Asianet Suvarna News Asianet Suvarna News

ಅಮಿತ್ ಶಾ ಗೃಹಮಂತ್ರಿ ಆದ್ಮೇಲೆ ಕಾಶ್ಮೀರದಲ್ಲಿ ಐತಿಹಾಸಿಕ ಬದಲಾವಣೆ

ಅಮಿತ್ ಶಾ ಗೃಹಮಂತ್ರಿ ಆದ್ಮೇಲೆ ಐತಿಹಾಸಿಕ ಜಾಮಾ ಮಸೀದಿ, ಶ್ರೀನಗರದ ನೌಹತ್ತಾದಿಂದ ಬದಲಾವಣೆಯ ಗಾಳಿ |  ಕಾಶ್ಮೀರ ರಾಜಕಾರಣದಲ್ಲಿ ಅಲ್ಪ ಮಟ್ಟಿಗೆ ಬದಲಾವಣೆ | 

Historical change in Kashmir after Amit Shah taking charge of home minister
Author
Bengaluru, First Published Jul 16, 2019, 3:29 PM IST

2019ರ ಅಭೂತಪೂರ್ವ ಜಯಕ್ಕೆ ಕಾರಣೀಕೃತರಾದ, ಕೇಂದ್ರ ಸರ್ಕಾರದ ಅತ್ಯುನ್ನತ ಹುದ್ದೆ ಅಲಂಕರಿಸಿರುವ ಗೃಹಮಂತ್ರಿ ಅಮಿತ್‌ ಶಾ ಅವರನ್ನು ಕೆಲವರು ಭಾರತೀಯ ಜನತಾ ಪಕ್ಷದ ಚಾಣಕ್ಯ ಎಂದು ಹೊಗಳುತ್ತಾರೆ.

ದೇಶದ ಗೃಹ ಮಂತ್ರಿಯಾಗಿ ಅಮಿತ್‌ ಶಾ ಮತ್ತು ಅವರ ಚಾಣಕ್ಯ ನೀತಿಗಳು ಮತ್ತಷ್ಟುಚುರುಕಾದಂತೆ ಕಾಣುತ್ತಿವೆ. ಕಾಶ್ಮೀರದ ವಿಷಯದಲ್ಲಿ ಒಳ್ಳೆಯ ಉದ್ದೇಶದಿಂದ ಆರಂಭವಾದ ಕೆಲಸವೊಂದು ಈಗಾಗಲೇ ಅರ್ಧ ಯಶಸ್ಸು ಕಂಡಂತಿದೆ.

ಅಬ್ಸೆಂಟ್ ಮಿನಿಸ್ಟರ್ಸ್: ಅಟೆಂಡನ್ಸ್ ಲಿಸ್ಟ್ ಕೊಡಿ ಎಂದ ಮೋದಿ!

ಅಮಿತ್‌ ಶಾ ಗೃಹಮಂತ್ರಿಯಾಗಿ ಕಚೇರಿಗೆ ಆಗಮಿಸಲು ಆರಂಭಿಸಿದ ದಿನದಿಂದ ಕಾಶ್ಮೀರ ರಾಜಕಾರಣದಲ್ಲಿ ಅಲ್ಪ ಮಟ್ಟಿಗೆ ಬದಲಾವಣೆ ಕಾಣುತ್ತಿದೆ. ಮುಖ್ಯವಾಹಿನಿಯಿಂದ ಪ್ರತ್ಯೇಕತಾವಾದಿಗಳ ಕ್ಯಾಂಪ್‌ವರೆಗೆ ಅವರ ಚಿಂತನೆಗಳು ಸಂಚರಿಸಿದ ಪರಿಣಾಮ ಅಬ್ಬರಿಸುವ ಮುಖಗಳು ಪರಿವರ್ತನೆಯ ಹಾದಿ ಹಿಡಿದಿವೆ.

