Asianet Suvarna News Asianet Suvarna News

ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ನಿರ್ಧಾರ ಸರಿಯಾಗಿದೆ: ಸಚಿವರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ತಮಗೆ ಹಂಚಿಕೆ ಮಾಡಲಾಗಿದ್ದ 14 ನಿವೇಶನಗಳನ್ನು ವಾಪಸ್‌ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ನಿರ್ಧಾರವನ್ನು ಸ್ವಾಗತಿಸಿರುವ ಸಚಿವರು, ನಿವೇಶನ ವಾಪಸ್‌ ನೀಡಿರುವುದು ಸರಿಯಾಗಿದೆ ಎಂದಿದ್ದಾರೆ. 

CM Siddaramaiahs wifes decision in Muda case is right Says Ministers gvd
Author
First Published Oct 2, 2024, 6:27 AM IST | Last Updated Oct 2, 2024, 6:27 AM IST

ಬೆಂಗಳೂರು (ಅ.02): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ತಮಗೆ ಹಂಚಿಕೆ ಮಾಡಲಾಗಿದ್ದ 14 ನಿವೇಶನಗಳನ್ನು ವಾಪಸ್‌ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ನಿರ್ಧಾರವನ್ನು ಸ್ವಾಗತಿಸಿರುವ ಸಚಿವರು, ನಿವೇಶನ ವಾಪಸ್‌ ನೀಡಿರುವುದು ಸರಿಯಾಗಿದೆ ಎಂದಿದ್ದಾರೆ. ಜತೆಗೆ, ಏನೇ ಆದರೂ ಕಾಂಗ್ರೆಸ್‌ ಪಕ್ಷ ಹಾಗೂ 136 ಶಾಸಕರು ಸಿಎಂ ಸಿದ್ದರಾಮಯ್ಯ ಪರವಾಗಿ ನಿಲ್ಲುತ್ತೇವೆ ಎಂದು ಪುನರುಚ್ಚರಿಸಿದ್ದಾರೆ.

ಹಿರಿಯ ಸಚಿವರಾದ ಡಾ. ಜಿ.ಪರಮೇಶ್ವರ್‌, ಎಚ್.ಸಿ. ಮಹದೇವಪ್ಪ, ಎಚ್‌.ಕೆ. ಪಾಟೀಲ್‌, ಕೆ.ಎನ್‌. ರಾಜಣ್ಣ ಪ್ರತ್ಯೇಕವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮುಡಾ ಪ್ರಕರಣದಲ್ಲಿ ಬಿಜೆಪಿ, ಜೆಡಿಎಸ್‌ ರಾಜಕೀಯ ಮಾಡುತ್ತಿವೆ ಎಂದು ಹಿಂದಿನಿಂದಲೂ ನಾವು ಹೇಳುತ್ತಿದ್ದೆವು. ಅದಕ್ಕೆ ಪೂರಕವಾಗಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸರ್ಕಾರದ ಇ.ಡಿ. ತನಿಖೆ ಮೂಲಕ ರಾಜಕೀಯ ಅಸ್ತ್ರ ಬಳಕೆ ಮಾಡಿಕೊಳ್ಳುತ್ತಿದೆ. ವಿವಿಧ ತನಿಖಾ ಸಂಸ್ಥೆಗಳ ಮೂಲಕ ಸಿದ್ದರಾಮಯ್ಯ ಅವರಿಗೆ ಮಾನಸಿಕವಾಗಿ ಹಿಂಸೆ ನೀಡುವ ಪ್ರವೃತ್ತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿದರು.

