Asianet Suvarna News Asianet Suvarna News

ಪೋಷಕರ ವಿಚ್ಛೇದನದಿಂದ ಖಿನ್ನತೆ : 7ನೇ ತರಗತಿ ಬಾಲಕ ಸಾವಿಗೆ ಶರಣು

ಅಪ್ಪ ಅಮ್ಮ ಪರಸ್ಪರ ಪ್ರತ್ಯೇಕಗೊಂಡು ಬೇರೆ ಬೇರೆಯೇ ವಾಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಖಿನ್ನತೆ ಹಾಗೂ ಒಂಟಿತನದಿಂದ ಮನನೊಂದ ಬಾಲಕ ಸಾವಿಗೆ ಶರಣಾದ ಘಟನೆ ಗುಜರಾತ್‌ನಲ್ಲಿ ನಡೆದಿದೆ.

Gujarat Depression due to parents divorce Class 7 boy commits suicide in Amraiwadi akb
Author
First Published Jul 31, 2023, 3:31 PM IST

ಅಹ್ಮದಾಬಾದ್‌: ಅಪ್ಪ ಅಮ್ಮ ಪರಸ್ಪರ ಪ್ರತ್ಯೇಕಗೊಂಡು ಬೇರೆ ಬೇರೆಯೇ ವಾಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಖಿನ್ನತೆ ಹಾಗೂ ಒಂಟಿತನದಿಂದ ಮನನೊಂದ ಬಾಲಕ ಸಾವಿಗೆ ಶರಣಾದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಅಮ್ಮ ಅಪ್ಪ ದೂರಾದ ಹಿನ್ನೆಲೆಯಲ್ಲಿ ಬಾಲಕ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಮೃತ ಬಾಲಕ ಅಮಿರವಾಡಿ ಇಂಗ್ಲೀಷ್ ಮೀಡಿಯಂ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿದ್ದಳು.  12 ವರ್ಷದ ಈ ಬಾಲಕನಿಗೆ ಕಳೆದ ಐದಾರು ತಿಂಗಳಿನಿಂದ ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸಲು ಆಗಿರಲಿಲ್ಲ. 

ಬಾಲಕನ ಪೋಷಕರು 2018ರಲ್ಲಿ ಕಾನೂನಾತ್ಮಕವಾಗಿ ವಿಚ್ಚೇದನ ಪಡೆದುಕೊಂಡು ದೂರಾಗಿದ್ದರು.  ಪೋಷಕರು ಪ್ರತ್ಯೇಕಗೊಂಡ ಸಂದರ್ಭದಲ್ಲಿ ಬಾಲಕ 7 ವರ್ಷದವನಾಗಿದ್ದರೆ ಆತನ ಹಿರಿಯ ಸಹೋದರಿಗೆ ಕೇವಲ 10 ವರ್ಷಗಳಾಗಿತ್ತಷ್ಟೇ. ತಂದೆ ತಾಯಿಯ ಪ್ರತ್ಯೇಕತೆಯ ನಂತರ ಈ ಅಕ್ಕ ತಮ್ಮ ಅಜ್ಜಿ ಮನೆ(ತಾಯಿಯ ತಾಯಿ ಮನೆ)ಯಲ್ಲಿ ವಾಸ ಮಾಡುತ್ತಿದ್ದರು.  ತಾಯಿಯ ತಂಗಿ ಅಂದರೆ ಈ ಮಕ್ಕಳ ಚಿಕ್ಕಮ್ಮನ್ನು ಈ ಮನೆಯ ಸಮೀಪದಲ್ಲೇ ವಾಸ ಮಾಡುತ್ತಿದ್ದು, ಈ ಬಾಲಕ ಹೆಚ್ಚಾಗಿ ಚಿಕ್ಕಮ್ಮನೊಂದಿಗೆಯೇ ಕಾಲ ಕಳೆಯುತ್ತಿದ್ದ. 

