Asianet Suvarna News Asianet Suvarna News

ಸೆಪ್ಟೆಂಬರ್ ತಿಂಗಳು: ಸುಪ್ರೀಂ ಕೋರ್ಟ್ ಮಹಾ ತೀರ್ಪುಗಳ ಗೊಂಚಲು!

ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂ ಕೊಟ್ಟ ತೀರ್ಪುಗಳೆಷ್ಟು?! ಒಂದೇ ತಿಂಗಳ ಅವಧಿಯಲ್ಲಿ ಸುಪ್ರೀಂ ತೀರ್ಪುಗಳ ಹೂಗುಚ್ಛ! ಸಲಿಂಗ ಕಾಮ, ಆಧಾರ್, ಬಡ್ತಿ, ಅಕ್ರಮ ಸಂಬಂಧ, ಮಸೀದಿ, ವ್ಯಭಿಚಾರ, ಶಬರಿಮಲೆ ತೀರ್ಪುಗಳು! ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪುಗಳ ಪರ್ವಕಾಲ! ಹಲವು ಮಹತ್ವದ ತೀರ್ಪುಗಳನ್ನು ಪ್ರಕಟಿಸಿದ ಸುಪ್ರೀಂ ಕೋರ್ಟ್! ದೇಶದ ಗತಿ ಬದಲಿಸಲಿರುವ ಸುಪ್ರೀಂ ಕೋರ್ಟ್ ತೀರ್ಪುಗಳು

Supreme Court of India landmark verdicts in september 2018
Author
Bengaluru, First Published Sep 28, 2018, 3:06 PM IST

ನವದೆಹಲಿ(ಸೆ.28): ಸೆಪ್ಟೆಂಬರ್ ತಿಂಗಳಲ್ಲಿ ಕೇವಲ ಗಣೇಶ ಹಬ್ಬ ಮಾತ್ರವಲ್ಲ. ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪುಗಳ ತಿಂಗಳು ಕೂಡ ಆಗಿತ್ತು. ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಹಲವು ಮಹತ್ವದ ತೀರ್ಪುಗಳು ಪ್ರಕಟವಾಗಿರುವುದು ಇದೇ ಮೊದಲು ಎಂದರೆ ತಪ್ಪಾಗಲಿಕ್ಕಿಲ್ಲ.

ಪ್ರಮುಖವಾಗಿ ಸಲಿಂಗ ಕಾಮ ಅಪರಾಧವಲ್ಲ, ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ, ವ್ಯಭಿಚಾರ ಅಪರಾಧವಲ್ಲ, ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಮತ್ತು ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪುಗಳು ಅತ್ಯಂತ ಮಹತ್ವದ್ದು ಮತ್ತು ಐತಿಹಾಸಿಕವಾದದದ್ದು ಎಂದೇ ಹೇಳಬಹುದು.

ಹಾಗಾದರೆ ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಈ 6 ಐತಿಹಾಸಿಕ ತೀರ್ಪುಗಳತ್ತ ಒಮ್ಮೆ ಗಮನಹರಿಸುವುದಾದರೆ...

1. ಸಲಿಂಗಕಾಮ ಅಪರಾಧವಲ್ಲ(ಸೆ.06): ಸಲಿಂಗ ಕಾಮ ಅಪರಾಧವಲ್ಲ ಎಂದ ಸುಪ್ರೀಂಕೋರ್ಟ್

158 ವರ್ಷದಷ್ಟು ಹಳೆಯದಾದ ಐಪಿಸಿ ಸೆಕ್ಷನ್‌ 377ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತಂತೆ ಸುಪ್ರೀಂಕೋರ್ಟ್‌ ಮಹತ್ವದ  ತೀರ್ಪು ಪ್ರಕಟಿಸಿದ್ದು, ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿತ್ತು.

2. ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ(ಸೆ.26): ಆಧಾರ್ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ: ಕೆಲವು ಷರತ್ತು ಅನ್ವಯ!
ತೀವ್ರ ವಿವಾದಕ್ಕೆ ಕಾರಣವಾಗಿರುವ ಆಧಾರ್ ನಂಬರ್ ದೇಶದಲ್ಲಿ ಇರುವುದೋ, ರದ್ದಾಗುವುದೋ ಎಂಬ ಕುತೂಹಲಕ್ಕೆ ತೆರೆ ಎಳೆದ ಸುಪ್ರೀಂ, ಆಧಾರ್‌ ಯೋಜನೆಯ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿತು.  ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ನೀಡಿದ ಸುಪ್ರೀಂ ಕೋರ್ಟ್, ಆಧಾರ್ ಪ್ರತಿಯೊಬ್ಬ ಭಾರತೀಯನ ಗರ್ವ ಎಂದು ಹೇಳಿತು.

