ಅಮೃತಧಾರೆ ಜೈದೇವ ಎಂದರೆ ಸಾಕು, ಸೀರಿಯಲ್​ ಪ್ರೇಮಿಗಳಿಗೆ ಉರಿದು ಹೋಗುತ್ತದೆ. ಆದರೆ, ಜೈದೇವ್​ ಪಾತ್ರಧಾರಿ ರಾಣವ್​ ಕಂಡ್ರೆ ಜನ ಏನ್​ ಮಾಡ್ತಾರೆ ನೋಡಿ! 

ಅಮೃತಧಾರೆ ಜೈದೇವ ಎಂದರೆ ಸಾಕು, ಸೀರಿಯಲ್​ ಪ್ರೇಮಿಗಳಿಗೆ ಉರಿದು ಹೋಗುತ್ತದೆ. ಎಲ್ಲಿಯಾದರೂ ಎದುರಿಗೆ ಸಿಕ್ಕರೆ ಕೊಂದೇ ಬಿಡುವಷ್ಟು ಕೋಪವೂ ಹಲವರಿಗೆ ಬರುವುದು ಉಂಟು. ಇದು ಸೀರಿಯಲ್​ ಮಹಿಮೆ. ಇದು ಸೀರಿಯಲ್​ ಎಂದು ಗೊತ್ತಿದ್ದರೂ, ಅವರು ನಟಿಸುವ ಪರಿಗೆ ವೀಕ್ಷಕರು ಒಂದು ಕ್ಷಣ ಇದು ನಿಜ ಜೀವನ ಅಂದುಕೊಳ್ಳುವುದು ಉಂಟು. ತಾವು ನೋಡುತ್ತಿರುವುದು ಧಾರಾವಾಹಿ ಎಂದು ಗೊತ್ತಿದ್ದರೂ ಆ ಪಾತ್ರಧಾರಿಗಳ ನಟನೆಗೆ ಅದೆಷ್ಟು ಮುಳುಗಿ ಹೋಗುತ್ತಾರೆ ಎಂದರೆ, ಅದು ತಮ್ಮ ಬದುಕಿನಲ್ಲಿಯೇ ಆಗುತ್ತಿದೆಯೇನೋ ಅನ್ನಿಸಿಬಿಡುತ್ತದೆ. ಇದರ ಅರ್ಥ ತಮ್ಮ ಪಾತ್ರಕ್ಕೆ ಆ ಪಾತ್ರಧಾರಿ ಅದೆಷ್ಟು ನ್ಯಾಯ ಒದಗಿಸಿದ್ದಾರೆ ಎನ್ನುವುದು.

ಇನ್ನು ನೆಗೆಟಿವ್​ ರೋಲ್​ಗಳಲ್ಲಿ ಕಾಣಿಸಿಕೊಂಡರೆ ಬಿಡಿ, ಹೇಳುವುದೇ ಬೇಡ ಅವರ ಪಾಡು. ಮನೆಯಿಂದ ಹೊರಗೆ ಕಾಲಿಟ್ಟರೂ ಉಗಿಸಿಕೊಳ್ತಾರೆ ನಟರು. ತಾವು ಮಾಡ್ತಿರೋದು ನಟನೆ ಮಾತ್ರ ಕಣ್ರೀ, ನಾನು ತುಂಬಾ ಒಳ್ಳೆಯವನು ಎಂದು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಹಲವು ವೀಕ್ಷಕರು ಇರುವುದಿಲ್ಲ. ಅದೇ ರೀತಿಯ ಅನುಭವ ಅಮೃತಧಾರೆ ಜೈದೇವ್​ ಅರ್ಥಾತ್​ ನಟ ರಾಣವ್​ ಗೌಡ ಅವರಿಗೆ ಆಗುತ್ತಿದೆಯಂತೆ. ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತೆರೆದಿಟ್ಟಿದ್ದಾರೆ. ಹೊರಗಡೆ ನನಗೆ ತುಂಬಾ ಬೈಯುತ್ತಾರೆ. ಪರ್ಸನಲ್​ ಆಗಿಯೂ ಕೆಟ್ಟ ಕೆಟ್ಟ ಪದಗಳ ಬಳಕೆ ಆಗುತ್ತದೆ. ತುಂಬಾ ಕೆಟ್ಟ ಪದ ಕೇಳಿಬಿಟ್ಟಿದ್ದೇನೆ. ಕೆಟ್ಟ ಕೆಟ್ಟ ಮೆಸೇಜ್​ ಕೂಡ ಮಾಡ್ತಾರೆ. ನೀನು ಡ್ಯಾಷ್​, ನೀನು ಅಂಥ, ನೀನು ಒಮ್ಮೆ ಸಿಗು ಮಾಡ್ತೇನೆ ಎಂದೆಲ್ಲಾ ಹೇಳ್ತಾರೆ. ಇದು ನಾನು ನನ್ನ ಪಾತ್ರಕ್ಕೆ ನ್ಯಾಯ ಒದಗಿಸ್ತಾ ಇರೋದನ್ನು ತೋರಿಸುತ್ತದೆ ಎಂದಿದ್ದಾರೆ.

