Asianet Suvarna News Asianet Suvarna News

19.20.21 Film Review ಇಲ್ಲಿ ಪ್ರಶ್ನೆಗಳಿವೆ, ಉತ್ತರ ನಾವು ಕಂಡುಕೊಳ್ಳಬೇಕು!

ಶೃಂಗ ಬಿ ವಿ, ಬಾಲಾಜಿ ಮನೋಹರ್‌, ಪಲ್ಲವಿ ಎಂ ಡಿ, ರಾಜೇಶ್‌ ನಟರಂಗ ಸಿನಿಮಾ ರಿಲೀಸ್ ಆಗಿದೆ. ಟೈಟಲ್ ನೋಡಲು ತುಂಬಾನೇ ಡಿಫರೆಂಟ್ ಆಗಿದೆ ಸಿನಿಮಾ ಹೇಗಿದೆ? 

Kannada moview 19 20 21 review vcs
Author
First Published Mar 4, 2023, 9:59 AM IST

ಪ್ರಿಯಾ ಕೆರ್ವಾಶೆ

ರಾತ್ರಿ. ಅಂಧಕಾರವನ್ನು ಸೀಳಿಕೊಂಡು ಮುನ್ನುಗ್ಗುತ್ತಿರುವ ಬಸ್‌, ಪ್ರಯಾಣದುದ್ದಕ್ಕೂ ತಾತ, ಮೊಮ್ಮಗಳಿಗೆ ಒಂದು ಕೇಸ್‌ನ ಕತೆ ಹೇಳ್ತಾರೆ. ಕಡೆಗೆ ಮೊಮ್ಮಗಳು ಒಂದು ಪ್ರಶ್ನೆ ಕೇಳುತ್ತಾಳೆ. ‘ಅವತ್ತು ಆ ಹುಡುಗ ಎಷ್ಟೋ ರಾತ್ರಿ ನಿದ್ದೆ ಮಾಡದಂತೆ ಮಾಡಿದ್ರಲ್ಲಾ, ಅದು ತಪ್ಪಾಗಲ್ವಾ ತಾತ?’ ಮೊಮ್ಮಗಳ ಪ್ರಶ್ನೆ ಪ್ರೇಕ್ಷಕನ ಪ್ರಶ್ನೆಯೂ ಆಗುತ್ತೆ, ಹೊಸ ಜನರೇಶನ್ನಿನ ಪ್ರಶ್ನೆಯೂ ಆಗುತ್ತೆ ಅನ್ನುವಲ್ಲಿಗೆ ಮಂಸೋರೆ ಸಿನಿಮಾ ಮಾಡುವ ಇಂಪ್ಯಾಕ್ಟ್ ದೊಡ್ಡದು.

ತಾರಾಗಣ: ಶೃಂಗ ಬಿ ವಿ, ಬಾಲಾಜಿ ಮನೋಹರ್‌, ಪಲ್ಲವಿ ಎಂ ಡಿ, ರಾಜೇಶ್‌ ನಟರಂಗ

ನಿರ್ದೇಶನ: ಮಂಸೋರೆ

ರೇಟಿಂಗ್‌: 4

Kasina Sara Review: ಮಣ್ಣಿಗೆ ಮರಳಿದ ವಿದ್ಯಾವಂತನ ಕತೆ

ದಕ್ಷಿಣ ಕನ್ನಡದ ಮಲೆ ಕುಡಿಯ ಸಮುದಾಯದ ಏಕೈಕ ಸುಶಿಕ್ಷಿತ ಯುವಕನ ನೈಜ ಕಥೆಯನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಮಂಜು ಎಂಬ ಹುಡುಗನ ಕಥೆ ಹೇಳುತ್ತಲೇ, ಆತನ ಸಮುದಾಯಕ್ಕೆ ಆಗಿರುವ ಅನ್ಯಾಯ, ಅಧಿಕಾರಿ, ಆಡಳಿತಶಾಹಿಗಳ ದೌರ್ಜನ್ಯ, ನಕ್ಸಲ್‌ ಹೆಸರಿನಲ್ಲಿ ಕಾಡಿನ ಮಕ್ಕಳ ಜೀವ ಹಿಂಡುತ್ತಿರುವ ವ್ಯವಸ್ಥೆ ಇತ್ಯಾದಿ ಮೇಲೆ ಸಿನಿಮಾ ಬೆಳಕು ಚೆಲ್ಲುತ್ತದೆ. ಡಾಕ್ಯುಮೆಂಟರಿ ಹಾಗೂ ಡ್ರಾಮಾಗಳ ಸಮ್ಮಿಶ್ರದಂತೆ ಸಾಗುವ ಈ ಚಿತ್ರ ಇನ್ನೊಂದೆಡೆ ಅನೇಕ ಇಮೇಜ್‌ಗಳ ಕೊಲಾಜ್‌. ಕಾಡು ಮರದ ಮೇಲೆ ಗುಂಪಾಗಿ ಸಾಗುವ ಇರುವೆಗಳು, ಕ್ಲೈಮ್ಯಾಕ್ಸ್‌ ವೇಳೆ ಸಂವಿಧಾನದ ಬಗ್ಗೆ ಮಾತಾಡುವಾಗ ಲಾಯರ್‌ ಹಣೆಯ ಮೇಲೆ ಹರಿಯುವ ಬೆವರು, ಮಂಜುವಿನ ಕಣ್ಣ ಕಪ್ಪು ವರ್ತುಲ ಇತ್ಯಾದಿಗಳು ಸೂಕ್ಷ್ಮಗಳು ದಾಟಿಸುವ ಸಂಗತಿಗಳು ಹೆಚ್ಚು ಗಾಢ. ‘ಬೇಡಿ ಹಾಕ್ಕೊಂಡು ಪರೀಕ್ಷೆ ಬರೆದರೆ ಬರೀ ಕೈ ಬರಹ ಅಲ್ಲ, ದೇಶದ ಹಣೆಬರಹವೂ ಚೆನ್ನಾಗಿರಲ್ಲ’, ‘ನಾವು ಕಳ್ಕೊಳ್ಳೋದೇನಿಲ್ಲ, ಎಲ್ಲ ಪಡ್ಕೊಳ್ಳೋದೇ’ .. ಈ ರೀತಿಯ ಸ್ಟ್ರಾಂಗ್‌ ಲೈನ್‌ಗಳು ಅಲ್ಲಲ್ಲಿ ಬರುತ್ತವೆ.

