನೂ ಬದಲಾಯಿಸಿಕೊಳ್ಳುವಷ್ಟರ ಮಟ್ಟಿಗೆ ಅಲ್ಲ. ಮನೆ ಬದಲಾಗಿರಬಹುದು, ಹೊಸದಾದ ಬಂಧವೊಂದು ಬೆಸೆದಿರಬಹುದು. ಆದರೆ ಆ ಬಂಧವೆಂಬುದು ಅವಳನ್ನು, ತನ್ನ ಅಮ್ಮನ ಯಥಾಸ್ಥಿತಿಯನ್ನು ತನ್ನೊಳಗೆ ಒಪ್ಪಿಕೊಂಡು ಹೋಗುವುದು ಮಾತ್ರ ಅವಳಿಗೆ ಮಾತ್ರ ತಿಳಿಯುವುದೇ ಇಲ್ಲ.

ಹುಟ್ಟಿದಾಗಿನಿಂದ ಪ್ರತಿಯೊಂದಕ್ಕೂ ನನ್ನದು ಎಂದು ಬೀಗುತ್ತಿದ್ದ ಅವಳೇಕೆ, ಇಂದು ತನಗರಿವಿಲ್ಲದೇ ನಮ್ಮದು ಎಂಬ ಭಾವ ಬಂಧಕ್ಕೆ ಯಾರ ಅನುಮತಿಯಿಲ್ಲದೇ ಒಪ್ಪಿಕೊಂಡುಬಿಡುತ್ತಾಳೆ. ಹೆಣ್ಣಿನ ಮನಸ್ಥಿತಿಯೇ ಅಂತಹದ್ದು. ಪ್ರಾರಂಭದ ದಿನಗಳಲ್ಲಿ ಹೊಸ ಮನೆಯ ಸಂಪ್ರದಾಯಕ್ಕೆ ಒಗ್ಗಿಕೊಳ್ಳುತ್ತಾ, ಮನೆಯವರೆಲ್ಲಾ ತನ್ನನ್ನು ಅಕ್ಕರೆಯ ಸವಿ ಮಾತನಾಡಲಿ ಎಂದು ಅಪೇಕ್ಷಿಸುವುದು ಸಹಜ. ಆದರೆ ಗೊತ್ತಿಲ್ಲದೇ ಅವರೆಲ್ಲಾ ಕೆಲಸವನ್ನು ತನ್ನದೆಂದು ಮಾಡುತ್ತಾಳೆ. ಮೊದಮೊದಲು ಇದೆಲ್ಲವೂ ಆಕೆಯ ಪಾಲಿಗೆ, ಹೊಸದಾದ ವ್ಯಕ್ತಿಗಳನ್ನು ಒಪ್ಪಿಸುವ ಪರಿಯಾದರೂ, ನಂತರ ಅವಳು ಮಾಡುವ ಪ್ರತಿಯೊಂದು ಕೆಲಸವೂ ಅವಳ ಪಾಲಿಗೆ ಒತ್ತಡವಾಗಿ ಮಾರ್ಪಟ್ಟಿರುತ್ತದೆ.

ಕೊನೆಯ ಭೇಟಿ; ಹಾಸ್ಟೆಲ್‌ ಲೈಫಿನ ಒಂದು ಎಮೋಷನಲ್‌ ಸೀನ್‌!

ಅಂದು ಬೆಳಗ್ಗಿನ ತಿಂಡಿ ತನಗಿಷ್ಟವಿಲ್ಲದಿದ್ದರೆ ಸಿಡುಕು ಮುಖ ಮಾಡಿ ಶಾಲೆಗೆ ಹೋಗುತ್ತಿದ್ದ ಅವಳೇಕೆ, ಇಂದು ತನ್ನ ಇಷ್ಟಕಷ್ಟಗಳನ್ನು ಲೆಕ್ಕಿಸದೇ ಪತ್ನಿಯಾಗಿ, ಸೊಸೆಯಾಗಿ, ತಾಯಿಯಾಗಿ ಸಂಬಳವಿಲ್ಲದೇ ಕೆಲಸ ಮಾಡುತ್ತಿದ್ದಾಳೆ. ಕಿರುಚಾಟ, ಕೋಪ, ಹಠ ಇದೆಲ್ಲವೂ ಆಕೆಯ ಪಾಲಿಗೆ ಬಾಲ್ಯದಲ್ಲಿಯೇ ಹತ್ತಿರವಾಗಿದ್ದವು. ಇಂದು ಮಾತ್ರ ಆಕೆ ತನ್ನವರಿಗಾಗಿ ತನಗರಿವಿಲ್ಲದೇ ಎಲ್ಲವನ್ನೂ ಮರೆತಂತೆ ನಟಿಸುತ್ತಿದ್ದಾಳೆ.

