Asianet Suvarna News Asianet Suvarna News

ಜರಾಸಂಧ ಕೊಲ್ಲಲು ಬಂದಾಗ ಯುದ್ಧ ಮಾಡದೆ ರಾತ್ರೋರಾತ್ರಿ ಊರು ಬಿಟ್ಟು ಓಡಿದ ಕೃಷ್ಣ

ಭೀಷ್ಮ, ದ್ರೋಣ ಮುಂತಾದವರು ಕೌರವರ ಪಕ್ಷದಲ್ಲಿದ್ದರೂ ಒಳ್ಳೆಯವರೇ ಆಗಿದ್ದರು. ಕೃಷ್ಣ(Krishna) ಅವರನ್ನು ತಾನಾಗಿ ಕೊಲ್ಲಲಿಲ್ಲ. ಆದರೆ ಕಂಸ, ಶಿಶುಪಾಲ, ದುರ್ಯೋಧನನಂತಹ ಕೆಟ್ಟವರನ್ನು ತಾನೇ ಕೊಂದ ಅಥವಾ ಮುಂದೆ ನಿಂತು ಕೊಲ್ಲಿಸಿದ. ಈ ಎಲ್ಲಾ ಸಂದರ್ಭಗಳಲ್ಲೂ ಅವನು ದೇಶದ, ಧರ್ಮದ(Dharma), ಸಂದರ್ಭದ ಒಳಿತನ್ನೇ ಗಮನದಲ್ಲಿರಿಸಿಕೊಂಡಿದ್ದ. ಶತ್ರುಗಳು ಅಥವಾ ಸ್ಪರ್ಧಿಗಳನ್ನು ಮನವೊಲಿಸಲು ಮೊದಲು ಪ್ರಯತ್ನಿಸಬೇಕು. ಸಾಧ್ಯವಾಗದಿದ್ದರೆ ದಂಡ ಕೈಗೆತ್ತಿಕೊಳ್ಳಬೇಕು.

Bhagavan sri krishna dont believe in fight till death he runaway when Jarasandha came to kill him dpl
Author
Bangalore, First Published Nov 22, 2021, 2:28 PM IST

-ಮಹಾಬಲ ಸೀತಾಳಬಾವಿ

1. ಮೊದಲು ನೀವು ಮಾಡಿ ತೋರಿಸಿ

ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ

ಲೋಕಸಂಗ್ರಹಮೇವಾಪಿ ಸಂಪಶ್ಯನ್‌ ಕರ್ತುಮರ್ಹಸಿ 3.21

- ಜನಕ ಮೊದಲಾದವರು ಕರ್ಮಾನುಷ್ಠಾನದಿಂದಲೇ ಸಿದ್ಧಿಯನ್ನು ಪಡೆದರು. ಜನರಿಗೆ ಒಳಿತಾಗಬೇಕು ಎಂದಾದರೆ ನೀನೂ ಕರ್ಮ(Karma)ವನ್ನೇ ಆಚರಿಸಬೇಕು. ಕರ್ತವ್ಯ ಬಿಡಬಾರದು. ಜನಕನ ಉದಾಹರಣೆಯನ್ನೇಕೆ ಕೃಷ್ಣ(Krishna) ಅರ್ಜುನನಿಗೆ ಹೇಳಿದ? ಜನಕ ಮಹಾರಾಜ ಗದ್ದೆ ಉಳುವಾಗ ಅವನಿಗೆ ಸೀತೆ ಸಿಕ್ಕಳಲ್ಲವೇ? ಹಾಗಿದ್ದರೆ, ಜನಕನು ಮಿಥಿಲೆಯ ಮಹಾರಾಜನಾಗಿದ್ದರೂ ಗದ್ದೆ ಉಳಲು ಏಕೆ ಹೋಗಿದ್ದ?! ಏಕೆಂದರೆ, ಅವನ ಕರ್ತವ್ಯನಿಷ್ಠೆ ಹಾಗಿತ್ತು. ತನ್ನ ರಾಜ್ಯದಲ್ಲಿರುವ ಪ್ರಜೆಗಳು ಕರ್ತವ್ಯ ಮರೆಯಬಾರದು ಎಂದಾದರೆ ಸ್ವತಃ ತಾನೇ ಅದನ್ನು ಮಾಡಿ ತೋರಿಸಬೇಕು ಎಂಬುದು ಅವನ ನಿಲುವು. ಆದ್ದರಿಂದಲೇ ಕೃಷ್ಣ ಅವನ ಉದಾಹರಣೆ ನೀಡಿದ. ಕಚೇರಿಯಲ್ಲಿ ನಾವು ಅಥವಾ ಮ್ಯಾನೇಜ್‌ಮೆಂಟುಗಳು(Management) ಹೀಗೇ ಇರಬೇಕು. ಕಿರಿಯರು ಏನು ಮಾಡಬೇಕೋ ಅದಕ್ಕೆ ನಾವು ಸ್ಫೂರ್ತಿಯಾಗಿರಬೇಕು. ನಾವು ಶುದ್ಧ ಆಲಸಿಗಳಾಗಿದ್ದುಕೊಂಡು ಕಿರಿಯರು ಚೆನ್ನಾಗಿ ಕೆಲಸ ಮಾಡಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ.

