ಕೇಂದ್ರ ಸಚಿವ ಕುಮಾರಸ್ವಾಮಿ ಅವರ 'ದೇಶವೇ ಅಲ್ಲೋಲ ಕಲ್ಲೋಲ' ಹೇಳಿಕೆಗೆ ಪ್ರತಿಕ್ರಿಯಿಸಿದ ಕೃಷಿ ಸಚಿವ ನರೇಂದ್ರಸ್ವಾಮಿ, ಕುಮಾರಸ್ವಾಮಿಯವರನ್ನು ಹಾವಾಡಿಗರಿಗೆ ಹೋಲಿಸಿದ್ದಾರೆ. ದಾಖಲೆಗಳಿವೆ ಎಂದು ಹೆದರಿಸುವ ಬದಲು, ತಮ್ಮ ಬುಟ್ಟಿಯಲ್ಲಿರುವುದನ್ನು ತೋರಿಸಿ ಎಂದು ಸವಾಲು ಹಾಕಿದ್ದಾರೆ.
ಮಂಡ್ಯ (ಸೆ.6): 'ದೇಶವೇ ಅಲ್ಲೋಲ ಕಲ್ಲೋಲ ವಿಚಾರ ಹೇಳ್ತೇನೆ' ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಮಂಡ್ಯದ ಹಲಗೂರಿನಲ್ಲಿ ಕೃಷಿ ಸಚಿವ ನರೇಂದ್ರಸ್ವಾಮಿ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿಯವರನ್ನ ಹಾವಾಡಿಗರಿಗೆ ಹೋಲಿಸಿ ತಿರುಗೇಟು ನೀಡಿದರು.
ಕುಮಾರಸ್ವಾಮಿ ಹಾವಾಡಿಗರಿದ್ದಂತೆ..
ಟೀಕೆ ಮಾಡಲೆಂದೇ ಒಬ್ಬರಿಗೆ ಕೇಂದ್ರ ಸಚಿವ ಸ್ಥಾನ ಕೊಟ್ಟಿದ್ದಾರೆ. ಹಿಂದೆ ಹಾವಾಡಿಗರು ಐದಾರು ಬುಟ್ಟಿ ತರುತ್ತಿದ್ದರು. ಅದರಲ್ಲಿ ವಿಷ ಸರ್ಪಗಳಿವೆ ಅಂತಾ ಹೆದರಿಸ್ತಿದ್ರು ಆದ್ರೆ ಯಾರಿಗೂ ತೋರಿಸ್ತಿರಲಿಲ್ಲ. ಅದೇ ರೀತಿ ಕುಮಾರಸ್ವಾಮಿ ದಾಖಲೆ ಇದೆ, ಆಗ ಬಿಡುಗಡೆ ಮಾಡ್ತೀನಿ, ಈಗ ಬಿಡುಗಡೆ ಮಾಡ್ತೀನಿ ಅಂತಾ ಹೆದರಿಸ್ತಾರೆ. ಆದರೆ ಈವರೆಗೆ ಒಂದು ದಾಖಲೆ ಬಿಟ್ಟಿಲ್ಲ ಎಂದು ವ್ಯಂಗ್ಯವಾಡಿದರು.