3. ಎಸ್‌ಸಿ ಎಸ್‌ಟಿ ಬಡ್ತಿಯಲ್ಲಿ ಮೀಸಲಾತಿ ಬೇಕಿಲ್ಲ ಎಂದ ಸುಪ್ರೀಂ(ಸೆ.26): ಎಸ್‌ಸಿ ಎಸ್‌ಟಿ ಬಡ್ತಿಯಲ್ಲಿ ಮೀಸಲಾತಿ ಬೇಕಿಲ್ಲ: ಸುಪ್ರೀಂ!
ಎಸ್‌ಸಿ ಎಸ್‌ಟಿ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್  ತೀರ್ಪು ಹೊರ ಬಿದ್ದಿದೆ. ಬಡ್ತಿಯಲ್ಲಿ ಮೀಸಲಾತಿ ನಿಡುವ ಅಗತ್ಯವಿಲ್ಲ ಎಂದು ಸುಪ್ರೀಂ ಆದೇಶ ನೀಡಿತು.

4. ಅಕ್ರಮ ಸಂಬಂಧ ಅಪರಾಧವಲ್ಲ(ಸೆ.27): ಅಕ್ರಮ ಸಂಬಂಧ ಅಪರಾಧವಲ್ಲ: ಸುಪ್ರೀಂ ತೀರ್ಪು!

ಸೆ. 27ರಂದು ಮತ್ತೊಂದು ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್, ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್  497ನ್ನು ಅನೂರ್ಜಿತಗೊಳಿಸಿತು. ತನ್ನ ತೀರ್ಪಿನಲ್ಲಿ ಪುರುಷ ಮಹಿಳೆಗೆ ಮಾಲೀಕನಲ್ಲ ಎನ್ನುವ ಮೂಲಕ ಸುಪ್ರೀಂ ಐತಿಹಾಸಿಕ ತೀರ್ಪನ್ನೇ ನೀಡಿತು.

5. ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವಲ್ಲ(ಸೆ.27): ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ : 1994ರ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ

ಇನ್ನು ಸೆ.27ರಂದೇ ಮತ್ತೊಂದು ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್, ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂಬ 1994 ರ ತೀರ್ಪನ್ನು ಎತ್ತಿ ಹಿಡಿಯಿತು. ಈ ಮೂಲಕ ಪ್ರಾರ್ಥನೆಗೆ ಮಸೀದಿಯೇ ಆಗಬೇಕೆಂದಿಲ್ಲ ಎಂಬ ವಾದವನ್ನು ಒಪ್ಪಿಕೊಂಡಿತು. ಇದು ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಹಕಾರಿ ಎಂಬ ವಾದಗಳೂ  ಕೇಳಿ ಬಂದವು.

6. ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ(ಸೆ.28): ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂ ಅಸ್ತು!

ಇಂದು ಸುಪ್ರೀಂ ಕೋರ್ಟ್ ದೇಶದ ಮಹಿಳೆಯರ ಆತ್ಮ ಸ್ವಾಭಿಮಾನವನ್ನು ಎತ್ತಿ ಹಿಡಿದ ಖ್ಯಾತಿಗೆ ಪಾತ್ರವಾಯಿತು. ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಣೆಯನ್ನು ಸುಪ್ರೀಂ ಅಸಮಾನತೆಯ ಪರಮಾವಧಿ ಎಂದು ತಳ್ಳಿಹಾಕಿತು. ಈ ಮೂಲಕ 800 ವರ್ಷಗಳ ಹಿಂದಿನ ಅನಿಷ್ಟ ಪದ್ದತಿಗೆ ಸುಪ್ರೀಂ ತಡೆ ಹಾಕಿತು.

ಇವಿಷ್ಟು ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪುಗಳಾದರೆ, ಇದೇ ತಿಂಗಳಲ್ಲಿ ಇನ್ನೂ ಹಲವು ಗಮನಾರ್ಹ ತೀರ್ಪುಗಳನ್ನು ನೀಡಿತು. ಅವುಗಳೆಂದರೆ...

1. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೊಯಿ ನೇಮಕ(ಸೆ.13): ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೊಯಿ ನೇಮಕ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕ ಮಾಡಿದ್ದಾರೆ. ನೂತನ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೋಯಿ ಅವರನ್ನ ಅಧೀಕೃತವಾಗಿ ಆಯ್ಕೆ ಮಾಡಲಾಯಿತು.

