Asianet Suvarna News Asianet Suvarna News

Muda Case: ಸಿಎಂ ಸಿದ್ದರಾಮಯ್ಯ ಪತ್ನಿ ಹಿಂದಿರುಗಿಸಿದ 14 ಸೈಟ್‌ ಖಾತೆ ರದ್ದು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಕಂಟಕವಾಗಿ ಪರಿಣಮಿಸಿರುವ, ರಾಜ್ಯ ರಾಜಕಾರಣದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ 14 ಸೈಟು ಹಂಚಿಕೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. 

Muda Case 14 site account returned by CM Siddaramaiahs wife canceled gvd
Author
First Published Oct 2, 2024, 6:16 AM IST | Last Updated Oct 2, 2024, 6:16 AM IST

ಮೈಸೂರು (ಅ.02): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಕಂಟಕವಾಗಿ ಪರಿಣಮಿಸಿರುವ, ರಾಜ್ಯ ರಾಜಕಾರಣದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ 14 ಸೈಟು ಹಂಚಿಕೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸೈಟು ಹಿಂಪಡೆಯುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಆ 14 ನಿವೇಶನಗಳ ಖಾತೆಯನ್ನು ಮುಡಾ ರದ್ದುಗೊಳಿಸಿದೆ. ಮುಖ್ಯಮಂತ್ರಿಯೂ ಆಗಿರುವ ತಮ್ಮ ಪತಿಯ ರಾಜಕೀಯ ಬದುಕನ್ನು ಕಟಕಟೆಯಲ್ಲಿ ತಂದು ನಿಲ್ಲಿಸಲು ಕಾರಣವಾಗಿರುವ ತಮ್ಮ ಹೆಸರಿನಲ್ಲಿರುವ ವಿವಾದಿತ 14 ನಿವೇಶನವನ್ನು ಹಿಂತಿರುಗಿಸುವ ಸಂಬಂಧ ಪಾರ್ವತಿ ಅವರು ಮುಡಾಗೆ ಬರೆದಿದ್ದ ಪತ್ರ ಸೋಮವಾರವಷ್ಟೇ ಬಹಿರಂಗವಾಗಿತ್ತು. 

ಇದರ ಬೆನ್ನಲ್ಲೇ ಅವರ ಪುತ್ರ, ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮಂಗಳವಾರ ಮುಡಾ ಕಚೇರಿಗೆ ತೆರಳಿ ಸೈಟ್‌ ಹಿಂಪಡೆಯುಂತೆ ಕೋರಿ ಪಾರ್ವತಿ ಅವರು ಬರೆದಿದ್ದ ಪತ್ರವನ್ನು ಮುಡಾ ಆಯುಕ್ತರಿಗೆ ಸಲ್ಲಿಸಿದರು. ಅದರಂತೆ ಎಲ್ಲಾ 14 ನಿವೇಶನಗಳನ್ನು ಮುಡಾ ವಾಪಸ್ ಪಡೆದುಕೊಂಡು, ಪಾರ್ವತಿ ಅವರ ಹೆಸರಿನಲ್ಲಿದ್ದ ಕ್ರಯಪತ್ರ (ಸೇಲ್ ಡೀಡ್)ವನ್ನು ರದ್ದು ಮಾಡಿದೆ. ಪಾರ್ವತಿ ಸಿದ್ದರಾಮಯ್ಯ ಅವರು ಸ್ವಇಚ್ಛೆಯಿಂದ ಸೈಟ್ ವಾಪಸ್ ಕೊಟ್ಟಿದ್ದಾರೆ. ಅದರಂತೆ ಕಾನೂನು ಸಲಹೆ ಪಡೆದು ನಾವು ಪಾರ್ವತಿ ಅವರ ಹೆಸರಿನಲ್ಲಿದ್ದ 14 ಸೈಟ್ ಗಳ ಸೇಲ್ ಡೀಡ್ ರದ್ದು ಮಾಡಿದ್ದೇವೆ‌. ಈಗ ಮುಖ್ಯಮಂತ್ರಿ ಪತ್ನಿಗೆ ಹಂಚಿಕೆ ಮಾಡಲಾಗಿದ್ದ ಆ 14 ನಿವೇಶನ ಮುಡಾ ವ್ಯಾಪ್ತಿಗೆ ಬಂದಿವೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೂ ತಂದಿದ್ದೇವೆ ಎಂದು ಮುಡಾ ಆಯುಕ್ತ ರಘುನಂದನ್ ತಿಳಿಸಿದರು.