ಸದನದಲ್ಲೂ ಅಷ್ಟೇ ಹೆಚ್ಡಿಕೆ, ರೇವಣ್ಣ ಇಬ್ಬರೂ ಅವರೇ ಕಾಣದಷ್ಟು ಎತ್ತರದ ಫೈಲು ಇಟ್ಟುಕೊಂಡು ಕೂರುತ್ತಿದ್ದರು. ಆದ್ರೆ ಯಾವುದಾದರೂ ದಾಖಲೆ ಇದುವರೆಗೆ ಬಿಟ್ಟಿದ್ದು ನೋಡಿಲ್ಲ. ಒಂದು ರೀತಿ ಕುಮಾರಸ್ವಾಮಿ ಹಿಟ್ ಅಂಡ್ ರನ್. ಈಗಲೂ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡ್ಬೇಡಿ. ನಿಮ್ಮ ಬುಟ್ಟಿಯಲ್ಲೇನಿದೆ ತೋರಿಸಿ, ಈಗಲಾದ್ರೂ ದಾಖಲೆಗಳನ್ನ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ವಿರುದ್ಧ ಕುಸ್ತಿ ಗೆದ್ದ ಒಬ್ಬನೇ ಪೈಲ್ವಾನ್ ಡಿಕೆಶಿ
ಕುಮಾರಸ್ವಾಮಿ ವಿರುದ್ಧ ಕುಸ್ತಿ ಗೆದ್ದ ಒಬ್ಬನೇ ಒಬ್ಬ ಪೈಲ್ವಾನ್ ನಮ್ಮ ಡಿಕೆಶಿ. ದೊಡ್ಡ ದೊಡ್ಡ ಕುಸ್ತಿಪಟುಗಳನ್ನ ಹೊಡೆದುಕೊಂಡು ಬಂದ ದೊಡ್ಡ ಪೈಲ್ವಾನ್ ಡಿಕೆಶಿ. ಕುಮಾರಸ್ವಾಮಿ ಎಂಥ ಪಟ್ಟು ಹಾಕದ್ರೂ ಡಿಕೆಸಿ ಉತ್ತರ ಕೊಡ್ತಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನ ಹಾಡಿಹೊಗಳಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಬಗ್ಗೆ ಕೃಷಿ ಸಚಿವ ಹೇಳಿದ್ದೇನು?
ಇನ್ನು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಕಾವೇರಿ ನೀರು ತಮಿಳುನಾಡಿಗೆ ಬಿಟ್ಟು ಬಿಟ್ಟಿದ್ದಾರೆ ಅಂತ ಹೋರಾಟಗಳು ನಡೆಯುತ್ತಿವೆ. ಆದರೆ CWMA, CWRC ಸುಪ್ರೀಂ ಕೋರ್ಟ್ ಮುಂದೆ ವಾಸ್ತವ ಸ್ಥಿತಿ ಇಟ್ಟಿದ್ದೇವೆ. ಒಂದು ಕಡೆ ನಮ್ಮ ರೈತರ ಹಿತವನ್ನು ಕಾಪಾಡಬೇಕಿದೆ. ಜೊತೆಗೆ ದೇಶದ ಕಾನೂನನ್ನು ಪಾಲಿಸಬೇಕಿದೆ. ಇದನ್ನ ಸರ್ಕಾರ ನಿಭಾಯಿಸುವ ಕೆಲಸ ಮಾಡ್ತಿದೆ ಎಂದರು.
ಭಗವಂತ ಬಿಟ್ಟರೆ ಬೇರೆ ದಾರಿ ಇಲ್ಲ
ಮಂಡ್ಯ ಜಿಲ್ಲೆ ಕೃಷಿ ಪ್ರದೇಶ. ಬೆಳೆ ಇಲ್ಲದೆ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ.. ಜನಜಾನುವಾರುಗಳ ರಕ್ಷಣೆ ಮಾಡಲು ನಾವು ಸಿದ್ದರಿದ್ದೇವೆ. ಈ ಬಾರಿ ಮಳೆ ಕೊರತೆ, ಬರಗಾಲದಿಂದಾಗಿ ರಾಜ್ಯದಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿ ಇದೆ. ಇದೇ ಪರಿಸ್ಥಿತಿ ಒಂದು ತಿಂಗಳು ಮುಂದುವರಿದರೆ ಕಷ್ಟವಾಗುತ್ತೆ. ಸದ್ಯ ಭಗವಂತನ ಬಿಟ್ಟರೆ ಬೇರೆ ದಾರಿ ಇಲ್ಲ. ಅಧಿಕಾರಿಗಳ ತಂಡಗಳನ್ನು ರೈತರ ಜಮೀನಿಗೆ ಕಳುಹಿಸಿ ಪರಿಶೀಲನೆ ನಡೆಸುತ್ತಿದ್ದೇವೆ.
ರೈತರು ಸಹಕರಿಸುವಂತೆ ಕೃಷಿ ಸಚಿವ ಮನವಿ
ರೈತರು ಈ ವರ್ಷ ಅರೆ ಬೆಳೆ ಬೆಳೆಯುವ ಕೆಲಸ ಮಾಡಬೇಕು. ಈ ಬಾರಿ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ದಯವಿಟ್ಟು ರೈತರು ಸಹಕರಿಸಬೇಕು. ಬೆಂಗಳೂರಿನ ಕುಡಿಯುವ ನೀರಿಗೆ ಕೂಡ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತೆ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.


