2014ರಲ್ಲಿ ನಾವು ಅಧಿಕಾರಕ್ಕೆ ಬಂದ ನಂತರ ಕಾಶ್ಮೀರದಲ್ಲಿ ಉಗ್ರವಾದ ಕೊನೆಯುಸಿರು ಎಳೆಯುತ್ತಿದೆ. ನಾವು ನೀವೆಲ್ಲ ಸೇರಿ ಸುಂದರ, ಸುಭದ್ರ ಹಾಗೂ ಸಮೃದ್ಧ ಕಾಶ್ಮೀರ ನಿರ್ಮಿಸೋಣ ಎಂದು ಮತದಾರರಿಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ 

ದೋಡಾ(ಸೆ.15):  ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ನಿಮಿತ್ತ ಬಿಜೆಪಿ ಪ್ರಚಾರಕ್ಕೆ ರಣಕಹಳೆ ಊದಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲ ದಿನದ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಮುಫ್ತಿ-ಅಬ್ದುಲ್ಲಾ-ಗಾಂಧಿ ಕುಟುಂಬಗಳ ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ದೋಡಾದಲ್ಲಿ ಶನಿವಾರ ಮಾತನಾಡಿದ ಮೋದಿ, ‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 20 ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೆ ಬಿಜೆಪಿಗರು ಜೈಲುಪಾಲಾಗುತ್ತಿದ್ದರು’ ಎಂದು ಖರ್ಗೆ ಇತ್ತೀಚೆಗೆ ಕಾಶ್ಮೀರದ ಅನಂತನಾಗ್‌ನಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದರು. ‘ನೀವು ಜನರನ್ನು ಜೈಲಿಗೆ ಹಾಕಲು ಅಧಿಕಾರ ಬಯಸುತ್ತೀರಾ ಅಥವಾ ಜನರಿಗಾಗಿ ಕೆಲಸ ಮಾಡಲು ಕೇಂದ್ರದಲ್ಲಿ ಸರ್ಕಾರ ರಚಿಸಲು ಬಯಸುತ್ತೀರಾ?’ ಎಂದು ಕೇಳಿದ ಪ್ರಧಾನಿ, ‘ನಾವು ಜನರ ಕಲ್ಯಾಣಕ್ಕಾಗಿ ಸರ್ಕಾರವನ್ನು ನಡೆಸುತ್ತೇವೆ. ಅವರಿಗೆ (ಕಾಂಗ್ರೆಸ್) ಯಾವುದೇ ಅಜೆಂಡಾ ಇಲ್ಲದಿದ್ದಾಗ ಅವರು ಜನರನ್ನು ಜೈಲಿಗೆ ಕಳುಹಿಸಲು ಬಯಸುತ್ತಾರೆ’ ಎಂದು ಚಾಟಿ ಬೀಸಿದರು.

ಪ್ರಧಾನಿ ನಿವಾಸಕ್ಕೆ ಬಂದ ಅತಿಥಿಗೆ ಮುದ್ದಾದ ಹೆಸರಿಟ್ಟ ನರೇಂದ್ರ ಮೋದಿ!

ರಾಹುಲ್‌ಗೆ ತರಾಟೆ:

