ಕೇಂದ್ರ ಸಂಸ್ಕೃತಿ ಸಚಿವಾಲಯದಲ್ಲಿ ತಮಿಳರದೆ ಹಾವಳಿ, ಕನ್ನಡಿಗರು ಲೆಕ್ಕಕ್ಕಿಲ್ಲ
ಕನ್ನಡ ಕಲಾವಿದರು ಅನುದಾನಕ್ಕೆ ಅರ್ಜಿ ಸಲ್ಲಿಸುತ್ತಿಲ್ಲ.ಸಲ್ಲಿಸಿದರೂ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇದುವರೆಗೆ ಒಂದು ಸಾವಿರ ಅರ್ಜಿ ಸಲ್ಲಿಕೆಯಾಗಿರಬಹುದು. ಅದೇ ತಮಿಳುನಾಡಿನ ಕಲಾವಿದರಿಂದ ಒಂದು ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ
ಮೈಸೂರು[ಆ.09]: ಕೇಂದ್ರ ಸಂಸ್ಕೃತಿ ಸಚಿವಾಲಯದಲ್ಲಿ ತಮಿಳಿಗರ ಹಾವಳಿ ಹೆಚ್ಚಾಗಿದ್ದು, ತಮಿಳುನಾಡಿನ ಕಲಾವಿದರಿಂದ 1 ಲಕ್ಷ ಅರ್ಜಿಗಳು ಅನುದಾನಕ್ಕಾಗಿ ಸಲ್ಲಿಕೆಯಾಗಿದ್ದರೆ, ಕರ್ನಾಟಕದವರು ಕೇವಲ 1 ಸಾವಿರ ಅರ್ಜಿಗಳಿವೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಮಿತಿ ಸದಸ್ಯ ಜಿ.ಕೆ. ಅಶ್ವಥ ಹರಿತಸ್ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಬ್ರಹ್ಮವಿದ್ಯಾ ಸಂಸ್ಥೆಯು ಬುಧವಾರ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಿದ್ದ ಕನಕ ದಾಸರ ವಿಶೇಷ ರಚನೆಗಳನ್ನು ಆಧರಿಸಿದ ‘ದಾಸರದಾಸ’ ಸಂಗೀತ ರೂಪಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತಿ ಸಚಿವಾಲಯದಲ್ಲಿನ ಅಧಿಕಾರಿಗಳಿಗೆ ಕರ್ನಾಟಕ ಯಾವುದು, ಇಲ್ಲಿನ ಕಲಾವಿದರ ಬಗ್ಗೆ ಗೊತ್ತಿಲ್ಲ. ಅವರಿಗೇನಿದ್ದರೂ ತಮಿಳುನಾಡಿನ ಕಲಾವಿದರು ಮತ್ತು ಉತ್ತರ ಭಾರತದ ಕಲಾವಿದರಷ್ಟೇ ಗೊತ್ತು.
ನಾನು ಸಾಂಸ್ಕೃತಿಕ ಸಮಿತಿ ಸದಸ್ಯನಾಗಿ ನೇಮಕವಾದ ಬಳಿಕ ಕನ್ನಡಿಗರ ಬಗ್ಗೆ ಗೊತ್ತಾಗಿದೆ. ನಮ್ಮ ಕಲಾವಿದರು ಅನುದಾನಕ್ಕೆ ಅರ್ಜಿ ಸಲ್ಲಿಸುತ್ತಿಲ್ಲ.ಸಲ್ಲಿಸಿದರೂ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇದುವರೆಗೆ ಒಂದು ಸಾವಿರ ಅರ್ಜಿ ಸಲ್ಲಿಕೆಯಾಗಿರಬಹುದು. ಅದೇ ತಮಿಳುನಾಡಿನ ಕಲಾವಿದರಿಂದ ಒಂದು ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಹರಿತಸ್ ಹೇಳಿದರು.
ಸಚಿವರ ಕಡೆಯವನ್ನು ಎಂದರೂ ಲೆಕ್ಕಕ್ಕಿಲ್ಲ
ಈ ಬಗ್ಗೆ ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದರೆ ‘ಅದನ್ನು ಕೇಳಲು ನೀವು ಯಾರು ಎನ್ನುತ್ತಾರೆ’ ನಾನು ಕೇಂದ್ರ ಸಚಿವ ಅನಂತಕುಮಾರ್ ಕಡೆಯವನು ಎಂದರೆ ‘ಅದಕ್ಕೇನೀವಾಗ’ ಎನ್ನುತ್ತಾರೆ. ಇದನ್ನು ಕೇಳಿ ನಾನು ರಾಜಿನಾಮೆ ನೀಡಲು ಮುಂದಾಗಿದ್ದೆ. ಆಗ ಸಚಿವ ಅನಂತಕುಮಾರ್, ನನ್ನನ್ನು ತಡೆದು ಕನ್ನಡಿಗರಿಗೆ ಒಳ್ಳೆಯದು ಮಾಡು ಎಂದಿರಿಸಿದರು. ಹಾಗಿಂದದ್ದೆ ತಕ್ಷಣ ನಾನು ಎಚ್ಚೆತ್ತೆ. ಹೇಳಿಕೇಳಿ ನಾನು ಸರ್ ಎಂ. ವಿಶ್ವೇಶ್ವರಯ್ಯನವರ ವಂಶಸ್ಥ. ಕನ್ನಡ, ಕರ್ನಾಟಕದ ಬಗ್ಗೆ ಕೆಣಕಿದರೆ ನಾನು ಸುಮ್ಮನೆ ಬಿಡುವುದಿಲ್ಲ ಎಂದೇಳಿ ಆ ಒಂದು ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಿ ಅನುದಾನ ಕೊಡಿಸಿದೆ ಎಂದರು.
ಸಂಗೀತ ವಿದ್ವಾನ್ ಡಾ. ರಾ.ಸ. ನಂದಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್. ಕೌಸ್ತುಭ್ ಅವರು ಕನಕದಾಸರ ವಿಶೇಷ ರಚನೆಗಳನ್ನು ಆಧರಿಸಿದ ‘ದಾಸರದಾಸ’ ಸಂಗೀತ ರೂಪಕ ಪ್ರಸ್ತುತಪಡಿಸಿದರು. ನಾಗಲಕ್ಷ್ಮೀ, ಸುಬ್ಬಣ್ಣ, ಕಾವೇರಮ್ಮ, ಸುಮುಖ ಶ್ರೀವತ್ಸ ಇದ್ದರು.