ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ, ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಬೈಕ್‌ಗೆ ಡಿಕ್ಕಿ ಹೊಡೆದು, ಸುಮಾರು 2 ಕಿಲೋಮೀಟರ್‌ ಕಾರಿನಡಿಯಲ್ಲಿ ಸಿಲುಕಿದ್ದ ಬೈಕನ್ನು ಎಳೆದೊಯ್ದಿದ್ದಾನೆ. ಸ್ಥಳೀಯರು ಕಾರನ್ನು ಅಡ್ಡಗಟ್ಟಿ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದು, ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರು!

ಬೆಂಗಳೂರು(ಡಿ.24): ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಕುಡುಕ ಚಾಲಕರ ಹಾವಳಿ ಮುಂದುವರಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊರವರ್ತುಲ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿದ್ದ ಕಾರು ಚಾಲಕನೊಬ್ಬ ಬೈಕ್‌ಗೆ ಗುದ್ದಿದ್ದಲ್ಲದೆ, ಬೈಕನ್ನು ಸುಮಾರು 2 ಕಿಲೋಮೀಟರ್‌ಗಳವರೆಗೆ ರಸ್ತೆಯಲ್ಲೇ ಎಳೆದೊಯ್ದ ಭೀಕರ ಘಟನೆ ಇಂದು ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಸ್ತೆಬದಿ ಗಾಡಿ ನಿಲ್ಲಿಸಿ ನಿಂತಿದ್ದವನಿಗೆ ಡಿಕ್ಕಿ:

ಬೈಕ್ ಸವಾರರೊಬ್ಬರು ತಮಗೆ ಫೋನ್ ಬಂದ ಹಿನ್ನೆಲೆಯಲ್ಲಿ ಮಾತನಾಡಲು ರಸ್ತೆ ಬದಿಯಲ್ಲಿ ಬೈಕ್ ಸ್ಲೋ ಮಾಡಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ KA06MC8559 ನೋಂದಣಿ ಸಂಖ್ಯೆಯ ಕಾರು ಬೈಕ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಚಾಲಕ ರಸ್ತೆಗೆ ಬಿದ್ದಿದ್ದರೆ, ಬೈಕ್ ಮಾತ್ರ ಕಾರಿನ ಮುಂಭಾಗದ ಅಡಿಯಲ್ಲಿ ಸಿಲುಕಿಕೊಂಡಿದೆ.

ಬೆಂಕಿ ಬಂದರೂ ನಿಲ್ಲಿಸದೆ 2 ಕಿ.ಮೀ ಚಾಲನೆ!

ಬೈಕ್ ಕಾರಿನ ಅಡಿ ಸಿಲುಕಿದ್ದರೂ ಚಾಲಕ ಶಿವಕುಮಾರ್ ಕಾರನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿದ್ದಾನೆ. ರಸ್ತೆಯ ಮೇಲೆ ಬೈಕ್ ಉಜ್ಜಿಕೊಂಡು ಹೋದ ಪರಿಣಾಮ ಕಿಡಿಗಳು ಸಿಡಿದು ಬೆಂಕಿ ಕಾಣಿಸಿಕೊಂಡರೂ, ಮದ್ಯದ ಅಮಲಿನಲ್ಲಿದ್ದ ಚಾಲಕನಿಗೆ ಇದರ ಅರಿವೇ ಇರಲಿಲ್ಲ. ಸುಮಾರು 2 ಕಿಲೋಮೀಟರ್‌ವರೆಗೂ ಬೈಕನ್ನು ಎಳೆದೊಯ್ದ ದೃಶ್ಯವನ್ನು ಕಂಡು ಹಾದಿಹೋಕರು ಬೆಚ್ಚಿಬಿದ್ದಿದ್ದಾರೆ.

ಚೇಸ್ ಮಾಡಿ ಕಾರು ಅಡ್ಡಗಟ್ಟಿದ ಸ್ಥಳೀಯರು

ಕಾರಿನ ಅಡಿಯಲ್ಲಿ ಬೈಕ್ ಸಿಲುಕಿ ಬೆಂಕಿ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮತ್ತು ಇತರ ವಾಹನ ಸವಾರರು ತಕ್ಷಣವೇ ಕಾರನ್ನು ಬೆನ್ನಟ್ಟಿದ್ದಾರೆ. ಕೊನೆಗೆ ಕಾರನ್ನು ಅಡ್ಡಗಟ್ಟಿದ ಸಾರ್ವಜನಿಕರು ಚಾಲಕನನ್ನು ಕೆಳಗಿಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಾಲಕ ಶಿವಕುಮಾರ್ ಮದ್ಯ ಸೇವಿಸಿ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದದ್ದು ಮೇಲ್ನೋಟಕ್ಕೆ ದೃಢಪಟ್ಟಿದೆ.

ಬೈಕ್ ಸವಾರ ಪ್ರಾಣಾಪಾಯದಿಂದ ಪಾರು

ಅದೃಷ್ಟವಶಾತ್ ಬೈಕ್ ಸವಾರ ದೊಡ್ಡ ಅಪಾಯದಿಂದ ಪಾರಾಗಿದ್ದು, ಡಿಕ್ಕಿ ಹೊಡೆದ ತಕ್ಷಣ ಕೆಳಕ್ಕೆ ಬಿದ್ದಿದ್ದರಿಂದ ಚಿಕ್ಕಪುಟ್ಟ ಗಾಯಗಳಾಗಿವೆ. ಒಂದು ವೇಳೆ ಸವಾರ ಕೂಡ ಬೈಕ್‌ನಲ್ಲೇ ಸಿಲುಕಿಕೊಂಡಿದ್ದರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.

ಕಾರು ಚಾಲಕ ಪೊಲೀಸರ ವಶಕ್ಕೆ

ಅಪಘಾತಕ್ಕೆ ಕಾರಣನಾದ ಕಾರು ಚಾಲಕ ಶಿವಕುಮಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.