ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಬಾರದಿದ್ದಕ್ಕೆ ರೋಗಿಗಳ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ನ್ಯಾಯ ಕೇಳಲು ಮುಂದಾದವರನ್ನೇ ಪೊಲೀಸರು ಎಳೆದುಕೊಂಡು ಹೋದ ಘಟನೆ ನಡೆದಿದ್ದು, ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಾಯಚೂರು, (ಸೆ.11): ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲವೆಂದು ವೈದ್ಯರ ಬೇಜವಾಬ್ದಾರಿತನ ಪ್ರಶ್ನಿಸಿ ಗೇಟ್ ಹಾಕಲು ಮುಂದಾದ ಘಟನೆ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಬೆಳಗ್ಗೆ 11 ಆದರೂ ವೈದ್ಯರಿಲ್ಲ, ಅಡ್ಮಿಷನ್ ಚೀಟಿ ನೀಡಲು ವಿಳಂಬ ಮಾಡಲಾಗಿದೆ ಇದನ್ನ ಪ್ರಶ್ನಿಸಿದ ರೋಗಿಗಳ ಸಂಬಂಧಿಗಳನ್ನೇ ಪೊಲೀಸರು ಎಳೆದುಕೊಂಡು ಹೋದ ಘಟನೆ ನಡೆದಿದ್ದು ವಿಡಿಯೋದಲ್ಲಿ ದಾಖಲಾಗಿದೆ.
11 ಗಂಟೆಯಾದರೂ ರೋಗಿಗಳಿಗೆ ಅಡ್ಮಿಷನ್ ಚೀಟಿ ಇಲ್ಲ!
ಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ವಳಬಳ್ಳಾರಿ ಗ್ರಾಮದ ರೈತ ಮಲ್ಲಯ್ಯ. ಈ ವೇಳೆ ಆಸ್ಪತ್ರೆಯಲ್ಲಿ ಕೆಲ ಸಿಬ್ಬಂದಿ ಹೊರತು ವೈದ್ಯರುಗಳ ಸುಳಿವೇ ಇಲ್ಲ. ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಅದಾಗಲೇ ಬಡಜನರು ಬಂದು ವೈದ್ಯರ ದಾರಿ ಕಾಯುತ್ತಿದ್ದರು. ಬೆಳಗ್ಗೆ 11 ಗಂಟೆಯಾದರೂ ಅಡ್ಮಿಷನ್ ಚೀಟಿ ನೀಡಿರಲಿಲ್ಲ ರೈತ ಮಲ್ಲಯ್ಯ ಆರೋಪಿಸಿದ್ದಾರೆ. ಆಸ್ಪತ್ರೆ ವೈದ್ಯರ ಬೇಜವಾಬ್ದಾರಿತನಕ್ಕೆ. ಆಕ್ರೋಶಗೊಂಡ ಸಾರ್ವಜನಿಕರು ಆಸ್ಪತ್ರೆಯ ಗೇಟ್ ಮುಚ್ಚುವಂತೆ ಹೇಳಿ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಮಾಡಿದ್ದೇನು?
ಆಸ್ಪತ್ರೆಯಲ್ಲಿ ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಳಿಕ PSI ಸೇರಿದಂತೆ ಸುಮಾರು 15 ಮಂದಿ ಪೊಲೀಸರು ಸ್ಥಳಕ್ಕೆ ಬಂದು ನ್ಯಾಯ ಕೇಳಿದ ಬಡಕುಟುಂಬದ ಜನರನ್ನೇ ಸ್ಟೇಷನ್ ಎಳೆದುಕೊಂಡ ಹೋದ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯ ಕೇಳಿದ ಬಡಜನರನ್ನೇ ಎಳೆದುಕೊಂಡು ಹೋದ್ರಾ ಪೊಲೀಸರು?
ಮೇಲ್ನೋಟಕ್ಕೆ ಇದು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ. ರೈತ ಆರೋಪಿಸಿದಂತೆ ವೈದ್ಯರು ಸರಿಯಾದ ಸಮಯಕ್ಕೆ ಆಸ್ಪತ್ರೆಯಲ್ಲಿಲ್ಲ. ಕನಿಷ್ಟ ಪಕ್ಷ ಸಿಬ್ಬಂದಿ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಬೇಕಿತ್ತು. ಆದರೆ ಬೆಳಗ್ಗೆ ಹನ್ನೊಂದಾದರೂ ಅಡ್ಮಿಟ್ ಚೀಟಿಯ ನೀಡಿಲ್ಲ. ಹೀಗಾಗಿ ವೈದ್ಯರ ವಿಳಂಬಕ್ಕೆ ಆಕ್ರೋಶಗೊಂಡಿರುವುದು ಸಹಜ. ಪೊಲೀಸರು ಸ್ಥಳಕ್ಕೆ ಬಂದು ಸಮಾಧಾನ ವಿಚಾರ ನಡೆಸಿ, ಗಲಾಟೆಗೆ ಕಾರಣವೇನು? ವೈದ್ಯರು ವಿಳಂಬ ಮಾಡಿದ್ದೇಕೆ ಅಂತಾ ವಿಚಾರಿಸಿ ಪರಿಸ್ಥಿತಿ ತಿಳಿ ಮಾಡುವ ಬದಲು ರೋಗಿಗಳನ್ನೇ ಎಳೆದೊಯ್ದಿರುವುದು ದುರಂತ ಎಂದು ಪೊಲೀಸರ ಕ್ರಮದ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಮಾಡಿದ್ರೆ ಎಫ್ಐಆರ್ ಹಾಕ್ತೇವೆ!
ಸರ್ಕಾರಿ ಆಸ್ಪತ್ರೆಗಳಿರುವುದು ಬಡವರಿಗಾಗಿ, ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ನಗರ ಮಾತ್ರವಲ್ಲದೆ ಸುತ್ತಲಿನ ಹಳ್ಳಿಗಳಿದ ಬಡವರು, ಕೂಲಿಕಾರ್ಮಿಕರು ಚಿಕಿತ್ಸೆ ಬರುತ್ತಾರೆ. ಹೀಗಿರುವಾಗ ಬೆಳಗ್ಗೆ ಹನ್ನೊಂದಾದರೂ ಆಸ್ಪತ್ರೆಗೆ ಬಾರದಿರುವುದು, ಚೀಟಿ ನೀಡದಿರುವುದು ಆಸ್ಪತ್ರೆಯ ಸಿಬ್ಬಂದಿ ಬೇಜವಾಬ್ದಾರಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾದರೆ ಹೊಣೆಗಾರರು ಯಾರು ಎಂಬ ಪ್ರಶ್ನೆ ಎದ್ದಿದೆ.
ಈ ಘಟನೆಯ ಸಂಪೂರ್ಣ ಸತ್ಯಾಸತ್ಯತೆ ಹಾಗೂ ಪೊಲೀಸ್ ಕ್ರಮದ ಕುರಿತು ಅಧಿಕೃತ ಮಾಹಿತಿ ಲಭ್ಯವಾದ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ.


