ಬೆಂಗಳೂರಿನಲ್ಲಿ ಯುವತಿಯೊಬ್ಬಳು ಹಬ್ಬದ ಬಸ್ ದರ ಏರಿಕೆಯನ್ನು ವಿರೋಧಿಸಿ ತನ್ನ ತಂದೆಯನ್ನೇ ಮೂಟೆಯಲ್ಲಿ ಕಟ್ಟಿ ಕೊರಿಯರ್ ಮಾಡಲು ಯತ್ನಿಸಿದ್ದಾಳೆ. ಕೊರಿಯರ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಇದೊಂದು 'ಪ್ರಾಂಕ್' ಎಂದು ಹೇಳಿದ ಕುಟುಂಬಸ್ಥರಿಂದ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ಯುವತಿಯೊಬ್ಬಳು ಅಪ್ಪನನ್ನೇ ಮೂಟೆಯಲ್ಲಿ ಹೊತ್ತು ತಂದು ಪಾರ್ಸೆಲ್ ಮಾಡಲು ಬಂದಿರುವ ಭಯಾನಕ ಘಟನೆ ಇಂದು ನಡೆದಿದೆ. ಕೆಲವರ ಜೊತೆ ಸೇರಿ ಯುವತಿ, ಕೊರಿಯರ್ ಆಫಿಸ್ಗೆ ಬಂದಿದ್ದಾರೆ. ಮಂಗಳೂರಿಗೆ ಕೊರಿಯರ್ ಮಾಡುವಂತೆ ಅಲ್ಲಿನ ಸಿಬ್ಬಂದಿಗೆ ಹೇಳಿದ್ದಾಳೆ. ಆ ಮೂಟೆ ಅಲ್ಲಾಡುತ್ತಿದ್ದುದು ನೋಡಿ ಸಿಬ್ಬಂದಿಗೆ ಡೌಟ್ ಬಂದು ಏನು ಇದೆ ಎಂದಾಗ ಅವರು ಯಾರೂ ಮಾತನಾಡಲಿಲ್ಲ. ಕೊನೆಗೆ ಚೀಲವನ್ನು ಅದರೊಳಗೆ ವ್ಯಕ್ತಿಯೊಬ್ಬರು ಇರುವುದು ತಿಳಿದಿದೆ. ಅದನ್ನ ನೋಡಿ ಕೊರಿಯರ್ ಶಾಪ್ ಸಿಬ್ಬಂದಿ ಹೌಹಾರಿ ಹೋಗಿದ್ದು ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ.
ಪ್ರಾಂಕ್ ಅಂತೆ!
ಕೊನೆಗೆ ವಿಚಾರಿಸಿದಾಗ, ಯುವತಿ ಇದು ಪ್ರಾಂಕ್ ಅಷ್ಟೇ. ಯುಗಾದಿ, ರಂಜಾನ್ ಹಬ್ಬದ ನಿಮಿತ್ತ ಬಸ್ ರೇಟ್ ವಿಪರೀತ ಹೆಚ್ಚು ಮಾಡಿದ್ದಾರೆ. ಸೀಟೂ ಸಿಗುತ್ತಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಹೀಗೆ ಪ್ರಾಂಕ್ ಮಾಡಿರುವುದಾಗಿ ಪೊಲೀಸರ ಎದುರು ಯುವತಿ ಹೇಳಿಕೊಂಡಿದ್ದಾರೆ. ನನಗೆ ಈ ರೀತಿ ಮಾಡುವುದು ಅಪರಾಧ ಎನ್ನುವುದು ತಿಳಿಯಲಿಲ್ಲ. ಪ್ರಾಂಕ್ಗಾಗಿ ಮಾಡಿರುವುದು ಎಂದಿದ್ದಾಳೆ ಯುವತಿ. ಸದ್ಯ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಉಸಿರುಗಟ್ಟುವ ಸ್ಥಿತಿ
ಆ ಯುವತಿಯ ಅಪ್ಪ ಕೂಡ ಇದಕ್ಕೆ ಪ್ರೋತ್ಸಾಹ ಕೊಟ್ಟರಾ ಎನ್ನುವ ಸಂದೇಹವೂ ಕಾಡುತ್ತಿದೆ. ಏಕೆಂದರೆ ಆ ಮೂಟೆ ಕಟ್ಟಲಾಗಿತ್ತು. ಚೀಲದಿಂದ ಹೊರಕ್ಕೆ ಬರಲು ವಯಸ್ಸಾದ ಅವರು ಸಿಕ್ಕಾಪಟ್ಟೆ ತೊಂದರೆ ಪಡುತ್ತಿದ್ದರು. ಅವರಿಗೆ ಉಸಿರಾಟದ ಸಮಸ್ಯೆ ಆಗಿತ್ತು ಎನ್ನುವುದು ತಿಳಿಯುತ್ತದೆ. ಅವರ ಸ್ಥಿತಿ ನೋಡಲು ಆಗದೇ ಕೋರಿಯರ್ ಸಿಬ್ಬಂದಿ ಕುಡಿಯಲು ನೀರು ಕೊಟ್ಟಿದ್ದಾರೆ. ಈ ನಡುವೆ ಗಲಾಟೆ ಕೂಡ ನಡೆದಿದೆ ಎನ್ನಲಾಗಿದೆ. ಇಷ್ಟೆಲ್ಲಾ ಆದ ಮೇಲೆ ಆ ಯುವತಿ ಈ ಚೀಲವನ್ನ ಪಾರ್ಸೆಲ್ ಮಾಡಿ, ನಾವು ಹಣ ಕೊಡುತ್ತೇವೆ ಎಂದಿದ್ದಾಳೆ ಎನ್ನಲಾಗಿದೆ. ಕೊನೆಗೆ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದಾಗ ಅವರೆಲ್ಲಾ ಹೆದರಿ ಕೊಂಡಿದ್ದು, ಇದು ಪ್ರಾಂಕ್ ಎಂದಿದ್ದಾರೆ.
ಗಂಡನೂ ಸಾಥ್!
ಅಲ್ಲಿಂದ ಹೋದ ಮೇಲೆ ಪೊಲೀಸರು ಬಿಡದೇ ಅವರನ್ನು ಕರೆಸಿದ್ದಾರೆ. ಎಲ್ಲರನ್ನೂ ವಿಚಾರಣೆ ಮಾಡಿದಾಗ, ಒಂದು ಸಂದೇಶ ಕೊಡಲು ಹೀಗೆ ಪ್ರಾಂಕ್ ಮಾಡಿರುವುದಾಗಿ ಏಳಿದ್ದಾರೆ. ಪೊಲೀಸರು ಕುಟುಂಬಸ್ಥರ ಬಳಿ ಕ್ಷಮಾಪಣೆ ಬರೆಸಿಕೊಂಡಿದ್ದಾರೆ. ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ. ಯುವತಿ, ಆಕೆಯ ಗಂಡ, ಅವಳ ಅತ್ತೆ ಮತ್ತು ಭಾವ ಸೇರಿ ಈ ಪ್ಲ್ಯಾನ್ ಮಾಡಿದ್ದರು ಎನ್ನುವುದು ಗೊತ್ತಾಗಿದೆ.


