ರಮೇಶ್ ಜಾರಕಿಹೊಳಿ ಶತಾಯ ಗತಾಯ ಕರ್ನಾಟಕದಲ್ಲಿ ಸರ್ಕಾರ ಕೆಡವಲೇಬೇಕು ಎಂದು ನಿರ್ಧರಿಸಿದಂತಿದೆ. ಯಾಕಂದ್ರೆ ತಮ್ಮ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳಿಂದ ರಾಜೀನಾಮೆ ಕೊಡಿಸುತ್ತಿದ್ದಾರೆ.

ಬೆಳಗಾವಿ, [ಮೇ.06]: ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಮಂತ್ರಿಯಾಗಿದ್ದಷ್ಟು ಕಾಲ ಶಾಂತಿಯ ಮಂತ್ರ ಜಪಿಸುತ್ತಿದ್ದ ರಮೇಶ್ ಜಾರಕಿಹೊಳಿ, ಮಂತ್ರಿಗಿರಿ ಕಸಿದುಕೊಳ್ಳುತ್ತಿದ್ದಂತೆಯೇ ಮೈತ್ರಿ ಸರ್ಕಾರವನ್ನು ಕೆಡುವಲು ಟೊಂಕ ಕಟ್ಟಿ ನಿಂತಿದ್ದಾರೆ. ತಮ್ಮ ಸ್ವ ಕ್ಷೇತ್ರದಿಂದಲೇ ಕಾರ್ಯಚರಣೆ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಲೋಕಸಭಾ ಚುನಾವಣೆ ನಂತರ ದೊಡ್ಡ ಬದಲಾವಣೆ ಕಾದಿದೆ ಎನ್ನುತ್ತಲೇ ಫೀಲ್ಡ್ ಗೆ ಎಂಟ್ರಿ ಕೊಟ್ಟಿದ್ದು, ಶಾಸಕ ರಮೇಶ್ ಜಾರಕಿಹೊಳಿ ಸೂಚನೆ ಮೇರೆಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಎರಡು ಗ್ರಾಮ ಪಂಚಾಯಿತಿದ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ.

ಗೋಕಾಕ್ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಸಿಂದಿಕುರಬೇಟ ಗ್ರಾಮ ಪಂಚಾಯತಿ ಅಧ್ಯಕ್ಷ ಮೊಹಮ್ಮದ್ ರಫಿಕ್ ಮಕಾಂದಾರ್ ಮತ್ತು ಲೋಳಸೂರ ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನವ್ವಾ ಕಿಲಾರಿ ರಾಜೀನಾಮೆ ನೀಡಿದ್ದಾರೆ.

ಬೈಲಹೊಂಗಲ ಎಸಿ ಮಾರುತಿ ಅವರಿಗೆ ಇಂದು [ಸೋಮವಾರ] 2 ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ರಾಜೀನಾಮೆ ನೀಡಿರುವುದು ಅಚ್ಚರಿ ಬೆಳವಣಿಗೆಗೆ ಕಾರಣವಾಗಿದೆ.

ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ಗ್ರಾಮ ಪಂಚಾಯಿತಿಗಳಿಂದಲೇ ಕಾರ್ಯಚರಣೆ ಶುರು ಮಾಡಿದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.