ಐತಿಹಾಸಿಕ ಜಾಮಾ ಮಸೀದಿ, ಶ್ರೀನಗರದ ನೌಹತ್ತಾದಿಂದ ಬದಲಾವಣೆಯ ಗಾಳಿ ಬೀಸುತ್ತಿದೆ. ಇದಕ್ಕೂ ಮೊದಲು ಇವೆಲ್ಲಾ ‘ಆಜಾದಿ’ಗಳ ಪ್ರಮುಖ ಕೇಂದ್ರಗಳಾಗಿದ್ದವು. ಈಗ ಮಸೀದಿಯಿಂದ ಭಕ್ತಾದಿಗಳಿಗೆ ಪ್ರವಚನ ನೀಡುವ ಕಾಶ್ಮೀರದ ಮುಖ್ಯ ಧರ್ಮೋಪದೇಶಕ ಮತ್ತು ಪ್ರತ್ಯೇಕತಾವಾದಿಗಳ ನಾಯಕ ಮೀರ್‌ವಾಯಿಜ್‌ ಉಮರ್‌ ಫಾರೂಕ್‌ ಅವರ ಶುಕ್ರವಾರದ ಧರ್ಮೋಪದೇಶದಲ್ಲಿ ಸಾಮಾಜಿಕ ಮತ್ತು ಪರಿಸರಕ್ಕೆ ಸಂಬಂಧಪಟ್ಟವಿಷಯಗಳು ಕೇಳಿಸುತ್ತಿವೆ.

ಪತಿ ಬಲಿ ಪಡೆದ ವಿಮಾನ ಏರಲು ವಾಯುಸೇನೆ ಸೇರಿದ ಧೀರೆ!

ಜೂನ್‌ 15, 2019ರಂದು ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಹುರಿಯತ್‌ (ಎಚ್‌) ಮುಖ್ಯಸ್ಥ ಮೀರ್‌ವಾಯಿಜ್‌ ಕಾಶ್ಮೀರ ಪ್ರವಾಹದಿಂದ ಉಂಟಾಗುವ ಸಮಸ್ಯೆಗಳಿಗೆ ಅಲ್ಲಿನ ಜನರು ಮತ್ತು ಸರ್ಕಾರ ಹೇಗೆ ಕಾರಣ ಎಂದು ವಿವರಿಸಿದ್ದರು. ಮುಂದಿನ ಶುಕ್ರವಾರ ಡ್ರಗ್‌ ವ್ಯಸನಿಗಳ ಬಗ್ಗೆ ಮಾತನಾಡಿದ್ದರು.

ರಾಷ್ಟ್ರೀಯ ವಾಹಿನಿಯೊಂದರ ಪ್ರಕಾರ, ಕಾಶ್ಮೀರದ ಪ್ರಕ್ಷುಬ್ಧ ಪ್ರದೇಶಗಳಲ್ಲಿರುವ ಹಲವು ಮಸೀದಿಗಳಲ್ಲಿ ಈ ರೀತಿಯ ಬದಲಾವಣೆ ವ್ಯಕ್ತವಾಗುತ್ತಿದೆಯಂತೆ. ಹಾಗೆಯೇ ಮಿರ್‌ವಾಯಿಜ್‌ ಈಗಾಗಲೇ ಪ್ರತ್ಯೇಕತಾವಾದಿಗಳಿಂದ ತುಸು ಪ್ರತ್ಯೇಕವಾದಂತೆ ಕಾಣುತ್ತಿದ್ದಾರೆ.

ಕಾಶ್ಮೀರಕ್ಕೆ ಕಾಲಿಟ್ಟಅಮಿತ್‌ ಶಾ

ಕಳೆದ 30 ವರ್ಷದ ಉಗ್ರವಾದದ ನಂತರ ಇದೇ ಮೊದಲ ಬಾರಿಗೆ ಜೂನ್‌ 26ರಂದು ಗೃಹಮಂತ್ರಿ ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಆದರೆ ಅವರ ಭೇಟಿಗೆ ವಿರೋಧ ವ್ಯಕ್ತಪಡಿಸಿ ಗಿಲಾನಿಯವರಾಗಲೀ, ಅವರ ಸಹೋದ್ಯೋಗಿಗಳಾಗಲೀ ಯಾವುದೇ ಪ್ರತಿಭಟನೆ ಮಾಡಲಿಲ್ಲ.