ರಾಹುಲ್‌ ಗಾಂಧಿ ಅವರ ‘ಮೊಹಬ್ಬತ್‌ ಕೀ ದುಕಾನ್‌’ ಹೇಳಿಕೆಯನ್ನು ಮತ್ತೆ ಮೋದಿ ಪ್ರಶ್ನಿಸಿದರು. ‘ನಮ್ಮ ದೇಶದ ಪತ್ರಕರ್ತರೊಬ್ಬರು ಅಮೆರಿಕದಲ್ಲಿ ಕಾಂಗ್ರೆಸ್ಸಿಗರಿಂಸದ ದೌರ್ಜನ್ಯಕ್ಕೆ ಒಳಗಾದರು. ಅಮೆರಿಕದಲ್ಲಿ ಭಾರತದ ಪುತ್ರನಿಗೆ ಅವಮಾನ ಮಾಡಲಾಗಿದೆ. ವಾಕ್ ಸ್ವಾತಂತ್ರ್ಯದ ಚಾಂಪಿಯನ್ ಎಂದು ಹೇಳಿಕೊಳ್ಳುವವರು ಕ್ರೌರ್ಯದಲ್ಲಿ ತೊಡಗಿದ್ದಾರೆ’ ಎಂದು ರಾಹುಲ್‌ ಅಮೆರಿಕ ಭೇಟಿ ವೇಳೆ ಭಾರತೀಯ ಪತ್ರಕರ್ತನ ಮೇಲೆ ಕಾಂಗ್ರೆಸ್ಸಿಗರು ನಡೆಸಿದರು ಎನ್ನಲಾದ ಹಲ್ಲೆಯನ್ನು ಖಂಡಿಸಿದರು. 

ಮೋದಿ ತವರಲ್ಲಿ ಮೊದಲ 'ವಂದೇ ಮೆಟ್ರೋ' ಚಾಲನೆಗೆ ಕ್ಷಣಗಣನೆ; ಎಷ್ಟು ವೇಗದಲ್ಲಿ ಚಲಿಸುತ್ತೆ ಈ ಟ್ರೈನ್?

ವಂಶಪರಂಪರೆ ವಿರುದ್ಧ ವಾಗ್ದಾಳಿ:

‘ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ವಂಶಪರಂಪರೆಯ ಪಕ್ಷಗಳು. ಇವರು ತಮ್ಮ ವಂಶದ ಉದ್ಧಾರಕ್ಕಾಗಿ ಕಾಶ್ಮೀರ ಹಾಳು ಮಾಡಿದ್ದಾರೆ. ಅದಕ್ಕೆಂದೇ ಬಿಜೆಪಿ ಯುವ ನಾಯಕತ್ವವನ್ನು ಬೆಳೆಸುತ್ತಿದೆ’ ಎಂದು ಗಾಂಧಿ, ಮುಫ್ತಿ ಹಾಗೂ ಅಬ್ದುಲ್ಲಾ ಕುಟುಂಬಗಳನ್ನು ಕುಟುಕಿದರು

ಕಾಶ್ಮೀರದಲ್ಲಿ ಉಗ್ರವಾದದ ಕೊನೆಯುಸಿರು: ಮೋದಿ

ದೋಡಾ: ‘ 2014ರಲ್ಲಿ ನಾವು ಅಧಿಕಾರಕ್ಕೆ ಬಂದ ನಂತರ ಕಾಶ್ಮೀರದಲ್ಲಿ ಉಗ್ರವಾದ ಕೊನೆಯುಸಿರು ಎಳೆಯುತ್ತಿದೆ. ನಾವು ನೀವೆಲ್ಲ ಸೇರಿ ಸುಂದರ, ಸುಭದ್ರ ಹಾಗೂ ಸಮೃದ್ಧ ಕಾಶ್ಮೀರ ನಿರ್ಮಿಸೋಣ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮತದಾರರಿಗೆ ಕರೆ ನೀಡಿದರು. ಆದರೆ ಇದಕ್ಕೆ ಕಿಡಿಕಾರಿರುವ ಕಾಂಗ್ರೆಸ್‌, ‘ಮೋದಿ ಅಧಿಕಾರಕ್ಕೆ ಬಂದ ನಂತರವೇ ಕಾಶ್ಮೀರದಲ್ಲಿ ಉಗ್ರವಾದ ಹೆಚ್ಚಿದೆ. ಕಾಶ್ಮೀರದಲ್ಲಿ ಬಿಜೆಪಿ, ಆರೆಸ್ಸೆಸ್‌ನವರು ಅಧಿಕಾರಿಗಳ ಮೂಲಕ ದರ್ಬಾರು ನಡೆಸಲು ಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.