Asianet Suvarna News Asianet Suvarna News

ಭಾರತ ಮತ್ತು ರಷ್ಯಾ, ಇದು ರಾಷ್ಟ್ರಗಳ ಹೃದಯದ ವಿಷ್ಯ: ಪ್ರಧಾನಿ ಮೋದಿ

ರಷ್ಯಾ-ಭಾರತದ ನಡುವೆ ತಂತ್ರಜ್ಞಾನ ವರ್ಗಾವಣೆಗೊಂಡರೆ ಭಾರತದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಇತರ ಸೇನಾ ಉಪಕರಣಗಳು ಅಗ್ಗದ ಬೆಲೆಯಲ್ಲಿ ದೊರಕಲಿವೆ. ಆಗ ಉಭಯ ದೇಶಗಳು ಅತಿ ಕಡಿಮೆ ಬೆಲೆಯಲ್ಲಿ ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಈ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಬಹುದು.

PM Modi interview to Russian news agency TASS talks about Kashmir Issue
Author
Bengaluru, First Published Sep 6, 2019, 12:56 PM IST

ಎರಡು ದಿನಗಳ ಕಾಲ ರಷ್ಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಟಿಎಎಸ್‌ಎಸ್‌ ಸುದ್ದಿ ಮಾಧ್ಯಮಕ್ಕೆ ಸಂದರ್ಶನ ನೀಡಿ ಉಭಯ ದೇಶಗಳ ನಡುವಿನ ಸಂಬಂಧ, ಕಾಶ್ಮೀರ ವಿವಾದ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

ಈಸ್ಟರ್ನ್‌ ಎಕನಾಮಿಕ್‌ ಫೋರಂಗೆ ಭೇಟಿ ನೀಡಿದ್ದಿರಿ. ಈ ಸಮಾವೇಶದಿಂದ ಏನನ್ನು ನಿರೀಕ್ಷಿಸುತ್ತೀರಿ?

ಭಾರತ ಮತ್ತು ರಷ್ಯಾದ ಜನರು ಬಹಳ ಕಾಲದಿಂದಲೂ ಅನೇಕ ವಿಷಯಗಳಲ್ಲಿ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಇಲ್ಲಿನ ಸಾಂಸ್ಕೃತಿಕ ಸಮಾರಂಭದಲ್ಲಿ ರಷ್ಯನ್ನರು ಭಾರತವನ್ನು ಬಿಂಬಿಸಿದ್ದನ್ನು ನೋಡಿ ದಿಗ್ಭ್ರಾಂತನಾದೆ. ಇಡೀ ವೇದಿಕೆಯನ್ನು ಭಾರತದ ಸಂಸ್ಕೃತಿ, ಉಡುಗೆ ತೊಡುಗೆಗೆ ತಕ್ಕಂತೆ ಸಿದ್ಧ ಮಾಡಲಾಗಿತ್ತು. ಅಲ್ಲಿ ಮಾತನಾಡುವವರು ಭಾರತದ ಸಂಪ್ರದಾಯದಂತೆ ಸಿದ್ಧವಾಗಿ ಬಂದಿದ್ದರು. ಆಗ ರಷ್ಯಾ ಜನರು ಭಾರತವನ್ನು ಎಷ್ಟುಪ್ರೀತಿಸುತ್ತಾರೆ ಎಂದು ಅರ್ಥವಾಯಿತು.

100ರ ಹೊಸ್ತಿಲಲ್ಲಿ ಮೋದಿ ಸರ್ಕಾರ: ಯಾರು, ಯಾವ ಸಾಧನೆಗೆ ಸರದಾರ?

ಎರಡು ವರ್ಷದ ಹಿಂದೆಯೇ ಎಕನಾಮಿಕ್‌ ಫೋರಂನಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ಪುಟಿನ್‌ ಆಹ್ವಾನ ನಿಡಿದ್ದರು. ಈಗಿನ ಸಮಾವೇಶದಲ್ಲಿ ಭಾಗವಹಿಸಲು ವರ್ಷದ ಹಿಂದೆಯೇ ಆಹ್ವಾನ ನೀಡಿದ್ದರು. ಆಗ ಭಾರತದಲ್ಲಿ ಚುನಾವಣೆ ನಡೆಯುತ್ತಿತ್ತು. ಯಾರು ಬಹುಮತ ಪಡೆದಿದ್ದಾರೆ ಎಂದೂ ಘೋಷಣೆಯಾಗಿರಲಿಲ್ಲ. ಆದರೆ ಅವರು, ‘ಇಲ್ಲ, ನೀವು ಬರಲೇಬೇಕು’ ಎಂದಿದ್ದರು.

