ಬಿಗ್ಬಾಸ್ ಹವಾ ಜೋರಾಗಿರೋ ಹೊತ್ತಿನಲ್ಲಿಯೇ ಲಕ್ಷ್ಮೀ ನಿವಾಸ ಖ್ಯಾತಿಯ ಲಕ್ಷ್ಮಿ ಉರ್ಫ್ ಭೂಮಿಕಾ ರಮೇಶ್ ದೊಡ್ಮನೆಗೆ ಹೋಗ್ತಾರಾ ಎನ್ನುವ ಪ್ರಶ್ನೆ ಎದುರಾಗಿದೆ. ನಟಿ ಹೇಳಿದ್ದೇನು ಕೇಳಿ...
ಈಗಾಗಲೇ ವಿವಿಧ ಭಾಷೆಗಳಲ್ಲಿ ಬಿಗ್ಬಾಸ್ ಚರ್ಚೆ ಶುರುವಾಗಿದೆ. ಕನ್ನಡದಲ್ಲಿಯೂ ಸೆಪ್ಟೆಂಬರ್ ತಿಂಗಳಲ್ಲಿ ಷೋ ಶುರುವಾಗುವ ಸಾಧ್ಯತೆ ಇದೆ. ಬಿಗ್ಬಾಸ್ 11 ತಮ್ಮ ಕೊನೆಯ ಷೋ, ಮುಂದಿನ ಷೋ ನಡೆಸಿ ಕೊಡುವುದೇ ಇಲ್ಲ ಎನ್ನುವ ಮೂಲಕ ಹಲ್ಚಲ್ ಸೃಷ್ಟಿಸಿ, ಅದಕ್ಕೆ ಕಾರಣನೂ ನೀಡಿದ್ದ ಸುದೀಪ್ ಅವರು ಇನ್ನು ನಾಲ್ಕು ವರ್ಷ ತಾವೇ ಕಾರ್ಯಕ್ರಮ ನಡೆಸಿಕೊಡುವುದಾಗಿ ಹೇಳಿಯೂ ಆಗಿದೆ. ಅದಕ್ಕೂ ಅವರದ್ದೇ ಆದ ಕಾರಣವನ್ನೂ ನೀಡಿ ತಮ್ಮ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಇನ್ನೇನಿದ್ದರೂ ಸ್ಪರ್ಧೆ ಶುರುವಾಗಬೇಕಿದೆಯಷ್ಟೇ.
ಹೊಸದಾಗಿ ಮನೆ ನಿರ್ಮಿಸಲಾಗುತ್ತಿದೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಬರಬಹುದು ಎಂಬ ಕುತೂಹಲ ಸಹಜವಾಗಿ ವೀಕ್ಷಕರಿಗೆ ಇದೆ. ಇದಾಗಲೇ ಹಲವರ ಹೆಸರು ಓಡಾಡುತ್ತಿದೆ. ಬಿಗ್ಬಾಸ್ ಎಂದ ಮೇಲೆ ಅಲ್ಲಿ ಕಾಂಟ್ರವರ್ಸಿ ಮಾಡಿಕೊಂಡವರಿಗೆ, ಜೈಲಿಗೆ ಹೋಗಿ ಬಂದವರಿಗೆ, ಕೇಸು ಇದ್ದವರಿಗೆ... ಹೀಗೆ ಇಂಥವರಿಗೇ ಮೊದಲ ಆದ್ಯತೆ ಎನ್ನುವುದು ಗುಟ್ಟಾಗೇನೂ ಉಳಿದಿಲ್ಲ. ಅದರೆ ಇವೆಲ್ಲವುಗಳಿಂದ ಈ ಬಾರಿಯ ಬಿಗ್ಬಾಸ್ ದೂರ ಇರಬೇಕು ಎಂದು ಸುದೀಪ್ ಹೇಳಿದ್ದಾರೆ ಎನ್ನಲಾಗಿದೆ. ಕಾಂಟ್ರವರ್ಸಿ ಜನರ ಹೊರತಾಗಿಯೂ ಕೆಲವರು ಒಳ್ಳೆಯತನದಿಂದ ಖ್ಯಾತಿ ಪಡೆದವರಿಗೂ ಜಾಗವನ್ನು ಬಿಗ್ಬಾಸ್ನಲ್ಲಿ ನೀಡಲಾಗುತ್ತದೆ. ಒಳ್ಳೆಯ ರೀತಿಯಲ್ಲಿ ಪ್ರಖ್ಯಾತಿ ಗಳಿಸಿರುವ ಲಕ್ಷ್ಮೀ ಬಾರಮ್ಮಾ ಸೀರಿಯಲ್ ಲಕ್ಷ್ಮಿ ಉರ್ಫ್ ಭೂಮಿಕಾ ರಮೇಶ್ ಅವರ ಹೆಸರೂ ಕೇಳಿಬರುತ್ತಿದೆ.