2. ಇಸ್ರೋ ಗೂಢಚಾರಿಕೆ: 24 ವರ್ಷಗಳ ಬಳಿಕ ಹಿರಿಯ ವಿಜ್ಞಾನಿಗೆ ‘ಸುಪ್ರೀಂ ನ್ಯಾಯ(ಸೆ.14): ಇಸ್ರೋ ಗೂಢಚಾರಿಕೆ: 24 ವರ್ಷಗಳ ಬಳಿಕ ಹಿರಿಯ ವಿಜ್ಞಾನಿಗೆ ‘ಸುಪ್ರೀಂ ನ್ಯಾಯ’!

ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ ವಿರುದ್ಧದ ಗೂಢಚಾರಿಕೆ ಪ್ರಕರಣದ ತೀರ್ಪು ಹೊರಬಂದಿದೆ. ಕೇರಳ ಪೊಲೀಸರು ನಂಬಿ ನಾರಾಯಣ್ ಅವರಿಗೆ ಅನಗತ್ಯ ಕಿರುಕುಳ ನೀಡಿದ್ದು, ಅವರಿಗೆ 50 ಲಕ್ಷ ರೂ.  ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

3. ವರದಕ್ಷಿಣೆ ಕಿರುಕುಳದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು(ಸೆ.15):  ವರದಕ್ಷಿಣೆ ಕಿರುಕುಳ ನೀಡಿದರೆ ಹುಷಾರ್ : ಸುಪ್ರೀಂನಿಂದ ಮಹತ್ವದ ಆದೇಶ

‘ವರದಕ್ಷಿಣೆ ಕಿರುಕುಳ ಕುರಿತು ದೂರು ಬಂದಾಕ್ಷಣ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸಿ, ಬಂಧನ ದಂತಹ ಕಾನೂನು ಪ್ರಕ್ರಿಯೆಗೆ ಇಳಿಯ ಕೂಡದು. ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ಸಂಬಂಧಿಸಿದ ಸಮಿತಿ ಒಪ್ಪಿಗೆ ನೀಡಿದ ಬಳಿಕವಷ್ಟೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಕಳೆದ ವರ್ಷ ನೀಡಿದ್ದ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರ ಮಾರ್ಪಡಿಸಿದೆ.

4. ಸ್ಯಾರಿಡಾನ್‌ ಮಾರಾಟದ ಮೇಲಿನ ನಿಷೇಧ ತೆರವು (ಸೆ.18): ‘ಸ್ಯಾರಿಡಾನ್‌' ಮಾರಾಟದ ಮೇಲಿನ ನಿಷೇಧ ತೆರವು

ಅತಿಯಾದ ಆ್ಯಂಟಿಬಯೋಟಿಕ್ ಅಂಶವಿದೆ ಎಂಬ ಕಾರಣಕ್ಕೆ ಸರಕಾರ ಕೆಲವು ಔಷಧಗಳ ಮಾರಾಟವನ್ನು ನಿಷೇಧಿಸಿತ್ತು. ಇದರ ವಿರುದ್ಧ ಕಂಪನಿಗಳು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದವು. ಇದೀಗ ಕೋರ್ಟ್ ಔಷಧಗಳ ನಿಷೇಧವನ್ನು ತೆರವುಗೊಳಿಸಿತು.

5. ಚುನಾವಣೆಗಳಲ್ಲಿ ಕಳಂಕಿತ ರಾಜಕಾರಣಿಗಳ ಸ್ಪರ್ಧೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ(ಸೆ.25): ರೀ ನಾವಲ್ಲ, ‘ನೀವು’ ತಡೆಯಿರಿ: ಕಳಂಕಿತರ ಸ್ಪರ್ಧೆ ಕುರಿತ ಸುಪ್ರೀಂ ತೀರ್ಪು!

ಚುನಾವಣೆಗಳಲ್ಲಿ ಕಳಂಕಿತ ರಾಜಕಾರಣಿಗಳ ಸ್ಪರ್ಧೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ  ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು.

ಒಟ್ಟಿನಲ್ಲಿ ಸೆಪ್ಟೆಂಬರ್ ತಿಂಗಳು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪುಗಳ ಪರ್ವಕಾಲ ಎಂದು ಹೇಳಬಹುದು.

Follow Us:
Download App:
  • android
  • ios