Asianet Suvarna News Asianet Suvarna News

ಕೊರೋನಾ ಸೃಷ್ಟಿಸಿದ ಪ್ರಶ್ನಾರ್ಥಕ ಚಿಹ್ನೆ; ಗೊಂದಲದ ಗೂಡಾಗಿದೆ ಬದುಕು!

ಕೊರೋನಾ ಆತಂಕದ ನಡುವೆ ಬದುಕಿನ ಪಥದಲ್ಲೊಂದು ಬದಲಾವಣೆ ಕಾಣಿಸುವ ಸೂಚನೆ ಸಿಗುತ್ತಿದೆ. ಮುಂದೇನು ಎಂಬ ಪ್ರಶ್ನೆ ಅನೇಕರ ಮುಂದೆ ಬೃಹಾದಾಕಾರವಾಗಿ ನಿಂತಿದೆ.

How corona created uncertainty in our life
Author
Bangalore, First Published May 14, 2020, 2:51 PM IST

ಕೊರೋನಾ ಬದುಕಿನ ಪಥವನ್ನೇ ಬದಲಾಯಿಸಿಬಿಡುತ್ತಾ? ಎನ್ನುವ ಸಣ್ಣ ಅನುಮಾನ ಬಹುತೇಕರನ್ನು ಕಾಡಲು ಪ್ರಾರಂಭಿಸಿದೆ. ಬದುಕಿನ ಬಂಡಿ ಎಳೆಯಲು ನಗರಗಳನ್ನೇ ನೆಚ್ಚಿಕೊಂಡಿದ್ದ ಜನರು ಕೊರೋನಾದಿಂದ ಮರಳಿ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಮುಂದೇನು ಎಂಬ ಪ್ರಶ್ನೆ ಅನೇಕರ ಮುಂದೆ ಬೃಹಾದಾಕಾರವಾಗಿ ನಿಂತಿದೆ. ಏನೋ ಅನಿಶ್ಚಿತತೆ ಕಾಡುತ್ತಿದೆ. ಬಿಸಿಲಿನಲ್ಲಿ ಬೆವರು ಸುರಿಸಿ ಹೊತ್ತಿನ ತುತ್ತು ಸಂಪಾದಿಸುವನಿಂದ ಹಿಡಿದು ಮಲ್ಟಿ ನ್ಯಾಷನಲ್ ಕಂಪನಿಯ ಎಸಿ ರೂಮ್‍ನಲ್ಲಿ ಕುಳಿತು ಲಕ್ಷ ಲಕ್ಷ ಸಂಪಾದಿಸುತ್ತಿದ್ದ ವ್ಯಕ್ತಿಯ ತನಕ ಪ್ರತಿಯೊಬ್ಬರಲ್ಲೂ ಏನೋ ಕಳವಳ. ಹೇಳಲಾಗದ ಭಯ, ಒತ್ತಡ. 

ನಮ್ಮೊಳಗೇ ಇದೆ, ಬದುಕಿನ ಆನಂದ: ಗ್ರಹಿಸುವ ಶಕ್ತಿ ನಮಗಿರಬೇಕಷ್ಟೆ

ಊರಲ್ಲೇ ಇದ್ದು ಬಿಡಲೇ?
ನಗರ ಬಿಟ್ಟು ಊರು ಸೇರಿ ನಾವು ಸೇಫ್ ಎಂದು ನಿಟ್ಟುಸಿರು ಬಿಟ್ಟವರು ಈಗ ಲಾಕ್‍ಡೌನ್ ಸಡಿಲಿಕೆಯಿಂದ ಮತ್ತೆ ನಗರಕ್ಕೆ ಹಿಂತಿರಗಬೇಕೋ, ಬೇಡವೋ ಎಂಬ ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ. ಕೆಲವು ಕಂಪನಿಗಳು ನೌಕರರಿಗೆ ಹಿಂತಿರುಗಿ ಕೆಲಸಕ್ಕೆ ಹಾಜರಾಗಲು ಸೂಚಿಸಿವೆ. ಇನ್ನು ನಿರ್ಮಾಣ ಕಾಮಗಾರಿಗಳು ಕೂಡ ಪುನರಾರಂಭಗೊಂಡಿವೆ. ಕೆಲವರಂತು ಇನ್ನೊಮ್ಮೆ ನಗರದ ಸಹವಾಸವೇ ಬೇಡ. ಹಳ್ಳಿಯಲ್ಲೇ ಇರೋದರಲ್ಲಿ ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ. 

