ಕನಕಪುರ ಶ್ರೀನಿವಾಸ್ ಅವರ ವರ್ತನೆ ನೋಡಿದರೆ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತಿದೆ. ಮನೆಯವರು ತಕ್ಷಣ ಅವರಿಗೆ ಚಿಕಿತ್ಸೆ ಕೊಡಿಸುವುದು ಒಳ್ಳೆಯದು. ನಾವೂ ಮಂಡ್ಯದವರು, ನಮಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ ಎಂದು ನಿರ್ದೇಶಕ ಎ.ಪಿ. ಅರ್ಜುನ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಫೆ.07): ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರ ವರ್ತನೆ ನೋಡಿದರೆ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತಿದೆ. ಮನೆಯವರು ತಕ್ಷಣ ಅವರಿಗೆ ಚಿಕಿತ್ಸೆ ಕೊಡಿಸುವುದು ಒಳ್ಳೆಯದು. ನಾವೂ ಮಂಡ್ಯದವರು, ನಮಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ. ಆದರೆ ಸಂಸ್ಕಾರ ಅಡ್ಡ ಬರುತ್ತದೆ. ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ (Defamation Case) ಹೂಡುತ್ತೇನೆ' ಎಂದು ನಿರ್ದೇಶಕ ಎ.ಪಿ. ಅರ್ಜುನ್ ಎಚ್ಚರಿಕೆ ರವಾನಿಸಿದ್ದಾರೆ.
'ಕಾಟನ್ಪೇಟೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಕನ್ನಡ ಚಿತ್ರರಂಗದ ಸ್ಟಾರ್ ನಟರು, ನಿರ್ದೇಶಕರು ಹಾಗೂ ರಾಜಕೀಯ ಗಣ್ಯರ ವಿರುದ್ಧ ನಡೆಸಿದ ಅವಾಚ್ಯ ಶಬ್ದಗಳ ವಾಗ್ದಾಳಿ ಈಗ ತಿರುಗುಬಾಣವಾಗಿದೆ. ಶ್ರೀನಿವಾಸ್ ಅವರ ಆರೋಪಗಳಿಗೆ ನಿರ್ದೇಶಕರಾದ ಎ.ಪಿ. ಅರ್ಜುನ್ ಹಾಗೂ ಜೋಗಿ ಪ್ರೇಮ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಅರ್ಜುನ್ ಗರಂ
ನಿರ್ಮಾಪಕ ಶ್ರೀನಿವಾಸ್ ಅವರ ಆರೋಪಗಳಿಗೆ ತಿರುಗೇಟು ನೀಡಿರುವ ನಿರ್ದೇಶಕ ಎ.ಪಿ. ಅರ್ಜುನ್, '2014ರಲ್ಲಿ ಐರಾವತ ಸಿನಿಮಾ ಶೂಟಿಂಗ್ ನಡೆಯುವಾಗ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಬೇಕೆಂದು ಶ್ರೀನಿವಾಸ್ ಹಣ ನೀಡಿದ್ದರು. ನಾವು 7 ತಿಂಗಳಲ್ಲಿ ಎಲ್ಲದಕ್ಕೂ ಸಿದ್ಧರಾಗಿದ್ದೆವು. ಆದರೆ, ಕಲಾವಿದರ ಡೇಟ್ಸ್ ತರುವಲ್ಲಿ ಅವರು ವಿಫಲರಾದರು. ನಮ್ಮನ್ನು ಬರೋಬ್ಬರಿ 1 ವರ್ಷ 4 ತಿಂಗಳು ಕಾಯಿಸಿದರು. ಕೊರೋನಾ ಸಂಕಷ್ಟದ ಸಮಯದಲ್ಲಿ ಬಂದು ಹಣ ವಾಪಸ್ ಬೇಕು ಎಂದು ಟಾರ್ಚರ್ ನೀಡಿದರು. ಆಫೀಸ್ ಹತ್ತಿರ ಬಂದು ನ್ಯೂಸೆನ್ಸ್ (ಗಲಾಟೆ) ಸೃಷ್ಟಿಸಿದ್ದರು' ಎಂದು ಹಳೆಯ ಘಟನೆಗಳನ್ನು ಬಿಚ್ಚಿಟ್ಟರು.