ಇನ್ನೊಂದು ಪ್ರಮುಖ ಬೆಳವಣಿಗೆ ಎಂದರೆ ಪ್ರತ್ಯೇಕತಾವಾದಿಗಳು ಕಾಶ್ಮೀರಿ ಪಂಡಿತರೊಂದಿಗೆ ಕೈಜೋಡಿಸಿ ತಮ್ಮ ತಾಯ್ನಾಡಿಗೆ ತೆರಳುವ ಮಾರ್ಗಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ವರದಿಗಳ ಪ್ರಕಾರ ಕಾಶ್ಮೀರಿ ಪಂಡಿತರು ಹಿಂಸಾಚಾರವನ್ನು ತಾಳಲಾರದೆ ಇಲ್ಲಿಂದ ಒತ್ತಾಯಪೂರ್ವಕವಾಗಿ ಪಲಾಯನ ಮಾಡಿದ 30 ವರ್ಷಗಳ ಬಳಿಕ ನಡೆದ ಮೊಟ್ಟಮೊದಲ ಪ್ರಯತ್ನ ಇದು.

ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡರ್‌ ಬುರ್ಹಾನ್‌ ಮುಜಾಫರ್‌ ಮೃತಪಟ್ಟದಿನದಂದು ನಡೆಯುತ್ತಿದ್ದ ಉಗ್ರ ಚಟುವಟಿಕೆಗಳು ಈಗ ನಿಯಂತ್ರಣಕ್ಕೆ ಬಂದಿವೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಈ ವರ್ಷ ಈ ದಿನ ಶಾಂತಿಯುತವಾಗಿ ಕಳೆದಿದೆ.

ಹಿಂದೆಲ್ಲ ಈ ದಿವಸ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿತ್ತು. ಮೊಘಲ್‌ ಗಾರ್ಡ್‌ನ್‌ ಮತ್ತು ದಾಲ್‌ ಲೇಕ್‌ಗೆ ಪ್ರವೇಶ ನೀಡಬೇಕೆಂದು ಜನರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಈ ಬಾರಿ ಸೋಷಿಯಲ್‌ ಮೀಡಿಯಾಗಳಲ್ಲೂ ಪ್ರಚೋದನಾತ್ಮಕ ಪ್ರತಿಕ್ರಿಯೆಗಳಿರಲಿಲ್ಲ.

ಮೋದಿ ಅಮಿತ್ ಶಾ ನಂತರದ ಸ್ಥಾನಕ್ಕೆ ಬಿ ಎಲ್ ಸಂತೋಷ್; ನೇಮಕದ ಹಿಂದಿದೆ ಈ ಕಾರಣ

ಪ್ರಾದೇಶಿಕ ಪಕ್ಷಗಳಲ್ಲೂ ಬದಲಾವಣೆ

ಅಲ್ಲಿನ ಮುಖ್ಯವಾಹಿನಿಯ ಪ್ರಾದೇಶಿಕ ಪಕ್ಷಗಳಲ್ಲೂ ಬದಲಾವಣೆಯಾಗಿದೆ. ಕಾಶ್ಮೀರದ ಸಮಸ್ಯೆಯಲ್ಲಿ ತಮ್ಮದೇ ಪಾಲು ಹೊಂದಿರುವ ದಿ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮತ್ತು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ತಣ್ಣಗಾಗಿವೆ. ಕಾಶ್ಮೀರದ ರಾಜವಂಶಸ್ಥರೂ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ.

ಫೆಬ್ರವರಿ 14ರಂದು ನಡೆದ ಪುಲ್ವಾಮಾ ಆತ್ಮಾಹುತಿ ದಾಳಿಯ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುವ ನಾಗರಿಕ ಚಳವಳಿಗಳನ್ನು ನಿಷೇಧಿಸಲಾಗಿತ್ತು. ಆಗ ಅಬ್ದುಲ್ಲಾ ಮತ್ತು ಮುಫ್ತಿ ಇಬ್ಬರೂ ಪ್ರತಿಭಟನೆಗಳನ್ನು ನಿಯಂತ್ರಣಕ್ಕೆ ತರುವ ಬದಲು ತಾವೇ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದರು. ಈಗಿನ ಅಮರನಾಥ ಯಾತ್ರೆಯ ಸಂದರ್ಭದಲ್ಲೂ ಇದೇ ಸ್ಥಳದಲ್ಲಿ ನಿಷೇಧ ಹೇರಲಾಗಿತ್ತು. ಆದರೆ ಈ ಎರಡೂ ಪಕ್ಷದ ನಾಯಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ತಪ್ಪಿಸಿದ್ದಾರೆ.