Muda Case: ಸಿಎಂ ಸಿದ್ದರಾಮಯ್ಯ ಪತ್ನಿ ಹಿಂದಿರುಗಿಸಿದ 14 ಸೈಟ್‌ ಖಾತೆ ರದ್ದು

ಡಾ. ಜಿ.ಪರಮೇಶ್ವರ್‌ ಮಾತನಾಡಿ, ಹರಿಯಾಣ ವಿಧಾನಸಭಾ ಚುನಾವಣಾ ಕಣದಲ್ಲಿ ಪ್ರಧಾನಮಂತ್ರಿಯವರು ಮುಡಾ ಪ್ರಕರಣವನ್ನು ಪ್ರಸ್ತಾಪಿಸುವ ಮೂಲಕ ರಾಜಕೀಯ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಬಿಜೆಪಿಯವರು ದುರುದ್ದೇಶದಿಂದ ಸರ್ಕಾರ ಅಸ್ಥಿರ ಮಾಡಲು ಹೊರಟಿದ್ದಾರೆ. ನಮ್ಮ ಎಲ್ಲ 136 ಶಾಸಕರೂ ಸಿಎಂ ಪರವಾಗಿದ್ದೇವೆ. ಪಕ್ಷ ಅವರೊಂದಿಗಿದ್ದು, ಅದನ್ನು ಎಐಸಿಸಿ ಅಧ್ಯಕ್ಷರೇ ಹೇಳಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಮುಡಾ ಸೈಟುಗಳನ್ನು ವಾಪಸ್‌ ನೀಡಿರುವುದು ಒಳ್ಳೆಯ ನಿರ್ಧಾರ. ಈ ಪ್ರಕರಣದಿಂದ ತಮ್ಮ ಪತಿಯ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆಯಾಗುತ್ತದೆ, ತೊಂದರೆಯಾಗುತ್ತದೆ ಎಂಬುದನ್ನು ಅರಿತು ಬಹಳ ನೋವಿನಿಂದ ನಿವೇಶನಗಳನ್ನು ವಾಪಸ್‌ ಮಾಡುತ್ತೇನೆ ಎಂದಿದ್ದಾರೆ. ಆಪಾದನೆ ಬಂದ ಕೂಡಲೇ ಅದು ಸತ್ಯವಾಗಬೇಕೆಂದಿಲ್ಲ. ತನಿಖೆ ನಡೆಯಲಿ. ಆದರೆ ಇದನ್ನು ರಾಜಕೀಯವಾಗಿ ಬಳಕೆ ಮಾಡಲಾಗುತ್ತಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಇದರಿಂದ ಕಾನೂನಾತ್ಮಕವಾಗಿ ಮುಂದೇನು ಆಗುತ್ತದೆ ಎಂಬುದು ನೋಡಬೇಕು ಎಂದು ಹೇಳಿದರು.

ಇ.ಡಿ.ಗೂ ಲಗಾಮು?: ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಿದ್ದರಾಮಯ್ಯ ಅವರೇ ತನಿಖೆಯನ್ನು ಸ್ವಾಗತಿಸಿದ್ದಾರೆ. ಇ.ಡಿ.ಗೂ ಲಗಾಮು ಹಾಕಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ, ಅದರ ಬಗ್ಗೆ ಸಿಎಂ ಜತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು. ಸಿಎಂ ಪತ್ನಿ ನಿವೇಶನ ವಾಪಸ್‌ ನೀಡಿರುವ ವಿಚಾರ ಸಿದ್ದರಾಮಯ್ಯ ಅವರಿಗೂ ಆಶ್ಚರ್ಯ ತಂದಿದೆ. ಒಬ್ಬ ಗೃಹಿಣಿ ಮಾನಸಿಕ ಸ್ಥಿತಿ ಇಲ್ಲಿ ಪ್ರದರ್ಶನವಾಗಿದೆ. ತಮ್ಮ ಪತಿಗೆ ಅವಮಾನ ಮಾಡುತ್ತಿರುವುದಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಅವರ ಘನತೆ, ಗೌರವಕ್ಕೆ ಧಕ್ಕೆ ತರುತ್ತಿರುವ ನಿವೇಶನ ಬೇಡ ಎಂದು ಈ ರೀತಿ ಮಾಡಿರಬಹುದು ಎಂದು ಅಭಿಪ್ರಾಯಪಟ್ಟರು.

ರಾಮನಗರವನ್ನು ಬರಪೀಡಿತ ತಾಲೂಕಾಗಿ ಘೋಷಿಸಲು ಒತ್ತಾಯಿಸುವೆ: ಶಾಸಕ ಇಕ್ಬಾಲ್ ಹುಸೇನ್

ಸಿಎಂ ರಾಜೀನಾಮೆ ಏಕೆ ನೀಡಬೇಕು?: ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಮಾತನಾಡಿ, ಸಿದ್ದರಾಮಯ್ಯ ರಾಜೀನಾಮ ಏಕೆ ನೀಡಬೇಕು ಎಂಬುದು ತಿಳಿಯುತ್ತಿಲ್ಲ. ವಿಪಕ್ಷ ನಾಯಕರಲ್ಲಿ ಹಲವರ ಮೇಲೆ ಕೊಲೆ ಪ್ರಕರಣಗಳೂ ದಾಖಲಾಗಿವೆ. ಎಷ್ಟು ಮಂದಿ ರಾಜೀನಾಮೆ ನೀಡಿದ್ದಾರೆ. ಸಿದ್ದರಾಮಯ್ಯ ಇರುವವರೆಗೆ ಕಾಂಗ್ರೆಸ್‌ ಪಕ್ಷ ಶಕ್ತಿಯುತವಾಗಿರುತ್ತದೆ. ವಿಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲ ಎಂಬ ಅಸೂಯೆಯಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Latest Videos
Follow Us:
Download App:
  • android
  • ios