ಗೆಳೆತನದಲ್ಲಿ ಆ ನಂಬಿಕೆ, ಗೌರವ, ಪ್ರೀತಿ, ವಿಶ್ವಾಸ ತುಂಬಾ ಮುಖ್ಯ. ಅಂದಹಾಗೆ ಉಭಯ ದೇಶಗಳ ನಡುವಿನ ಸಂಬಂಧ ರಾಜಕೀಯ ಅಥವಾ ಎರಡು ರಾಷ್ಟ್ರಗಳ ರಾಜಧಾನಿಯಾದ ಮಾಸ್ಕೋ ಮತ್ತು ದೆಹಲಿಗೆ ಸೀಮಿತವಾಗಿಲ್ಲ. ಈ ಸಮಾವೇಶ ಎರಡೂ ದೇಶದ ಸಂಬಂಧಕ್ಕೆ ಹೊಸ ಉತ್ಸಾಹ, ಶಕ್ತಿ, ವೇಗ ತಂದುಕೊಡಲಿದೆ.

ನಿಮ್ಮ ಮತ್ತು ಪುಟಿನ್‌ ಅವರ ವೈಯಕ್ತಿಕ ಸಂಬಂಧ ಆತ್ಮೀಯವಾಗಿದೆ. ಇಬ್ಬರ ನಡುವಿನ ಕೆಮಿಸ್ಟ್ರಿ ಚೆನ್ನಾಗಿದೆ ಎನ್ನುತ್ತಾರೆ. ಇದರ ಬಗ್ಗೆ ನೀವೇನು ಹೇಳುತ್ತೀರಿ?

ಕಳೆದ 20 ವರ್ಷಗಳಲ್ಲಿ ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಸಾಕಷ್ಟುಪ್ರಗತಿ ಕಂಡಿದೆ. ಅದೆಲ್ಲಕ್ಕಿಂತ ದೊಡ್ಡ ಸಾಧನೆ ನಂಬಿಕೆ. ಮೊಟ್ಟಮೊದಲ ಬಾರಿಗೆ 2001ರಲ್ಲಿ ಅಧ್ಯಕ್ಷ ಪುಟಿನ್‌ ಅವರನ್ನು ಭೇಟಿಯಾಗುವ ಅವಕಾಶ ಲಭಿಸಿತು. ಅಟಲ್‌ ಬಿಹಾರಿ ವಾಜಪೇಯಿ ಅವರೊಂದಿಗೆ ಬಂದಿದ್ದೆ. ನಾನಾಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದೆ. ಅದು ನನ್ನ ಮತ್ತು ಪುಟಿನ್‌ ಅವರ ಮೊದಲ ಭೇಟಿ. ಆದರೆ ಪುಟಿನ್‌ ನನ್ನನ್ನು ಒಬ್ಬ ಸಣ್ಣ ವ್ಯಕ್ತಿಯಾಗಿ ಕಾಣಲಿಲ್ಲ. ಅಂದಿನಿಂದ ನಮ್ಮ ಗೆಳೆತನ ಆರಂಭವಾಯಿತು.

ಕಾಣದಾಗಿದೆ ಪರಿಹಾರ: ಗುರಿ ಕಡಿತಗೊಳಿಸಿದ ಮೋದಿ ಸರ್ಕಾರ!