ಸಿನಿಮಾದ ಮೊದಲ ಭಾಗ ನಮ್ಮನ್ನು ತಲ್ಲೀನಗೊಳಿಸಲು ವಿಫಲವಾಗುತ್ತದೆ. ಇದಕ್ಕೆ ಮುಖ್ಯಕಾರಣ ಭಾಷೆಯ ಸಮಸ್ಯೆ. ವಸ್ತುವಿಗಾಗಿ ಇಷ್ಟೆಲ್ಲ ಶ್ರಮ ಹಾಕಿರುವ ಮಂಸೋರೆ, ವಸ್ತುವನ್ನು ಅಷ್ಟೇ ತೀವ್ರವಾಗಿ ದಾಟಿಸಬೇಕಾದ ಭಾಷೆಯ ಬಗ್ಗೆ ಯಾಕೆ ನಿರುತ್ಸಾಹ ತೋರಿದರೋ ಗೊತ್ತಿಲ್ಲ. ದಕ್ಷಿಣ ಕನ್ನಡದ ಭಾಷೆಯ ಕೆಟ್ಟಅನುಕರಣೆಯಷ್ಟೇ ಇಲ್ಲಿ ಸಿಗುತ್ತದೆ. ತುಳುವನ್ನು ತಂದಿದ್ದಾರಾದರೂ ಅದು ಶಿಷ್ಟತುಳು. ಆದಿವಾಸಿ ಜನರ ತುಳುವಿನ ರೀತಿಯೇ ಬೇರೆ. ಇಲ್ಲಿ ಎಂ ಡಿ ಪಲ್ಲವಿ ಕಷ್ಟಪಟ್ಟು ಮಧುರವಾಗಿ ಮಾತಾಡೋ ತುಳು ಆ ಪಾತ್ರಕ್ಕೆ ಸರಿಹೊಂದಲ್ಲ.

DOORADARSHANA FILM REVIEW ನೆನಪುಗಳನ್ನು ಮೀಟುವ ಫೀಲ್‌ಗುಡ್‌ ದೂರದರ್ಶನ

ಆದರೆ ಇಂಟರ್‌ವಲ್‌ ನಂತರದ ಭಾಗ ಬಹಳ ಸ್ಟ್ರಾಂಗ್‌ ಆಗಿ ಬಂದಿದೆ. ಭಾಷೆಯ ಮಿತಿಯನ್ನೂ ಮರೆತು ತಲ್ಲೀನಗೊಳಿಸುತ್ತದೆ. ತಾನೇನು ಹೇಳಬೇಕು ಅಂದುಕೊಂಡಿದ್ದಾರೋ ಅದನ್ನು ಮಂಸೋರೆ ಈ ಭಾಗದಲ್ಲಿ ಅಷ್ಟೇ ತೀವ್ರವಾಗಿ ನಿರೂಪಿಸುವಲ್ಲಿ ಸಫಲರಾಗಿದ್ದಾರೆ.

ಬಹಳ ತೀವ್ರ, ಗಾಢ ಅನಿಸೋದು ಮಂಜುವಿನ ತಂದೆ ಪಾತ್ರ ಮಾಡಿದ ರಂಗ ಕಲಾವಿದ ಮಹಾದೇವ ಹಡಪದ ಅಭಿನಯ. ಅಬೋಧ ನಗು, ತಬ್ಬಿಕೊಳ್ಳುವ ರೀತಿಯಲ್ಲೂ ಅದೆಂಥಾ ಸಹಜತೆ ಇದೆ ಅನ್ನೋದನ್ನು ಮಾತಲ್ಲಿ ಹೇಳೋದು ಕಷ್ಟ. ಶೃಂಗ ಮಂಜುವಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಾಲಾಜಿ ಮನೋಹರ್‌, ಕೃಷ್ಣ ಹೆಬ್ಬಾಲೆ, ರಾಜೇಶ್‌ ನಟರಂಗ, ವಿಶ್ವ ಕರ್ಣ ಅಭಿನಯ ಪವರ್‌ಫುಲ್‌ ಆಗಿ ಬಂದಿದೆ. ಶಿವ ಅವರ ಛಾಯಾಗ್ರಹಣ, ಬಿಂದುಮಾಲಿನಿ ಸಂಗೀತ ಸಂಯೋಜನೆ ಪರಿಣಾಮಕಾರಿ.

ಇದೊಂದು ನೆನಪಿಟ್ಟುಕೊಳ್ಳಬೇಕಾದ, ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುವ ತೀವ್ರವಾದ ಡಾಕ್ಯುಡ್ರಾಮ ಅನ್ನಬಹುದು.

Follow Us:
Download App:
  • android
  • ios