ಇದೇ ವೇಳೆ ನೆಗೆಟಿವ್​ ರೋಲ್​ಗಳಿಗೆ ಇರುವಷ್ಟು ಸ್ವಾತಂತ್ರ್ಯ ಹೀರೋಗೆ ಇರುವುದಿಲ್ಲ ಎನ್ನುವುದು ಅವರ ಅನಿಸಿಕೆ. ಹೀರೋ ಆದವ ಒಂದೇ ರೀತಿ ಇರಬೇಕು. ಆದರೆ ವಿಲನ್​ ಆದವ ಕೆಟ್ಟವನಂತೆ, ಒಳ್ಳೆಯವನ ಸೋಗಿನಲ್ಲಿ... ಹೀಗೆ ಏನು ಬೇಕಾದರೂ ಮಾಡಬಹುದಾಗಿದೆ. ಅದಕ್ಕಾಗಿಯೇ ನನಗೆ ವಿಲನ್​ ರೋಲ್​ ಇಷ್ಟ ಎಂದಿದ್ದಾರೆ ರಾಣವ್​. ಅಷ್ಟಕ್ಕೂ, ಇವರನ್ನು ಪ್ರೀತಿಸುವ ದೊಡ್ಡ ವರ್ಗವೇ ಇದೆ. ವಿಲನ್ ಅಂದ್ರೆ ಹೀಗೆ ಇರಬೇಕು ಎನ್ನುವಷ್ಟು, ಪಾತ್ರಕ್ಕೆ ನ್ಯಾಯ ಒದಗಿಸುತ್ತಿರುವ ರಾಣವ್ ಗೌಡಾಗೆ (Raanav Gowda) ಸಿಕ್ಕಾಪಟ್ಟೆ ಅಭಿಮಾನಿಗಳು ಕೂಡ ಇದ್ದಾರೆ. ಇವರು ಹೀರೋ ಅಗುತ್ತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎಂದು ಹೇಳಿದವರು ಇದ್ದಾರೆ. ಆ ಸಂದರ್ಭ ಇದೀಗ ಕೂಡಿ ಬಂದಿದೆ. ಇದೇ 23ರಂದು ಉದ್ಘಾಟನೆಗೊಳ್ಳಲಿರುವ ಹೊಸ ಚಾನೆಲ್ ಝೀ ಪವರ್ ನಲ್ಲಿ ಶುಭಸ್ಯ ಶೀಘ್ರಂನಲ್ಲಿ ರಾಣವ್ ಗೌಡ ನಾಯಕನಾಗಿ ನಟಿಸಲಿದ್ದಾರೆ. ಸದ್ಯ ಸೀರಿಯಲ್ ಪ್ರೊಮೊ ಬಿಡುಗಡೆಯಾಗಿದ್ದು, ಸಖತ್ ಆಗಿ ಮೂಡಿ ಬಂದಿದೆ.

ಅಂದಹಾಗೆ ರಾಣವ್​ ಅವರು, ಹಲವು ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ, ತುಳಸಿ ಧಾರಾವಾಹಿಯಲ್ಲಿ, ಸುಧಾರಾಣಿಯವರ (Sudharani) ಜೊತೆ ಬಾಲನಟನಾಗಿ ನಟಿಸುವ ಮೂಲಕ ರಾಣವ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಆವಾಗ ರಾಣವ್ ಆರನೇ ತರಗತಿಯಲ್ಲಿ ಓದುತ್ತಿದ್ದರು. ಬಾಲ್ಯದಲ್ಲಿಯೇ ನಟನೆಯ ಕಡೆಗೆ ಒಲವು ಬೆಳೆಸಿಕೊಂಡಿದ್ದ ರಾಣವ್ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿವಹಿಸಿದ್ದೇ ಹೆಚ್ಚು. ಅದೇ ಕಾರಣದಿಂದ ಇವರು ಇಂಜಿನಿಯರಿಂಗ್ ಅರ್ಧದಲ್ಲೇ ಬಿಟ್ಟು, ಮತ್ತೆ ನಟನೆಯತ್ತ ಮುಖ ಮಾಡಿದರು. ಸದ್ಯ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಉದಯ ಟಿವಿಯಲ್ಲಿ (Udaya Tv) ಪ್ರಸಾರವಾಗುತ್ತಿದ್ದ ಅರಮನೆ ಧಾರಾವಾಹಿಯಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಾಣವ್ ಮತ್ತೆ ಹಿಂದಿರುಗಿ ನೋಡೇ ಇಲ್ಲ. ಒಂದಾದ ಮೇಲೆ ಒಂದರಂತೆ ಹಲವು ಧಾರಾವಾಹಿಗಳಲ್ಲಿ ಇವರು ನಟಿಸಿದರು.

ನಂತರ ಬಿ.ಸುರೇಶ್ ಅವರ 'ಜೀವನದಿ’, ಕಸ್ತೂರಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಕುಮಾರಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ವರಲಕ್ಷ್ಮೀ ಸ್ಟೋರ್ಸ್ , ಮತ್ತೆ ವಸಂತ, ಝೀ ಕನ್ನಡದ ಕಮಲಿ ಧಾರಾವಾಹಿಯಲ್ಲೂ ನಟಿಸುವ ಮೂಲಕ ವೀಕ್ಷಕರ ಮನ ಗೆದ್ದಿದ್ದರು. ಕಿರುತೆರೆಯಲ್ಲಿ ಮಾತ್ರವಲ್ಲ ಇವರು ಹಿರಿತೆರೆಯಲ್ಲೂ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನ ಮತ್ತೆ ಬಾ ಉಪೇಂದ್ರ, ಶೀಕಂಠ, ವಿರಾಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಟ್ಟಲ್ಲಿ ನೆಗೆಟಿವ್ ಮತ್ತು ಪಾಸೀಟಿವ್ ಎರಡೂ ಪಾತ್ರಗಳಿಗೂ ರಾಣವ್ ಜೀವ ತುಂಬಿ ನಟಿಸುತ್ತಾರೆ ಅನ್ನೋದು ಸುಳ್ಳಲ್ಲ.

View post on Instagram