ಕೃಷಿಯತ್ತ ಹೆಚ್ಚುತಿದೆ ಒಲವು
ಇಷ್ಟು ದಿನ ಮಕ್ಕಳು ನಗರ ಸೇರಿ ಬದುಕು ಕಟ್ಟಿಕೊಂಡಿದ್ದಾರೆ, ಖರ್ಚಿಗೆ ತಿಂಗಳು ತಿಂಗಳು ಹಣ ಕಳಿಸುತ್ತಾರೆ ಎನ್ನುವ ಕಾರಣಕ್ಕೆ ಕೃಷಿ ಮಾಡದೆ ಗದ್ದೆಗಳಲ್ಲಿ ಅಳೆತ್ತರದ ಕಳೆ ಗಿಡಗಳು ಬೆಳೆಯಲು ಅವಕಾಶ ನೀಡಿದ್ದ ಅಪ್ಪ ಈಗ ಮತ್ತೆ ಕೃಷಿಯೆಡೆಗೆ ಒಲವು ತೋರಿದ್ದಾರೆ. ಹಿಂದೆಲ್ಲ ಹಳ್ಳಿಗೆ ಬಂದ್ರೆ ಪ್ಯಾಂಟ್ ಶರ್ಟ್ ತೊಟ್ಟು ಶೂಸ್ ಹಾಕೊಂಡು ತಿರುಗುತ್ತಿದ್ದ ಮಗ ಅಪ್ಪಿತಪ್ಪಿಯೂ ಕೊಟ್ಟಿಗೆ ಕಡೆಗೆ ಮುಖ ಹಾಕುತ್ತಿರಲಿಲ್ಲ. ಇನ್ನು ಗದ್ದೆ, ತೋಟಕ್ಕೆ ವಾಯುವಿಹಾರಕ್ಕಷ್ಟೇ ಭೇಟಿ. ಆದ್ರೆ ಈ ಬಾರಿ ಊರಲ್ಲಿ ತಳವೂರಿರುವ ಮಗನಿಗೆ ಮುಂದಿನ ಭವಿಷ್ಯ ಮುಸುಕು. ಸುಮ್ಮನೆ ಕೂತು ತಲೆ ಕೆಡಲು ಪ್ರಾರಂಭಿಸಿದೆ. ಹೀಗಾಗಿ ಕೊಟ್ಟಿಗೆ ಗೊಬ್ಬರವನ್ನು ತಲೆ ಮೇಲೆ ಹೊತ್ತು ಗದ್ದೆಗಳಿಗೆ, ತೋಟಕ್ಕೆ ಹಾಕುತ್ತಿದ್ದಾನೆ. ಅಪ್ಪ-ಅಮ್ಮನಿಗೆ ಮನಸ್ಸೊಳಗೆ ಏನೋ ಖುಷಿ. ಮನೆಯಲ್ಲಿರುವ ಎಲ್ಲರೂ ಸೇರಿ ಮುಂಗಾರು ಪ್ರಾರಂಭಕ್ಕೂ ಮುನ್ನವೇ ಕೃಷಿ ಕೆಲಸಕ್ಕೆ ಬೇಕಾದ ಎಲ್ಲ ತಯಾರಿ ಪ್ರಾರಂಭಿಸಿದ್ದಾರೆ. ಈ ಬಾರಿ ಊರಿನಲ್ಲಿ ಯಾರಿಗೂ ಕೃಷಿ ಕಾರ್ಮಿಕರ ಕೊರತೆ ಎದುರಾಗುವ ಸಾಧ್ಯತೆಯಿಲ್ಲ ಎನ್ನುತ್ತಿದ್ದಾರೆ ಹಿರಿಯರು. 

ರೇಪ್‌ ಚಾಟ್‌: ಹುಡುಗೀರೂ ಹೀಗೆ ಮಾಡ್ತಾರಾ!

