ಯುಜುವೇಂದ್ರ ಚಾಹಲ್ ಜೊತೆಗಿನ ವದಂತಿಗಳ ಬಗ್ಗೆ ಆರ್‌ಜೆ ಮಹ್ವಶ್ ಮೌನ ಮುರಿದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದು ಸ್ನೇಹಿತರ ನಡುವಿನ ಸಣ್ಣ ಜಗಳವಷ್ಟೇ ಎಂದಿರುವ ಅವರು, ಚಾಹಲ್ ಅವರ ಕಷ್ಟದ ಸಮಯದಲ್ಲಿ ತಾನು ಕೇವಲ ಉತ್ತಮ ಸ್ನೇಹಿತೆಯಾಗಿ ಬೆಂಬಲ ನೀಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ನವದೆಹಲಿ (ಮೇ.17): ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರೊಂದಿಗೆ ಲಿಂಕ್-ಅಪ್ ಆಗಿದ್ದ ವದಂತಿಗಳು ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದ ವಿಚಾರದ ಬಗ್ಗೆ ಖ್ಯಾತ ರೇಡಿಯೋ ಜಾಕಿ ಆರ್‌ಜೆ ಮಹ್ವಶ್ (RJ Mahvash) ಕೊನೆಗೂ ಮೌನ ಮುರಿದಿದ್ದಾರೆ. ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಚರ್ಚೆಗಳು ಜೋರಾಗಿದ್ದ ಬೆನ್ನಲ್ಲೇ, ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಹ್ವಶ್ ಇಡೀ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಯುಜುವೇಂದ್ರ ಚಾಹಲ್ ಅವರು ತಮ್ಮ ಮಾಜಿ ಪತ್ನಿ ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆಯುತ್ತಿದ್ದ ಅವಧಿಯಲ್ಲಿ ಆರ್‌ಜೆ ಮಹ್ವಶ್ ಮತ್ತು ಚಾಹಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ದಟ್ಟವಾಗಿದ್ದವು. ಇಬ್ಬರೂ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದುದು ಮತ್ತು ಸೋಶಿಯಲ್‌ ಮೀಡಿಯಾ ಮೂಲಕ ಸಂವಹನಗಳು ಈ ಅನುಮಾನಗಳಿಗೆ ರೆಕ್ಕೆಪುಕ್ಕ ನೀಡಿದ್ದವು. ಆದರೆ, ಇತ್ತೀಚೆಗೆ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಾಗ, ಇವರ ನಡುವೆ ಬಿರುಕು ಮೂಡಿದೆ ಎಂಬ ಸುದ್ದಿಗಳು ಹರಿದಾಡಿದ್ದವು.

'ಸ್ನೇಹಿತರ ನಡುವಿನ ಸಣ್ಣ ಜಗಳವಷ್ಟೇ': ಆರ್‌ಜೆ ಮಹ್ವಶ್ ಪ್ರತಿಕ್ರಿಯೆ

ಈ ಇಡೀ ವಿವಾದದ ಬಗ್ಗೆ ಪಿಂಕ್‌ವಿಲ್ಲಾ ಜೊತೆ ಮಾತನಾಡಿರುವ ಆರ್‌ಜೆ ಮಹ್ವಶ್, ಸಣ್ಣ ವಿಷಯವನ್ನು ಅನಗತ್ಯವಾಗಿ ದೊಡ್ಡದು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. "ಜನರಿಗೆ ಸಣ್ಣ ವಿಷಯಗಳನ್ನೇ ದೊಡ್ಡ ರಂಪಾಟ ಮಾಡುವುದು ಒಂದು ಹವ್ಯಾಸವಾಗಿಬಿಟ್ಟಿದೆ. ವೈಯಕ್ತಿಕವಾಗಿ ಎದುರಿಸುವಾಗ ಇದು ಅಷ್ಟೊಂದು ದೊಡ್ಡ ವಿಷಯವೇನಲ್ಲ. ಇಬ್ಬರು ಸ್ನೇಹಿತರ ನಡುವೆ ಸಣ್ಣಪುಟ್ಟ ಜಗಳಗಳು ಆಗುವುದು ಸಹಜ. ಹಾಗೆಯೇ ನಮ್ಮ ನಡುವೆಯೂ ಒಂದು ಸಣ್ಣ ವಾದ ನಡೆದಿತ್ತು, ಅದಕ್ಕಾಗಿ ಒಬ್ಬರನ್ನೊಬ್ಬರು ಫಾಲೋ ಮತ್ತು ಅನ್‌ಫಾಲೋ ಮಾಡಿಕೊಂಡೆವು. ಅಷ್ಟಕ್ಕೇ ಆ ಮ್ಯಾಟರ್ ಅಲ್ಲಿಗೆ ಮುಗಿಯಿತು" ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ಸ್ನೇಹಿತರ ನಡುವೆ ಯಾವುದೇ ಮುಚ್ಚುಮರೆ ಇಲ್ಲದೆ ಮನಸ್ಸಿಗೆ ಬಂದದ್ದನ್ನು ಮಾತನಾಡುವಷ್ಟು ಸಲುಗೆ ಇದ್ದಾಗ, ಮನಸ್ಸಿನಲ್ಲಿ ಯಾವುದೇ ದ್ವೇಷ ಅಥವಾ ಹಗೆತನವನ್ನು ಇಟ್ಟುಕೊಳ್ಳಬಾರದು. ನಾನು ಯಾವಾಗಲೂ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆ ಮತ್ತು ನನ್ನ ಶುಭ ಹಾರೈಕೆಗಳು ಸದಾ ಅವರ ಜೊತೆಗಿರುತ್ತವೆ. ಇದರಲ್ಲಿ ಅಷ್ಟೊಂದು ತಲೆಕೆಡಿಸಿಕೊಳ್ಳುವಂತಹ ದೊಡ್ಡ ವಿಷಯ ಏನೂ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