ಕೃಷ್ಣ ಮಾಡಿದ್ದೂ ಇದನ್ನೇ. ಮನಸ್ಸು ಮಾಡಿದ್ದರೆ ತನ್ನ ಅಂತಃಶಕ್ತಿಯಿಂದಲೇ ಕೃಷ್ಣನು ಪಾಂಡವರಿಗೆ ರಾಜ್ಯ ಕೊಡಿಸಬಹುದಿತ್ತು. ಆದರೆ ಸತ್ಯಕ್ಕಾಗಿ ಹೇಗೆ ಹೋರಾಡಬೇಕು ಎಂಬುದನ್ನು ಜನರಿಗೆ ತೋರಿಸಲು ಅವನು ಯುದ್ಧ(War) ಆಯ್ದುಕೊಂಡ. ಅರ್ಜುನನ್ನು ಅದರಲ್ಲಿ ತೊಡಗಿಸಿ ಅವನ ಮೂಲಕ ಜನರಿಗೆ ಧರ್ಮದ ಪಾಠ ಹೇಳಿದ. ನೀವು ನಾಯಕರಾಗಬೇಕು ಎಂದರೆ, ನಿಮ್ಮ ಕೆಲಸ ಸಹೋದ್ಯೋಗಿಗಳಿಗೆ ಸ್ಫೂರ್ತಿಯಾಗಬೇಕು.

2. ಸಂದರ್ಭ ಬಂದರೆ ಓಡಿಹೋಗಿ!

ಎಂತಹುದೇ ಕಷ್ಟಬಂದರೂ ನಾಯಕನಾದವನು ಬೆನ್ನು ತಿರುಗಿಸಬಾರದು, ಸಾಯುವವರೆಗೂ ಹೋರಾಡಬೇಕು ಎಂಬ ಗಿಣಿಪಾಠವಿದೆ. ಕೃಷ್ಣ ಈ ತತ್ವವನ್ನು ಒಪ್ಪಿಕೊಳ್ಳುವವನಲ್ಲ. ಅವನ ಪ್ರಕಾರ, ಸಂದರ್ಭ ಹಾಗೆ ಬಂದರೆ ಪಲಾಯನ ಮಾಡುವುದು ಕೂಡ ಬುದ್ಧಿವಂತರ ಲಕ್ಷಣ. ಏಕೆಂದರೆ ಕ್ಷುಲ್ಲಕ ಸಂಗತಿಗಳಿಗೆ ನಾವು ಬಲಿಯಾಗಬಾರದು. ನಾವು ಮಾಡಬೇಕಾದ ಮಹತ್ವದ ಕೆಲಸಗಳು ಬೇರೆ ಇವೆ. ಅವುಗಳನ್ನು ಮುಂದೆ ಮಾಡುವುದಕ್ಕಾದರೂ ಈಗ ಉಳಿದುಕೊಳ್ಳಬೇಕು.

ಜರಾಸಂಧ ಎಂಬೊಬ್ಬ ರಾಕ್ಷಸನಿದ್ದ. ಕೃಷ್ಣನನ್ನು ಕೊಲ್ಲಲು ಬೃಂದಾವನಕ್ಕೆ ಬಂದ ಅವನ ಹಿಂದೆ ದೊಡ್ಡ ಸೈನ್ಯವೇ ಇತ್ತು. ಈಗಾಗಲೇ ಸಾಕಷ್ಟುರಾಕ್ಷರನ್ನು ಕೃಷ್ಣ ಕೊಂದಿದ್ದನಾದರೂ, ಅವರೆಲ್ಲ ಒಬ್ಬೊಬ್ಬರೇ ಬಂದವರು. ಆದರೆ ಈಗ ದೊಡ್ಡ ಪರಿವಾರದ ಜೊತೆಗೆ ಬಂದ ಜರಾಸಂಧನನ್ನು ಯಾವುದೇ ಸಿದ್ಧತೆಯಿಲ್ಲದೆ ಏಕಾಂಗಿ ಕೃಷ್ಣ ಹೇಗೆ ಎದುರಿಸಲು ಸಾಧ್ಯ?

