ವರದಕ್ಷಿಣೆ ಕಿರುಕುಳ ನೀಡಿದರೆ ಹುಷಾರ್ : ಸುಪ್ರೀಂನಿಂದ ಮಹತ್ವದ ಆದೇಶ
ಇನ್ನು ಮುಂದೆ ಯಾವುದೇ ಸಂತ್ರಸ್ತ ಮಹಿಳೆ ವರದಕ್ಷಿಣೆ ಕಿರುಕುಳ ದೂರು ನೀಡಿದಾಕ್ಷಣ ಪತಿ ಹಾಗೂ ಆತನ ಬಂಧುಗಳ ವಿರುದ್ಧ ಎಫ್ಐಆರ್ ದಾಖಲಾಗಲಿದೆ. ಬಂಧನ ಪ್ರಕ್ರಿಯೆಯೂ ನಡೆಯಲಿದೆ.
ನವದೆಹಲಿ: ‘ವರದಕ್ಷಿಣೆ ಕಿರುಕುಳ ಕುರಿತು ದೂರು ಬಂದಾಕ್ಷಣ ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಿಸಿ, ಬಂಧನ ದಂತಹ ಕಾನೂನು ಪ್ರಕ್ರಿಯೆಗೆ ಇಳಿಯ ಕೂಡದು. ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ಸಂಬಂಧಿಸಿದ ಸಮಿತಿ ಒಪ್ಪಿಗೆ ನೀಡಿದ ಬಳಿಕವಷ್ಟೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಕಳೆದ ವರ್ಷ ನೀಡಿದ್ದ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರ ಮಾರ್ಪಡಿಸಿದೆ.
ಹೀಗಾಗಿ ಇನ್ನು ಮುಂದೆ ಯಾವುದೇ ಸಂತ್ರಸ್ತ ಮಹಿಳೆ ವರದಕ್ಷಿಣೆ ಕಿರುಕುಳ ದೂರು ನೀಡಿದಾಕ್ಷಣ ಪತಿ ಹಾಗೂ ಆತನ ಬಂಧುಗಳ ವಿರುದ್ಧ ಎಫ್ಐಆರ್ ದಾಖಲಾಗಲಿದೆ.
ಬಂಧನ ಪ್ರಕ್ರಿಯೆಯೂ ನಡೆಯಲಿದೆ. ವರದಕ್ಷಿಣೆ ಕಿರುಕುಳ ತಡೆಯುವ ಸಂಬಂಧ ಇರುವ ಐಪಿಸಿ ಸೆಕ್ಷನ್ 498 ಎ ಕಳೆದ ವರ್ಷ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ದುರ್ಬಲಗೊಂಡಿದೆ ಎಂದು ದೂರಿ ಸಲ್ಲಿಕೆಯಾ ಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ಏ. 23 ರಂದು ತೀರ್ಪು ಕಾದಿರಿಸಿತ್ತು. ಶುಕ್ರವಾರ ತೀರ್ಪು ಪ್ರಕಟಿಸಿದ್ದು, ಕಳೆದ ವರ್ಷ ಜುಲೈನಲ್ಲಿ ನೀಡಿದ್ದ ತೀರ್ಪನ್ನು ಮಾರ್ಪಡಿಸಿ, ಬಂಧನ ಸೌಲಭ್ಯವನ್ನು ಸಂರಕ್ಷಿಸುವುದಾಗಿ ತಿಳಿಸಿದೆ.
ಇದೇ ವೇಳೆ, ದಂಡ ಸಂಹಿತೆ ಕಾನೂನಿನಲ್ಲಿರುವ ಕೊರತೆ ಗಳನ್ನು ತುಂಬುವ ಸಾಂವಿಧಾನಿಕ ಪಾತ್ರ ನ್ಯಾಯಾಲಯ ಗಳಿಗೆ ಇಲ್ಲ ಎಂದು ಹೇಳಿದೆ. ಕಳೆದ ವರ್ಷ ತೀರ್ಪು ನೀಡಿದ್ದ ದ್ವಿಸದಸ್ಯ ಪೀಠ, ವರದಕ್ಷಿಣೆ ಕಿರುಕುಳ ತಡೆ ಕಾಯ್ದೆ ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ‘ಸಂತ್ರಸ್ತರು’ ದೂರು ನೀಡಿದಾಕ್ಷಣ ಬಂಧಿಸಬೇಕಿಲ್ಲ. ಎಫ್ಐಆರ್ ದಾಖಲಿಸಲೂಬೇಕಿಲ್ಲ. ಪರಿಣತರ ಸಮಿತಿ ರಚಿಸಿ, ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಜರುಗಿಸಬೇಕೆಂದಿತ್ತು.