ನಮ್ಮ ಭೇಟಿಯಲ್ಲಿ ಎರಡು ದೇಶಗಳ ಸಂಬಂಧದ ಬಗ್ಗೆ ಮಾತ್ರ ಚರ್ಚಿಸುತ್ತಿರಲಿಲ್ಲ. ಅದರಾಚೆಗೆ ಇಬ್ಬರ ಹವ್ಯಾಸ, ಜಾಗತಿಕ ಸಮಸ್ಯೆಗಳು, ಜಾಗತಿಕ ಶಾಂತಿ ಹೀಗೆ ಅನೇಕ ವಿಷಯಗಳೆಡೆಗೆ ಕಣ್ಣಾಡಿಸುತ್ತೇವೆ. ಪುಟಿನ್‌ ಒಬ್ಬ ಮುಕ್ತ ವ್ಯಕ್ತಿ. ನೇರವಾಗಿ ಮಾತನಾಡುತ್ತಾರೆ, ಎದುರಿರುವವರೂ ನೇರವಾಗಿ ಮಾತನಾಡಬೇಕೆಂದು ನಿರೀಕ್ಷಿಸುತ್ತಾರೆ. ಹಾಗೆಯೇ ನನ್ನಂತೆ ಪುಟಿನ್‌ ಅವರಿಗೂ ಪರಿಸರ, ಕಾಡು, ಅಂತರ್ಜಲದ ಬಗ್ಗೆ ಆಸಕ್ತಿ ಇದೆ. ಹುಲಿಗಳ ಸಂರಕ್ಷಣೆ ಬಗ್ಗೆ ವಿಶೇಷ ಕಾಳಜಿ ಇದೆ.

ಬಹುಶಃ ಇವೇ ಅಂಶಗಳು ನಮ್ಮ ಸ್ನೇಹವನ್ನು ಮತ್ತಷ್ಟುಗಟ್ಟಿಮಾಡಿವೆ. ಮೂರನೆಯದಾಗಿ ಅಂತಾರಾಷ್ಟ್ರೀಯ ಅಜೆಂಡಾಗಳಲ್ಲೂ ಭಾರತ ಮತ್ತು ರಷ್ಯಾ ಅಭಿಪ್ರಾಯ ಒಂದೇ ಆಗಿರುತ್ತದೆ. ಪ್ರತಿ ಸಭೆ, ಸಮಾವೇಶದಲ್ಲೂ ಎರಡು ದೇಶಗಳು ಮತ್ತಷ್ಟುಹತ್ತಿರವಾಗುತ್ತವೆ.

ಆರ್ಥಿಕತೆ, ಸಂಸ್ಕೃತಿ, ವ್ಯಾಪಾರ ಮತ್ತು ಮಿಲಿಟರಿ ಸಹಕಾರಕ್ಕೆ ಸಬಂಧಿಸಿದಂತೆ ಎರಡು ದೇಶಗಳ ನಡುವಿನ ಸಂಬಂಧ ಅಚಲವಾಗಿದೆ. ಆದಾಗ್ಯೂ ದ್ವಿಪಕ್ಷೀಯ ಸಂಬಂಧದ ಪ್ರಗತಿಗೆ ಸಂಬಂಧಿಸಿದಂತೆ ಯಾವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆನಿಸುತ್ತದೆ?

ಅಧಿಕೃತ ಸಮಾವೇಶಗಳಲ್ಲಿ ಚರ್ಚೆಯ ವಿಷಯ ಏನೆಂಬುದು ಮೊದಲೇ ನಿರ್ಧಾರವಾಗಿರುತ್ತದೆ. ಆದರೆ ಅನಧಿಕೃತ ಭೇಟಿಗಳಲ್ಲಿ ನಿರ್ದಿಷ್ಟಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ರಷ್ಯಾ ಇನ್ನಷ್ಟುಅಭಿವೃದ್ಧಿ ಕಾಣಬೇಕೆಂದರೆ ಕಾರ್ಮಿಕರು ಬೇಕು. ಭಾರತದ ಬಳಿ ಕಾರ್ಮಿಕರಿದ್ದಾರೆ. ಉದಾಹರಣೆಗೆ ಗಲ್ಫ್ ರಾಷ್ಟ್ರಗಳಲ್ಲಿ 90 ಲಕ್ಷ ಭಾರತೀಯರು ಕಳೆದ 30-40 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ.

ವಾಯುಸೇನೆಗೆ ಹೆಲಿಕಾಪ್ಟರ್ ಅಪಾಚೆ: ಕೆಣಕಿದರೆ ಆಕಾಶದಲ್ಲೇ ಅಪ್ಪಚ್ಚಿ!