ಜೂನ್ ಅಂದ್ರೆ ಬೇಸರವಿಲ್ಲ
ಮಕ್ಕಳಿಗೋ ಜೂನ್ ಅಂದ್ರೆ ಶಾಲೆ ಪ್ರಾರಂಭದ ತಿಂಗಳು. ಆದ್ರೆ ಈ ಬಾರಿ ಇನ್ನೇನು ಕೆಲವೇ ದಿನಗಳಲ್ಲಿ ಶಾಲೆ ಪ್ರಾರಂಭವಾಗುತ್ತೆ. ಅಜ್ಜಿ ಮನೆ ಬಿಟ್ಟು ಮರಳಿ ನಗರದ ಗೂಡು ಸೇರಬೇಕು ಎಂಬ ಯಾವ ಬೇಸರವೂ ಅವರನ್ನು ಕಾಡುತ್ತಿಲ್ಲ. ಸಮವಸ್ತ್ರ, ಪುಸ್ತಕ, ಪೆನ್, ಬ್ಯಾಗ್ ಸೇರಿದಂತೆ ಶಾಲೆಗೆ ಅಗತ್ಯವಾದ ವಸ್ತುಗಳನ್ನು ಒಟ್ಟುಗೂಡಿಸುವ ಗಡಿಬಿಡಿ ಸದ್ಯ ಹೆತ್ತವರಿಗೂ ಇಲ್ಲ. ಕೆಲವು ಶಾಲೆಗಳು ಈಗಾಗಲೇ ಮುಂದಿನ ಪೋಷಕರನ್ನು ಖುಷಿಪಡಿಸಲು ಆನ್‍ಲೈನ್ ತರಗತಿಗಳನ್ನು ಕೆಲವು ದಿನಗಳ ಕಾಲ ನಡೆಸಿ ಶಿಕ್ಷಣ ಸಚಿವರು ಗರಂ ಆದ ಬಳಿಕ ಈಗ ಸುಮ್ಮನಾಗಿವೆ. ಶಾಲೆ ಬಾಗಿಲು ತೆರೆಯೋದು ಯಾವಾಗ? ಗೊತ್ತಿಲ್ಲ. 

ಸಣ್ಣ ಧೂಳಿನ ಕಣ ಸಿಟ್ಟು ಬರಿಸುತ್ತೆ

ಮದುವೆ ಯಾವಾಗ?
ನಿಶ್ಚಿತಾರ್ಥ ಮುಗಿಸಿಕೊಂಡಿರುವ ಜೋಡಿಗಳಿಗೆ ಈಗ ಮದುವೆ ಚಿಂತೆ. ಕೊರೋನಾ ಹಾವಳಿ ಯಾವಾಗ ತಗ್ಗಬಹುದು ಎಂಬ ಲೆಕ್ಕಾಚಾರದಲ್ಲಿ ಇವರು ಬ್ಯುಸಿ. ಇನ್ನು ಹೆಣ್ಣು ಹೆತ್ತವರಿಗೆ ಕೊರೋನಾ ಕಾಟ ಸ್ವಲ್ಪ ಮಟ್ಟಿಗೆ ನೆಮ್ಮದಿಯನ್ನೇ ನೀಡಿದೆ. ಮದುವೆಗೆ ಲಕ್ಷಗಟ್ಟಲೆ ಖರ್ಚಾಗುತ್ತಲ್ಲ, ಎಲ್ಲಿಂದ ಹಣ ಹೊಂದಿಸೋದು ಎಂಬ ತಲೆಬಿಸಿಯಲ್ಲಿದ್ದ ಹೆಣ್ಣಿನ ತಂದೆಗೆ ಈಗ ಸ್ವಲ್ಪ ಮಟ್ಟಿನ ರಿಲ್ಯಾಕ್ಸ್ ಸಿಕ್ಕಿದೆ. ಸದ್ಯಕ್ಕಂತೂ ಕೊರೋನಾ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಸಿಂಪಲ್ ಮದುವೆಗೆ ಜೈ ಅನ್ನದೇ ವರನ ಕಡೆಯವರಿಗೆ ಬೇರೆ ಆಯ್ಕೆಯಿಲ್ಲ. ಒಟ್ಟಾರೆ ಕೊರೋನಾದಿಂದ ಭವಿಷ್ಯದ ಕುರಿತು ಅನಿಶ್ಚಿತತೆಯೊಂದು ಮನೆ ಮಾಡಿರೋದಂತೂ ಸುಳ್ಳಲ್ಲ.

Follow Us:
Download App:
  • android
  • ios