* ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ ಎರಡನೇ ಗೆಲುವು ಸಾಧಿಸಿದ ತಮಿಳ್ ತಲೈವಾಸ್* ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ತಲೈವಾಸ್* ಪಿಕೆಎಲ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಪ್ರದೀಪ್ ನರ್ವಾಲ್

ಬೆಂಗಳೂರು(ಜ.05): 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) ತಮಿಳ್‌ ತಲೈವಾಸ್‌ (Tamil Thalaivas) 2ನೇ ಗೆಲುವು ದಾಖಲಿಸಿದೆ. ಮಂಗಳವಾರ ನಡೆದ ಯು.ಪಿ.ಯೋಧಾ (UP Yoddha) ವಿರುದ್ಧದ ಪಂದ್ಯದಲ್ಲಿ 39-33 ಅಂಕಗಳ ಗೆಲುವು ಸಾಧಿಸಿತು. ಈ ಜಯದೊಂದಿಗೆ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರೆ, ಯೋಧಾ 8ನೇ ಸ್ಥಾನಕ್ಕೆ ಕುಸಿದಿದೆ. ಪ್ರದೀಪ್‌ ನರ್ವಾಲ್‌ (Pardeep Narwal) ಸತತ ವೈಫಲ್ಯ ಕಾಣುತ್ತಿರುವುದು ಯೋಧಾ ಅಂಕಪಟ್ಟಿಯಲ್ಲಿ ಹಿಂದೆ ಬೀಳಲು ಪ್ರಮುಖ ಕಾರಣ ಎನಿಸಿದೆ. ಯುಪಿ ಯೋಧಾ ತಂಡವು ಸೋಲು ಕಂಡರೂ ಸಹಾ, ತನ್ನ ತಾರಾ ಆಟಗಾರ ಪ್ರದೀಪ್‌ ಪ್ರೊ ಕಬಡ್ಡಿ ಇತಿಹಾಸದಲ್ಲಿ ಹೊಸ ಇತಿಹಾಸವೊಂದನ್ನು ನಿರ್ಮಿಸಿದ್ದಾರೆ.

ಯುಪಿ ಯೋಧಾ ತಂಡದ ಪರ ಸುರೇಂದರ್ ಗಿಲ್‌ 14 ಅಂಕಗಳನ್ನು ಗಳಿಸಿದರೆ, ತಾರಾ ರೈಡರ್ಸ್‌ ಪ್ರದೀಪ್ ನರ್ವಾಲ್‌ ಕೇವಲ 6 ಅಂಕಗಳನ್ನಷ್ಟೇ ತನ್ನ ಖಾತೆಗೆ ಸೇರಿಸಿಕೊಂಡರು. ತಮಿಳ್ ತಲೈವಾಸ್ ಪರ ಮಂಜೀತ್, ಪ್ರಪಂಜನ್ ಸೇರಿದಂತೆ ಸೇರಿದಂತೆ ಎಲ್ಲಾ ಆಟಗಾರರು ಸಂಘಟಿತ ಪ್ರದರ್ಶನ ತೋರಿ ತಂಡವನ್ನು ಗೆಲುವಿನ ದಡ ಸೇರಿಸಿದರು.

1200 ಅಂಕ ಗಳಿಸಿ ಇತಿಹಾಸ ನಿರ್ಮಿಸಿದ ಪ್ರದೀಪ್ ನರ್ವಾಲ್‌: ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ 1,200 ಅಂಕಗಳನ್ನು ಗಳಿಸಿದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ಪ್ರದೀಪ್ ನರ್ವಾಲ್ ಬರೆದಿದ್ದಾರೆ. ಸುರ್ಜಿತ್ ಸಿಂಗ್‌ ಅವರನ್ನು ಬಲಿ ಪಡೆಯುವ ಮೂಲಕ ಪ್ರದೀಪ್ ನರ್ವಾಲ್ ಈ ದಾಖಲೆ ಬರೆದಿದ್ದಾರೆ.

Scroll to load tweet…

Pro Kabaddi League: ಸೋಲಿನ ಸರಪಳಿ ಕಳಚಿದ ಬೆಂಗಾಲ್ ವಾರಿಯರ್ಸ್‌..!

ಇದೇ ವೇಳೆ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಹರ್ಯಾಣ ಸ್ಟೀಲ​ರ್ಸ್‌ ಹಾಗೂ ಯು ಮುಂಬಾ ತಂಡಗಳು 24-24ರಲ್ಲಿ ಟೈಗೆ ಸಮಾಧಾನಪಟ್ಟವು. 3ನೇ ಟೈ ಕಂಡ ಮುಂಬಾ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, ಹರ್ಯಾಣ 7ನೇ ಸ್ಥಾನ ಪಡೆದಿದೆ.