No Fault Divorce ಅಂದ್ರೇನು? ಕಾರಣ ಇಲ್ಲದೇಯೂ ಗಂಡ-ಹೆಂಡ್ತಿ ಬೇರೆ ಆಗ್ಬಹುದಾ?

ಈ ಮಧ್ಯೆ ಈ ಮಕ್ಕಳ ತಾಯಿ ಮರು ಮದುವೆಯಾಗಿದ್ದು, ಮಕ್ಕಳ ತಂದೆ ಪಿಪ್ಲಾಜ್ ಬಳಿಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು, ಹಲವು ಸಮಯದಿಂದ ತಂದೆಯೂ ಕೂಡ ಮಕ್ಕಳನ್ನು ನೋಡುವುದಕ್ಕೆ ಬಂದಿರಲಿಲ್ಲ, ಈ ಮಧ್ಯೆ ಏನಾಯಿತೋ ಏನೋ  ಶನಿವಾರ ಸಂಜೆ ಓರಗೆಯ ಮಕ್ಕಳೊಂದಿಗೆ ಆಟವಾಡಲು ಹೋದ ಹುಡುಗ ಸುಮಾರು ಹೊತ್ತು ಸ್ನೇಹಿತರೊಂದಿಗೆ ಆಟವಾಡಿ ಸಪ್ಪೆ ಮೊರೆ ಮಾಡಿಕೊಂಡು ಮನೆಗೆ ಬಂದಿದ್ದಾನೆ. ಅಲ್ಲದೇ ಮೊದಲನೇ ಮಹಡಿಯಲ್ಲಿದ್ದ ಮನೆಗೆ ಹೋಗಿ ಕೋಣೆಯ ಬಾಗಿಲು ಹಾಕಿಕೊಂಡಿದ್ದಾನೆ. 

ಹೀಗೆ ಹೋದವ ಸುಮಾರು ಹೊತ್ತಾದರೂ ಹೊರಗೆ ಬಾರದ ಹಿನ್ನೆಲೆಯಲ್ಲಿ  ಚಿಕ್ಕಮ್ಮ ಕೋಣೆಗೆ ಹೋಗಿ  ನೋಡಿದಾಗ ಬಾಲಕ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಬಾಲಕನನ್ನು ನೇಣಿನಿಂದ ಇಳಿಸಿ ಮಣಿನಗರದಲ್ಲಿರುವ ಖಾಸಗಿ  ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಬಾಲಕ ಆಸ್ಪತ್ರೆಗೆ ಬರುವ ಮೊದಲೇ ಮೃತಪಟ್ಟಿದ್ದ ಎಂದು ವೈದ್ಯರು ಘೋಷಿಸಿದ್ದಾರೆ. ಬಾಲಕನ ತಂದೆ ಅಮೀರವಾಡಿ ಪೊಲೀಸರ ಬಳಿ ಈ ಬಗ್ಗೆ ಹೇಳಿಕೆ ದಾಖಲಿಸಿದ್ದು, ಪೋಷಕರ ದಾಂಪತ್ಯ ಕಲಹದಿಂದಾಗಿ ಬಾಲಕನಿಗೆ ಕಳೆದ 5 ರಿಂದ ಆರು ವರ್ಷಗಳಿಂದ ಶಿಕ್ಷಣದ ಮೇಲೆ ಗಮನಹರಿಸಲಾಗುತ್ತಿರಲಿಲ್ಲ, ಅಲ್ಲದೇ ಆತನಿಗೆ ಒಂಟಿತನ ಹಾಗೂ ಅನಾಥ ಪ್ರಜ್ಞೆ ಕಾಡುತ್ತಿತ್ತು ಎಂದು  ಹೇಳಿದ್ದಾರೆ. 

ಮದ್ವೆಯಾಗಿ ವರ್ಷದಲ್ಲೇ ಡಿವೋರ್ಸ್ ಆಗೋ ದೇಶಗಳಿವು, ಭಾರತ ಎಷ್ಟನೇ ಸ್ಥಾನದಲ್ಲಿದೆ?

ಘಟನೆ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Follow Us:
Download App:
  • android
  • ios