ಭೀಷ್ಮ ವಿಶ್ವವಿದ್ಯಾಲಯದ ಪಠ್ಯ, ಏರಿದವನು ಎಚ್ಚರದಿಂದ ಇರಬೇಕು

ಕೃಷ್ಣ ರಾತ್ರೋರಾತ್ರಿ ಊರು ಬಿಟ್ಟು ಓಡಿಹೋದ! ತಾನು ಸಿಗದಿದ್ದರೆ ಜರಾಸಂಧ ತನ್ನ ಊರಿನವರಿಗೇನೂ ತೊಂದರೆ ಮಾಡುವುದಿಲ್ಲ, ಅವನಿಗೆ ಬೇಕಾದವನು ತಾನೊಬ್ಬನೇ ಎಂಬುದು ಕೃಷ್ಣನಿಗೆ ಗೊತ್ತಿತ್ತು. ಜರಾಸಂಧನ ಬಳಗದವರು ಕೃಷ್ಣನನ್ನು ಹೇಡಿ ಎಂದು ಜರಿದರು. ಕೃಷ್ಣ ತಲೆಕೆಡಿಸಿಕೊಳ್ಳಲಿಲ್ಲ.

ಏಕೆಂದರೆ ಮುಂದೆ ಮಹಾಭಾರತವನ್ನು ಮಾಡಿಸಲು ಕೃಷ್ಣನ ಅಗತ್ಯ ಲೋಕಕ್ಕಿತ್ತು!

3. ಕೃಷ್ಣನೆಂಬ ಪ್ರಾಮಾಣಿಕ ಬ್ರಹ್ಮಚಾರಿ

ಭಾಗವತದಲ್ಲೊಂದು ಕತೆ ಬರುತ್ತದೆ. ಕೃಷ್ಣ ಯುವಕನಾಗಿದ್ದಾಗ ಸ್ನೇಹಿತರೊಡನೆ ಒಮ್ಮೆ ಯಮುನಾ ನದಿ ದಾಟಬೇಕಿತ್ತು. ನದಿ ರುದ್ರಭೀಕರವಾಗಿ ಹರಿಯುತ್ತಿದೆ. ದಾಟುವುದು ಹೇಗೆ? ಆ ಹುಡುಗರಿಗೆಲ್ಲ ಕೃಷ್ಣನೇ ನಾಯಕ. ನದಿಯೆದುರು ಕೈಮುಗಿದು ನಿಂತು ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡಿದ: ‘ತಾಯಿ ಯಮುನೆ, ನಾನು ಮನಸಾರೆ ಬ್ರಹ್ಮಚರ‍್ಯವನ್ನು ಪಾಲಿಸಿದ್ದೇನೆಂಬ ನಂಬಿಕೆ ನನಗಿದೆ. ಅದನ್ನು ನೀನು ಒಪ್ಪಿಕೊಳ್ಳುವುದಾದರೆ ನಮಗೆ ನದಿ ದಾಟಲು ಬಿಡು.’ ಯಮುನೆ ಇಬ್ಭಾಗವಾದಳು. ಯುವಕರು ಸಲೀಸಾಗಿ ದಾಟಿದರು.

ಇದು ಸಾಧ್ಯವೇ ಎಂದು ಪ್ರಶ್ನೆ ಹಾಕುವುದಕ್ಕಿಂತ ಇದರ ಹಿಂದಿನ ನೀತಿ ಗಮನಿಸಿ. ಯಾವುದೇ ದುಸ್ಸಾಧ್ಯವಾದ ಕೆಲಸಕ್ಕೆ ಕೈಹಾಕುವ ಮೊದಲು ನಮ್ಮ ಉದ್ದೇಶ ಶುದ್ಧವಾಗಿರಬೇಕು ಮತ್ತು ನಮ್ಮಲ್ಲಿ ನಮಗೆ ನಂಬಿಕೆಯಿರಬೇಕು. ಕೇಳುವ ರೀತಿಯಲ್ಲಿ ಕೇಳಿದರೆ ಯಾರು ಬೇಕಾದರೂ ನಮ್ಮ ಕೋರಿಕೆ ಒಪ್ಪಿಕೊಳ್ಳುತ್ತಾರೆ. ನೌಕರರು ಮ್ಯಾನೇಜ್‌ಮೆಂಟುಗಳನ್ನು ಒಲಿಸಿಕೊಳ್ಳುವ ಸುಲಭ ಉಪಾಯವಿದು. ಮೊದಲು ಅವರು ಬಾಸ್‌ಗಳ ವಿಶ್ವಾಸ ಗಳಿಸಬೇಕು. ಅದಕ್ಕೆ ಅವರ ಚಾರಿತ್ರ್ಯ ಶುದ್ಧವಾಗಿರಬೇಕು. ಕಂಪನಿಯ ಬಗ್ಗೆ ಅವರಿಗಿರುವ ಅಭಿಮಾನದ ಬಗ್ಗೆ ಬಾಸ್‌ಗೆ ತಿಳಿಯಬೇಕು. ನಂತರ ಅವರು ಏನು ಹೇಳಿದರೂ ಮ್ಯಾನೇಜ್‌ಮೆಂಟ್‌ ಇಲ್ಲ ಎನ್ನುವುದಿಲ್ಲ.

