Asianet Suvarna News Asianet Suvarna News

ಕಲ್ಲು ಹೃದಯವೂ ಕರಗೀತು..! ಮೃತದೇಹಗಳ ರಾಶಿಯಲ್ಲಿ ಮುಸುಕು ತೆಗೆದು ಮಗನಿಗಾಗಿ ಹುಡುಕಾಡಿದ ತಂದೆ!

ಒಡಿಶಾ ರೈಲು ದುರಂತ..ಗಾಯಗೊಂಡವರ ನರಳಾಟ, ಚೀರಾಟ, ಹೆಣಗಳ ರಾಶಿ. ಕಲ್ಲು ಮನಸ್ಸೂ ಕರಗುವಂತಿತ್ತು ಅಲ್ಲಿನ ದೃಶ್ಯ. ಇದೆಲ್ಲದರ ಮಧ್ಯೆ ಅಲ್ಲೊಬ್ಬ ತಂದೆ ಹೆಣಗಳ ರಾಶಿಯಲ್ಲಿ ಮೃತದೇಹಕ್ಕೆ ಮುಚ್ಚಿದ್ದ ಮುಸುಕು ತೆಗೆದೂ ತೆಗೆದೂ ತನ್ನ ಮಗನಿಗಾಗಿ ಹುಡುಕುತ್ತಿದ್ದರು

Odisha Train Tragedy, Father searches for his missing son among pile of dead bodies Vin
Author
First Published Jun 4, 2023, 9:42 AM IST

ಅದು ಕ್ಷಣಾರ್ಧದಲ್ಲಿ ನಡೆದು ಹೋದ ದುರಂತ. ಎಲ್ಲರೂ ಸುಖನಿದ್ರೆಯಲ್ಲಿದ್ರು. ದಿಢೀರ್ ಕಿವಿಗಡಚಿಕ್ಕುವ ಭಯಂಕರ ಸದ್ದು..ಮತ್ತೇನಾಯಿತೋ ಗೊತ್ತೇ ಇಲ್ಲ. ಕಣ್ಣುಬಿಟ್ಟಾಗ ನರಳಾಟ, ಚೀರಾಟ, ಅಲ್ಲಲ್ಲಿ ಬಿದ್ದ ಕೈ ಕಾಲುಗಳು, ಹೆಣಗಳ ರಾಶಿ, ರಕ್ತದ ಕೋಡಿ..ಅಬ್ಬಬ್ಬಾ ಕಣ್ಣು ಕತ್ತಲು ಬರುವಷ್ಟು ಭಯಾನಕ ಲೋಕ. ಯಾರ ತಪ್ಪೋ ದೇವರೇ ಬಲ್ಲ..ನೂರಾರು ಮಂದಿ ಜೀವ ಕಳೆದುಕೊಂಡಿದ್ರು. ಮತ್ತು ಅದೆಷ್ಟೋ ಮಂದಿ ಕೈ, ಕಾಲುಗಳನ್ನು ಕಳೆದುಕೊಂಡು ನೋವು ಸಹಿಸಲಾಗದೆ ಚೀರಾಡ್ತಿದ್ರು. ರಕ್ತದ ಕೋಡಿಯೇ ಹರಿದುಹೋಗುತ್ತಿತ್ತು. ದೇಹದಿಂದ ಬೇರೆಯಾದ ಕೈ ಕಾಲುಗಳು ಅಲ್ಲೆಲ್ಲೋ ಬಿದ್ದಿದ್ದವು. ಕುಟುಂಬ, ಸ್ನೇಹಿತರು, ಬಂಧು-ಬಳಗ, ಮದುವೆ, ಮೀಟಿಂಗ್‌, ಸಂಬಂಧಿಕರ ಮನೆ, ಟ್ರಿಪ್ ಅಂತ ಹೊರಟವರೆಲ್ಲಾ ನಡುದಾರಿಯಲ್ಲೇ ಹೆಣವಾಗಿದ್ರು. ಕಣ್ಣು ಮಿಟುಕಿಸುವಷ್ಟರಲ್ಲಿ ರಾಶಿ ರಾಶಿ ಹೆಣಗಳು ಒಂದೆಡೆ ಬಿದ್ದಿದ್ದವು. 