ಎನ್‌ಸಿ ಮತ್ತು ಪಿಡಿಪಿ ಪ್ರತಿಭಟನೆ ನಡೆಸಿದ್ದಕ್ಕಿಂತ ಪೀಪಲ್ಸ್‌ ಯುನೈಟೆಡ್‌ ಫ್ರಂಟ್‌ (ಪಿಯುಎಫ್‌), ಅವಾಮಿ ಇತಿಹಾದ್‌ ಪಾರ್ಟಿ (ಎಇಎಫ್‌) ಮತ್ತು ಜಮ್ಮು ಕಾಶ್ಮೀರ ಪೀಪಲ್ಸ್‌ ಮೂವ್‌ಮೆಂಟ್‌ಗಳು ನಡೆಸಿರುವ ಪ್ರತಿಭಟನೆಗಳು ಹೆಚ್ಚು. ಆದರೆ ಇತ್ತೀಚೆಗೆ ಎಇಎಫ್‌ನಿಂದ ಭಾರತ ವಿರೋಧಿ ಮಾತುಗಳು ಕಡಿಮೆಯಾಗುತ್ತಿವೆ.

ಎನ್‌ಸಿಯ ವಿವಾದಾತ್ಮಕ ನಾಯಕ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆಯ ಮಾಜಿ ಸಭಾಪತಿ, ಬಾರಾಮುಲ್ಲಾ ಕ್ಷೇತ್ರದ ಸಂಸದ ಮಹಮ್ಮದ್‌ ಅಕ್ಬರ್‌ ಲೋನ್‌ ಇತ್ತೀಚೆಗೆ ಯಾವುದೇ ವಿವಾದ ಸೃಷ್ಟಿಸಿಲ್ಲ. ಅದಕ್ಕೂ ಮುಂಚೆ ಪಾಕಿಸ್ತಾನವನ್ನು ಹೊಗಳಿ ವಿವಾದಕ್ಕೆ ಒಳಗಾಗಿದ್ದರು. ಈಗ ಸಂಸತ್ತಿನಲ್ಲೂ ಮೌನಿಯಾಗಿದ್ದಾರೆ.

ರಾಜಕಾರಣಿಗಳನ್ನು ಬಿಡಿ, ಶ್ರೀನಗರ ಮೂಲದ ಮಾಧ್ಯಮಗಳೂ ರೂಪಾಂತರಗೊಳ್ಳುತ್ತಿವೆ. ಈ ಮುಂಚೆ ಇವು ‘ಸರ್ಕಾರದ ಪಡೆಗಳು’ ಎಂಬ ಪದವನ್ನು ಬಳಕೆ ಮಾಡುತ್ತಿದ್ದವು. ಆದರೆ ಈಗ ಭದ್ರತಾ ಪಡೆ ಎನ್ನುತ್ತಿವೆ.

ದೇವೇಗೌಡರಿಗೆ ಸ್ವಾಮೀಜಿಯೋರ್ವರ ಎಚ್ಚರಿಕೆ ಸಂದೇಶ

ಉಳಿದ ಬದಲಾವಣೆ ಯುವಕರ ಕೈಲಿ

ಅಲ್ಲಿಗೆ ಅಮಿತ್‌ ಶಾ ಅವರ ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಮೊದಲ ಪ್ರಯತ್ನ ಅರ್ಧ ಯಶಸ್ಸು ಕಂಡಂತಾಗಿದೆ. ಉಳಿದರ್ಧ ಬದಲಾವಣೆಯನ್ನು ದೆಹಲಿಯ ರಾಜಕಾರಣಿಗಳು ಮಾಡಲು ಸಾಧ್ಯವಿಲ್ಲ. ಅದನ್ನು ಬಂದೂಕು ಹಾಗೂ ಕಲ್ಲು ಹಿಡಿದು ಬೀದಿಗಿಳಿಯುವ ಕಾಶ್ಮೀರದ ಯುವಕರು ಬದಲಾಯಿಸಬೇಕು.