4. ಒಳ್ಳೆಯವರಿಗೆ ಒಳ್ಳೆಯವ, ಕೆಟ್ಟವರಿಗೆ ಕೆಟ್ಟವ

ಕೃಷ್ಣ ಒಳ್ಳೆಯವರಿಗೆ ಕೆಟ್ಟದ್ದು ಮಾಡಿದ ಉದಾಹರಣೆಯಿಲ್ಲ, ಕೆಟ್ಟವರಿಗೆ ಒಳ್ಳೆಯದು ಮಾಡಿದ ಉದಾಹರಣೆಯೂ ಇಲ್ಲ. ಅವನೊಬ್ಬ ಮಾದರಿ ನಾಯಕ. ಯಾವುದೇ ಉದ್ಯಮವನ್ನು ಆಳುವವನಿಗೆ ಈ ಗುಣ ಬೇಕು.

ಭೀಷ್ಮ, ದ್ರೋಣ ಮುಂತಾದವರು ಕೌರವರ ಪಕ್ಷದಲ್ಲಿದ್ದರೂ ಒಳ್ಳೆಯವರೇ ಆಗಿದ್ದರು. ಕೃಷ್ಣ ಅವರನ್ನು ತಾನಾಗಿ ಕೊಲ್ಲಲಿಲ್ಲ. ಆದರೆ ಕಂಸ, ಶಿಶುಪಾಲ, ದುರ್ಯೋಧನನಂತಹ ಕೆಟ್ಟವರನ್ನು ತಾನೇ ಕೊಂದ ಅಥವಾ ಮುಂದೆ ನಿಂತು ಕೊಲ್ಲಿಸಿದ. ಈ ಎಲ್ಲಾ ಸಂದರ್ಭಗಳಲ್ಲೂ ಅವನು ದೇಶದ, ಧರ್ಮದ, ಸಂದರ್ಭದ ಒಳಿತನ್ನೇ ಗಮನದಲ್ಲಿರಿಸಿಕೊಂಡಿದ್ದ. ಶತ್ರುಗಳು ಅಥವಾ ಸ್ಪರ್ಧಿಗಳನ್ನು ಮನವೊಲಿಸಲು ಮೊದಲು ಪ್ರಯತ್ನಿಸಬೇಕು. ಸಾಧ್ಯವಾಗದಿದ್ದರೆ ದಂಡ ಕೈಗೆತ್ತಿಕೊಳ್ಳಬೇಕು.

ಪ್ರಪಂಚ ಎಷ್ಟೇ ಕೆಟ್ಟಿದೆ ಎಂದು ಸಿನಿಕರಂತೆ ನಾವು ಮಾತನಾಡಿದರೂ ಇಲ್ಲಿ ಒಳ್ಳೆಯತನವೂ ಸಾಕಷ್ಟಿದೆ. ಹಾಗೆಯೇ ಉದ್ಯಮ ಜಗತ್ತಿನಲ್ಲೂ ಒಳ್ಳೆಯತನವಿದೆ. ಮೋಸವೊಂದೇ ಇಲ್ಲಿ ಕೆಲಸಕ್ಕೆ ಬರುತ್ತದೆಯೆಂದು ಮ್ಯಾನೇಜ್‌ಮೆಂಟುಗಳು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಕಾರ್ಪೊರೇಟ್‌ ಕಂಪನಿಗಳು ಕೃಷ್ಣನಂತೆ ಒಳ್ಳೆಯತನ ಹಾಗೂ ಕಾಪಟ್ಯ ಎರಡನ್ನೂ ಕಲಿತಿರಬೇಕಾಗುತ್ತದೆ.

Follow Us:
Download App:
  • android
  • ios