ಆರಂಭದಲ್ಲಿ ಆತಂಕ ಇರುತ್ತದೆ. ಸ್ವಲ್ಪ ದಿನ ಕಳೆದಂತೆ ಮಸ್ತಿ ಶುರುವಾಗುತ್ತದೆ. ಕೊನೆಯ ದಿನಗಳು ಸಮೀಪಿಸುತ್ತಿದ್ದಂತೆ ವಿಷಾದ ತುಂಬಿಕೊಳ್ಳುತ್ತದೆ. ಹಾಸ್ಟೆಲಿನ ಕೊನೆಯ ದಿನ ಒಬ್ಬರಿಗೊಬ್ಬರು ಕೈಬೀಸುವಾಗ ಆಗುವ ನೋವು ಕಡೆಯವರೆಗೆ ಒಂಚೂರಾದರೂ ಉಳಿದಿರುತ್ತದೆ. ಹಾಸ್ಟೆಲ್‌ವಾಸಿಗಳ ನೆನಪು ಕೆದಕುವ ಭಾವುಕ ಕ್ಷಣದ ನಿರೂಪಣೆ ಇದು.

ಒಟ್ಟಿಗೆ ಮೂರು ವರ್ಷ ಹಾಸ್ಟೆಲಿನಲ್ಲಿ ಅಕ್ಕತಂಗಿಯರಂತೆ ಇದ್ದು, ಒಂದು ದಿನ ಇವರನ್ನೆಲ್ಲ ಬಿಟ್ಟು ಹೋಗಬೇಕೆಂದರೆ ತುಂಬಾ ದುಃಖವಾಗುತ್ತದೆ. ಬಹುಶಃ ಅವತ್ತು ಅವಳಲ್ಲೂ ಇದೇ ದುಃಖ ಇತ್ತು ಎನ್ನಿಸಿತು.

Add Asianetnews Kannada as a Preferred SourcegooglePreferred

ರೂಲ್ಸ್‌ ಬ್ರೇಕ್‌ ಮಾಡುವುದೇ ನಮ್ಮ ಕೆಲಸ!

ಅಂದು ಡಿಗ್ರಿ ಕೊನೆ ಪರೀಕ್ಷೆ ಮುಗಿದಿದೆ. ಇನ್ನೇನು ಊರಿಗೆ ಹೋಗುವುದೊಂದೇ ಬಾಕಿ. ಅದಕ್ಕಾಗಿ ಎಲ್ಲಾ ತಯಾರಿ ನನ್ನ ಸ್ನೇಹಿತೆ ಮಾಡಿಕೊಂಡಿದ್ದಾಳೆ. ಅಂದು ರಾತ್ರಿ ಸಾಕಷ್ಟುಮಾತನಾಡಿಕೊಂಡ್ವಿ, ಇನ್ನೂ ಮಾತನಾಡುವುದಿದೆ. ಆದರೆ ಆ ಹೊತ್ತಿಗಾಗಲೇ ಮುಂಜಾನೆಯಾಯಿತು. ನನ್ನ ಸ್ನೇಹಿತೆ ಊರಿಗೆ ಹೋಗಲು ರೆಡಿಯಾದ್ಲು. ಅವಳ ಜತೆ ತಿಂಡಿ ಮಾಡಿದ್ದೂ ಆಯಿತು.

ಸುದ್ದಿವಾಹಿನಿಯಲ್ಲಿ ಕಳೆದ ಕೆಲವು ದಿನಗಳು;ಬದುಕು ಕಲಿಸಿದ ಆ ರೋಚಕ ಘಟನೆ!

ಊರಿಗೆ ಹೋಗುವ ಮುನ್ನ ಹಾಸ್ಟೆಲಿನ ಒಂದೊಂದೇ ರೂಮಿನ ಸ್ನೇಹಿತೆಯರನ್ನು ಮಾತನಾಡಿಸಿಕೊಂಡು ವಿದಾಯ ಹೇಳುತ್ತಾ ಬರುತ್ತಿದ್ದಾಳೆ. ನನ್ನ ಪರೀಕ್ಷೆ ಮುಗಿಯಲು ಇನ್ನೂ ವಾರವಿದೆ. ಆದರೂ ಅವಳನ್ನ ನೋಡಿದ ನನಗೆ ಇಂದೇ ನೋವಿನ ಅರಿವಾಯಿತು. ಅವಳಲ್ಲಿಯೂ ಆ ದುಃಖವಿದೆ ಎಂದು ನನಗೆ ಭಾಸವಾಗುತ್ತಿತ್ತು. ಅವಳ ಮಾತಿನಲ್ಲಿ, ಮುಖದಲ್ಲಿ ಕಾಣುತ್ತಿತ್ತು.

ದಾಡಿ ಹುಡುಗರ ನಾಡಿಮಿಡಿತ;ಕಾರಿಡಾರ್‌ ಗಡ್ಡಧಾರಿಗಳಿಗೆ ಭಾರಿ ಡಿಮ್ಯಾಂಡು!