ಅಪ್ಪ-ಅಮ್ಮನನ್ನು ಕಳೆದುಕೊಂಡ ಮಗು, ಗಂಡನನ್ನು ಕಳೆದುಕೊಂಡ ಹೆಂಡತಿ, ಸ್ನೇಹಿತನಿಗಾಗಿ ಹುಡುಕಾಟ ಹೀಗೆ ಎಲ್ಲರೂ ತಮ್ಮ ತಮ್ಮವರಿಗಾಗಿ ಹುಡುಕಾಟದಲ್ಲಿ ನಿರತರಾಗಿದ್ದರು. ಬದುಕಿದದ್ದವರನ್ನು ಹುಡುಕುವರು ಒಂದೆಡೆಯಾದರೆ, ಗಾಯಾಳುಗಳು ರಾಶಿಯಲ್ಲಿ, ಹೆಣಗಳ ರಾಶಿಯಲ್ಲಿ ತಮ್ಮವರಿಗಾಗಿ ಹುಡುಕಾಡುವವರು ಮತ್ತೊಂದೆಡೆ. ಕಣ್ಣಂಚು ಒದ್ದೆ ಮಾಡಿಕೊಂಡು ಮೃತದೇಹಗಳ ರಾಶಿಯಲ್ಲಿ ಹುಡುಕಾಡಿದಾಗ ಸಿಕ್ಕದಾಗ ನಿಟ್ಟುಸಿರು, ಗಾಯಾಳು (Injury)ಗಳಲ್ಲಿ ಸೇರಿರಬಹುದೇನೋ ಎಂಬ ಆತಂಕ. ಒಟ್ನಲ್ಲಿ ಅಲ್ಲಿ ಎಲ್ಲವೂ ಗೋಜಲು..ಗೋಜಲು..ಕಲ್ಲು ಮನಸ್ಸೂ ಕರಗುವಂತಿತ್ತು ಅಲ್ಲಿನ ದೃಶ್ಯ. ಇದೆಲ್ಲದರ ಮಧ್ಯೆ ಅಲ್ಲೊಬ್ಬ ತಂದೆ (Father) ಹೆಣಗಳ ರಾಶಿಯಲ್ಲಿ ಮೃತದೇಹಕ್ಕೆ (Deadbody) ಮುಚ್ಚಿದ್ದ ಮುಸುಕು ತೆಗೆದೂ ತೆಗೆದೂ ತನ್ನ ಮಗನಿಗಾಗಿ ಹುಡುಕುತ್ತಿದ್ದರು.

ಕೈಕಾಲುಗಳಿಲ್ಲದ ದೇಹಗಳು, ರಕ್ತದ ಹೊಳೆ: ಪ್ರತ್ಯಕ್ಷದರ್ಶಿಗಳು ಹಂಚಿಕೊಂಡ ರೈಲು ಅಪಘಾತ ಸ್ಥಳದ ಭಯಾನಕ ಕಥೆ ಹೀಗಿದೆ..

ಎಲ್ಲಿಯೂ ಇಲ್ಲ ನನ್ನ ಮಗ..ಎಷ್ಟು ಹುಡುಕಿದರೂ ಸಿಗ್ತಿಲ್ಲ..!
ಒಡಿಶಾ ರೈಲು ದುರಂತದಲ್ಲಿ (Odisha Train accident) ಮೃತದೇಹಗಳ ರಾಶಿಯ ನಡುವೆ ನಾಪತ್ತೆಯಾಗಿದ್ದ ಮಗನನ್ನು ಹುಡುಕುತ್ತಿರುವ ತಂದೆಯ ಹೃದಯವಿದ್ರಾವಕ ವಿಡಿಯೋ ಎಂಥವರನ್ನೂ ಛಿದ್ರಗೊಳಿಸುತ್ತೆ. ತಂದೆಯೊಬ್ಬರು ಶವಗಳಿಂದ ತುಂಬಿದ ಕೋಣೆಯಲ್ಲಿ ಕಣ್ಣೀರು ಹಾಕಿಕೊಂಡು ಕಾಣೆಯಾದ ಮಗನನ್ನು ಹುಡುಕುತ್ತಿರುವುದನ್ನು ಕಾಣಬಹುದು. ಅಪಘಾತ ಸಂಭವಿಸಿದ ನಂತರ ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಕೆಲವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರ ಮೃತದೇಹಗಳನ್ನು ಶವಾಗಾರದ (Mortuary) ಕೋಣೆಗಳಲ್ಲಿ ರಾಶಿ ರಾಶಿ ಹಾಕಲಾಗಿದೆ. ಈ ವೇಳೆ ವ್ಯಕ್ತಿಯೊಬ್ಬ ತನ್ನ ಮಗನೇನಾದರೂ ಈ ರಾಶಿಯಲ್ಲಿ ಇದ್ದಾನಾ ಎಂದು ಗುರುತು ಹಿಡಿಯಲು ಎಲ್ಲ ಮೃತದೇಹಗಳ ಮುಸುಕು ತೆಗೆದು ಹುಡುಕಾಡುತ್ತಾನೆ. 