ಭಾರತೀಯರ ಶ್ರಮದ ಫಲವಾಗಿ ಆ ದೇಶಗಳು ಅಭಿವೃದ್ಧಿಯತ್ತ ಮುನ್ನುಗ್ಗುತ್ತಿವೆ. ಆದರೆ 40 ವರ್ಷಗಳಿಂದ ಅಲ್ಲಿ ದುಡಿಯುತ್ತಿದ್ದರೂ ಇಂದಿಗೂ ಅವರೆಲ್ಲ ಭಾರತೀಯ ಪ್ರಜೆಗಳಾಗಿಯೇ ಉಳಿದುಕೊಂಡಿದ್ದಾರೆ. ಅದು ಭಾರತೀಯರ ಲಕ್ಷಣ. ಈ ಲಕ್ಷಾಂತರ ಭಾರತೀಯರು ಪೂರ್ವದ ದೇಶಗಳಿಗೆ ತೆರಳಿದರೆ ಬಹುಶಃ ಎರಡೂ ದೇಶಗಳಿಗೂ ಲಾಭವಿದೆ.

ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯ ಸಂರಕ್ಷಣೆಗೆ ಭಾರತ ಮತ್ತು ರಷ್ಯಾ ಎರಡೂ ಪ್ರಯತ್ನಿಸುತ್ತಿವೆ. ಈ ವಿಷಯಕ್ಕೆ ಅಂತಾರಾಷ್ಟಿ್ರಯ ಪ್ರಾಮುಖ್ಯತೆ ದಕ್ಕಿಸಿಕೊಡುವ ಉದ್ದೇಶ ಇದೆಯೇ?

ಹುಲಿ ಸಂರಕ್ಷಣೆ ಬಗ್ಗೆಯೇ 2020ರಲ್ಲಿ ಅತಿ ದೊಡ್ಡ ಸಮಾವೇಶ ಏರ್ಪಡಿಸುವ ಉದ್ದೇಶ ಇದೆ. ನನಗಿನ್ನೂ ನೆನಪಿದೆ, 10 ವರ್ಷದ ಹಿಂದೆ ಪುಟಿನ್‌ ಹುಲಿ ಸಂರಕ್ಷಣೆಗೆ ಕೈಜೋಡಿಸಿದ್ದರು. ಅದರ ಫಲವಾಗಿ ಭಾರತ ಸಾಕಷ್ಟುಸಾಧಿಸಿದೆ. 10 ವರ್ಷದಲ್ಲಿ ಭಾರತದ ಹುಲಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಇದು ಭಾರತದ ಅತ್ಯುನ್ನತ ಸಾಧನೆ. ಮತ್ತು ಜಗತ್ತಿಗೆ ಭಾರತ ನೀಡಿದ ಕೊಡುಗೆ.

ನೀವು ಯೋಗವನ್ನು ಇಡೀ ಜಗತ್ತಿಗೆ ಪರಿಚಯಿಸಿದಿರಿ. ಇದೀಗ ಫಿಟ್‌ ಇಂಡಿಯಾ ಎಂಬ ಮತ್ತೊಂದು ಆಂದೋಲನ ಆರಂಭಿಸಿದ್ದೀರಿ. ಇದರ ಅಗತ್ಯ ಏನಿದೆ?

ಹೆಚ್ಚು ಶಕ್ತಿವಂತನಾಗಬೇಕು ಎಂಬುದು ಎಲ್ಲ ಮನುಷ್ಯರ ಸಾಮಾನ್ಯ ಬಯಕೆ. ಚಿಕ್ಕ ಮಗು ಕೂಡ ನಿದ್ರಿಸುವ ವೇಳೆಯಲ್ಲಿ ತನ್ನ ಬಲದಿಂದಾಗಿಯೇ ನಡೆಯುತ್ತಿದ್ದೇನೆ ಎಂಬ ಕನಸು ಕಾಣುತ್ತದೆ. ವಿದ್ಯಾರ್ಥಿಗಳು ಯಾರೂ ಹೇಳಿಕೊಡದೇ ಇದ್ದರೂ ವ್ಯಾಯಾಮ ಮಾಡಲು ಆರಂಭಿಸುತ್ತಾರೆ.