'ಚಾಹಲ್ ಸಂಕಷ್ಟದಲ್ಲಿದ್ದಾಗ ನಾನು ಬೆಂಬಲವಾಗಿ ನಿಂತಿದ್ದೆ'

ತಮ್ಮಿಬ್ಬರ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ ಮಹ್ವಶ್, "ಜನರು ಅಂದುಕೊಳ್ಳುತ್ತಿರುವಂತೆ ನಮ್ಮ ನಡುವೆ ಬೇರೇನೂ ಇರಲಿಲ್ಲ. ನಾನು ಅವರಿಗೆ ಒಬ್ಬ ಉತ್ತಮ ಸ್ನೇಹಿತೆಯಾಗಿದ್ದೆ ಅಷ್ಟೇ. ಆ ಸಮಯದಲ್ಲಿ (ಧನಶ್ರೀ ಅವರಿಂದ ಬೇರ್ಪಡುವ ಸಂದರ್ಭದಲ್ಲಿ) ಅವರಿಗೆ ಒಬ್ಬ ಒಳ್ಳೆಯ ಸ್ನೇಹದ ಅಗತ್ಯವಿತ್ತು. ಆದ್ದರಿಂದ ನಾವೆಲ್ಲರೂ ಅವರು ತಮ್ಮ ಐಪಿಎಲ್ (IPL) ಸೀಸನ್ ಕಡೆಗೆ ಸಂಪೂರ್ಣ ಗಮನ ಹರಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದೆವು. ನಾನು ಅವರ ಕಠಿಣ ದಿನಗಳಲ್ಲಿ ಒಂದು ಭದ್ರವಾದ ಬೆಂಬಲ ವ್ಯವಸ್ಥೆಯಾಗಿ ಅವರ ಜೊತೆ ನಿಂತಿದ್ದೆ. ಮುಂದಿನ ದಿನಗಳಲ್ಲೂ ನಾವು ಮೊದಲಿನಂತೆಯೇ ಸದಾ ಭೇಟಿಯಾಗಲಿದ್ದೇವೆ. ನಾನು ಯಾವುದೇ ಭಯವಿಲ್ಲದೆ ಅವರ ಪರವಾಗಿ ನಿಲ್ಲುತ್ತೇನೆ" ಎಂದು ಧೈರ್ಯವಾಗಿ ಹೇಳಿದ್ದಾರೆ.

ಆರ್‌ಜೆ ಮಹ್ವಶ್ ಬಾಂಧವ್ಯದ ಬಗ್ಗೆ ಚಾಹಲ್ ಹೇಳಿದ್ದೇನು?

ಕಳೆದ ವರ್ಷ ಪ್ರಖ್ಯಾತ ಪಾಡ್‌ಕಾಸ್ಟರ್ ರಾಜ್ ಶಮಾನಿ ಅವರ ಶೋನಲ್ಲಿ ಭಾಗವಹಿಸಿದ್ದಾಗ ಯುಜುವೇಂದ್ರ ಚಾಹಲ್ ಅವರಿಗೂ ಮಹ್ವಶ್ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಉತ್ತರಿಸಿದ್ದ ಚಾಹಲ್, "ನಮ್ಮ ನಡುವೆ ಅಂಥದ್ದೇನೂ ಇಲ್ಲ. ಜನರು ಏನು ಬೇಕಾದರೂ ಅಂದುಕೊಳ್ಳಲಿ, ಅದಕ್ಕೆ ನಾನೇನೂ ಮಾಡಲು ಸಾಧ್ಯವಿಲ್ಲ. ನನ್ನ ಹಳೆಯ ಸಂಬಂಧದಿಂದ ಹೊರಬಂದು, ನನ್ನನ್ನು ನಾನು ಮರುಹೊಂದಿಸಿಕೊಳ್ಳಲು ನನಗೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ" ಎಂದು ಹೇಳಿದ್ದರು.

"ಮೊದಲ ಬಾರಿಗೆ ನಾನು ಯಾರೊಂದಿಗಾದರೂ ಸಾರ್ವಜನಿಕವಾಗಿ ಕಾಣಿಸಿಕೊಂಡ ತಕ್ಷಣ, ಜನರು ನಮ್ಮಿಬ್ಬರನ್ನು ಲಿಂಕ್ ಮಾಡಲು ಶುರುಮಾಡಿದರು. ಮಹ್ವಶ್ ಈ ಬಗ್ಗೆ ಸ್ಪಷ್ಟನೆ ನೀಡಿದರೂ ಸಹ, ಆಕೆಗೆ ಬದುಕು ತುಂಬಾ ಕಷ್ಟಕರವಾಗಿತ್ತು. ಆಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ 'ಸಂಸಾರ ಮುರಿಯುವವಳು' (Homewrecker) ಎಂದು ಕರೆದರು ಮತ್ತು ಅತ್ಯಂತ ಅಸಹ್ಯಕರವಾಗಿ ನಿಂದಿಸಿದರು. ಇದನ್ನು ನೋಡಿ ನನಗೆ ತುಂಬಾ ಬೇಸರವಾಗಿತ್ತು. ಆ ಪರಿಸ್ಥಿತಿಯಿಂದಾಗಿ ನಾವಿಬ್ಬರೂ ಒಟ್ಟಿಗೆ ಹೊರಗಡೆ ಹೆಜ್ಜೆ ಇಡಲು ಕೂಡ ಸಾಧ್ಯವಾಗುತ್ತಿರಲಿಲ್ಲ" ಎಂದು ಚಾಹಲ್ ತಮ್ಮ ನೋವನ್ನು ಹಂಚಿಕೊಂಡಿದ್ದರು.