ಜಯಂ ರವಿ ಅವರ ಭಾವನಾತ್ಮಕ ಅಳಲು ಮತ್ತು ಆರತಿ ಅವರ 'ಸಿಂಹಿಣಿ'ಯಂತಹ ಎಚ್ಚರಿಕೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಒಂದು ಕಾಲದ ಈ ಸುಂದರ ಜೋಡಿ ಈಗ ಪರಸ್ಪರ ವೈರಿಗಳಂತೆ ನಿಂತಿರುವುದು ಸಿನಿ ಪ್ರೇಮಿಗಳಿಗೆ ನೋವು ತಂದಿದೆ. ಈ 'ದಾಂಪತ್ಯ ದಹನ' ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಕಾದು ನೋಡಬೇಕಿದೆ. 

ಸ್ಟಾರ್ ಜೋಡಿ ನಡುವೆ ಶುರುವಾಯ್ತು 'ಮಹಾ ಸಂಗ್ರಾಮ'.. ಸತ್ಯ ಬಯಲು ಮಾಡ್ತಾರಾ ಸ್ಟಾರ್ ಪತ್ನಿ?

Add Asianetnews Kannada as a Preferred SourcegooglePreferred

ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಜೆಂಟಲ್ ಮ್ಯಾನ್' ಎಂದೇ ಹೆಸರುವಾಸಿಯಾದ ನಟ ಜಯಂ ರವಿ (Jayam Ravi) ಮತ್ತು ಅವರ ಪತ್ನಿ ಆರತಿ (Aarti) ನಡುವಿನ ದಾಂಪತ್ಯ ಕಲಹ ಈಗ ಕೇವಲ ಕೋರ್ಟ್ ಮೆಟ್ಟಿಲಿಗೆ ಮಾತ್ರ ಸೀಮಿತವಾಗಿಲ್ಲ, ಅದು ಈಗ ಬೀದಿ ರಂಪಾಟದ ರೂಪ ಪಡೆದುಕೊಂಡಿದೆ. ಹದಿನೈದು ವರ್ಷಗಳ ಕಾಲ ಅನ್ಯೋನ್ಯವಾಗಿದ್ದ ಈ ಜೋಡಿ ಈಗ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದು ಅಭಿಮಾನಿಗಳಿಗೆ ಭಾರಿ ಆಘಾತ ನೀಡಿದೆ. ಶನಿವಾರ ನಡೆದ ಜಯಂ ರವಿ ಅವರ ಭಾವನಾತ್ಮಕ ಪತ್ರಿಕಾಗೋಷ್ಠಿ ಮತ್ತು ಅದಕ್ಕೆ ಪ್ರತಿಯಾಗಿ ಆರತಿ ನೀಡಿರುವ ಖಡಕ್ ವಾರ್ನಿಂಗ್ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ.

ಪತ್ರಿಕಾಗೋಷ್ಠಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ನಟ!

ಯಾವಾಗಲೂ ಮೌನವಾಗಿಯೇ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದ ಜಯಂ ರವಿ, ಈ ಬಾರಿ ತಮ್ಮ ಮನದ ಆಕ್ರೋಶ ಮತ್ತು ನೋವನ್ನು ಪತ್ರಿಕಾಗೋಷ್ಠಿಯಲ್ಲಿ ಹೊರಹಾಕಿದ್ದಾರೆ. "ನಾನು ಕಳೆದ 23 ವರ್ಷಗಳಿಂದ ಚಿತ್ರರಂಗದಲ್ಲಿ ಹಗಲಿರುಳು ದುಡಿದಿದ್ದೇನೆ. ನನ್ನ 90% ಸಿನಿಮಾಗಳು ಗೆದ್ದಿವೆ. ನಾನು ದುಡಿದಿದ್ದೆಲ್ಲವೂ ನನ್ನ ಕುಟುಂಬಕ್ಕಾಗಿ. ನನ್ನ ತಂದೆ ಮತ್ತು ಅಣ್ಣ ಕೆಲಸ ಮಾಡದಿದ್ದಾಗಲೂ ನಾನೇ ಮನೆಯ ಜವಾಬ್ದಾರಿ ಹೊತ್ತಿದ್ದೆ. ಆದರೆ ಪ್ರತಿಯಾಗಿ ನನಗೆ ಸಿಕ್ಕಿದ್ದು ಕೇವಲ ಕಿರುಕುಳ" ಎಂದು ಭಾವುಕರಾದರು.