ಆದರೆ ಆಧುನಿಕ ಪ್ರಪಂಚದಲ್ಲಿ ಒತ್ತಡದ ಜೀವನ ಶೈಲಿಯಿಂದಾಗಿ ಮನುಷ್ಯ ಇದನ್ನೆಲ್ಲಾ ಮರೆತೇ ಬಿಟ್ಟಿದ್ದಾನೆ. ಹಾಗಾಗಿ ಫಿಟ್‌ ಇಂಡಿಯಾ ಎಂಬ ಆಂದೋಲನ ಆರಂಭಿಸಿದ್ದೇವೆ. ಕಾಯಿಲೆಗಳ ನಿಯಂತ್ರಣದಲ್ಲಿ ಈ ಆಂದೋಲನ ಮಹತ್ವದ ಪಾತ್ರ ವಹಿಸುತ್ತದೆಂದು ಭಾವಿಸುತ್ತೇನೆ.

‘ಆರ್ಥಿಕತೆ ಅನುಭವವಿರದ ನಿರ್ಮಲಾ ಅಪ್ರಬುದ್ಧ ಆಡಳಿತಗಾರ್ತಿ’

ಮಿಲಿಟರಿ ತಂತ್ರಜ್ಞಾನದ ಕೊಡು-ಕೊಳ್ಳುವಿಕೆಯಲ್ಲಿ ಭಾರತ ಮತ್ತು ರಷ್ಯಾ ಸಂಬಂಧ ಹೇಗಿದೆ?

ನಮ್ಮ ನಡುವಿನ ಸಂಬಂಧ ಕೊಡು-ಕೊಳ್ಳುವಿಕೆಗಷ್ಟೇ ಸೀಮಿತವಾಗಿಲ್ಲ ಎಂದು ಪುಟಿನ್‌ ಅವರ ಬಳಿ ಯಾವಾಗಲೂ ಹೇಳುತ್ತೇನೆ. ನಾವು ಆತ್ಮೀಯ ಸ್ನೇಹಿತರು. ಮಾಹಿತಿ ತಂತ್ರಜ್ಞಾನವು ಭಾರತದಲ್ಲಿ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡುತ್ತಿದ್ದೇವೆ. ಗಗನಯಾನ ಯೋಜನೆಗೆ ರಷ್ಯಾ ಸಹಕಾರ ನೀಡುತ್ತಿದೆ. ಒಂದು ವೇಳೆ ತಂತ್ರಜ್ಞಾನ ವರ್ಗಾವಣೆಗೊಂಡರೆ ಇದರಿಂದಾಗಿ ಭಾರತದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಇತರ ಸೇನಾ ಉಪಕರಣಗಳು ಅಗ್ಗದ ಬೆಲೆಯಲ್ಲಿ ದೊರಕಲಿವೆ.

ಈ ಯೋಜನೆ ಮುಂದೆ ಕಾರ್ಯಗತವಾದರೆ ಭಾರತ ಮತ್ತು ರಷ್ಯಾ ಅತಿ ಕಡಿಮೆ ಬೆಲೆಯಲ್ಲಿ ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಈ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ನವದೆಹಲಿ ಮತ್ತು ರಷ್ಯಾ ಇಂತಹ ಅವಕಾಶವನ್ನು ಬಳಸಿಕೊಳ್ಳಬೇಕಾದ ಅಗತ್ಯವಿದೆ.

ಇಡೀ ಜಗತ್ತಿನ ದೃಷ್ಟಿಯೀಗ ಕಾಶ್ಮೀರದ ಮೇಲಿದೆ. ಆ ಬಗ್ಗೆ ಏನು ಹೇಳುತ್ತೀರಿ?