ಇನ್ನು ತನ್ನದು ಎನ್ನುವ ಪ್ರಪಂಚವನ್ನು ಸೃಷ್ಟಿಕೊಳ್ಳಬೇಕೆಂದುಕೊಳ್ಳುವಷ್ಟರಲ್ಲಿ ವಯಸ್ಸು ಅರವತ್ತು ದಾಟಿಯಿರುತ್ತದೆ. ಮಕ್ಕಳ ನೆರಳಿನಲ್ಲಿ ಬದುಕದೂಡಲು ಬಯಸುತ್ತಾಳೆ. ಅವಳಿಗೆ ಸ್ವಂತ ವ್ಯಕ್ತಿತ್ವ ಇದೆ ಎನ್ನುವುದನ್ನು ಅರಿಯುವ ಹೊತ್ತಿಗಾಗಲೇ ಕಾಲ ಮರೆಯಾಗಿ ಹೋಗಿರುತ್ತದೆ. ಬದಲಾಗುವುದು ಅಗತ್ಯ. ಆದರೆ ವ್ಯಕ್ತಿತ್ವ ಮತ್ತು ಸ್ವಂತಿಕೆಯನ್ನು ಕಳೆದುಕೊಳ್ಳುವಷ್ಟರ ಮಟ್ಟಿಗೆ ಬದಲಾಗುವ ಅನಿವಾರ‍್ಯತೆ ಇಲ್ಲ. ಹುಟ್ಟಿದ ಮನೆಯಾಗಲಿ, ಬಾಳುವ ಮನೆಯಾಗಲಿ ನಮ್ಮ ವ್ಯಕ್ತಿತ್ವವನ್ನು ಕಸಿದುಕೊಳ್ಳುವಂತಾಗಬಾರದು. ಪರಿಸರ ಬದಲಾಗಲಿ, ಸಂಬಂಧಗಳು ಮರು ಸೃಷ್ಟಿಯಾದರೂ ನಮಗಾಗಿ ಸಮಯ ಮೀಸಲಿಡುವುದು ಮುಖ್ಯ. ಎಲ್ಲರನ್ನೂ ಸಂತೈಸುವ ಭರದಲ್ಲಿ ಹೆಣ್ಣು ಎಂಬುವವಳು ತನ್ನ ಇಷ್ಟಕಷ್ಟವನ್ನು ಮರೆಯುತ್ತಿದ್ದಾಳೆ. ಬದುಕು ಗೊತ್ತಿಲ್ಲದೇ ಆಕೆಗೆ ಅದೆಲ್ಲದ್ದನ್ನೂ ಬಹು ಸೊಗಸಾಗಿ ಕಲಿಸಿಕೊಟ್ಟಿದೆ.

ರೂಲ್ಸ್‌ ಬ್ರೇಕ್‌ ಮಾಡುವುದೇ ನಮ್ಮ ಕೆಲಸ!

ಬದುಕಿಗೆ ಆಸರೆಯು ಎಷ್ಟುಮುಖ್ಯವಾಗಿ ಇದೆಯೋ, ಅದರ ಜೊತೆಗೆ ಮದುವೆ ಎಂಬುದು ಹೆಣ್ಣಿನ ಆಸೆ ಆಕಾಂಕ್ಷೆಗೆ ತೊಡಕಾಗದಂತೆ ನೋಡಿಕೊಳ್ಳುವ ಅನಿವಾರ‍್ಯತೆಯೂ ಇದೆ. ವಯಸ್ಸಾದರೇನಂತೆ ಬದುಕ ಉದ್ದಕ್ಕೂ ಕನಸು ಕಾಣಲು ದಂಡ ತೀರಿಸಬೇಕಾಗಿಲ್ಲ. ಬದುಕ ದಾರಿಯಲಿ ಬಂಧಗಳು ಹಲವಾದರೇನು ಅವಳ ಪಾಲಿಗೆ ಕನಸು ಚಿಗುರುತ್ತಿರಲಿ, ವ್ಯಕ್ತಿತ್ವ ಮಾಸದಿರಲಿ. ಜವಾಬ್ದಾರಿಗಳ ಹೊರೆಯನ್ನು ಹೊತ್ತು, ತನ್ನ ಇಷ್ಟಕಷ್ಟಗಳ ಅರಿತು ಸಾಗುವುದು ಬದುಕಿನಲ್ಲಿ ಸಂಬಂಧಗಳ ಮೌಲ್ಯಗಳನ್ನು ಅರಿತು, ಸಾಗುವುದು ಒಳಿತು.

ಸಾಯಿನಂದಾ ಚಿಟ್ಪಾಡಿ

ವಿವೇಕಾನಂದ ಕಾಲೇಜು,  ಪುತ್ತೂರು

Follow Us:
Download App:
  • android
  • ios