ಇಂದಿನ ಪಂದ್ಯಗಳು: 
ಪುಣೆ-ಗುಜರಾತ್‌, ಸಂಜೆ 7.30ಕ್ಕೆ
ಡೆಲ್ಲಿ-ಟೈಟಾನ್ಸ್‌, ರಾತ್ರಿ 8.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಐಎಸ್‌ಎಲ್‌: ಬಿಎಫ್‌ಸಿ, ಬೆಂಗಾಲ್‌ ಪಂದ್ಯ ಡ್ರಾ

ಬ್ಯಾಂಬೊಲಿಮ್‌: 8ನೇ ಆವೃತ್ತಿಯ ಐಎಸ್‌ಎಲ್‌ನಲ್ಲಿ (Indian Super League) ಬೆಂಗಳೂರು ಎಫ್‌ಸಿ (Bengaluru FC) 4ನೇ ಡ್ರಾಗೆ ತೃಪ್ತಿಪಟ್ಟಿದೆ. ಮಂಗಳವಾರ ಈಸ್ಟ್‌ ಬೆಂಗಾಲ್‌ ವಿರುದ್ಧದ ಪಂದ್ಯ 1-1 ಗೋಲುಗಳಿಂದ ಡ್ರಾಗೊಂಡಿತು. ಬೆಂಗಾಲ್‌ ಪರ ಸೆಂಬೋಯಿ 28ನೇ ನಿಮಿಷದಲ್ಲಿ ಗೋಲು ಹೊಡೆದರೆ, 55ನೇ ನಿಮಿಷದಲ್ಲಿ ಬೆಂಗಾಲ್‌ನ ಸೌರವ್‌ ಸ್ವಯಂಗೋಲು ಬಾರಿಸಿ ಬಿಎಫ್‌ಸಿ ಸಮಬಲ ಸಾಧಿಸಲು ನೆರವಾದರು. ಬಿಎಫ್‌ಸಿ ಸದ್ಯ 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಬೆಂಗಾಲ್‌ ಕೊನೆ ಸ್ಥಾನದಲ್ಲೇ ಬಾಕಿಯಾಗಿದೆ.

10000 ಮೀ.ಓಟದ ಸ್ಪರ್ಧೆ: ಆಳ್ವಾಸ್‌ನ ಆದೇಶ್‌ ದಾಖಲೆ

ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ಆರಂಭಗೊಂಡ 4 ದಿನಗಳ 81ನೇ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಅತಿಥೇಯ ಆಳ್ವಾಸ್‌ನ ಆದೇಶ್‌ 10,000 ಮೀ. ಓಟದಲ್ಲಿ ಹೊಸ ಕೂಟ ದಾಖಲೆ ಬರೆದಿದ್ದಾರೆ. 

2021ರಲ್ಲಿ ಆಳ್ವಾಸ್‌ನವರೇ ಆದ ನರೇಂದ್ರ ಪ್ರತಾಪ್‌ ಸಿಂಗ್‌ (ಕಾಲ: 29ನಿ 42.19ಸೆ) ಅವರ ದಾಖಲೆಯನ್ನು ಆದೇಶ್‌ (29ನಿ 15.46ಸೆ) ಮುರಿದರು.ಆಳ್ವಾಸ್‌ ಪ್ರತಿಷ್ಠಾನದ ವತಿಯಿಂದ ಆದೇಶ್‌ಗೆ ನಗದು ಬಹುಮಾನ ಘೋಷಿಸಲಾಗಿದೆ. ಜನನಾಯಕ್‌ ಚಂದ್ರಶೇಖರ್‌ ವಿವಿಯ ಆರಿಫ್‌ ಅಲಿ, ವಿ.ಬಿ.ಎಸ್‌.ಪಿ.ಯು ಜೌನ್‌ಪುರ್‌ನ ರಾಮ್‌ ವಿನೋದ್‌ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.

ಫಲಿತಾಂಶ:

1. ಅದೇಶ್‌ - ಮಂಗಳೂರು ವಿಶ್ವವಿದ್ಯಾನಿಲಯ (ಕಾಲ: 29ನಿ 15.46ಸೆ) - ನೂತನ ಕೂಟ ದಾಖಲೆ - ( ಆಳ್ವಾಸ್‌ ಕಾಲೇಜು)

2.ಆರಿಫ್‌ ಆಲಿ - ಜನನಾಯಕ್‌ ಚಂದ್ರಶೇಖರ್‌ ವಿಶ್ವವಿದ್ಯಾನಿಲಯ (ಕಾಲ: 29ನಿ 18.82ಸೆ) - ಬಿಎಮ್‌ಆರ್‌

3.ರಾಮ್‌ ವಿನೋದ್‌ ಯಾದವ್‌ - ವಿ.ಬಿ.ಎಸ್‌.ಪಿ.ಯು ಜೌನ್‌ಪುರ್‌ (ಕಾಲ: 29ನಿ 45ಸೆ) - ಬಿಎಮ್‌ಆರ್‌