ವಿಡಿಯೋದಲ್ಲಿ ವ್ಯಕ್ತಿ ಮೃತದೇಹಗಳ ರಾಶಿಯ ಬಳಿ ಓಡಾಡುತ್ತಿರುವ ವ್ಯಕ್ತಿಯ ಬಳಿ ಏನು ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ. ಆಗ ಕಣ್ಣಂಚಲ್ಲಿ ನೀರು ತುಂಬಿಕೊಂಡಿರುವ ಆ ತಂದೆ ನನ್ನ ಮಗನಿಗಾಗಿ ಹುಡುಕುತ್ತಿದ್ದೇನೆ ಎನ್ನುತ್ತಾರೆ. ಕೋರಮಂಡಲ್ ಎಕ್ಸ್‌ಪ್ರೆಸ್ ದುರಂತ ಸಂಭವಿಸುವ ಮೊದಲು ವ್ಯಕ್ತಿಯ ಮಗ ಗೋವಿಂದ ಕೊನೆಯ ನಿಲ್ದಾಣದಿಂದ ರೈಲು ಹತ್ತಿದ್ದರು ಎಂದು ಹೇಳುತ್ತಾರೆ. ನಿಮ್ಮ ಮಗ ಸಿಕ್ಕನೇ ಎಂದು ವ್ಯಕ್ತಿ ಮತ್ತೆ ಪ್ರಶ್ನಿಸುತ್ತಾರೆ. ಆಗ ತಂದೆ 'ಎಷ್ಟು ಹುಡುಕಿದರೂ ಸಿಗುತ್ತಿಲ್ಲ. ಎಷ್ಟೊಂದು ಹುಡುಕಾಡಿದೆ ಇಲ್ಲಿಯವರೆಗೂ ಸಿಕ್ಕಿಲ್ಲ' ಎಂದು ಅಳುತ್ತಾ ಹೇಳುತ್ತಾರೆ. ಪೊಲೀಸರಿಗೆ ಹೇಳಿದ್ದೀರಾ ನೀವು ಎಂದು ವ್ಯಕ್ತಿ ಪ್ರಶ್ನಿಸುತ್ತಾರೆ. ಅದಕ್ಕೆ ತಂದೆ ಹೌದು ಹೇಳಿದ್ದೇನೆ ಎನ್ನುತ್ತಾರೆ. 'ಎಲ್ಲಿಯೂ ನನ್ನ ಮಗ ಸಿಗುತ್ತಿಲ್ಲ, ಎಲ್ಲಿಯೂ ಇಲ್ಲ' ಎಂದು ತಂದೆ ವೀಡಿಯೋದ ಕೊನೆಯಲ್ಲಿ ಅಳುವುದು (Crying) ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ.

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ದೊಡ್ಡ ರೈಲು ಅಪಘಾತಗಳ ವಿವರ ಹೀಗಿದೆ..

ಭಾರತದಲ್ಲಿ ಸಂಭವಿಸಿದ ಅತೀ ಭೀಕರ ರೈಲು ದುರಂತ
ಭಾರತದಲ್ಲಿ ಸಂಭವಿಸಿದ ಅತೀ ಭೀಕರ ರೈಲು ದುರಂತದಲ್ಲಿ ಒಡಿಶಾದ ಬಹನಾಗದಲ್ಲಿ ನಡೆದ ಅಪಘಾತವೂ ಸೇರಿದೆ. ಒಡಿಶಾದ ಬಾಲಸೋರ್‌ ಬಳಿ ಶುಕ್ರವಾರ (ಜೂನ್ 2) ಸಂಜೆ ಸಂಭವಿಸಿದ ರೈಲು ದುರಂತದ ನಂತರದ ಚಿತ್ರಣವವಿದು. ಈ ಅಪಘಾತ ಈ ಶತಮಾನದಲ್ಲೇ ಭೀಕರ ದುರಂತವಾಗಿ ಹೊರಹೊಮ್ಮಿದ್ದು, 288 ಜನರ ಜೀವ ಬಲಿ ಪಡೆದಿದೆ. ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ಅಪಘಾತ ಬಲು ಅಪರೂಪ ಎನ್ನುವ ಹೊತ್ತಿನಲ್ಲೇ ಬಾಹಾನಗ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದ ಮೂರು ರೈಲುಗಳನ್ನು ಒಳಗೊಂಡ ಘೋರ ದುರಂತ ಇಡೀ ದೇಶವನ್ನೇ ಅಘಾತಕ್ಕೆ ಈಡುಮಾಡಿದೆ. ಜೊತೆಗೆ ರೈಲ್ವೆ ಸುರಕ್ಷತೆಯ ಕುರಿತು ಹಲವು ಪ್ರಶ್ನೆಗಳನ್ನು ಮುಂದೊಡ್ಡಿದೆ.

Follow Us:
Download App:
  • android
  • ios