ಕಾಂಗ್ರೆಸ್ ಸರ್ಕಾರವನ್ನು ಹೊಡೆದೋಡಿಸಲು ಮೈತ್ರಿ ಅಗತ್ಯ: ನಿಖಿಲ್ ಕುಮಾರಸ್ವಾಮಿ

ಕಾನೂನಲ್ಲಿ ಅವಕಾಶ ಇದೆ: ಈ ಸೈಟ್ ಗಳನ್ನು ಬೇರೆಯವರಿಗೆ ಹಂಚಬಹುದಾ? ಅಥವಾ ತನಿಖೆ ಮುಗಿಯುವವರೆಗೂ ಅದನ್ನು ಹಾಗೇ ಉಳಿಸಿಕೊಳ್ಳಬೇಕಾ? ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇವೆ. ಪಾರ್ವತಿ ಅವರ ಸೈಟ್ ಗಳನ್ನು ಮುಡಾ ವಶಕ್ಕೆ ಪಡೆದ ಬಗ್ಗೆ ತನಿಖಾ ಸಂಸ್ಥೆಗಳಿಗೂ ಮಾಹಿತಿ ಕೊಡುತ್ತೇವೆ. ತನಿಖೆ ನಡೆಯುತ್ತಿದ್ದರೂ ಸಂಬಂಧಿತರು ಸೈಟ್ ವಾಪಸ್ ಕೊಟ್ಟರೆ ವಾಪಸ್ ಪಡೆಯಬಹುದು. ಇದಕ್ಕೆ ಕಾನೂನಲ್ಲಿ ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.

ಸೈಟ್ ವಾಪಸ್ ಪಡೆಯಲು ಅವಕಾಶ: 1991ರ ನಿಯಮದಡಿ ಸ್ವಇಚ್ಛೆಯಿಂದ ಸೈಟ್ ವಾಪಸ್ ಕೊಡಬಹುದು. ಆ ಸೈಟ್‌ ಅನ್ನು ನಾವು ಪಡೆದುಕೊಳ್ಳಲೂ ಅವಕಾಶವಿದೆ. ನಮ್ಮ ಬಳಿ ಭೂ ಮಾಲೀಕರು ಬಾರದಿದ್ದರೂ ಅವರ ಸ್ಥಳಕ್ಕೆ ಹೋಗಿ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶವಿದೆ. ಈ ಪ್ರಕರಣದಲ್ಲಿ ಪಾರ್ವತಿ ಅವರು ಕಚೇರಿಗೆ ಬಾರದೆ ನಿವೇಶನ ವಾಪಸ್ ಕೊಟ್ಟಿದ್ದಾರೆ. ನಾವು ಇದನ್ನು ಸಬ್‌ ರಿಜಿಸ್ಟ್ರಾರ್‌ಗೆ ಕಳುಹಿಸಿ ಕೊಟ್ಟಿದ್ದೇವೆ. ಮುಂದಿನ ಎಲ್ಲಾ ಪ್ರಕ್ರಿಯೆಯನ್ನು ಸಬ್‌ ರಿಜಿಸ್ಟ್ರಾರ್‌ ಮಾಡುತ್ತಾರೆ ಎಂದು ಮುಡಾ ಕಾರ್ಯದರ್ಶಿ ಪ್ರಸನ್ನಕುಮಾರ್ ಮಾಹಿತಿ ನೀಡಿದರು.

24 ಗಂಟೆಯಲ್ಲಿ ಕಾನೂನು ಪ್ರಕಾರ ನಿವೇಶನ ರದ್ದು ಮಾಡುವ ಅವಕಾಶವಿದೆ. ನಮ್ಮಲ್ಲಿರುವ ವಕೀಲರು, ತಜ್ಞರ ಬಳಿಯೂ ಈ ಕುರಿತು ಅಭಿಪ್ರಾಯ ಕೇಳಿದ್ದೇವೆ. ಅವರೂ ಅವಕಾಶ ಇದೆ ಎಂದು ಹೇಳಿದ್ದಾರೆ. ಇದು ಅಪರೂಪದಲ್ಲಿ ಅಪರೂಪದ ಪ್ರಕರಣ. ಹಾಗೆಯೇ ನಿವೇಶನ ವಾಪಸ್ ಕೊಟ್ಟಿರುವುದು ಮುಡಾದಲ್ಲಿ ಇದೇ ಮೊದಲು. ಇದರಿಂದ ಮುಡಾಗೆ ಅನಕೂಲವಾಗಲಿದೆ. ಮುಂದೆ ಯಾರೇ ಸೈಟ್ ಅನ್ನು ವಾಪಸ್ ಕೊಟ್ಟರೂ ಇಷ್ಟೇ ವೇಗವಾಗಿ ವಾಪಸ್ ಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಮನಗರವನ್ನು ಬರಪೀಡಿತ ತಾಲೂಕಾಗಿ ಘೋಷಿಸಲು ಒತ್ತಾಯಿಸುವೆ: ಶಾಸಕ ಇಕ್ಬಾಲ್ ಹುಸೇನ್

ಈಗಲೂ ಸೈಟ್‌ ಮಾಲಿಕತ್ವ ಪಾರ್ವತಿ ಅವರದೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾಗೆ ಬರೆದ ಒಂದು ಪತ್ರದ ಆಧಾರದ ಮೇಲೆ ಪ್ರಾಧಿಕಾರವು ತಕ್ಷಣ 14 ನಿವೇಶನಗಳ ಖಾತೆ ರದ್ದು‌ಮಾಡಿರಬಹುದು. ಆದರೆ ಸ್ವತ್ತಿನ ಖಾತೆಯನ್ನು ರದ್ದುಪಡಿಸಿದ ಮಾತ್ರಕ್ಕೆ ಸ್ವತ್ತಿನ ಮಾಲೀಕತ್ವ ತಕ್ಷಣಕ್ಕೆ ಬದಲಾಗುವುದಿಲ್ಲ ಎಂದು ಕಾನೂನುತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Latest Videos
Follow Us:
Download App:
  • android
  • ios