ಪ್ರಖ್ಯಾತ ಕನ್ನಡ ಸುದ್ದಿ ನಿರೂಪಕ ಜಯಪ್ರಕಾಶ್ ಶೆಟ್ಟಿ ಅವರು ತುಳು ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ನಿತಿನ್‌ ರೈ ಕುಕ್ಕುವಳ್ಳಿ ನಿರ್ದೇಶನದ 'ಬನ' ಎಂಬ ಚಿತ್ರದಲ್ಲಿ ಅವರು ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದು, ನಾಗಬನದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. 

ಬೆಂಗಳೂರು (ಡಿ.31): ಕನ್ನಡ ಪ್ರಖ್ಯಾತ ಸುದ್ದಿ ನಿರೂಪಕ ಹಾಗೂ ಪತ್ರಕರ್ತ ಜಯಪ್ರಕಾಶ್‌ ಶೆಟ್ಟಿ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌, ರಿಪಬ್ಲಿಕ್‌ ಕನ್ನಡದಲ್ಲಿ ಕೆಲಸ ಮಾಡಿದ್ದ ಜಯಪ್ರಕಾಶ್‌ ಶೆಟ್ಟಿ ಈಗ ಸುದ್ದಿ ನಿರೂಪಣೆ ಬಿಟ್ಟು ತುಳು ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿರುವುದು ಅಧಿಕೃತವಾಗಿದೆ. ನಿತಿನ್‌ ರೈ ಕುಕ್ಕುವಳ್ಳಿ ನಿರ್ದೇಶನದ ಬಹುನಿರೀಕ್ಷಿತ 'ಬನ' ಚಿತ್ರದಲ್ಲಿ ಅಪರೂಪದ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ತುಳು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ ಧರ್ಮದೈವ ಹಾಗೂ ಧರ್ಮ ಚಾವಡಿ ಸಿನಿಮಾವನ್ನು ನಿತಿನ್‌ ರೈ ಕುಕ್ಕುವಳ್ಳಿ ನಿರ್ದೇಶನ ಮಾಡಿದ್ದರು.

ಮೂಲಗಳ ಪ್ರಕಾರ ಬನ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಇದರಲ್ಲಿ ಜಯಪ್ರಕಾಶ್‌ ಶೆಟ್ಟಿ ಅವರು ನಟಿಸಿರುವುದೇ ವಿಶೇಷವಾಗಿದೆ. ಈ ಹಿಂದೆ ಜಯಪ್ರಕಾಶ್‌ ಶೆಟ್ಟಿ ಅವರಿಗೆ ಬಿಗ್‌ಬಾಸ್‌ ಟೀಮ್‌ನಿಂದಲೂ ಭಾಗವಹಿಸುವಂತೆ ಆಫರ್‌ ಬಂದಿತ್ತು. ಆದರೆ, ಈ ಆಫರ್‌ಅನ್ನು ಸ್ವತಃ ನಾನೇ ತಿರಸ್ಕರಿಸಿದೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ನಾಗಬನದ ಕಥೆ

ಆತ್ಮೀಯರಿಂದ ಜೆಪಿ ಎಂದೇ ಕರೆಸಿಕೊಳ್ಳುತ್ತಿದ್ದ ಜಯಪ್ರಕಾಶ್‌ ಶೆಟ್ಟಿ ಅವರು ಸಿನಿಮಾದಲ್ಲಿ ಒಟ್ಟು 6 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾದ ಶೂಟಿಂಗ್‌ ಮಂಗಳೂರು ಹಾಗೂ ಪುತ್ತೂರು ಭಾಗದಲ್ಲಿ ಹೆಚ್ಚಾಗಿ ನಡೆದಿದೆ. ನಾಗದೇವರು ವಾಸ ಮಾಡುವ ಸ್ಥಳವಾದ ನಾಗಬನ ಕುರಿದಾತ ಕಥೆ ಇದು ಎನ್ನಲಾಗಿದ್ದು, ಸಿನಿಮಾ ತಂಡ ಶೀಘ್ರದಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದೆ.

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿದ್ದಾಗ ತಮ್ಮ ಬಿಗ್‌ ಬಿ ಎನ್ನುವ ಸಾಮಾಜಿಕ ಕಳಕಳಿಯ ಕಾರ್ಯಕ್ರಮದ ಮೂಲಕ ಹೆಸರು ಮಾಡಿದ್ದರು. ಅದಾದ ಬಳಿಕ ಅವರು ರಿಪಬ್ಲಿಕ್‌ ಕನ್ನಡಕ್ಕೆ ಸೇರಿಕೊಂಡಿದ್ದರು. ಈ ಎರಡೂ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮುನ್ನ ಅವರು ಈಟಿವಿ ಕನ್ನಡದ ಮೂಲಕ ಹೆಸರು ಮಾಡಿದ್ದರು.