ನಾವು ಮಂಡ್ಯದವ್ರು, ನಮಗೂ ಮಾತು ಬರುತ್ತೆ
ಮುಂದುವರಿದು, 'ನನಗೆ ಅಪಾರ್ಟ್ಮೆಂಟ್ ಕೊಳ್ಳಲು ಹಣ ಕೊಟ್ಟಿದ್ದೆ ಎಂದು ಶ್ರೀನಿವಾಸ್ ಸುಳ್ಳು ಹೇಳುತ್ತಿದ್ದಾರೆ. ತಾಕತ್ತಿದ್ದರೆ ಅದನ್ನು ಸಾಬೀತುಪಡಿಸಲಿ. ಧ್ರುವ ಅವರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಇವರ ವರ್ತನೆ ನೋಡಿದರೆ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತಿದೆ. ಅವರ ಮನೆಯವರು ತಕ್ಷಣ ಅವರನ್ನು ಕರೆದೊಯ್ದು ಚಿಕಿತ್ಸೆ ಕೊಡಿಸುವುದು ಒಳ್ಳೆಯದು. ನಾವೂ ಮಂಡ್ಯದವರು, ನಮಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ. ಆದರೆ ಸಂಸ್ಕಾರ ಅಡ್ಡ ಬರುತ್ತದೆ. ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ (Defamation Case) ಹೂಡುತ್ತೇನೆ' ಎಂದು ಅರ್ಜುನ್ ಎಚ್ಚರಿಸಿದರು.
ಜೋಗಿ ಪ್ರೇಮ್ ಆಕ್ರೋಶ:
ಇದೇ ವೇಳೆ ನಿರ್ದೇಶಕ ಜೋಗಿ ಪ್ರೇಮ್ ಕೂಡ ಶ್ರೀನಿವಾಸ್ ವಿರುದ್ಧ ಸಿಡಿದೆದ್ದಿದ್ದಾರೆ. 'ಶ್ರೀನಿವಾಸ್ ಅವರು ತಾಯಂದಿರ ಬಗ್ಗೆ ಅತ್ಯಂತ ಕೀಳುಮಟ್ಟದ ಪದಬಳಕೆ ಮಾಡಿದ್ದಾರೆ. ಶಿಕ್ಷಣ ಇಲ್ಲದವರಂತೆ ವರ್ತಿಸಿದ್ದಾರೆ. ನನ್ನೊಬ್ಬನ ಬಗ್ಗೆ ಮಾತನಾಡಿದ್ದರೆ ಸುಮ್ಮನಿರುತ್ತಿದ್ದೆ. ಆದರೆ ಅವರು ದಿವಂಗತ ಪುನೀತ್ ರಾಜ್ಕುಮಾರ್ (ಅಪ್ಪು), ನಟ ದರ್ಶನ್ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬಗ್ಗೆಯೂ ನಾಲಿಗೆ ಹರಿಬಿಟ್ಟಿದ್ದಾರೆ. ನನ್ನ ಯೋಗ್ಯತೆ ಬಗ್ಗೆ ಮಾತನಾಡುವ ಮುನ್ನ ಅವರು ಕನ್ನಡಿ ಮುಂದೆ ನಿಂತು ನೋಡಿಕೊಳ್ಳಲಿ," ಎಂದು ಕಿಡಿಕಾರಿದರು.
ಪೊಲೀಸ್ ಠಾಣೆಗೆ ದೂರು, ಮಾನನಷ್ಟ ಕೇಸ್ ಫಿಕ್ಸ್
ಹಣಕಾಸಿನ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ ಪ್ರೇಮ್, 'ಪುನೀತ್ ಅವರ ಕಾಲ್ ಶೀಟ್ ಪಡೆದು ಸಿನಿಮಾ ಮಾಡಲು ನನಗೆ 9 ಲಕ್ಷ ರೂ. ಅಡ್ವಾನ್ಸ್ ಕೊಟ್ಟಿದ್ದರು. ಆದರೆ ನಂತರ ಅವರು ವಾಪಸ್ ಬರಲೇ ಇಲ್ಲ. ಬಳಿಕ ಫಿಲ್ಮ್ ಚೇಂಬರ್ನಲ್ಲಿ ಸಾ.ರಾ. ಗೋವಿಂದ್ ಅವರ ನೇತೃತ್ವದಲ್ಲಿ ಪಂಚಾಯ್ತಿ ನಡೆಸಿ ಆ ಹಣವನ್ನು ವಾಪಸ್ ನೀಡಿದ್ದೇನೆ. ಆದರೂ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮತ್ತು ಫಿಲ್ಮ್ ಚೇಂಬರ್ನಲ್ಲಿ ದೂರು ನೀಡಿದ್ದೇನೆ. ನನ್ನ ವಕೀಲರ ಸಲಹೆ ಪಡೆದು ಕೋಟ್ಯಂತರ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ' ಎಂದು ಪ್ರೇಮ್ ಸ್ಪಷ್ಟಪಡಿಸಿದರು.
ಒಟ್ಟಾರೆಯಾಗಿ, ಕನಕಪುರ ಶ್ರೀನಿವಾಸ್ ಅವರು ಹಚ್ಚಿದ ಕಿಡಿ ಈಗ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಕಾಡ್ಗಿಚ್ಚಾಗಿ ಪರಿವರ್ತನೆಯಾಗಿದ್ದು, ವಿವಾದ ಪೊಲೀಸ್ ಠಾಣೆ ಮತ್ತು ಕೋರ್ಟ್ ಮೆಟ್ಟಿಲೇರಿದೆ.