ಈ ಬಗ್ಗೆ ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ನಟಿ ಈ ಬಗ್ಗೆ ಮಾತನಾಡಿದ್ದಾರೆ. ಪ್ರತಿ ಸಲ ಬಿಗ್ಬಾಸ್ ಸಮಯದಲ್ಲಿಯೇ ನಾನು ಸಿಕ್ಕಾಕೋತೀನಿ ಎಂದಿರೋ ನಟಿ, ಬಿಗ್ಬಾಸ್ಗೆ ಹೋಗ್ತೇನೋ ಇಲ್ಲವೋ ಎನ್ನುವ ಬಗ್ಗೆ ನೋ ಕಮೆಂಟ್ಸ್ ಎಂದಿದ್ದಾರೆ. ಇದೇ ವೇಳೆ ನಟಿ ಬಿಗ್ಬಾಸ್ ಎಂದ್ರೆ ತಮ್ಮ ಪ್ರಕಾರ ಏನು ಎನ್ನುವುದನ್ನೂ ಹೇಳಿದ್ದಾರೆ. ಸೈಲೆಂಟ್ ಎನ್ನೋದೇ ಬಿಗ್ಬಾಸ್. ಬಿಗ್ಬಾಸ್ ನಮಗೆ ಹೊರಗೆ ನೋಡುವವರಿಗೆ ಒಂಥರಾ ದೇವರು ಇರುವ ಹಾಗೆ ಬಿಗ್ಬಾಸ್. ದೇವರಿಗೆ ಒಬ್ಬೊಬ್ಬರು ಒಂದೊಂದು ರೀತಿಯ ಆಕಾರ ಕೊಡುತ್ತಾರೆ. ಅದೇ ರೀತಿ ಬಿಗ್ಬಾಸ್ಗೆ ಏನೂ ಆಕಾರ ಇಲ್ಲ. ಒಬ್ಬೊಬ್ಬರು ಅದಕ್ಕೆ ಒಂದೊಂದು ರೀತಿಯ ಆಕಾರ ಕೊಡುತ್ತಾರೆ. ಬಿಗ್ಬಾಸ್ ಎಂದ್ರೆ ಅದನ್ನು ಪ್ರೆಡಿಕ್ಷನ್ ಮಾಡಲು ಸಾಧ್ಯವೇ ಇಲ್ಲ. ಅದೇ ಬಿಗ್ಬಾಸ್. ಅಪ್ರೋಚ್ ನನಗೆ ಬಂದಿದ್ಯಾ ಎನ್ನೋ ಬಗ್ಗೆ ನಾನು ಹೇಳುವುದೇ ಇಲ್ಲ. ಅದರ ಬಗ್ಗೆ ನೋ ಕಮೆಂಟ್ಸ್ ಎಂದಿರೋ ನಟಿ, ನನಗೆ ಹೋಗಲು ಸದ್ಯಕ್ಕಂತೂ ಆಸಕ್ತಿ ಇಲ್ಲ, ಆದರೆ ಮುಂದೆ ಏನಾಗುತ್ತೋ ಗೊತ್ತಿಲ್ಲ ಎಂದಿದ್ದಾರೆ. ಅಲ್ಲಿಗೆ ಈ ಸಲ ಹೋಗುವುದು ಡೌಟ್ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
ಇನ್ನು ನಟಿಯ ಕುರಿತು ಹೇಳುವುದಾದರೆ, ನಟಿ ಭೂಮಿಕಾ ಕನ್ನಡ ಸೀರಿಯಲ್, ತೆಲುಗು ಸೀರಿಯಲ್ ಜೊತೆಗೆ ಕನ್ನಡ ಸಿನಿಮಾದಲ್ಲೂ ಬ್ಯುಸಿ. ಇನ್ನೂ ಇಪ್ಪತ್ತೊಂದು ವರ್ಷ ವಯಸ್ಸಿನ ಈ ಪ್ರತಿಭಾವಂತ ನಟಿ ಭರತನಾಟ್ಯದಲ್ಲೂ ಎಕ್ಸ್ಪರ್ಟ್. 'ಲಕ್ಷ್ಮಿ ಬಾರಮ್ಮ' ಸೀರಿಯಲ್ನಲ್ಲಿ ನಾಯಕಿ ಲಕ್ಷ್ಮಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಈಕೆ ಸದ್ಯ ಕೈತುಂಬ ಅವಕಾಶಗಳನ್ನು ಹಿಡಿದು ನಿಂತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಭೂಮಿಕಾ ರಮೇಶ್ ಕಳೆದ ವರ್ಷದ ಅನುಬಂಧ ಅವಾರ್ಡ್ಸ್ನಲ್ಲಿ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ನಟಿಸಬೇಕು ಎಂಬುದು ಈಕೆಯ ಬಹುದಿನದ ಕನಸಾಗಿತ್ತು. ಆಕೆಯ ಕನಸು ಕೂಡಾ ಇದೀಗ ನನಸಾಗಿದೆ. ನಾಗರಾಜ್ ಎಂ. ಜಿ ಗೌಡ ನಿರ್ದೇಶನದ 'ಡಿಸೆಂಬರ್ 24' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್ವುಡ್ಗೂ ಕಾಲಿಟ್ಟಿದ್ದಾರೆ ಭೂಮಿಕಾ ರಮೇಶ್.