ಕಾಶ್ಮೀರಕ್ಕೆ ಒಂದು ದೊಡ್ಡ ಇತಿಹಾಸವಿದೆ. 1947ರಲ್ಲಿ ಭಾರತ ಸ್ವತಂತ್ರವಾದಾಗ ಅದು ಇಬ್ಭಾಗವಾಗಿ ಪಾಕಿಸ್ತಾನ ಎಂಬ ಹೊಸ ರಾಷ್ಟ್ರ ಉದಯವಾಯಿತು. ಹುಟ್ಟಿನಿಂದಲೇ ಪಾಕಿಸ್ತಾನ, ಭಾರತವನ್ನು ನಾಶ ಮಾಡುವ ಕನಸು ಕಾಣುತ್ತಿದೆ. ಅದು ಕಾಶ್ಮೀರದಿಂದ ಪ್ರಾರಂಭವಾಗಿದೆ. ಅದರ ಭಾಗವಾಗಿ ಕಾಶ್ಮೀರದ ದೊಡ್ಡ ಭಾಗವನ್ನು ಆಕ್ರಮಿಸಿಕೊಂಡಿದೆ. ಇವತ್ತಿಗೂ ಪಾಕಿಸ್ತಾನದ ಸೈನಿಕರು ಈ ಭಾಗದ ಜನರನ್ನು ನಿರ್ದಯವಾಗಿ ಕೊಲ್ಲುತ್ತಿದ್ದಾರೆ.

ನಾವು ಕಾಶ್ಮೀರದ ಶಾಂತಿ ಮತ್ತು ಅಭಿವೃದ್ಧಿಗೆ ಸತತ ಪ್ರಯತ್ನ ಪಡುತ್ತಿದ್ದೇವೆ. ಇದು ಪಾಕಿಸ್ತಾನಕ್ಕೆ ಇಷ್ಟವಿಲ್ಲ. ಹಾಗಾಗಿ ನಮ್ಮ ಮೇಲೆ ಯುದ್ಧಕ್ಕೆ ಬಂತು. ಆದರೆ ಸೋತಿತು. ಅನಂತರ ಕದ್ದುಮುಚ್ಚಿ ಯುದ್ಧ ಸಾರುತ್ತಿದ್ದಾರೆ. ಕಳೆದ 40 ವರ್ಷದಲ್ಲಿ ಕಾಶ್ಮೀರ ಮತ್ತು ಲಡಾಖನ್ನು ಉಗ್ರರ ಅಡಗುತಾಣವಾಗಿಸಿದ್ದಾರೆ. ಕಳೆದ 25 ವರ್ಷದಲ್ಲಿ 43,000 ಮುಗ್ಧ ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಗೆ ನಿರಂತರವಾಗಿ ಕುಮ್ಮಕ್ಕು ನೀಡುತ್ತಿದೆ. ಉಗ್ರರ ಅಡಗು ತಾಣವಾಗಿ ಬೆಳೆದಿದೆ.

ಜವಾಹಾರ್‌ ಲಾಲ್‌ ನೆಹರು ಕಾಲದಿಂದಲೂ ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೆವು. ಆದರೆ ಸಾಧ್ಯವಾಗಿರಲಿಲ್ಲ. ಸದ್ಯ ಕಾಶ್ಮೀರದ ನಾಗರಿಕರ ಹಕ್ಕುಗಳ ರಕ್ಷಣೆಗೆ ಭಾರತ ಗಮನ ಹರಿಸಿದೆ. ನಿಮಗೆ ಆಶ್ಚರ್ಯ ಆಗಬಹುದು, ಭಾರತದ ಮಹಿಳೆಯರಿಗಿರುವ ಹಕ್ಕುಗಳು ಕಾಶ್ಮೀರಿ ಮಹಿಳೆಯರಿಗಿಲ್ಲ. ಕಾಶ್ಮೀರದಲ್ಲಿ ಭ್ರಷ್ಟಾಚಾರ ವಿರೋಧಿ ಕಾನೂನು ಕೂಡ ಅನ್ವಯವಾಗುತ್ತಿರಲಿಲ್ಲ. ಸದ್ಯ ಕಾಶ್ಮೀರಿ ಜನರ ಬಯಕೆಯಂತೆ ಅವರ ಹಕ್ಕುಗಳನ್ನು ರಕ್ಷಿಸಲು, ಕಾಶ್ಮೀರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸೂಕ್ತ ಕ್ರಮ ಕೈಗೊಂಡಿದ್ದೇವೆ.

- ಸಂದರ್ಶನ

ಪ್ರಧಾನಿ ಮೋದಿ 

Follow Us:
Download App:
  • android
  • ios