ಒಂದೆಡೆ ಬುರ್ಹಾನ್‌ ವಾನಿ ಹತ್ಯೆಯ ಬಳಿಕ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ನಂತರ 2019ರ ಫೆಬ್ರವರಿ 14ರ ಪುಲ್ವಾಮಾ ಆತ್ಮಾಹುತಿ ದಾಳಿಗೆ 20 ವರ್ಷದ ಸ್ಥಳೀಯ ಉಗ್ರ ಅಧಿರ್‌ ಧಾರ್‌ನನ್ನು ನೂಕಲಾಯಿತು.

ಉಗ್ರರು ಮತ್ತು ಉಗ್ರವಾದವನ್ನು ಕೊಲ್ಲುವಲ್ಲಿ ಇಲ್ಲಿಯವರೆಗಿನ ಪ್ರಯತ್ನಗಳು ವಿಫಲವಾದ ಕಾರಣ ಶಾ ಅವರ ಚಾಣಕ್ಯ ನೀತಿ ಬೇರೆಯದೇ ರೀತಿಯಲ್ಲಿ ಕಾರ‍್ಯನಿರ್ವಹಿಸುತ್ತಿದೆ. ರಾಜ್ಯದ 70 ವರ್ಷಗಳ ಪ್ರಾದೇಶಿಕ ಪಕ್ಷಗಳ ಭ್ರಷ್ಟಾಚಾರಕ್ಕೆ ಕಳೆದೊಂದು ವರ್ಷದ ರಾಜ್ಯಪಾಲರ ಆಡಳಿತವು ಅಲ್ಪ ಮಟ್ಟಿಗೆ ಕಡಿವಾಣ ಹಾಕಿದೆ.

ಸಂಸತ್ತಿನ ಆ ಐತಿಹಾಸಿಕ ಭಾಷಣ

ಶಾ ಮುಂದಿರುವ ಉಳಿದರ್ಧ ಬದಲಾವಣೆಯು ಅತ್ಯಂತ ಸವಾಲಿನ ಕೆಲಸ. ಆದರೆ ಬದಲಾವಣೆ ಸಾಧ್ಯವಿದೆ ಎಂಬ ನಂಬಿಕೆ ಇದೆ. ಜೂನ್‌ 28ರಂದು ಸಂಸತ್ತಿನಲ್ಲಿ ಅವರು ಮಾಡಿದ ಕಾಶ್ಮೀರ ಕುರಿತ ಐತಿಹಾಸಿಕ ಭಾಷಣವು ಆ ನಂಬಿಕೆ ಹುಟ್ಟುಹಾಕಿದೆ.

ಅಮಿತ್‌ ಶಾ, ಕಾಶ್ಮೀರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ಮೋದಿ ಸರ್ಕಾರದ ಮೊದಲ ಆದ್ಯತೆ ಎಂದಿದ್ದಾರೆ. ಹಾಗಾಗಿ ಅವರನ್ನು ‘ಆಧುನಿಕ ಚಾಣಕ್ಯ ಅಥವಾ ಪಟೇಲರ ಅವತಾರ’ ಎನ್ನಬಹುದು. ಕೇವಲ ಒಂದು ತಿಂಗಳಲ್ಲಿ ಗುರುತಿಸಬಹುದಾದ ಬದಲಾವಣೆ ತಂದ ಅಮಿತ್‌ ಮುಂದಿನ ದಿನದಲ್ಲಿ ಮತ್ತಷ್ಟುಅತ್ಯುತ್ತಮ ಕೆಲಸ ಮಾಡಬಹುದು ಎಂದು ನಿರೀಕ್ಷಿಸಬಹುದು.

- ಮಜೀದ್ ಹೈದರಿ, ಪತ್ರಕರ್ತ 

Follow Us:
Download App:
  • android
  • ios