ಕೊನೆಗೂ ಎಲ್ಲರನ್ನೂ ಮಾತನಾಡಿಸಿದ್ದು ಆಯಿತು. ನನ್ನ ಹತ್ತಿರ ಬಂದು ಅಪ್ಪಿಕೊಂಡು ವಿದಾಯ ಹೇಳಿದಳು. ಆ ಕ್ಷಣ ನನ್ನಲ್ಲಿಯೂ ಕೂಡ ದುಃಖದ ಛಾಯೆ ಆವರಿಸಿತ್ತು. ಬಳಿಕ ತನ್ನೆಲ್ಲ ಲಗೇಜು ಹೆಗಲ ಮೇಲೆ ಹೊತ್ತು, ‘ಬಾರೆ ಮಾನಸಾ, ಬಸ್‌ಸ್ಟಾಪಿನವರೆಗೂ ಬಿಟ್ಟು ಬಾ’ ಎಂದಳು. ಆಗ ಮರು ಮಾತನಾಡದೆ ಹೊರಟೆ. ಏನು ಮಾತನಾಡಬೇಕೋ ಅರಿವಾಗುತ್ತಿಲ್ಲ. ಸದಾ ನಗು ನಗುತ್ತಾ ಮೂರು ವರ್ಷ ಕಾಲ ಕಳೆದ ಮನಸುಗಳು ಇಂದೇಕೋ ಮೌನಕ್ಕೆ ಜಾರಿದವು.

ರಿಪೋರ್ಟರ್‌ ಡೈರಿ;ಬಾತ್‌ರೂಮ್‌ನಲ್ಲಿ ನೀರು ಇಲ್ಲ, ಸಾಂಬರ್‌ನಲ್ಲಿ ನೀರು ಇದೆ!

ಆದರೆ ಅವಳು ತುಂಬಾ ಗ್ರೇಟ್‌. ದುಃಖವನ್ನು ಮನಸ್ಸಿನಲ್ಲಿಟ್ಟುಕೊಂಡು ನಗು ನಗುತಾ ಮಾತನಾಡಿಸಿದಳು. ಅವಳ ಸಂತೋಷಕ್ಕೆ ನಾನು ಹೂಂಗೊಟ್ಟು ಸಂತೋಷದಿಂದ ಮಾತನಾಡಿಸಿದೆ. ನಮ್ಮ ಜತೆ ಜೂನಿಯರ್‌, ಸ್ನೇಹಿತೆಯರು ಇದ್ದರು.

ಇನ್ನೇನು ಬಸ್‌ಸ್ಟಾಪಿಗೆ ಹತ್ತು ಮೀಟರ್‌ ಇರುವಾಗಲೇ ಏನಾಯಿತೋ ಅವಳು ನನ್ನ ಕಾಲ ಮೇಲೆ ಕಾಲು ಇಟ್ಟು ಬಿಟ್ಟಳು. ನಾನು ಸ್ವಲ್ಪ ಎಡವಿದೆ. ನಂತರ ಒಂದೆಜ್ಜೆ ಮುಂದಿಟ್ಟರೆ ಕಾಲಿನ ಜತೆ ಚಪ್ಪಲಿ ಇಲ್ಲ. ಅಲ್ಲೇ ಇದೆ. ಅವಳು ಕಾಲು ಇಟ್ಟಿದ್ದರಿಂದ ಚಪ್ಪಲ್ಲಿ ಮುರಿದು ಹೋಗಿತ್ತು. ಅದನ್ನು ನೋಡಿದ ಅಕ್ಕಪಕ್ಕದವರು ನಕ್ಕರು. ದಿನವು ಇಲ್ಲಿಯೇ ಸಂಜೆ ವೇಳೆ ಪಾನಿಪೂರಿ, ಮಿರ್ಚಿ ಮಸಾಲ ತಿನ್ನಲು ಬರುತ್ತಿದ್ವಿ. ಹಾಗಾಗಿ ಅವರೆಲ್ಲಾ ನಮ್ಮನ್ನ ನೋಡಿದ್ದರು. ಅದಕ್ಕೆ ಸ್ವಲ್ಪ ಮುಜುಗರ ಅನ್ನಿಸಿತು.

ಆದರೆ ಅವಳು ಅದೇ ನನಗೆ ಕೊಟ್ಟು ಹೋದ ಕೊನೆಯ ಗಿಫ್ಟ್‌. ಕೊನೆಯ ನೆನಪು. ವಿದಾಯದಲ್ಲೂ ಇಂತಹದೊಂದು ಸವಿನೆನಪನ್ನು ಕೊಟ್ಟಳೆಂಬ ಸಂತೋಷ ನನಗಾಯಿತು. ಆದರೆ ಬೇಸರವೂ ಅನಿಸಿತು. ಆ ಚಪ್ಪಲಿ ನಾವಿಬ್ಬರೇ ಹೋಗಿ ತಂದಿದ್ವಿ. ಅವಳು ಇದ್ದಷ್ಟುದಿನ ಚಪ್ಪಲಿ ಇತ್ತು. ಅವಳು ಹೋದ ಕೂಡಲೇ ಅವು ಇಲ್ಲದಂತಾಯಿತು. ಆದರೆ ಆಕ್ಷಣ ಒಂದೊಳ್ಳೆ ನೆನಪನ್ನು ನೀಡಿತು. ಬಹುಶಃ ಹಾಸ್ಟೆಲ್‌ ಹುಡುಗಿಯರಿಗೆ ಇಂತಹ ವಿದಾಯ ಸನ್ನಿವೇಶ ತುಂಬಾ ದುಃಖವನ್ನು ನೀಡಿರುತ್ತೆ.

ಅವಳು ಸ್ನಾತಕೋತ್ತರ ಪದವಿಗಾಗಿ ಮತ್ತೆ ಬರುವಳೇನೋ, ಅವಳ ಜತೆ ಮತ್ತೆ ಅಂತಹ ಕ್ಷಣ ಬರುವುದೇನೋ ಎಂಬ ಕಾತುರದಲ್ಲಿದ್ದೇನೆ.

ಎಸ್‌.ಎನ್‌.ಮಾನಸಾ ಶಾಗದಡು

ವಿಶ್ವವಿದ್ಯಾನಿಲಯ ಕಲಾಕಾಲೇಜು,ತುಮಕೂರು.