ಅಷ್ಟೇ ಅಲ್ಲದೆ, ವಿಚ್ಛೇದನದ ನೋವಿನ ಬಗ್ಗೆ ಮಾತನಾಡುತ್ತಾ, "ನಾನು ನನ್ನ ಮಕ್ಕಳಿಗಾಗಿ ಬದುಕಿದ್ದೆ. ಆದರೆ ಇಂದು ನನಗೆ ನನ್ನ ಸ್ವಂತ ಮಕ್ಕಳನ್ನೇ ನೋಡಲು ಬಿಡುತ್ತಿಲ್ಲ. ಈ ಮಾನಸಿಕ ಯಾತನೆಯಿಂದ ನಾನು ಒಮ್ಮೆ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ" ಎಂದು ಹೇಳುವ ಮೂಲಕ ಎಲ್ಲರನ್ನೂ ದಂಗಾಗಿಸಿದರು. ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೂ ನಾನು ಮತ್ತೆ ಬಣ್ಣ ಹಚ್ಚುವುದಿಲ್ಲ ಎಂದು ಅವರು ಶಪಥ ಮಾಡಿದ್ದಾರೆ.

'ತಾಯಿ ಸಿಂಹಿಣಿ'ಯಂತೆ ಗುಡುಗಿದ ಆರತಿ !

ಜಯಂ ರವಿ ಅವರ ಈ ಪತ್ರಿಕಾಗೋಷ್ಠಿ ಮುಗಿದ ಕೆಲವೇ ಕ್ಷಣಗಳಲ್ಲಿ ಅವರ ಪತ್ನಿ ಆರತಿ ಇನ್‌ಸ್ಟಾಗ್ರಾಂನಲ್ಲಿ ಒಂದು ಸುದೀರ್ಘ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಅಕ್ಷರಶಃ ಬೆಂಕಿಯುಗುಳುವಂತಿದೆ. "ಮಲಗಿರುವ ಸಿಂಹವನ್ನು ಎಂದಿಗೂ ಎಬ್ಬಿಸಬೇಡಿ. ಅದರಲ್ಲೂ ಆ ಸಿಂಹ ತಾಯಿಯಾಗಿದ್ದರೆ ದೇವರೇ ನಿಮ್ಮನ್ನು ಕಾಪಾಡಬೇಕು! ನನ್ನ ಘನತೆಯ ಮೌನವನ್ನು ಯಾರೂ ದೌರ್ಬಲ್ಯ ಎಂದು ಭಾವಿಸಬಾರದು ಅಥವಾ ಅದರ ಲಾಭ ಪಡೆಯಬಾರದು" ಎಂದು ಖಾರವಾಗಿ ಬರೆದಿದ್ದಾರೆ.

"ನನ್ನ ಮಕ್ಕಳು ಮತ್ತು ನನ್ನ ಆತ್ಮಗೌರವಕ್ಕೆ ಧಕ್ಕೆಯಾದಾಗ ನಾನು ಸುಮ್ಮನಿರಲು ಸಾಧ್ಯವಿಲ್ಲ. ಸತ್ಯವನ್ನು ಜಗತ್ತಿಗೆ ತಿಳಿಸಲು ನಾನು ನನ್ನ ಸೌಕರ್ಯ ವಲಯದಿಂದ ಹೊರಬರಲು ಸಿದ್ಧಳಿದ್ದೇನೆ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ" ಎನ್ನುವ ಮೂಲಕ ಜಯಂ ರವಿ ಅವರ ಆರೋಪಗಳಿಗೆ ತಕ್ಕ ತಿರುಗೇಟು ನೀಡುವ ಸೂಚನೆ ನೀಡಿದ್ದಾರೆ.

ಮೂರನೇ ವ್ಯಕ್ತಿಯ ಪ್ರವೇಶ?

ಈ ವಿವಾದದ ನಡುವೆ ಗಾಯಕಿ ಕೆನೀಶಾ ಫ್ರಾನ್ಸಿಸ್ ಅವರ ಹೆಸರು ಜೋರಾಗಿ ಕೇಳಿಬರುತ್ತಿದೆ. ಜಯಂ ರವಿ ಮತ್ತು ಕೆನೀಶಾ ನಡುವಿನ ಸಂಬಂಧವೇ ಈ ವಿಚ್ಛೇದನಕ್ಕೆ ಕಾರಣ ಎಂಬ ವದಂತಿಗಳು ಹಬ್ಬಿರುವ ಬೆನ್ನಲ್ಲೇ, ಕೆನೀಶಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ನಿಷ್ಕ್ರಿಯಗೊಳಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಒಟ್ಟಿನಲ್ಲಿ, ಜಯಂ ರವಿ ಅವರ ಭಾವನಾತ್ಮಕ ಅಳಲು ಮತ್ತು ಆರತಿ ಅವರ 'ಸಿಂಹಿಣಿ'ಯಂತಹ ಎಚ್ಚರಿಕೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಒಂದು ಕಾಲದ ಈ ಸುಂದರ ಜೋಡಿ ಈಗ ಪರಸ್ಪರ ವೈರಿಗಳಂತೆ ನಿಂತಿರುವುದು ಸಿನಿ ಪ್ರೇಮಿಗಳಿಗೆ ನೋವು ತಂದಿದೆ. ಈ 'ದಾಂಪತ್ಯ ದಹನ' ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಕಾದು ನೋಡಬೇಕಿದೆ.