ವಿಚ್ಛೇದನದ ಅಂಚಿನಲ್ಲಿದ್ದ ದೆಹಲಿಯ ದಂಪತಿ, ಪತ್ನಿಯ ತಂದೆಯ ಅನಾರೋಗ್ಯದ ಸಂದರ್ಭದಲ್ಲಿ ಪತಿಯು ಮಾಡಿದ ಸಹಾಯದಿಂದ ಮತ್ತೆ ಒಂದಾಗಿದ್ದಾರೆ. ನ್ಯಾಯಾಲಯದಲ್ಲಿ ವಿಚ್ಛೇದನದ ಪತ್ರಗಳನ್ನು ಹರಿದುಹಾಕಿ, ಪತ್ನಿ ಪತಿಯನ್ನು ಅಪ್ಪಿಕೊಂಡು ಕ್ಷಮೆಯಾಚಿಸಿದ ಭಾವನಾತ್ಮಕ ಘಟನೆ ಇದು.

ನವದೆಹಲಿ: ಜೀವನದಲ್ಲಿ ಯಾವ ತಿರುವು ಯಾವಾಗ ಎದುರಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ದ್ವೇಷದಿಂದ ದೂರಾದ ಬಾಂಧವ್ಯಗಳು ಕೇವಲ ಒಂದು ಘಟನೆಯಿಂದ ಮತ್ತೆ ಒಂದಾಗಬಹುದು ಎಂಬುದಕ್ಕೆ ದೆಹಲಿಯ ಈ ದಂಪತಿಯ ಕಥೆಯೇ ಸಾಕ್ಷಿ. ವಿಚ್ಛೇದನದ ಅಂಚಿನಲ್ಲಿದ್ದ ಶಿಖಾ ಮತ್ತು ಸೌರಭ್ ಅವರ ಬದುಕು ಇಂದು ಒಂದು ಸಿನೆಮಾ ಕಥೆಯಂತೆ ಸುಖಾಂತ್ಯ ಕಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಘಟನೆ?

ದೆಹಲಿಯ ಶಿಖಾ ಸಿಂಗ್ ಮತ್ತು ಸೌರಭ್ ಅವರ ವಿವಾಹ 2020 ರಲ್ಲಿ ನಡೆದಿತ್ತು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಜಗಳ ವಿಕೋಪಕ್ಕೆ ಹೋಗಿ, ಶಿಖಾ ತನ್ನ ಪತಿ ಸೌರಭ್ ವಿರುದ್ಧ ವರದಕ್ಷಿಣೆ ಕಿರುಕುಳದ ಕೇಸ್ ದಾಖಲಿಸಿದ್ದರು. ಈ ಕಾನೂನು ಹೋರಾಟ ಶಿಖಾ ಅವರ ಕುಟುಂಬಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಿತು.

ಸಂಕಷ್ಟದಲ್ಲಿ ಶಿಖಾ ತಂದೆ:

ಮಗಳ ನ್ಯಾಯಕ್ಕಾಗಿ ಹೋರಾಡಲು ಶಿಖಾ ಅವರ ತಂದೆ ತನ್ನಲ್ಲಿದ್ದ ಹಣವನ್ನೆಲ್ಲಾ ವಕೀಲರ ಫೀಜು ಮತ್ತು ಕೋರ್ಟ್ ಖರ್ಚುಗಳಿಗಾಗಿ ವ್ಯಯಿಸಿದ್ದರು. ಈ ಮಾನಸಿಕ ಒತ್ತಡ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ಕೊನೆಗೆ ಅವರಿಗೆ ಹೃದಯಾಘಾತ ಸಂಭವಿಸಿದಾಗ, ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಬೇಕಾಯಿತು. ತನ್ನ ತಂದೆ ಬದುಕುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿ ಶಿಖಾ ಕಣ್ಣೀರಿಡುತ್ತಿದ್ದರು.

ಅಳಿಯನ ಉದಾತ್ತ ಗುಣ:

ತನ್ನ ಮಾವನ ಪರಿಸ್ಥಿತಿ ತಿಳಿಯುತ್ತಿದ್ದಂತೆಯೇ, ತಮ್ಮ ನಡುವಿನ ಕೇಸ್ ಮತ್ತು ದ್ವೇಷವನ್ನೆಲ್ಲಾ ಮರೆತ ಸೌರಭ್ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಧಾವಿಸಿದರು. ಅಲ್ಲಿಂದ ಮಾವನನ್ನು ಕರೆದೊಯ್ದು ಗುರ್ಗಾಂವ್‌ನ ಪ್ರತಿಷ್ಠಿತ 'ಮೇದಾಂತ' ಆಸ್ಪತ್ರೆಗೆ ದಾಖಲಿಸಿದರು. ಎಲ್ಲಾ ಖರ್ಚುಗಳನ್ನು ತಾವೇ ಭರಿಸಿ, ಮಾವನಿಗೆ ಅತ್ಯುತ್ತಮ ಚಿಕಿತ್ಸೆ ಕೊಡಿಸಿದರು. ಸೌರಭ್ ಅವರ ಈ ಸಕಾಲಿಕ ಸಹಾಯದಿಂದ ಶಿಖಾ ಅವರ ತಂದೆ ಸಂಪೂರ್ಣ ಗುಣಮುಖರಾದರು.

ಕೋರ್ಟ್‌ನಲ್ಲಿ ನಡೆದ ಆ ದೃಶ್ಯ ವೈರಲ್:

ಇತ್ತೀಚೆಗೆ ದೆಹಲಿ ನ್ಯಾಯಾಲಯದಲ್ಲಿ ಈ ಪ್ರಕರಣದ ಮುಂದಿನ ವಿಚಾರಣೆ ಇತ್ತು. ಶಿಖಾ ಕೋರ್ಟ್‌ಗೆ ಹಾಜರಾದರು. ಆದರೆ ಅಲ್ಲಿ ನಡೆದದ್ದು ಯಾರೂ ನಿರೀಕ್ಷಿಸದ ದೃಶ್ಯ! ಸೌರಭ್ ಅವರು ತನ್ನ ತಂದೆಯ ಜೀವ ಉಳಿಸಿದ್ದನ್ನು ಕಂಡು ಕೃತಜ್ಞತೆಯಿಂದ ತುಂಬಿ ಹೋಗಿದ್ದ ಶಿಖಾ, ನ್ಯಾಯಾಲಯದ ಮುಂದೆಯೇ ವಿಚ್ಛೇದನದ ಕಾಗದಗಳನ್ನು ಮುಕ್ಕಾಲು ಮಾರು ಹರಿದು ಹಾಕಿದರು. ನಂತರ ತನ್ನ ಪತಿಯನ್ನು ಅಪ್ಪಿಕೊಂಡು ಕಣ್ಣೀರಿಡುತ್ತಾ ಕ್ಷಮೆಯಾಚಿಸಿದರು.

ಈ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಣ್ಣಪುಟ್ಟ ಕಾರಣಗಳಿಗೆ ವಿಚ್ಛೇದನ ಪಡೆದು ದೂರಾಗುತ್ತಿರುವ ಇಂದಿನ ಕಾಲದ ದಂಪತಿಗಳಿಗೆ ಶಿಖಾ ಮತ್ತು ಸೌರಭ್ ಅವರ ಈ ಕಥೆ ನಿಜಕ್ಕೂ ಒಂದು ದೊಡ್ಡ ಪಾಠ ಮತ್ತು ಪ್ರೇರಣೆಯಾಗಿದೆ.

Scroll to load tweet…